ಒನ್ಇಂಡಿಯಾ ರಿಯಾಲಿಟಿ ಚೆಕ್: ಕ್ಯಾಮರಾ ಮುಂದೆ ಲಾಠಿ ಏಟು ಗೋಡೆ ಮರೆಯಲ್ಲಿ ವಸೂಲಿ ಮಾಮೂಲು

ಬೆಂಗಳೂರು, ಮೇ. 10: ಕೊರೊನಾ ಎರಡನೇ ಅಲೆ ಅಬ್ಬರದ ನಡುವೆ ಕಠಿಣ ಲಾಕ್ ಡೌನ್ ನಿಯಮ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಜನರು ಹೊರಗೆ ಬಂದರೆ ಬೀಳುತ್ತೆ ಪೊಲೀಸ್ ಲಾಠಿ ಏಟು ಎಂಬ ಎಚ್ಚರಿಕೆ ಸುದ್ದಿ ನಡುವೆಯೂ ಲಾಕ್ ಡೌನ್ ಮೊದಲ ದಿನವೇ ಪೊಲೀಸರು ಜನ ಸಾಮಾನ್ಯರ ಮೇಲೆ ಪ್ರಯೋಗಿಸಿದ ಲಾಠಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ನಿಜವಾಗಿಯೂ ಪೊಲೀಸರು ಲಾಕ್ ಡೌನ್ ನಿಯಮ ಜಾರಿಗೊಳಿಸುತ್ತಾರೆ ಎಂಬ ಅಸಲಿ ಸತ್ಯ ಹುಡುಕಿಕೊಂಡು ಹೊರಟ ಒನ್ಇಂಡಿಯಾ ಕನ್ನಡಕ್ಕೆ ಕಂಡ ಸತ್ಯವೇ ಬೇರೆಯದ್ದು. ಲಾಕ್ ಡೌನ್ ನಿಯಮ ಜಾರಿಗೊಳ್ಳುವಾಗ ಕ್ಯಾಮರಾ ಎದುರು ಪೊಲೀಸರ ಲಾಠಿ ದರ್ಪ. ಕ್ಯಾಮರಾ ಇಲ್ಲದಿದ್ದರೆ ಪೊಲೀಸರದ್ದು ಜನ ಸಾಮಾನ್ಯರ ವಾಹನ ನಿಲ್ಲಿಸಿ ಮಾಮೂಲಿ ವಸೂಲಿ. ಕಾನೂನು ಮಾತನಾಡುವರ ವಾಹನ ಜಪ್ತಿ ಮಾಡಿ ಕೇಸು ಜಡಿದರು !

ಬೆಂಗಳೂರಿನಲ್ಲಿ ಕಠಿಣ ಲಾಕ್ ಡೌನ್ ನಿಯಮದ ಮೊದಲ ದಿನವಾದ ಸೋಮವಾರ ಒನ್ಇಂಡಿಯಾ ಕನ್ನಡಕ್ಕೆ ಕಂಡ ದೃಶ್ಯಗಳಿವು. ಕೊರೊನಾ ಸೋಂಕಿಗೆ ಲಾಕ್ ಡೌನ್ ಒಂದೇ ಏಕೈಕ ಮಾರ್ಗ ಎಂದೇ ಭಾವಿಸಿರುವ ಸರ್ಕಾರ ಸೆಮಿ ಲಾಕ್ ಡೌನ್ ನಡುವೆಯೂ ಕಠಿಣ ಲಾಕ್ ಡೌನ್ ಮೇ. 10 ರಿಂದ 24 ರ ವರೆಗೆ ಘೋಷಣೆ ಮಾಡಲಾಗಿದೆ. ಒಂದು ದಿನ ಮೊದಲೇ ಬೆಂಗಳೂರು ಪೊಲೀಸರು ಕಠಿಣ ಲಾಕ್ ಡೌನ್ ನಿಯಮಕ್ಕೆ ಸಜ್ಜಾಗಿದ್ದರು. ಬಹುತೇಕ ರಸ್ತೆಗಳನ್ನು ಬಂದ್ ಮಾಡಿಬಿಟ್ಟರು. ಮೇಲ್ಸೇತುವೆಗಳಿಗೆ ಬ್ಯಾರಿಕೇಡ್ ಹಾಕಿದರು. ಚೆಕ್ ಪಾಯಿಂಟ್ ಹಾಕಿ ಜನರನ್ನು ನಿಯಂತ್ರಿಸುವ ಮುಂಜಾಗ್ರತಾ ಕ್ರಮ ಕೈಗೊಂಡರು. ಪೊಲೀಸರ ಸೇವೆ ಬಗ್ಗೆ ಜನರಲ್ಲೂ ಒಂದೂ ರೀತಿಯ ಪ್ರೀತಿ ಗೌರವ ಮೂಡಿತ್ತು. ಜನರ ಜೀವನ ಕಾಪಾಡೋಕೆ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಹೊರೆಗೆ ಹೋಗಿ ಸೇವೆ ಸಲ್ಲಿಸುತ್ತಿದ್ದಾರಲ್ಲಾ ಎಂದು ಜನರು ಗೌರವ ಭಾವದಿಂದಲೇ ಕಾಣುತ್ತಿದ್ದರು.

