ಗುಡವಿಯ ಗೊಡವೆ ನಮಗೇಕೆ ಎನ್ನದಿರಿ
ಶಿವಮೊಗ್ಗ : ಕರ್ನಾಟಕ ರಾಜ್ಯ ಪಕ್ಷಿಗಳ ಕಾಶಿ. ದೇಶ ವಿದೇಶಗಳ ನಾನಾ ಬಗೆಯ ಪಕ್ಷಿಗಳು ಕರ್ನಾಟಕದ ಸುಂದರ ಪ್ರಕೃತಿಯ ಸೊಬಗಿಗೆ ಹಾಗೂ ಹವಾಮಾನಕ್ಕೆ ಮನಸೋತಿವೆ. ದೂರದ ದೇಶಗಳಿಂದ ಸಪ್ತ ಸಾಗರಗಳನ್ನು ದಾಟಿ ನಮ್ಮ, ನಿಮ್ಮೂರಿಗೆ ಬರುತ್ತವೆ. ತಿಂಗಳುಗಳ ಗಟ್ಟಲೆ ಇಲ್ಲಿ ಬೀಡು ಬಿಟ್ಟು, ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿದ ನಂತರ ತಮ್ಮ ಪುಟ್ಟ ಕಂದಮ್ಮಗಳ ಜತೆ ತವರಿನೆಡೆಗೆ ಹಾರುತ್ತವೆ.
ರಾಜ್ಯದಲ್ಲಿ ಇಂತಹ ಹತ್ತಾರು ಪಕ್ಷಿಧಾಮಗಳಿವೆ. ಕೊಕ್ಕರೆಯ ಬೆಳ್ಳೂರು, ವಿಶ್ವವಿಖ್ಯಾತ ರಂಗನತಿಟ್ಟು, ತುಮಕೂರು ಜಿಲ್ಲೆಯ ಕಗ್ಗಲಡು, ಮಂಡಗದ್ದೆ , ಧಾರವಾಡ ಬಳಿಯ ಬೇಲೂರು ಹೀಗೆ ಪಟ್ಟಿ ದೊಡ್ಡದಾಗುತ್ತದೆ. ಇವುಗಳ ಬಗ್ಗೆ ನಾವು ಈಗಾಗಲೇ ನಿಮಗೆ ಕಿರು ಪರಿಚಯ ಮಾಡಿಸಿದ್ದೇವೆ. ಅವುಗಳ ಸಾಲಿನಲ್ಲೇ ಬರುವ ಶಿವಮೊಗ್ಗ ಜಿಲ್ಲೆಯ ಗುಡವಿ ಪಕ್ಷಿಧಾಮವೂ ಒಂದು.
200 ಬಗೆಯ ಪಕ್ಷಿಗಳು: ಗುಡವಿಯಲ್ಲಿ ಈಗ ಸ್ಪೂನ್ ಬಿಲ್ ಮೊದಲಾದ ನೂರಾರು ಹಕ್ಕಿಗಳು ಬಂದು ಬೀಡು ಬಿಟ್ಟಿವೆ. ನೀರನ್ನೇ ಬಯಸುವ ಸುಮಾರು 200 ಕ್ಕೂ ಹೆಚ್ಚು ನಮೂನೆಯ ಹಕ್ಕಿಗಳ ಸೊಬಗು ನೋಡುವ ಆಸೆಯಿದ್ದರೆ, ಬಿಡುವಿದ್ದರೆ ಗುಡವಿಗೆ ಬನ್ನಿ. ಗುಡವಿ ಪಕ್ಷಿಧಾಮದ ಅವ್ಯವಸ್ಥೆಗಳ ಬಗ್ಗೆ ಇರುವ ದೂರುಗಳು ಬೆಟ್ಟದಷ್ಟು. ಈಗ ಗುಡವಿಗೆ ಮೆರುಗು ನೀಡುವ ಕಾರ್ಯ ನಡೆಯುತ್ತಿದೆ. ಆದರೂ ಗುಡವಿ ಪಕ್ಷಿಧಾಮ ಜನರನ್ನು ಹೆಚ್ಚು ಆಕರ್ಷಿಸುವಲ್ಲಿ ವಿಫಲವಾಗಿದೆ. ಎಲ್ಲರೂ ಗುಡವಿಯ ಗೊಡವೆ ನಮಗೇಕೆ ಎಂದು ಕುಳಿತಿರುವಂತಿದೆ.
