ಪಾಕ್ನಲ್ಲಿ ಭಾರತ ಆಡುವುದೋ, ಇಲ್ಲವೋ ತಿಳಿಸಲು ತಿಂಗಳ ಗಡುವು
ಕರಾಚಿ : ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತದೋ, ಇಲ್ಲವೋ ಎಂಬುದನ್ನು ಇನ್ನೊಂದು ತಿಂಗಳಲ್ಲಿ ಸ್ಪಷ್ಟವಾಗಿ ತಿಳಿಸಬೇಕು ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ತೌಕಿರ್ ಜಿಯಾ ಗಡುವು ನೀಡಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಸಭೆಯ ಹೊತ್ತಿಗೆ ಭಾರತ ಈ ವಿಷಯವಾಗಿ ಒಂದು ನಿರ್ಧಾರಕ್ಕೆ ಬರಬೇಕು. ಭಾರತ ಪ್ರವಾಸ ಕೈಗೊಳ್ಳದ್ದಿದಲ್ಲಿ, ಆ ಸಮಯದಲ್ಲಿ ಕ್ರಿಕೆಟ್ ಆಡಲು ಬೇರೆ ತಂಡವನ್ನು ಆಮಂತ್ರಿಸುತ್ತೇವೆ. ಕೊನೆ ಗಳಿಗೆಯಲ್ಲಿ ಕೈಕೊಡುವುದು ಸರಿಯಲ್ಲ ಎಂದು ಜಿಯಾ ಹೇಳಿದ್ದಾರೆ.
ಕಳೆದ ವರ್ಷ ಕಾರ್ಗಿಲ್ ಯುದ್ಧದ ಕಾರಣ ಸಹಾರ ಕಪ್ನಲ್ಲಿ ಭಾರತ ತಂಡ ಆಡಲಿಲ್ಲ. ಈ ವರ್ಷ ಕಾಶ್ಮೀರ ನರಮೇಧದ ಹಿನ್ನೆಲೆಯಲ್ಲಿ ತಂಡಕ್ಕೆ ಆಡಲು ಭಾರತ ಸರ್ಕಾರ ಅನುಮತಿ ಕೊಡಲಿಲ್ಲ. ಈ ಬಾರಿ ಸಹಾರ ಟೂರ್ನಿ ರದ್ದಾಗಿದ್ದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 5 ಲಕ್ಷ ಡಾಲರ್ ನಷ್ಟ ಅನುಭವಿಸಿದೆ. ಮುಂದಿನ ಐಸಿಸಿ ಸಭೆಯಲ್ಲಿ ಈ ನಷ್ಟ ತುಂಬಿ ಕೊಡುವಂತೆ ಕೋರುತ್ತೇವೆ ಎಂದಿದ್ದಾರೆ.
‘ನಷ್ಟ ತುಂಬಿ ಕೊಡುವ ಭರವಸೆ ಕೊಡಿ’ : ಸಹಾರ ಕಪ್ ಟೂರ್ನಿಯ ಆಯೋಜಕರಾದ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಗ್ರೂಪ್ಸ್, ಒಪ್ಪಂದದ ಅನ್ವಯ ಮುಂದಿನ ವರ್ಷ ಸಹಾರ ಕಪ್ನಲ್ಲಿ ಭಾಗವಹಿಸುವಂತೆ ಪಾಕ್ ಕ್ರಿಕೆಟ್ ಮಂಡಳಿಯನ್ನು ಕೇಳಿಕೊಂಡಿದೆ. ಆದರೆ, ಅದು ಸಾಧ್ಯವಿಲ್ಲ. ಟೂರ್ನಿಯಿಂದ ಯಾವುದಾದರೂ ತಂಡ ಹಿಂದೆ ಸರಿದರೆ, ಮತ್ತೊಂದು ತಂಡಕ್ಕೆ ಆಗುವ ನಷ್ಟವನ್ನು ಭರಿಸುವ ಭರವಸೆಯನ್ನು ಆಯೋಜಕರು ನೀಡಿದರೆ ಮಾತ್ರ ಟೂರ್ನಿಯಲ್ಲಿ ಆಡಲು ನಾವು ಸಿದ್ಧ ಎಂದು ಜಿಯಾ ಹೇಳಿದ್ದಾರೆ.
(ಇನ್ಫೋ ವಾರ್ತೆ)