 ಕ್ಯಾಮರಾಗಳ ಎದುರು ಲಾಠಿ ಪ್ರಯೋಗ

ಕ್ಯಾಮರಾಗಳ ಎದುರು ಲಾಠಿ ಪ್ರಯೋಗ

ಲಾಕ್ ಡೌನ್ ಮೊದಲೇ ಸುದ್ದಿ ಮಾಧ್ಯಮಗಳು "ಬೀದಿಗೆ ಇಳಿದರೆ ಬಿಸಿ ಬಿಸಿ ಕಜ್ಜಾಯ, ಹೊರಗೆ ಬಂದರೆ ಹುಷಾರ್ ಬೀಳುತ್ತಾ ಲಾಠಿ ಗುನ್ನಾ" ಎಂಬ ಸುದ್ದಿಗಳನ್ನು ಬಿತ್ತರಿಸಿದವು. ಇದರಿಂದ ಪ್ರೇರಿತಗೊಂಡರೋ ಇಲ್ಲವೋ ಗೊತ್ತಿಲ್ಲ. ಜಿಲ್ಲಾ ಕೇಂದ್ರಗಳು ಸೇರಿದಂತೆ ರಾಜಧಾನಿಯಲ್ಲಿ ಜನರ ಮೇಲೆ ಪೊಲೀಸರು ಬೀಸಿದ ಲಾಠಿ ಏಟುಗಳು ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದವು. ಕ್ಯಾಮರಾ ನೋಡಿಕೊಂಡೇ ಪೊಲೀಸರು ಲಾಠಿ ಬೀಸಿದರಾ ? ಇಲ್ಲವೇ ಲಾಠಿ ಬೀಸುವುದನ್ನು ಗೊತ್ತಿಲ್ಲದೇ ಮಾಧ್ಯಮಗಳು ಸೆರೆ ಹಿಡಿದವೋ ಗೊತ್ತಿಲ್ಲ. ಆದರೆ ಪೊಲೀಸರು ತೋರಿದ ಲಾಠಿ ವರ್ತನೆ ವಿರುದ್ಧ ಸಮಾಜದಲ್ಲಿ ಬಹುದೊಡ್ಡ ಆಕ್ರೋಶ ವ್ಯಕ್ತವಾಗಿದೆ.

ಕೊರೊನಾ ಕಷ್ಟ ಕಾಲದಲ್ಲಿ ಪೊಲೀಸರ ಸೇವೆ ನೋಡಿದ್ದ ಗೌರವ "ಲಾಠಿ ಏಟುಗಳಿಗೆ" ಮಣ್ಣು ಪಾಲಾಗಿದೆ. ಪೊಲೀಸರ ಕ್ರೌರ್ಯದ ವಿರುದ್ಧ ಇದೀಗ ರಾಜ್ಯ ಮಾನವ ಹಕ್ಕು ಆಯೋಗ ಕೂಡ ಗರಂ ಆಗಿದೆ. ಪೊಲೀಸರ ವಿರುದ್ಧ ಜನ ಸಾಮಾನ್ಯರೇ ತಿರುಗಿ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿ ಇದ್ದರೂ ಬಡಿದೇ ಪೊಲೀಸರು ತೋರುತ್ತಿರುವ ದರ್ಪದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು ಗಮನಾರ್ಹ.