ಜಿಲ್ಲೆಯ ಮತ್ತೊಂದು ವಿಖ್ಯಾತ ಪಕ್ಷಿಧಾಮವಾದ ಮಂಡಗದ್ದೆ ಗಾಜನೂರು ಬಳಿಯ ಅಣೆಕಟ್ಟೆಯಿಂದಾಗಿ ಮುಳುಗಡೆಯಾಗುವ ಭೀತಿ ಇರುವುದರಿಂದ ಗುಡವಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬಂದಿದೆ. ಜಿಲ್ಲೆಯಲ್ಲಿ ಒಂದಾದರೂ ಪಕ್ಷಿಧಾಮವನ್ನು ಉಳಿಸಿಕೊಳ್ಳು ಪ್ರಯತ್ನ ಸಾಗಿದೆ. ಗುಡವಿಯ ಕೆರೆಯಲ್ಲಿ ನೂರಾರು ಪುಟ್ಟ ದ್ವೀಪಗಳನ್ನು ನಿರ್ಮಿಸುವ ಕಾರ್ಯ ನಡೆದಿದೆ. ಹಿಂದಿನ ವರ್ಷ ಕೆರೆ ಕೋಡಿ ಬಿದ್ದು ನೂರಾರು ಮರಿಗಳು, ಮೊಟ್ಟೆಗಳು ನೀರುಪಾಲಾದ ಹಿನ್ನೆಲೆಯಲ್ಲಿ ದ್ವೀಪವನ್ನು ಎತ್ತರಿಸುವ ಕಾರ್ಯವೂ ನಡೆಯುತ್ತಿದೆ. ಮರಗಳನ್ನು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ.
ಗುಡವಿಗೆ ಅತಿ ಹೆಚ್ಚು ಪಕ್ಷಿಗಳು ಬಂದು ಬೀಡು ಬಿಡುತ್ತವಾದರೂ, ಈ ಪಕ್ಷಿಗಳನ್ನು ಕಾಣಲು ಬರುವವರ ಸಂಖ್ಯೆ ಅತ್ಯಲ್ಪ. ಈಗ ಪ್ರವಾಸಿಗರನ್ನು ಆಕರ್ಷಿಸಲು ಪಕ್ಷಿ ವೀಕ್ಷಣಾ ಗೋಪುರಗಳನ್ನೂ, ಪ್ರವಾಸಿಗರು ವಿರಮಿಸಿಕೊಳ್ಳಲು ಹಾಸು ಗಲ್ಲುಗಳನ್ನೂ ಹಾಕಲಾಗುತ್ತಿದೆ. ಈ ಪಕ್ಷಿಧಾಮವನ್ನು ಸರ್ವಋತು ಪಕ್ಷಿಧಾಮವಾಗಿ ಮಾರ್ಪಡಿಸುವ ಉದ್ದೇಶವೂ ಇದೆ.
ರಸ್ತೆಗೆ ಹೆದರಿದ ಪ್ರವಾಸಿಗರು : ಗುಡವಿಯ ಪಕ್ಷಿಧಾಮದ ಮಗ್ಗುಲಲ್ಲೇ ನೈಸರ್ಗಿಕ ಅರಣ್ಯವಿದೆ. ಹೀಗಾಗಿ ಪಕ್ಷಿಗಳು ಈ ಪ್ರದೇಶವನ್ನು ಹೆಚ್ಚು ಇಷ್ಟಪಡುತ್ತವೆ. ಗುಡವಿಯ ಪಕ್ಷಿಗಳನ್ನು ಕಾಣುವ ತವಕ ಪ್ರವಾಸಿಗರಿಗಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ದೂರವಾಗುತ್ತಿದ್ದಾರೆ. ಒಂದು ವರ್ಷದಲ್ಲಿ ಹತ್ತಾರು ಸಾವಿರ ಪ್ರವಾಸಿಗರೂ ಇಲ್ಲಿಗೆ ಬರುವುದೂ ಕಷ್ಟ. ಇದಕ್ಕೆ ಮುಖ್ಯ ಕಾರಣ ರಸ್ತೆಗಳೇ ಎಂದು ಹೇಳಿದರೆ ನಿಮ್ಮನ್ನು ಯಾರೂ ಆಕ್ಷೇಪಿಸುವುದಿಲ್ಲ.
