ಟಾಡಾ ಬಂದಿಗಳ ಬಿಡುಗಡೆ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
ನವದೆಹಲಿ : ಮೈಸೂರು ನ್ಯಾಯಾಲಯ ನೀಡಿರುವ ಷರತ್ತಿನ ಜಾಮೀನಿನನ್ವಯ ಟಾಡಾ ಆರೋಪಿಗಳನ್ನು ಸೆಪ್ಟೆಂಬರ್ 1ನೇ ತಾರೀಖಿನವರೆಗೆ ಬಿಡುಗಡೆ ಮಾಡದಂತೆ ಸರ್ವೋನ್ನತ ನ್ಯಾಯಾಲಯ ಮಂಗಳವಾರ ತಡೆಯಾಜ್ಞೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರದವರೆಗೆ ರಾಜ್ಕುಮಾರ್ ಅವರ ಬಿಡುಗಡೆ ಮುಂದಕ್ಕೆ ಹೋಗುವುದು ಈಗ ನಿಶ್ಚಿತವಾಗಿದೆ. ವೀರಪ್ಪನ್ ಸಹಚರರಿಂದ ಹತರಾದ ಪೊಲೀಸ್ ಅಧಿಕಾರಿ ಶಖೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಂ ಅವರು ಸಲ್ಲಿಸಿರುವ ವಿಶೇಷ ತೆರವು ಅರ್ಜಿಯನ್ನು ಅಂಗೀಕರಿಸುವ ಬಗ್ಗೆ ವಾದವನ್ನು ಆಲಿಸಿದ ಸರ್ವೋನ್ನತ ನ್ಯಾಯಾಲಯ ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು.
ಸರ್ವೋನ್ನತ ನ್ಯಾಯಾಲಯದ ಈ ತಡೆಯಾಜ್ಞೆಯಿಂದಾಗಿ ವೀರಪ್ಪನ್ ಸಹಚರರರಾದ 51 ಟಾಡಾ ಬಂದಿಗಳ ಬಿಡುಗಡೆ ಸೆಪ್ಟೆಂಬರ್ ಒಂದರವರೆಗೂ ಸಾಧ್ಯವಿಲ್ಲ. ಶುಕ್ರವಾರ ಸರ್ವೋನ್ನತ ನ್ಯಾಯಾಲಯ ತಳೆಯುವ ಅಭಿಪ್ರಾಯದ ಮೇಲೆ ರಾಜ್ಕುಮಾರ್ ಅವರ ಬಿಡುಗಡೆ ನಿಂತಿದೆ. ಮೈಸೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಎಲ್ಲ 51 ಆರೋಪಿಗಳೂ ಮಂಗಳವಾರ ಬೆಳಗ್ಗೆಯೇ ಬಿಡುಗಡೆಯಾಗಬೇಕಾಗಿತ್ತು.
ಅಬ್ದುಲ್ ಕರೀಂ ಅವರು 51 ಜನ ಟಾಡಾ ಆರೋಪಗಳ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡುವಂತೆ ಸರ್ವೋನ್ನತ ನ್ಯಾಯಾಲಯವನ್ನು ಕೋರಿದ್ದಾರೆ. ಸರಕಾರದ ನಿರ್ಧಾರವನ್ನು ಮೈಸೂರು ನ್ಯಾಯಾಲಯ ಎತ್ತಿ ಹಿಡಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.