ಟಾಡಾ ಬಂದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ತಡೆ
ಬೆಂಗಳೂರು :ಗಣೇಶನ ಮದುವೆಗೆ ನೂರೆಂಟು ವಿಘ್ನ ಎನ್ನುವಂತೆ ಡಾ. ರಾಜ್ಕುಮಾರ್ ಅವರ ಬಿಡುಗಡೆಗೂ ನೂರೆಂಟು ವಿಘ್ನಗಳು ಬಂದೊದಗುತ್ತಿವೆ. ಸೋಮವಾರ ಮೈಸೂರಿನ ನ್ಯಾಯಾಲಯ ವೀರಪ್ಪನ್ ಸಹಚರರರಾದ 51 ಮಂದಿ ಟಾಡಾ ಆರೋಪಿಗಳಿಗೆ ಷರತ್ತಿನ ಜಾಮೀನು ಮಂಜೂರು ಮಾಡಿದೆ. ಕರ್ನಾಟಕ ಸರಕಾರ ಸಹ ಎಲ್ಲ ಮೊಕದ್ದಮೆಗಳನ್ನೂ ಕೈಬಿಡುವ ನಿರ್ಧಾರ ಕೈಗೊಂಡಿದೆ.
ಈ ಮಧ್ಯೆ ಸರ್ವೋಚ್ಚ ನ್ಯಾಯಾಲಯ 51 ಟಾಡಾ ಆರೋಪಿಗಳ ಜಾಮೀನು ಬಿಡುಗಡೆಗೆ ತಡೆ ನೀಡಿದೆ. ವೀರಪ್ಪನ್ ಸಹಚರರರಿಂದ ಹತರಾದ ಪೊಲೀಸ್ ಅಧಿಕಾರಿ ಶಖೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಂ ಅವರು ಸಲ್ಲಿಸಿರುವ ವಿಶೇಷ ತೆರವು ಅರ್ಜಿಯ ಸಂಬಂಧ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಸಲಿದೆ.
ಕರ್ನಾಟಕದ ಪರ ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಅಡ್ವೋಕೇಟ್ ಜನರಲ್ ಎ.ಎನ್. ಜಯರಾಂ ಅವರು ದೆಹಲಿಗೆ ಧಾವಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಮೂರು ಗಂಟೆಯವರೆಗೆ ಟಾಡಾ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಟಾಡಾ ಆರೋಪಿಗಳಿಗೆ ಜಾಮೀನು ನೀಡಲು ಮೈಸೂರು ನ್ಯಾಯಾಲಯ ವಿಧಿಸಿದ್ದ ಷರತ್ತಿನಂತೆ, ಜಾಮೀನು ಖಾತರಿಯಾಗಿ ಸಂದಾಯ ಮಾಡಬೇಕಾಗಿರುವ ಒಟ್ಟು 51 ಸಾವಿರ ರುಪಾಯಿಗಳನ್ನು ರಾಜ್ ಅಭಿಮಾನಿಗಳು, ಚಿತ್ರನಟರಾದ ಅಂಬರೀಶ್ ಹಾಗೂ ವಿಷ್ಣುವರ್ಧನ್ ಒಟ್ಟು ಗೂಡಿಸಿದ್ದಾರೆ. ಆದಷ್ಟು ಬೇಗ ಟಾಡಾ ಆರೋಪಿಗಳಿಗೆ ಜಾಮೀನು ಕೊಡಿಸುವ ಮೂಲಕ, ರಾಜ್ಕುಮಾರ್ ಹಾಗೂ ಮತ್ತಿತರ ಮೂವರು ಒತ್ತೆಯಾಳುಗಳನ್ನು ವೀರಪ್ಪನ್ ಬಂಧನದಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಇವರು ಕಾರ್ಯ ಪ್ರವೃತ್ತರಾಗಿದ್ದಾರೆ.
ಕರ್ನಾಟಕ ರಾಜ್ಯ ಸರಕಾರವು ಟಾಡಾ ಆರೋಪಿಗಳ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡಲು ನಿರ್ಧಾರ ಕೈಗೊಂಡ ಕೂಡಲೇ ಕರೀಂ ಅವರು ಮೈಸೂರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಮೈಸೂರು ನ್ಯಾಯಾಲಯ ಈ ಅರ್ಜಿಯನ್ನು ವಜಾ ಮಾಡಿತ್ತು. ಕರ್ನಾಟಕ ಸರ್ಕಾರ ಹೈಕೋರ್ಟ್ನಲ್ಲಿ ಕೇವಿಯೆಟ್ ಸಲ್ಲಿಸಿರುವುದಾಗಿಯೂ ಪ್ರಕಟಿಸಿತ್ತು. ಈ ಮಧ್ಯೆ ಕರೀಂ ಅವರು ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ಒಯ್ದಿದ್ದರು.











Click it and Unblock the Notifications