ಶಿವಮೊಗ್ಗದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಗುಡವಿ ಪಕ್ಷಿಧಾಮ, ಮುಖ್ಯರಸ್ತೆಯಿಂದ ಕೇವಲ 9 ಕಿ.ಮೀ. ದೂರದಲ್ಲಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕ್ಷೇತ್ರವಾದ ಸೊರಬದಿಂದ ಕೇವಲ 15 ಕಿ.ಮೀ.ದೂರದಲ್ಲಿರುವ ಈ ಪಕ್ಷಿಧಾಮಕ್ಕೆ ಸಾಗುವ ರಸ್ತೆ ಪ್ರವಾಸಿಗರಿಗೆ ಪ್ರಸವ ವೇದನೆಯನ್ನೇ ನೀಡುತ್ತದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಗುಡವಿಯ ಕಾಯಕಲ್ಪದತ್ತ ಕೊಂಚ ಗಮನ ಹರಿಸಿದ್ದರೂ, ಗುಡವಿಯ ಬಳಿಗೆ ಕರೆತರುವ ರಸ್ತೆಗಳ ಮಹತ್ವವನ್ನೇ ಮರೆತಿದ್ದಾರೆ.
ಪ್ರವಾಸಿಗರೆ ನಿಮಗೊಂದು ಕಿವಿ ಮಾತು : ನೀವು ಈ ಪಕ್ಷಿಧಾಮ ನೋಡಲೇ ಬೇಕೆಂದು ಬಯಸಿದರೆ, ಸಾಗರ ಮಾರ್ಗವಾಗಿ ಬನ್ನಿ. ಶಿಕಾರಿಪುರ ಮಾರ್ಗದಲ್ಲಿ ಬಂದರಂತೂ ನಿಮ್ಮನ್ನು ಆ ದೇವರೇ ಕಾಪಾಡಬೇಕು. ಸಾಗರ ಮಾರ್ಗವೂ ಅತ್ಯುತ್ತಮವೇನಲ್ಲ. ಆದರೆ, ಶಿಕಾರಿಪುರ ಮಾರ್ಗಕ್ಕೆ ಹೋಲಿಸಿದರೆ, ಸಾವಿರ ಪಾಲು ಮೇಲು ಎನ್ನಲು ಅಡ್ಡಿ ಇಲ್ಲ. ಬರಿಯ ಕೈಗೆ ಹಿತ್ತಾಳೆ ಕಡಗವೇ ಲೇಸು ಅನ್ನುತ್ತಾರಲ್ಲ ಹಾಗೆ.
ಈಗಾಗಲೇ ಇಲ್ಲಿ ದೇಶ ವಿದೇಶಗಳ ಹಕ್ಕಿಗಳು ಬಂದು ಬೀಡುಬಿಟ್ಟಿವೆ. ಮುಂದಿನ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಹಕ್ಕಿಗಳು ಬರುತ್ತವೆ. ಆದಾಗ್ಯೂ ಡಿಸೆಂಬರ್ನಿಂದ ಫ್ರೆಬ್ರುವರಿ ತಿಂಗಳ ಅವಧಿಯೇ ಇಲ್ಲಿಗೆ ಭೇಟಿ ನೀಡಲು ಸಂಪೂರ್ಣ ಸೂಕ್ತ ಸಮಯ. ಪ್ರಮುಖವಾಗಿ ಸ್ಪೂನ್ಬಿಲ್, ವೈಟ್ ಐಬಿಸ್, ಆಮೆಗಳು, ನೈಟ್ ಹೇರಾನ್ಸ್, ಇಗ್ರೆಟ್ಸ್ , ಗ್ರೇ ಹೇರಾನ್ಸ್, ಪಾಂಡ್ ಹೇರಾನ್ಸ್, ಬಾವಲಿ, ವಿವಿಧ ಜಾತಿಯ ಬಾತು ಕೋಳಿಗಳು, ಕೊಕ್ಕರೆಗಳು.... ಹೀಗೆ ನೂರಾರು ಬಗೆಯ ಪಕ್ಷಿಗಳ ವೀಕ್ಷಣೆಗೆ ಗುಡವಿ ಸೂಕ್ತವಾದ ಸ್ಥಳ.