ರಿಯಾಲಿಟಿ ಚೆಕ್

ರಿಯಾಲಿಟಿ ಚೆಕ್

ಇನ್ನು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಕೆ.ಆರ್ ಮಾರ್ಕೆಟ್, ಜೆ.ಸಿ. ರಸ್ತೆ, ಶಿವಾಜಿನಗರದಲ್ಲಿ ಲಾಠಿ ಬೀಸುವ ದೃಶ್ಯಗಳು ಇಡೀ ರಾಜ್ಯಕ್ಕೆ ಬಹುದೊಡ್ಡ ಸಂದೇಶ ರವಾನಿಸಿದ್ದವು. ಈ ನಡುವೆ ಒನ್ಇಂಡಿಯಾ ಕನ್ನಡ ಸದಸ್ಯರು ಇದರ ವಾಸ್ತವ ಹುಡುಕಿಕೊಂಡು ರಾಜಧಾನಿಯೊಳಗೆ ಸುತ್ತಾಡಿದ್ದಾಗ ಕಂಡಿದ್ದು ಬೇರೆಯದ್ದೇ ಸತ್ಯ. ನಾಗರಭಾವಿಯಿಂದ ಹಿಡಿದು, ಗಿರಿನಗರ, ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ವಿಧಾನಸೌಧ, ರಾಜಭವನ ಹೈಕೋರ್ಟ್, ಎಂ.ಜಿ. ರಸ್ತೆ ಸುತ್ತಾಡಿದಾಗ ಕಂಡಿದ್ದು ಇಷ್ಟೇ. ಬಹುತೇಕ ವಾಹನ ಸವಾರರನ್ನು , ಕಾರುಗಳನ್ನು , ಆಂಬ್ಯುಲೆನ್ಸ್‌ಗಳನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲಿಸುತ್ತಿದ್ದರು. ಎಲ್ಲೂ ಲಾಠಿ ಪ್ರಯೋಗಿಸುತ್ತಿದ್ದ ದೃಶ್ಯಗಳು ಕಾಣಲಿಲ್ಲ. ಆದರೆ, ನಿಲ್ಲಿಸಿದ ವಾಹನಗಳ ಮೇಲೆ ಕೇಸು ಹಾಕಿಸುವ ಬೆದರಿಕೆ ಹಾಕಿ ದುಡ್ಡು ವಸೂಲಿ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ವಸೂಲಿ ಬಾಜಿ ಬಿಟ್ಟರೆ ಲಾಠಿ ಪ್ರಯೋಗ ಇಲ್ಲ

