ತಮಿಳರ ಹಿತಾಸಕ್ತಿ: ವೀರಪ್ಪನ್ ನಿಲುವಿಗೆ ಸ್ವಾಮಿ ಲೇವಡಿ
ಚೆನ್ನೈ : ಭಾರತದಲ್ಲಿನ ತಮಿಳರ ಹಿತಾಸಕ್ತಿ ರಕ್ಷಿಸಲು ಭಾರತದ ಸಂವಿಧಾನವೇ ಸಾಕು. ಅದು ಎಲ್ಲ ತಮಿಳರ ರಕ್ಷಣೆಗೆ ಅಗತ್ಯವಾದ ನೀತಿ-ನಿಯಮಗಳನ್ನು ಹೊಂದಿದೆ. ತಮಿಳರ ಹಿತರಕ್ಷಣೆಗೆ ವೀರಪ್ಪನ್ನ ಅಗತ್ಯವಿಲ್ಲ ಎಂದು ಅಖಿಲ ಭಾರತ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.
ತಮಿಳರಿಗೆ ನ್ಯಾಯ ಒದಗಿಸಲು ಮತ್ತು ರಕ್ಷಣೆ ನೀಡಲು ಕನ್ನಡದ ಜನಪ್ರಿಯ ನಟ ರಾಜ್ಕುಮಾರ್ ಅವರನ್ನು ಅಪಹರಿಸಿರುವುದಾಗಿ ಹೇಳಿರುವ ವೀರಪ್ಪನ್ ನಿಲುವನ್ನು ಮಂಗಳವಾರ ನೀಡಿರುವ ಹೇಳಿಕೆಯಲ್ಲಿ ಸ್ವಾಮಿ ಖಂಡಿಸಿದ್ದಾರೆ.
ತಮಿಳರ ಹಿತಾಸಕ್ತಿ ವೀರಪ್ಪನ್ಗೆ ಅಷ್ಟು ಮುಖ್ಯ ಎಂದಾದರೆ ಜಾಫ್ನಾ ದ್ವೀಪಕಲ್ಪದಲ್ಲಿ ಶ್ರೀಲಂಕಾದ ಸೈನ್ಯದ ವಿರುದ್ಧ ಹೋರಾಡಲು ತಮ್ಮ 12 ವರ್ಷದ ಮಕ್ಕಳನ್ನು ಯುದ್ಧ ಭೂಮಿಗಿಳಿಸುತ್ತಿರುವ ತಮಿಳರ ನೆರವಿಗೆ ಧಾವಿಸಲಿ ಎಂದು ಸ್ವಾಮಿ ಸಲಹೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ವೀರಪ್ಪನ್ಗೆ ಬೆಂಬಲವಾಗಿ ಆತನ ಜೊತೆಗಾರರಾದ ಎಲ್ಟಿಟಿಈ ಕಾರ್ಯಕರ್ತರೇ ಇದ್ದಾರೆ. ಎಲ್ಟಿಟಿಈ ಮತ್ತು ಲಂಕಾ ಪಡೆಗಳ ನಡುವೆ ಯುದ್ಧ ಮುಂದುವರಿದರೆ ಲಂಕಾದಲ್ಲಿನ ಎಲ್ಲ ತಮಿಳರು ನಾಶವಾಗುತ್ತಾರೆ ಎಂದು ಸ್ವಾಮಿ ಹೇಳಿದ್ದಾರೆ.