ಸುಪ್ರೀಂಕೋರ್ಟ್ ತೀರ್ಪುನಿಂದ ರಾಜ್ ಬಿಡುಗಡೆ ವಿಳಂಬವಿಲ್ಲ : ಕೃಷ್ಣ
ಬೆಂಗಳೂರು : ಟಾಡಾ ಆರೋಪ ಎದುರಿಸುತ್ತಿರುವ ವೀರಪ್ಪನ್ ಸಹಚರರ ಬಿಡುಗಡೆ ಸಂಬಂಧ, ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಅಪಹೃತ ರಾಜ್ ಹಾಗೂ ಸಂಗಡಿಗರ ಬಿಡುಗಡೆ ವಿಳಂಬವಾಗುವ ಸಾಧ್ಯತೆಯಿಲ್ಲ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಪಹೃತರ ಬಿಡುಗಡೆಗೂ ಮತ್ತು ತಡೆಯಾಜ್ಞೆಗೂ ಸಂಬಂಧವಿಲ್ಲ ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸಿದರು. ಅಪಹೃತರನ್ನು ಬಿಡಿಸಿಕೊಳ್ಳಲು ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಮರ್ಥಿಸಿ, ಸುಪ್ರಿಂಕೋರ್ಟ್ನಲ್ಲಿ ಪ್ರತಿ ಮನವಿ ಸಲ್ಲಿಸಲಾಗುವುದು ಎಂದರು.
ಈ ಮಧ್ಯೆ 51 ಆರೋಪಿಗಳ ವಿರುದ್ಧದ ಟಾಡಾ ಪ್ರಕರಣಗಳ ವಿಚಾರಣೆಯನ್ನು ಮೈಸೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಬಿ. ಎಸ್. ರಾಜೇಂದ್ರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದ್ದಾರೆ.
ಸರಕಾರದ ವಿರುದ್ಧ , ಕೋರ್ಟ್ ಮೆಟ್ಟಿಲೇರಿರುವ ವೀರಪ್ಪನ್ನಿಂದ ಹತ್ಯೆಗೊಳಗಾದ ಶಕೀಲ್ ಅವರ ತಂದೆ ಕರೀಂ ಅವರನ್ನು ಪ್ರಕರಣ ವಾಪಸ್ ತೆಗೆಯಲು ಮನವೊಲಿಸಲಾಗುವುದೇ ಎಂಬ ಪ್ರಶ್ನೆಗೆ, ಯಾರೊಬ್ಬರ ಮೂಲಭೂತ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಸರಕಾರಕ್ಕಿಲ್ಲ ಎಂದು ಕೃಷ್ಣ ಹೇಳಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜನ ಶಾಂತಿಯಿಂದಿರುವುದು ಅಗತ್ಯ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಈಗ ನಡೆದಿರುವ ಬೆಳವಣಿಗೆಗಳನ್ನು ವೀರಪ್ಪನ್ಗೆ ರೇಡಿಯೋ ಮೂಲಕ ವಿವರಿಸಲಾಗುವುದೇ ಎಂಬ ಇನ್ನೊಂದು ಪ್ರಶ್ನೆಗೆ, ಈಗ ವಿವರಿಸಬೇಕಾದ್ದು ಸುಪ್ರೀಂಕೋರ್ಟ್ಗೆ ವಿನಾ ಮತ್ತಾರಿಗೋ ಅಲ್ಲ ಎಂದರು. ಗೋಪಾಲ್ ಸಾಧ್ಯವಾದಷ್ಟೂ ಮುಂಚೆ ಬರುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಟಾಡಾ ಪ್ರಕರಣ ಕೈಬಿಡುವಾಗ ಪರಾಮರ್ಶನ ಸಮಿತಿ ನೇಮಿಸದೆ ನೇರವಾಗಿ ನಿರ್ಧಾರ ಕೈಗೊಂಡಿರುವುದು ಅವಸರದ ತೀರ್ಮಾನ ವಲ್ಲವೇ ಎಂಬ ಪ್ರಶ್ನೆಗೆ, ವಿಷಯ ಈಗಾಗಲೇ ಕೋರ್ಟ್ನಲ್ಲಿರುವುದರಿಂದ ಆ ಬಗ್ಗೆ ಮಾತನಾಡಲು ತಾವು ಇಚ್ಛಿಸುವುದಿಲ್ಲ ಎಂದರು.