ಕಾರವಾರದ ಬೀಚ್ಗೆ ಟಾಗೋರ್ ಹೆಸರೇಕೆ? ಕಾರಂತರ ಹೆಸರಿಟ್ಟರಾಗದೇ?
(ವಿಶೇಷ ವರದಿ)
ಬೆಂಗಳೂರು : ಕನ್ನಡನಾಡಿನ ಹೆಮ್ಮೆಯ ರಾಜಧಾನಿ ಬೆಂಗಳೂರಿಗೆ ಆ ಹೆಸರು ಹೇಗೆ ಬಂತು ಎಂಬ ಬಗ್ಗೆಯೇ ದೊಡ್ಡ ಜಿಜ್ಞಾಸೆ ಇದೆ. ಹೊಯ್ಸಳ ವಂಶದ ದೊರೆ ವೀರ ಬಲ್ಲಾಳ ಒಮ್ಮೆ ಭೇಟೆಗೆ ಬಂದವನು ದಾರಿ ತಪ್ಪಿ, ಹಸಿವು ಬಾಯಾರಿಕೆಯಿಂದ ಬಳಲಿ ಬಸವಳಿದು ಬೆಂಡಾಗಿ, ದಾರಿ ಹುಡುಕುತ್ತಾ ಹೊರಟಾಗ ಕಾಡಿನಂಚಿನ ಗುಡಿಸಿಲಿನಲ್ಲಿದ್ದ ಮುದುಕಿಯು ಬೆಂದಕಾಳುಗಳನ್ನೇ ನೀಡುತ್ತಾಳೆ. ಬೆಂದಕಾಳು ತಿಂದು ನೀರು ಕುಡಿದ ಆ ದೊರೆ. ಮುದುಕಿ ಬೆಂದ ಕಾಳು ನೀಡಿದ ಊರಿಗೆ ಬೆಂದಕಾಳೂರು (ಬೇಕ್ಡ್ ಬೀನ್ಸ್) ಎಂದು ಹೆಸರಿಟ್ಟನಂತೆ. ಮುಂದೆ ಇದು ಬೆಂಗಳೂರಾಯಿತು ಎಂಬುದು ಒಂದು ವಾದ.
ಆದರೆ ಶಾಸನಗಳು ಹೇಳುವುದೇ ಬೇರೆ. ಬೆಂಗಳೂರು ಸಮೀಪದ ಬೇಗೂರು ಬಳಿಯ ನಾಗೇಶ್ವರ ದೇವಸ್ಥಾನದ ಬಳಿ ದೊರೆತಿರುವ ಶಾಸನವೊಂದರಲ್ಲಿ (ಕ್ರಿ.ಶ. 890) ಮಾಂಡಲೀಕ ನಾಗತ್ತರನ ಮಗ ಪೆರುಮಾಳ ಸೆಟ್ಟಿ ಎಂಬುವನು ಬೆಂಗುಳುರು ಕಾಳಗದಲ್ಲಿ ಮೃತನಾದ ಎಂಬ ಉಲ್ಲೇಖ ಇರುವ ಕಾರಣ ಆ ಬೆಂಗುಳುರು ಇಂದು ಬೆಂಗಳೂರಾಗಿದೆ. ಹೀಗಾಗಿ ವೀರಬಲ್ಲಾಳ ದೊರೆಯ ಬೆಂದಕೂಳಿರಿನ ವಾದ ಕೇವಲ ಕಟ್ಟುಕಥೆ ಎಂದಷ್ಟೇ ಹೇಳಬಹುದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.
ಹೆಸರಿನಲ್ಲಿ ಏನಿದೆ ಸ್ವಾಮಿ? ಚಿರಂಜೀವಿ ಎಂದು ಹೆಸರಿಟ್ಟುಕೊಂಡವನು ನಾಲ್ಕೇ ವರ್ಷಕ್ಕೆ ಸಾಯುತ್ತಾನೆ. ಸಂಪತ್ಕುಮಾರ ಎಂಬ ಹೆಸರಿನವ ಬೆಂಗಳೂರು ಬಸ್ಸ್ಟಾಂಡಲ್ಲಿ ಭಿಕ್ಷೆ ಬೇಡುತ್ತಿರುತ್ತಾನೆ. ಧನಲಕ್ಷ್ಮೀ ಎಂಬ ಹೆಸರಿಟ್ಟುಕೊಂಡಾಕೆ ಕೂಲಿ ಕೆಲಸ ಮಾಡುತ್ತಿರುತ್ತಾಳೆ, ಆರೋಗ್ಯನಾಥ್ ಎಂದು ಹೆಸರಿಟ್ಟಕೊಂಡವ ನಿತ್ಯ ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗಿರುತ್ತಾನೆ.
ಇಷ್ಟಾದರೂ ನಮ್ಮ ಜನಕ್ಕೆ ಹೆಸರಿನ ವ್ಯಾಮೋಹ ಕಡಿಮೆ ಆಗಿಲ್ಲ. ನಾನು, ನನ್ನದು, ನನ್ನ ಹೆಸರು ಎಲ್ಲೆಡೆ ಕೇಳಿ ಬರಬೇಕು ಎಂದು ಬಯಸುತ್ತಾರೆ. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷರಾಗಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಈಗ ಮತ್ತೆರಡು ಹೆಸರಿನ ವಿವಾದ ಆರಂಭವಾಗಿದೆ.
ಕೂಸು ಹುಟ್ಟವ ಮೊದಲೇ.. : ಅದೇನೋ ಹೇಳ್ತಾರಲ್ಲ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಅಂತ ಹಾಗೆ! ಬೆಂಗಳೂರು ಬಳಿಯ ದೇವನಹಳ್ಳಿ ಹತ್ತಿರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಕ್ಕೆ ಇಗಷ್ಟೇ ಚಾಲನೆ ದೊರೆತಿದೆ. ಇನ್ನೂ ಆ ನಿಲ್ದಾಣ ಕಾಮಗಾರಿಯ ಪಾಲುದಾರರು ಯಾರು ಎಂಬುದನ್ನು ರಾಜ್ಯ ಸರಕಾರ ಅಂತಿಮ ಗೊಳಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ನಿರ್ಮಾಣ ಆಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆ ಹೆಸರು ಇಡಿ, ಈ ಹೆಸರು ಇಡಿ ಎಂಬ ರಾಜಕೀಯಗಳು ಆರಂಭವಾಗಿವೆ.
ಹೇಳಿ ಕೇಳಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿವಂಗತ ಪ್ರಧಾನಿ ಇಂದಿರಾಗಾಂಧೀ ಅಥವಾ ರಾಜೀವ ಗಾಂಧಿ ಹೆಸರನ್ನು ಇಟ್ಟು, ಸೋನಿಯಾ ಅವರ ಮನಗೆಲ್ಲಲು ಹಲವು ಕಾಂಗ್ರೆಸ್ ಧುರೀಣರು ಪ್ರಯತ್ನ ನಡೆಸಿದ್ದಾರೆ.