ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!
ರಸ್ತೆ ಬದಿಯಲ್ಲಿ ಚುರುಮುರಿ ತಿನ್ನುವ ಸುಖವನ್ನೇ ಒಂದು ಪುಸ್ತಕಕ್ಕಾಗುವಷ್ಟು ಬರೆಯಬಹುದು. ಅದರೆ ಅಷ್ಟೆಲ್ಲ ಬೇಡ, ನೀವು ಈ ಎರಡು ಜಾಗದಲ್ಲಿ ಚುರುಮುರಿ ಜತೆಗೆ ಇನ್ನಷ್ಟು ತಿನಿಸು ತಿಂದುಬಂದರೆ ಮತ್ತೆ ಮತ್ತೆ ಹುಡುಕಿಕೊಂಡು ಹೋಗ್ತೀರಾ ಅನ್ನೋದು ಮಾತ್ರ ಗ್ಯಾರಂಟಿ ಹೇಳಬಲ್ಲೆ. ಏಕೆಂದರೆ ನನ್ನದೇ ಶನಿವಾರ-ಭಾನುವಾರಗಳು ಗಂಟೆಗಟ್ಟಲೆ ಈ ಗಾಡಿಗಳ ಎದುರೇ ಕಳೆದುಹೋಗುತ್ತವೆ.
ಮೊದಲಿಗೆ ಸಜ್ಜನ್ ರಾವ್ ಸರ್ಕಲ್ ಗೆ ಹೋಗುವ ದಾರಿಯಲ್ಲಿ, ಜೈನ್ ಕಾಲೇಜು ಎದುರಿನಲ್ಲಿ ಇರೋ ವೆಂಕಟೇಶ್ ಅವರ ಚುರುಮುರಿ ಗಾಡಿ ಬಗ್ಗೆ ಹೇಳಿಬಿಡಬೇಕು. ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ಲಾಲ್ ಬಾಗ್ ಕಡೆಗೆ ಹೋಗುವ ರಸ್ತೆಯ ಸಿಗ್ನಲ್ ಎಡಗಡೆಗೆ ಜೈನ್ ಕಾಲೇಜಿನ ಕಡೆಗೆ ಹೋಗುವಾಗ ನಿಮಗೆ ಈ ಗಾಡಿ ಎದುರಾಗುತ್ತೆ.[ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...]
ವೆಂಕಟೇಶ್ ಅವರ ತಂದೆ ಇದೇ ಕೆಲಸ ಮಾಡಿಕೊಂಡಿದ್ದರಂತೆ. ಅದನ್ನೇ ಮುಂದುವರಿಸಿದ್ದಾರೆ. ಜನ ತುಂಬಾ ಇದ್ದಾಗ 'ಸ್ವಲ್ಪ ತಡವಾಗಬಹುದು, ಕಾಯ್ತೀರಿ ಅಲ್ವಾ?' ಅಂತಲೇ ತಿಳಿಸುತ್ತಾರೆ ವೆಂಕಟೇಶ್. ಆ ನಂತರ ಇಲ್ಲಿನ ಅನಾನಸ್ ಮಸಾಲಾ, ಟೊಮೆಟೊ ಮಸಾಲ, ಸೌತೇಕಾಯಿ ಮಸಾಲಾ, ಚುರುಮುರಿ ಒಂದೊಂದೇ ಆರ್ಡರ್ ಮಾಡಬಹುದು.
'ಇದು ಎಲ್ಲ ಕಡೆ ಸಿಗತ್ತೆ ಕಣ್ರೀ, ಇದರಲ್ಲೇನು ವಿಶೇಷ?' ಅಂತೀರಾ, ವೆಂಕಟೇಶ್ ಅವರು ಯಾವುದೇ ತಿನಿಸಿಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಬಳಸುವುದಿಲ್ಲ. ಜತೆಗೆ ತರಕಾರಿಯನ್ನೇ ಉಪಯೋಗಿಸ್ತಾರೆ. ಅದೆಷ್ಟೇ ಗ್ರಾಹಕರಿದ್ದರೂ ಕಸ್ಟಮೈಸ್ಡ್ ಆಗಿಯೇ ಮಾಡಿಕೊಡ್ತಾರೆ. ಅಂದರೆ ಒಂಚೂರು ಖಾರ ಕಡಿಮೆ, ಸ್ವಲ್ಪ ಈರುಳ್ಳಿ ಜಾಸ್ತಿ, ಸಿಹಿ ಜಾಸ್ತಿ ಹಾಕಿರಿ, ಹೀಗೆ ಎಷ್ಟು ಬಗೆಯಲ್ಲಿ ಹೇಳಿದರೂ ಅದರ ಪ್ರಕಾರವೇ ಸಿದ್ಧವಾಗುತ್ತದೆ.[ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]
ಇಲ್ಲಿ ಮತ್ತಷ್ಟು ವಿಶೇಷಗಳಿವೆ. ನೀವೇ ಸ್ವತಃ ತಿಂದು ನೋಡಿ. ನಿಮ್ಮ ಅಭಿಪ್ರಾಯವನ್ನೂ ನಮಗೆ ತಿಳಿಸಿ.
ಮತ್ತೊಂದು ಚುರುಮುರಿ ಗಾಡಿಯ ಹೆಸರು ಮಾರುತಿ ಭೇಲ್ ಸಾಗರ್. ಬಸವನಗುಡಿಯ ರಾಮಕೃಷ್ಣಾಶ್ರಮದ ಹಿಂದಿನ ನಿಲ್ದಾಣ ಸಿಂಡಿಕೇಟ್ ಬ್ಯಾಂಕ್ ಹತ್ತಿರವೇ ನಿಲ್ಲೋದು ಇವರು. ರಾಜಕುಮಾರ್ ಅಂದರೆ ವಿಪರೀತ ಅಭಿಮಾನ. ಯಾರಿಗೆ ಇರಲ್ಲ ಹೇಳಿ ಅಂತೀರಾ, ಈತ ಸ್ವಲ್ಪ ಹೆಚ್ಚೇ ಕಣ್ರೀ. ಏಕೆಂದರೆ ಇಲ್ಲಿ ಡಾ.ರಾಜಕುಮಾರ್ ಚುರುಮುರಿಯೇ ಸಿಗತ್ತೆ. ಅದು ಮತ್ತಷ್ಟು ವಿಶೇಷ.[ಹೆಣ್ಮಕ್ಕಳೇ ಸೇರಿ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ ಫುಡ್ ಟ್ರಕ್]
ಇಲ್ಲಿಗೆ ಹೋದ ಮೇಲೆ ರಾಜಕುಮಾರ್ ಭೇಲ್, ಮೊಸರವಲಕ್ಕಿ ತಿನ್ನದೇ ಬಂದರೆ ಏನೋ ತಪ್ಪಿಸಿಕೊಂಡ ಹಾಗೇ. ಈ ಎರಡೇ ಅಂತಲ್ಲ ಮತ್ತಷ್ಟು ತಿನಿಸುಗಳು ಸಿಗುತ್ತೆ. ಎಲ್ಲಿ ಹೋದರೂ ಅಲ್ಲಿನ ವಿಶೇಷ ಏನು ಅನ್ನೋದು ಎಲ್ಲರ ಕುತೂಹಲವಾದ್ದರಿಂದ ಈ ಎರಡು ತಿನಿಸನ್ನು ಹೇಳಿದ್ದು. ಈ ಎರಡೂ ಕಡೆ ಖಂಡಿತಾ ಒಮ್ಮೆ ಹೋಗಿ, ಪ್ರಯತ್ನ ಮಾಡಿ ನೋಡಿ.