ಮಳೆರಾಯನ ಋತುವಿಲಾಸ
ಬೆಂಗಳೂರು : ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಸುರಿಮಳೆಯಿಂದ ಕೃಷ್ಣರಾಜ ಸಾಗರ ಭರ್ತಿಯಾಗಿದೆ. 124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ ಇಂದು 123 ಅಡಿ ನೀರಿದೆ. 38 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಣೆಕಟ್ಟೆಯ 18 ಗೇಟುಗಳನ್ನು ತೆರೆದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ರಭಸದಿಂದ ಹರಿಯುತಿರುವ ಕಾವೇರಿಯ ಕಣ್ತುಂಬ ನೋಡಲು ಜನ ಮೈಸೂರಿನತ್ತ ಧಾವಿಸುತ್ತಿದ್ದಾರೆ.
ಪ್ರವಾಹದ ಭೀತಿಯಿಂದ ಕಾವೇರಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈ ಮಧ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿಯ ಅನೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಬೀದರ್ ಹಾಗೂ ಔರಾದ್ನ 11 ಕೆರೆಗಳು ತುಂಬಿದ್ದು, ಕೋಡಿಯಿಂದ ನೀರನ್ನು ಹೊರಬಿಡಲಾಗುತ್ತಿದೆ. ಒಂದು ಕೆರೆ ಒಡೆದುಹೋಗಿದೆ.
ಕೊಲ್ಲೂರಿನಲ್ಲಿ 7 ಸೆಂಟಿ ಮೀಟರ್, ಕುಮಟಾದಲ್ಲಿ 6, ಮೂಡಿಬಿದರೆ, ಯಲ್ಲಾಪುರ, ಧರ್ಮಸ್ಥಳ, ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣ, ಶೃಂಗೇರಿ, ಕಮ್ಮರಡಿ, ಕಳಸ, ಜಯಪುರ, ಆಗುಂಬೆಗಳಲ್ಲಿ ತಲಾ ಮೂರು, ಶಿರಸಿ, ಮಂಕಿ, ಜಗಲ್ಪೇಟ್, ಬನವಾಸಿ, ಅಂಕೋಲ, ಬೆಳ್ತಂಗಡಿ, ಪಣಂಬೂರು, ಗುಲ್ಬರ್ಗಾ, ಲೋಂಡಾ, ಸೊರಬ, ಪೊನ್ನಂಪೇಟೆ, ನಾಪೋಕ್ಲು, ಕೊಟ್ಟಿಗೆಹಾರಗಳಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಆಗಿದೆ.
ಬುಧವಾರದವರೆಗಿನ ಮುನ್ಸೂಚನೆಯಂತೆ ಕರಾವಳಿ ಕರ್ನಾಟಕದ ಅನೇಕ ಕಡೆ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಅಥವಾ ಗುಡುಗು ಸಹಿತ ಸುರಿಮಳೆ ಬೀಳುವ ನಿರೀಕ್ಷೆ ಇದೆ. ಮಳೆಯ ಆರ್ಭಟ ಕೊಂಚ ಕಡಿಮೆಯಾಗುವ ಸೂಚನೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಸ್ಥಳೀಯ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಇದ್ದು, ಆಗ್ಗಾಗ್ಗೆ ಮಳೆ ಬೀಳುವ ಸಾಧ್ಯತೆ ಇದೆ.
ರಾಜ್ಯದ ಬಹುತೇಕ ಎಲ್ಲ ಜಲಾಶಯಗಳೂ ಪೂರ್ಣ ಮಟ್ಟ ತಲುಪಿವೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳ ನೋಡಲು ಇದು ಸಕಾಲ.