ವಸೂಲಿ ಬಾಜಿ ಬಿಟ್ಟರೆ ಲಾಠಿ ಪ್ರಯೋಗ ಇಲ್ಲ

ಸಂಚಾರ ಪೊಲೀಸರು ಎಲ್ಲೂ ತಮ್ಮ ಎಲ್ಲೆ ಮೀರಿ ಕರ್ತವ್ಯ ನಿರ್ವಹಿಸಿದ್ದು ಕಂಡು ಬರಲಿಲ್ಲ. ವಾಹನ ತಡೆದು ಪ್ರಶ್ನಿಸಿ ಬಿಟ್ಟು ಕಳಿಸುತ್ತಿದ್ದರು. ಇನ್ನೂ ಕೆಲವು ಕಡೆ ಪೊಲೀಸರು ಕೂಡ ಅಷ್ಟೇ ಶಿಸ್ತು ಬದ್ಧವಾಗಿ ವಾಹನ ತಪಾಸಣೆ ಮಾಡಿ ಸೇವೆ ಮಾಡುತ್ತಿದ್ದರು. ಆದರೆ ಕೆಲವಡೆ ಪೊಲೀಸರು ಹಣ ತೆಗೆದುಕೊಂಡು ಹಲವು ವಾಹನ ಸವಾರರನ್ನು ಬಿಟ್ಟು ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ವಿಪರ್ಯಾಸ ಎಂದರೆ ಗಾಡಿ ತಡೆಯುವ ಯಾವ ಪೊಲೀಸರ ಜೇಬಿನ ಮೇಲೆ ಹೆಸರಿನ ಬಿಲ್ಲೆ ಇರಲಿಲ್ಲ. ಬಿಲ್ಲೆ ಕಡ್ಡಾಯವಾಗಿ ಹಾಕಿರಬೇಕು ಎಂಬ ನಿಯಮ ವಿದ್ದರೂ ಕೇಳಿದಾಗ ಒಬ್ಬೊಬ್ಬರದ್ದು ಒಂದೊಂದು ಕಾರಣ ನೀಡಿದರು. ಜನರ ವಾಹನ ನಿಲ್ಲಿಸಿ ಅವರಿಂದ ಹಣ ಪಡೆಯುವ ನಾಲ್ಕು ಪ್ರಸಂಗಗಳಲ್ಲಿ ಪೊಲೀಸರು ಸಿಕ್ಕಿಬಿದ್ದರೂ, ಕೊರೊನಾ ಕಷ್ಟ ಕಾಲದಲ್ಲಿ ಜೀವ ಪಣಕ್ಕೆ ಇಟ್ಟು ಸೇವೆ ಮಾಡಿ ಗಳಿಸಿರುವ ಮರ್ಯಾದೆ ಮೂರು ಕಾಸಿಗೆ ಹರಜಾಗಬಾರದು ಎನ್ನುವ ಕಾರಣಕ್ಕೆ ಒನ್ಇಂಡಿಯಾ ಕನ್ನಡ ಸಂಸ್ಥೆ ಅವನ್ನು ಪ್ರಸಾರ ಮಾಡಲು ನಿರಾಕರಿಸಿತು.

ಲಾಠಿ ಏಟುಗಳ ಸಂಗತಿ ರಾಜ್ಯ ಮಾನವ ಹಕ್ಕು ಆಯೋಗದ ಕದ ತಟ್ಟಿದೆ

ಲಾಠಿ ಏಟುಗಳ ಸಂಗತಿ ರಾಜ್ಯ ಮಾನವ ಹಕ್ಕು ಆಯೋಗದ ಕದ ತಟ್ಟಿದೆ

ಇನ್ನು ರಾಜ್ಯದೆಲ್ಲೆಡೆ ಪೊಲೀಸರು ಜನರ ಮೇಲೆ ಪ್ರಯೋಗಿಸಿದ ಲಾಠಿ ಏಟುಗಳ ಸಂಗತಿ ರಾಜ್ಯ ಮಾನವ ಹಕ್ಕು ಆಯೋಗದ ಕದ ತಟ್ಟಿದೆ. ಹಲವು ದೂರುಗಳು ದಾಖಲಾಗುವ ಸಾಧ್ಯತೆಯಿದೆ. ಲಾಕ್ ಡೌನ್ ನಿಯಮ ಸರಿ. ತುರ್ತು ಕಾರಣಕ್ಕೆ ಬೀದಿಗೆ ಇಳಿಯುವ ಜನರ ಮಾತು ಕೇಳುವ ಮೊದಲೇ ಲಾಠಿ ಬೀಸಿ ಆನಂತರ ಸಮಸ್ಯೆ ಕೇಳುವ ಪೊಲೀಸರ ವರ್ತನೆ ವಿರುದ್ಧ ಜನರು ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ದರ್ಪದ ವಿರುದ್ಧ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಚುನಾವಣೆಗಳಿಗೆ ಅವಕಾಶ ಕೊಟ್ಟ ರಾಜಕಾರಣಿಗಳು ಸಭೆ ನಡೆಸಿದಾಗ ಪೊಲೀಸರ ಲಾಠಿ ಎಲ್ಲಿ ಹೋಗಿತ್ತು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಸಭೆ ಸೇರುತ್ತಿದ್ದ ರಾಜಕಾರಣಿಗಳ ಮೇಲೆ ಯಾಕೆ ಪೊಲೀಸರು ಲಾಠಿ ಬೀಸಲಿಲ್ಲ. ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದ ಎಷ್ಟು ನಾಯಕರ ಮೇಲೆ ಪೊಲೀಸರು ಕೇಸು ದಾಖಲಿಸಿ ಕ್ರಮ ಜರುಗಿಸಿದ್ದಾರೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ನಾಂದಿ ಹಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+