ಮಿಜೋರಾಂ: ದೇಶದಲ್ಲೇ ಅಧಿಕ ಪಾಸಿಟಿವಿಟಿ ದರ, ಕೇಂದ್ರದ ತಂಡ ರಾಜ್ಯಕ್ಕೆ
ಮಿಜೋರಾಂ, ಅಕ್ಟೋಬರ್ 01: ಕೇರಳದ ಬಳಿಕ ಈಗ ಮಿಜೋರಾಂನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಮಿಜೋರಾಂನಲ್ಲಿ ಪಾಸಿಟಿವಿಟಿ ದರವು ದೇಶದಲ್ಲೇ ಅಧಿಕವವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರವು ತನ್ನ ತಂಡವನ್ನು ಮಿಜೋರಾಂ ರಾಜ್ಯಕ್ಕೆ ಕಳುಹಿಸಿದೆ, ಜೊತೆಗೆ ಆರ್ಥಿಕ ಸಹಾಯವನ್ನು ಕೂಡಾ ಮಾಡಿದೆ.
''ಮಿಜೋರಾಂನಲ್ಲಿ ಸದ್ಯ ಪಾಸಿಟಿವಿಟಿ ದರವು ಶೇಕಡ 18.44 ಕ್ಕೆ ಏರಿಕೆ ಆಗಿದೆ, ದೇಶದಲ್ಲೇ ಅಧಿಕ ಪಾಸಿಟಿವಿಟಿ ದರವನ್ನು ಹೊಂದಿರುವ ರಾಜ್ಯ ಮಿಜೋರಾಂ ಆಗಿದೆ," ಎಂದು ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ವಾರದ ಪಾಸಿಟಿವಿಟಿ ದರವು ಶೇಕಡ 1.74 ಆಗಿದೆ. ಇದು ಕಳೆದ 97 ದಿನದಿಂದ ಮೂರು ಶೇಕಡ ಇಳಿಕೆ ಕಂಡಿದೆ. ದೇಶದ ದೈನಂದಿನ ಪಾಸಿಟಿವಿಟಿ ದರವು ಶೇಕಡ 1.56 ಸಮೀಪದಲ್ಲಿ ಇದೆ. ಇದು ಕಳೆದ 31 ದಿನದಲ್ಲಿ ಶೇಕಡ ಮೂರರಷ್ಟು ಇಳಿಕೆ ಕಂಡಿದೆ.
ಬುಧವಾರ ನವದೆಹಲಿಯಲ್ಲಿ ಮಿಜೋರಾಂ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷನ್, "ಮೀಜೋರಾಂಗೆ ಕೇಂದ್ರದಿಂದ ಒಂದು ತಂಡವನ್ನು ಅತೀ ಶೀಘ್ರದಲ್ಲೇ ಕಳುಹಿಸಲಾಗುವುದು," ಎಂದು ತಿಳಿಸಿದ್ದಾರೆ.

ದುಬಾರಿ ಔಷಧಿ ಕೇಂದ್ರದಿಂದ ಮಿಜೋರಾಂಗೆ ಉಚಿತ ಸರಬರಾಜು
ಇನ್ನು ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್ನಲ್ಲಿ ಆರೋಗ್ಯ ಅಧಿಕಾರಿಗಳು, "ಮೊನೊಕ್ಲೋನಲ್ ಆಂಟಿಬಾಡಿಸ್ ಕಾಕ್ಟೈಲ್ ಅನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಕೇಂದ್ರ ಸರ್ಕಾರವು ಮಿಜೋರಾಂ ಸರ್ಕಾರದ ಪ್ರತಿನಿಧಿಗೆ ತಿಳಿಸಿದ್ದಾರೆ. "ಮೊನೊಕ್ಲೋನಲ್ ಆಂಟಿಬಾಡಿಸ್ ಕಾಕ್ಟೈಲ್ ಅತೀ ದುಬಾರಿಯಾಗಿದೆ. ಆದರೆ ಕೋವಿಡ್ಗೆ ಅತೀ ಪರಿಣಾಮಕಾರಿಯಾಗಿದೆ. ಒಂದು ಸೆಟ್ ಔಷಧಿಗೆ 1,20,000 ರೂಪಾಯಿ ಆಗಿದೆ. ಆದರೆ ಮಿಜೋರಾಂ ಸರ್ಕಾತದ ಮನವಿಯಂತೆ ಕೇಂದ್ರ ಸರ್ಕಾರವು ಮಿಜೋರಾಂ ರಾಜ್ಯ ಸರ್ಕಾರಕ್ಕೆ ಈ ಔಷಧಿಯನ್ನು ಉಚಿತವಾಗಿ ನೀಡುತ್ತಿದೆ," ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರವೇ ಮತ್ತೊಂದು ಹಂತದ ಕೋವಿಡ್ ಪ್ಯಾಕೇಜ್ ಬಿಡುಗಡೆ
ಇನ್ನು ರಾಜ್ಯದಕ್ಕೆ ಹಣಕಾಸು ನೆರವು ನೀಡುವ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷನ್, "ಕೇಂದ್ರ ಸರ್ಕಾರವು ತುರ್ತು ಕೋವಿಡ್ ಪ್ಯಾಕೇಜ್ ಅಡಿಯಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ರೂ 14,744.99 ಕೋಟಿಯನ್ನು ಹಂಚಿಕೆ ಮಾಡಿದೆ. ಈ ಪೈಕಿ ಮಿಜೋರಾಂ ರಾಜ್ಯಕ್ಕೆ 44.38 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ," ಎಂದಿದ್ದಾರೆ. "ಮೊದಲು 19.94 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಉಳಿದ ಹಣವನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ," ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಮಿಜೋರಾಂಗೆ ಕೇಂದ್ರದ ತಂಡ ಕಳುಹಿಸಲು ನಿಯೋಗ ಮನವಿ
