ತುಮಕೂರು ಜಿಲ್ಲೆಯಲ್ಲಿ ಒಡೆದ ಕೆರೆ ಏರಿ : ಭಾರಿ ಹಾನಿ
ತುಮಕೂರು : ಮೇ ತಿಂಗಳ ಅಂತ್ಯದಲ್ಲಿಯೇ ರಾಜ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ ಕಡೆಗಣಿಸಿದ್ದ ಜಿಲ್ಲೆಗಳಲ್ಲಿ ತುಮಕೂರು ಸಹ ಒಂದಾಗಿತ್ತು. ತುಮಕೂರನ್ನು ಬರಪೀಡಿತ ಜಿಲ್ಲೆ ಎಂದು ಸಾರಿ ಎಂದು ಒತ್ತಾಯ ಮಾಡುವ ಮಟ್ಟಿಗೆ ಮಳೆ ಕೈಕೊಟ್ಟಿತ್ತು. ಆದರೆ, ಆಗಸ್ಟ್ ಆದಿಯಿಂದಲೇ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಭಾರಿ ಪ್ರಮಾಣದ ನಷ್ಟವನ್ನು ಉಂಟು ಮಾಡಿದೆ.
ತೆಂಗಿನ ಊರಾದ ತುರುವೇಕೆರೆ ತಾಲೂಕು ಹಾಗೂ ಮತ್ತಿತರ ಕಡೆಗಳಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಮಳೆ - ಗಾಳಿಯ ರಭಸಕ್ಕೆ ನೆಲಕಚ್ಚಿವೆ. ಈಗ ಶತಮಾನದಷ್ಟು ಹಳೆಯದಾದ ಪಾವಗಡ ತಾಲೂಕಿನ ಅರಳಿ ಕುಂಟೆ ಕೃಷ್ಣಾಂಬುಧಿ ಕೆರೆ ಮತ್ತು ಕಡಪಲ ಕೆರೆಗಳ ಏರಿ ಒಡೆದು ಅರ್ಧ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಮಳೆ ಹಾಗೂ ಕೆರೆ ಕಟ್ಟೆ ಒಡೆದಿರುವುದರಿಂದ ಜಿಲ್ಲೆಯಲ್ಲಿ ಕೋಟ್ಯಂತರ ರುಪಾಯಿ ಹಾನಿ ಸಂಭವಿಸಿದೆ.
ಒಡೆದಿರುವ ಕೆರೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಮೂಲಕ ಮುಂಬರುವ ದಿನಗಳಲ್ಲಿ ಬೆಳೆಗಳಿಗೆ ಹಾಗೂ ದನಕರುಗಳಿಗೆ ನೀರು ಸಂಗ್ರಹಿಸಲು ಕಾಮಗಾರಿ ಭರದಿಂದ ಸಾಗಿದೆ. ಕೆರೆ ಒಡೆದು ನಷ್ಟ ಸಂಭವಿಸಿರುವ ಪ್ರದೇಶಗಳಿಗೆ ಜನನಾಯಕರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಕೆರೆಯ ಕೆಲವು ಭಾಗ ಒಡೆಯುತ್ತಲೇ ಇದ್ದು, ಶಾಶ್ವತ ಕಾಮಗಾರಿ ಕೈಗೊಳ್ಳದ ಬಗ್ಗೆ ರೈತರು ಅಸಮಾಧಾನಗೊಂಡಿದ್ದಾರೆ.












Click it and Unblock the Notifications