ಅರಣ್ಯಾಧಿಕಾರಿ ಮನೆ ಮೇಲೆ ದಾಳಿ : 2 ಕೋಟಿ ರು. ಆಸ್ತಿ ಪತ್ತೆ
ಬೆಂಗಳೂರು : ನೀವು ಈ ಸುದ್ದಿ ಓದಿದ ನಂತರ, ಅರಣ್ಯಗಳನ್ನು ಲೂಟಿ ಮಾಡುತ್ತಿರುವುದು, ವೀರಪ್ಪನ್ನಂತಹ ಕಾಡುಗಳ್ಳರೋ? ಭ್ರಷ್ಟ ಅಧಿಕಾರಿಗಳೋ ಎಂದು ನಿರ್ಧರಿಬಹುದು. ಲೋಕಾಯುಕ್ತ ಪೊಲೀಸರು ಹಿರಿಯ ಐ.ಎಫ್.ಎಸ್. ಅಧಿಕಾರಿಯಾಬ್ಬರಿಗೆ ಸೇರಿದ ನಾಲ್ಕು ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ಎರಡು ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಮಾಡಿದ್ದಾರೆ.
ಮಲ್ಲೇಶ್ವರದ ಅರಣ್ಯ ಭವನದಲ್ಲಿರುವ ಈ ಅಧಿಕಾರಿಯ ಮನೆ, ವಾಣಿಜ್ಯ ಸಂಕೀರ್ಣ, ಅವರ ಹುಟ್ಟೂರಾದ ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟೆ ಗ್ರಾಮದಲ್ಲಿರುವ ತೋಟದ ಮನೆ, ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಸಮೀಪದಲ್ಲಿರುವ ಅಧಿಕಾರಿಯ ಮಾವನ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆದಾಯಕ್ಕೂ ಮೀರಿದ ಆಸ್ತಿಯನ್ನು ಪತ್ತೆಹಚ್ಚುವ ಸಾಹಸ ಮಾಡಿದ್ದಾರೆ.
ಭಾರತೀಯ ಅರಣ್ಯ ಸೇವೆಯಲ್ಲಿರುವ ಈ ಅಧಿಕಾರಿ ಎಸ್. ಶಾಂತಪ್ಪ. ಇವರು ಹಾಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದಾರೆ. ಇವರು ಮಲ್ಲೇಶ್ವರ 8ನೇ ಕ್ರಾಸ್ನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ, ಚಿಕ್ಕಕಲ್ಲಸಂದ್ರದ ಬಳಿ ದೊಡ್ಡ ನಿವೇಶನದಲ್ಲಿ ಭವ್ಯ ಬಂಗಲೆ, ತವರೂರಿನಲ್ಲಿ 10 ಎಕರೆ ಅಡಿಕೆ ತೋಟ, ಬೃಹದ್ಭವ್ಯ ತೋಟದ ಮನೆ ಹೊಂದಿರುವ ವಿಷಯ ಈ ದಾಳಿಯಿಂದ ಪತ್ತೆಯಾಗಿದೆ ಎಂದು ಮೂಲಗಳ ತಿಳಿಸಿವೆ.
ಇದಲ್ಲದೆ ಹೊಸಕೋಟೆ ಬಳಿ, ಉತ್ತರಹಳ್ಳಿ ಹಾಗೂ ಇನ್ನೂ ಕೆಲವೆಡೆ ಶಾಂತಪ್ಪ ಅವರು ತೋಟ, ಗದ್ದೆ, ನಿವೇಶನಗಳನ್ನು ಹೊಂದಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ದಾಳಿಯ ಸಂದರ್ಭದಲ್ಲಿ ಅರಣ್ಯಾಧಿಕಾರಿಯ ನಿವೇಶನದಲ್ಲಿ 4 ಲಕ್ಷ ರು. ನಗದು, ಹತ್ತಿರ ಹತ್ತಿರ 1.5 ಕೆ.ಜಿ. ಚಿನ್ನದ ಒಡವೆ, 5 ಕೆ.ಜಿ. ಬೆಳ್ಳಿ ಹಾಗೂ ಅತ್ಯಾಧುನಿಕ ಐಷಾರಾಮಿ ವಸ್ತುಗಳು ದೊರಕಿವೆಯಂತೆ.
ಇದಲ್ಲದೆ ಹತ್ತಾರು ಬ್ಯಾಂಕ್ಗಳಲ್ಲಿ ಲಕ್ಷಾಂತರ ರುಪಾಯಿ ಠೇವಣಿಯೂ ಇದೆ ಎನ್ನುತ್ತಾರೆ ಹಿರಿಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು. ಇಷ್ಟೆಲ್ಲಾ ಇದ್ದ ಮೇಲೆ ಓಡಾಡಲು ಕಾರು ಬೇಡವೇ? ಈ ಅಧಿಕಾರಿಯ ಬಳಿ. 10 ಲಕ್ಷ ರು ಬೆಲೆಯ ಫೋರ್ಡ್ ಮತ್ತು ಮಾರುತಿ -800 ಕಾರುಗಳಿವೆ. ಇವರು ನಗರದ ಹಲವು ಪ್ರತಿಷ್ಠಿತ ಕ್ಲಬ್ಗಳ ಸದಸ್ಯರೂ ಹೌದು. 84ರಲ್ಲಿ ಅರಣ್ಯ ಇಲಾಖೆ ಸೇರಿದ ಶಾಂತಪ್ಪನವರ ನಿವಾಸಗಳ ಮೇಲೆ ಲೋಕಾಯುಕ್ತ ಎಸ್ಪಿ. ರಮೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಯಿತು.
ಬಾಲಂಗೋಚಿ : ಸರ್ಕಾರದಲ್ಲಿರುವ ಎಲ್ಲ ಅಧಿಕಾರಿಗಳೂ ಭ್ರಷ್ಟರಲ್ಲ. ಹಾಗೆಂದ ಮಾತ್ರಕ್ಕೆ ಸರಕಾರದ ಎಲ್ಲರೂ ಪ್ರಾಮಾಣಿಕರು ಎಂದರೆ ಅವರೇ ನಂಬುವುದಿಲ್ಲ. ನೀವೇನಂತೀರಿ?