ಅನ್ಯ ಮಾರ್ಗವಿಲ್ಲದ ಸರ್ಕಾರದಿಂದ ಕರೀಂ ಮನವೊಲಿಕೆ ಯತ್ನ?
ಬೆಂಗಳೂರು : ಮೈಸೂರು ನ್ಯಾಯಾಲಯ ವೀರಪ್ಪನ್ ಸಹಚರರರಾದ 51 ಮಂದಿ ಟಾಡಾ ಆರೋಪಿಗಳಿಗೆ ಷರತ್ತಿನ ಜಾಮೀನು ಮಂಜೂರು ಮಾಡಿ 24 ಗಂಟೆ ಕಳೆಯುವ ಮೊದಲೇ ಸರ್ವೋಚ್ಚ ನ್ಯಾಯಾಲಯ ನೀಡಿದ ತಡೆಯಾಜ್ಞೆ ರಾಜ್ಯ ಸರಕಾರವನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದೆ.
ವೀರಪ್ಪನ್ ತನ್ನ ಬೇಡಿಕೆ ಈಡೇರದೆ ರಾಜ್ಕುಮಾರ್ ಹಾಗೂ ಮತ್ತಿತರ ಮೂವರು ಒತ್ತೆಯಾಳುಗಳನ್ನು ಬಿಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವೇ ಸರಿ. ವೀರಪ್ಪನ್ ತನ್ನ ಯಾವುದೇ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜಿಗೆ ಸಿದ್ಧನಿಲ್ಲ . ಅಡಕತ್ತರಿಯಲ್ಲಿ ಸಿಲುಕಿರುವ ಸರಕಾರ ವೀರಪ್ಪನ್ನನ್ನು ಸಮಾಧಾನಪಡಿಸುವ ಸ್ಥಿತಿಯಲ್ಲೂ ಇಲ್ಲ. ಸರ್ವೋಚ್ಚ ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಹೀಗಾಗಿ ಸರಕಾರದ ಪಾಲಿಗೆ ಈಗ ಉಳಿದಿರುವುದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಅಬ್ದುಲ್ ಕರೀಂ ಅವರ ಮನವೊಲಿಕೆ ಯತ್ನ ಮಾತ್ರ. ಸರಕಾರ ಈಗ ವೀರಪ್ಪನ್ ಸಹಚರರಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಶಕೀಲ್ ಅಹ್ಮದ್ ಅವರ ತಂದೆ ಕರೀಂ ಅವರ ಮನವೊಲಿಸಿ, ಅವರು ಸಲ್ಲಿಸಿರುವ ವಿಶೇಷ ತೆರವು ಅರ್ಜಿಯನ್ನು ವಾಪಸು ತೆಗೆಸುವ ಪ್ರಯತ್ನ ನಡೆಸಿದೆ.
ಇಂಡಿಯಾ ಅಬ್ರಾಡ್ ಪ್ರತಿನಿಧಿಗೆ ಈ ವಿಷಯ ತಿಳಿಸಿರುವ ರಾಜ್ಯದ ಉನ್ನತ ಅಧಿಕಾರಿಯಾಬ್ಬರು, ಸರಕಾರ ವಿಶೇಷ ತೆರವು ಅರ್ಜಿ ವಾಪಸು ತೆಗೆಸಲು, ಅಬ್ದುಲ್ ಕರೀಂ ಅವರು ಯಾವುದೇ ಬೇಡಿಕೆ ಮಂಡಿಸಿದರೂ ಅದನ್ನು ಈಡೇರಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಈಗ ಸರಕಾರ ರಾಜ್ಕುಮಾರ್ ಅವರನ್ನು ವೀರಪ್ಪನ್ ವಶದಿಂದ ಬಿಡಿಸಿಕೊಳ್ಳಲು ಕರೀಂ ಅವರ ಸಹಕಾರ ಕೇಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ ಎಂದು ಮೂಲಗಳು ಹೇಳಿವೆ. ಸರ್ವೋಚ್ಚ ನ್ಯಾಯಾಲಯದ ಈ ತಡೆಯಾಜ್ಞೆಯಿಂದಾಗಿ ರಾಜ್ಯ ಹೊಸ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.