ನಫೀಸಾ ಫಜಲ್, ಯಡಿಯೂರಪ್ಪ ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆ
ಗಳೂರು : ವೈದ್ಯಕೀಯ ಶಿಕ್ಷಣ ಸಚಿವೆ ನಫೀಸಾ ಫಜಲ್, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಒಟ್ಟು 11 ಸದಸ್ಯರು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಾಟಾಳ್ ನಾಗರಾಜ್ ಅವರ ನಾಮಪತ್ರವನ್ನು ಶುಕ್ರವಾರ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರಿಂದ, ಕಣದಲ್ಲಿ ಉಳಿದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿತ್ತು . ನಾಮಪತ್ರ ವಾಪಸ್ಸು ಪಡೆಯುವ ಗಡುವು ಇಂದು(ಶನಿವಾರ) ಕೊನೆಗೊಂಡ ಕಾರಣ, ಕಾಂಗ್ರೆಸ್ಸಿನ 8, ಬಿಜೆಪಿಯ 2 ಮತ್ತು ಸಂಯುಕ್ತ ಜನತಾದಳದ ಓರ್ವ ಸದಸ್ಯರ ಆಯ್ಕೆಯನ್ನು ಚುನಾವಣಾಧಿಕಾರಿ ಎಚ್.ಸಿ. ರುದ್ರಪ್ಪ ಪ್ರಕಟಿಸಿದರು.
ಸಚಿವೆ ನಫೀಸಾ ಫಜಲ್, ರಾಜಶೇಖರನ್, ಮಾಜಿ ಸಂಸದ ಮಾರುತಿರಾವ್ ಮಾಲೆ, ಲೇಔಟ್ ಕೃಷ್ಣಪ್ಪ , ಕರಿಯಣ್ಣ ಸಂಗಟಿ, ವಿ.ಆರ್. ಸುದರ್ಶನ್, ವಿನ್ಫ್ರೆಡ್ ಡಿಸೋಜಾ ಮತ್ತು ಜಲಜಾ ನಾಯಕ್ ಕಾಂಗ್ರೆಸ್ ಪಕ್ಷದಿಂದ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಬಿ.ಎಸ್. ಯಡಿಯೂರಪ್ಪ ಮತ್ತು ವಿಮಲಾ ಗೌಡ ಆಯ್ಕೆಯಾಗಿದ್ದರೆ, ಸಂಯುಕ್ತ ಜನತಾದಳದಿಂದ ಮಾಜಿ ಮಂತ್ರಿ ಎಂ.ಪಿ. ಪ್ರಕಾಶ್ ಚುನಾಯಿತರಾಗಿದ್ದಾರೆ.
ಹೊಸ ಸದಸ್ಯರ ಸೇರ್ಪಡೆಯಿಂದಾಗಿ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ ಹೀಗಿದೆ : ಕಾಂಗ್ರೆಸ್- 22, ಜಾತ್ಯತೀತ ಜನತಾದಳ- 17, ಭಾರತೀಯ ಜನತಾ ಪಕ್ಷ - 12, ಸಂಯುಕ್ತ ಜನತಾದಳ- 7, ಮೂಲ ಜನತಾದಳ- 5, ಪ್ರತ್ಯೇಕ ಗುಂಪು-4, ಸ್ವತಂತ್ರರು- 3, ಅಧ್ಯಕ್ಷ- 1, ಖಾಲಿ ಸ್ಥಾನಗಳು - 4 . ಸದನದ ಒಟ್ಟು ಸ್ಥಾನಗಳ ಸಂಖ್ಯೆ 75.(ಯುಎನ್ಐ)