ಪ್ರವಾಸೀ ತಾಣವಾಗಿ ಕಣ್ವ ಜಲಾನಯನ ಪ್ರದೇಶ
ಚೆನ್ನ ಪಟ್ಟಣ : ಇಲ್ಲಿನ ಕಣ್ವ ಜಲಾನಯನ ಪ್ರದೇಶವನ್ನು ಪ್ರವಾಸೀ ತಾಣವನ್ನಾಗಿ ಮಾಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಖಾತೆ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಅವರು ಸೋಮವಾರದಂದು ಕಣ್ವ ಜಲಾಶಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಸ್ತುತ ಕಣ್ವ ಜಲಾಶಯದಿಂದ 33 ಹಳ್ಳಿಗಳ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿದೆ. ಈ ಪ್ರದೇಶದಲ್ಲಿ ತೆಂಗು, ಕಂಗು, ಅಡಿಕೆ, ರೇಷ್ಮೆ ಮತ್ತು ಭತ್ತದ ಕೃಷಿ ನಡೆಸಲಾಗುತ್ತಿದೆ. ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಸಿ, ಜಲಾಶಯದ ಸಾಮರ್ಥ್ಯವನ್ನು 22 ಟಿ.ಎಂ.ಸಿಗಳಿಗೆ ಏರಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದರು .
ನೀರಾವರಿ ಇಲಾಖೆಯ ನೆರವಿನೊಂದಿಗೆ ಕಣ್ವ ಜಲಾನಯನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರಕಾರ ಉದ್ದೇಶಿಸಿದೆ ಎಂದು ಪ್ರವಾಸೋದ್ಯಮ ಸಚಿವ ಆರ್. ರೋಷನ್ ಬೇಗ್ ಹೇಳಿದರು. ಈ ಪ್ರದೇಶದಲ್ಲಿ ಝೆನ್ ಪಂಥದ ಸಿದ್ಧಾಂತವನ್ನು ನೆನಪಿಸುವಂತಹ ಝೆನ್ ಪಾರ್ಕ್ ನಿರ್ಮಾಣವಾಗಲಿದೆ. ಕಣ್ವ ಮಹರ್ಷಿಗಳ ಆಶ್ರಮ, ಔಷಧೀಯ ಸಸ್ಯ ತೋಟವನ್ನೂ ನಿರ್ಮಿಸಲಾಗುವುದು ಎಂದು ರೋಷನ್ಬೇಗ್ ಹೇಳಿದರು.
(ಇನ್ಫೋ ವಾರ್ತೆ)