ಕೇಂದ್ರಕ್ಕೆ ಮಿಜೋರಾಂಗೆ ಕಳುಹಿಸಿದ ಪ್ರತಿನಿಧಿಗಳಲ್ಲಿ ನಾಲ್ವರು ಇದ್ದರು. ಲೋಕ ಸಭಾ ಹಾಗೂ ರಾಜ್ಯ ಸಭಾ ಸದಸ್ಯ ಸಿ. ಲಾಲ್ರೋಸಂಗ, ಕೆ. ವನಲಲ್ವೇಣ, ರೊಸಾಂಗ್ಜುವಾಲಾ, ಅಜ್ಮದ್ ತಕ್ ಇದ್ದರು. ಅಧಿಕೃತ ಹೇಳಿಕೆಯ ಪ್ರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಮತ್ತು ಮಿಜೋರಾಮ್ಗೆ ಔಷಧಗಳು, ಸಲಕರಣೆಗಳು ಮತ್ತು ಇತರ ಕೋವಿಡ್-ಸಂಬಂಧಿತ ವಸ್ತುಗಳ ರೂಪದಲ್ಲಿ ಕೇಂದ್ರ ಸಹಾಯದ ಅಗತ್ಯತೆಗಳ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಲಾಲ್ಸೊಂಗಾ ಮಾಹಿತಿ ನೀಡಿದರು. "ಮಿಜೋರಾಂ ಕೇಂದ್ರದಿಂದ ಮಂಜೂರಾದ ಹಣವನ್ನು ಮೀರಿ ಬೆಂಬಲವನ್ನು ಬಯಸುತ್ತಿದೆ. ರಾಜ್ಯವು ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟನ್ನು ಪರಿಶೀಲನೆ ನಡೆಸಲು ತಜ್ಞರ ತಂಡವನ್ನು ಮಿಜೋರಾಂಗೆ ಸಾಧ್ಯವಾದಷ್ಟು ಬೇಗ ಕಳುಹಿಸುವಂತೆ ನಿಯೋಗವು ವಿನಂತಿಸಿದೆ "ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಿಜೋರಾಂ ಕೋವಿಡ್ ಪರಿಸ್ಥಿತಿ ಹೇಗಿದೆ?
ಮಿಜೋರಾಂನ ಆರೋಗ್ಯ ಅಧಿಕಾರಿಗಳ ಪ್ರಕಾರ ಮಿಜೋರಾಂನಲ್ಲಿ ಪ್ರತಿದಿನ ಸುಮಾರು 1,500 ರಷ್ಟು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಡುತ್ತಿದೆ. ಮಿಜೋರಾಂನಲ್ಲಿ 2011 ಜನಗಣತಿ ಪ್ರಕಾರ 1.1 ದಶಲಕ್ಷ ಜನರು ಇದ್ದು, ದೇಶದಲ್ಲೇ ಅತೀ ಕಡಿಮೆ ಜನ ಸಂಖ್ಯೆ ಇರುವ ರಾಜ್ಯ ಮಿಜೋರಾಂ ಆಗಿದೆ. ಆದ್ದರಿಂದ ಇಲ್ಲಿ ಪ್ರತಿದಿನ 1,500 ಮಂದಿಗೆ ಕೋವಿಡ್ ದೃಢಪಡುತ್ತಿರುವುದು ಭೀತಿಗೆ ಕಾರಣವಾಗಿದೆ. ಇನ್ನು ಮಿಜೋರಾಂ ರಾಜ್ಯದಲ್ಲಿ ಈವರೆಗೆ 93,660 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 309 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ ಡೇಟಾ ಪ್ರಕಾರ ಮಿಜೋರಾಂ ರಾಜ್ಯದಲ್ಲಿ ಒಟ್ಟು ಶೇಕಡ 7 ರಷ್ಟು ಜನರಿಗ ಕೋವಿಡ್ ಸೋಂಕು ತಗುಲಿದೆ. ಇನ್ನು ಈ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಆರೋಗ್ಯ ಅಧಿಕಾರಿಗಳು "ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಶೇಕಡ 82.78 ಇದೆ," ಎಂದು ತಿಳಿಸಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣವು ಶೇಕಡ 97.85 ಆಗಿದೆ. ಗುರುವಾರದವರೆಗೆ ಮಿಜೋರಾಂನಲ್ಲಿ ಒಟ್ಟು 15,815 ಪ್ರಕರಣಗಳು ಸಕ್ರಿಯವಾಗಿದ್ದು, 77,536 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 11 ಜಿಲ್ಲೆಗಳು ಇದ್ದು, ಈ ಪೈಕಿ ರಾಜ್ಯ ರಾಜಧಾನಿ ಐಜ್ವಾಲ್ ಒಂದರಲ್ಲೇ ಅಧಿಕ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿದೆ. 93,660 ಪ್ರಕರಣಗಳ ಪೈಕಿ 59,533 ಪ್ರಕರಣ ಈ ಜಿಲ್ಲೆಯಲ್ಲೇ ದಾಖಲಾಗಿದೆ. ಒಟ್ಟು 309 ಸಾವಿನ ಪೈಕಿ 231 ಸಾವು ಈ ಜಿಲ್ಲೆಯಲ್ಲೇ ವರದಿಯಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications