ಮೈಸೂರಲ್ಲಿ ಕಾಣೆಯಾಗಿದ್ದ ಬಾಲಕಿಯರು ಮಡಿಕೇರಿಯಲ್ಲಿ ಪತ್ತೆ
ಮೈಸೂರು : ಮೈಸೂರಿನ ಕುವೆಂಪು ಬಡಾವಣೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಕಾಣೆಯಾಗಿದ್ದ ಇಬ್ಬರು ಬಾಲಕಿಯರು ಮಡಿಕೇರಿಯಲ್ಲಿ ಪತ್ತೆಯಾಗಿದ್ದಾರೆ. ಈ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಪತ್ತೆ ಮಾಡಿದ ಪೊಲೀಸರು, ಅವರನ್ನು ಪಾಲಕರ ವಶಕ್ಕೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 3ರಂದು ಶಾಲೆಗೆ ಹೋದ 9ನೇ ತರಗತಿಯ ಸುಮ ಹಾಗೂ ನೇತ್ರಾವತಿ ಮನೆಗೆ ಮರಳಿರಲೇ ಇಲ್ಲ. ಈ ಸಂಬಂಧ ಬಾಲಕಿಯರ ಪೋಷಕರು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಜೀವಾವಧಿ ಶಿಕ್ಷೆ : ಮೂರು ವರ್ಷಗಳ ಹಿಂದೆ ಇಲ್ಲಿನ ಬೋಗಾದಿ ರಸ್ತೆಯ ಹರ್ಷ ಬಾರ್ನಲ್ಲಿ ನಡೆದಿದ್ದ ಇಬ್ಬರ ಕೊಲೆಗೆ ಸಂಬಂಧಿಸಿದಂತೆ 12 ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.
ಬೋಗಾದಿ ನಿವಾಸಿಗಳಾದ ಲೋಕೇಶ್ ಹಾಗೂ ರಾಜೇಗೌಡ ಎನ್ನುವವರ ಕೊಲೆ ಆರೋಪಿಗಳಾಗಿದ್ದ ಅದೇ ಬಡಾವಣೆಯ ರಾಜು, ದೇವರಾಜು, ಸ್ವಾಮಿ, ನಾಗರಾಜ, ನಿಂಗಪ್ಪ, ಮಹೇಶ್, ಲೋಕೇಶ್, ರಾಮಕೃಷ್ಣ, ಮರಿಗೌಡ, ಜಗದೀಶ್, ಪಾರ, ಮುತ್ತ ಸ್ವಾಮಿ ಎಂಬ 12 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿತ್ತು.