ಝೆನ್ ಕಥೆ: ಅಪ್ಪ, ಮಗ ಮತ್ತು ಕತ್ತೆ ಸವಾರಿ
ಒಬ್ಬ ವ್ಯಕ್ತಿ ಮತ್ತು ಆತನ ಮಗ ಒಮ್ಮೆ ಮಾರುಕಟ್ಟೆಯತ್ತ ತಮ್ಮ ಕತ್ತೆಯೊಂದಿಗೆ ಹೋಗುತ್ತಿದ್ದರು. ಹಾಗೆ ಸಾಗುವಾಗ ಒಬ್ಬ ಮನುಷ್ಯ ಎದುರಾದ. 'ಅಯ್ಯೋ ಮೂರ್ಖರೇ, ಕತ್ತೆ ಇರುವುದೇಕೆ? ಅದು ಸವಾರಿ ಮಾಡುವುದಕ್ಕೇ ಅಲ್ಲವೇ?' ಎಂದ. ಆತನ ಮಾತು ಕೇಳಿದಾಗ ವ್ಯಕ್ತಿ ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿದ. ಅವರ ಪ್ರಯಾಣ ಮುಂದುವರಿಯಿತು.
ಸ್ವಲ್ಪ ದೂರು ನಡೆಯುವ ವೇಳೆಗೆ ಜನರ ಗುಂಪೊಂದು ಎದುರಿಗೆ ಬಂತು. ಅದರಲ್ಲಿ ಒಬ್ಬ ಹೇಳಿದ, 'ಆ ಸೋಮಾರಿ ಮಗನತ್ತ ನೋಡಿ. ವಯಸ್ಸಾದ ಅಪ್ಪ ನಡೆಯುವಂತೆ ಮಾಡಿ, ತಾನು ಕತ್ತೆಯ ಮೇಲೆ ಕೂತಿದ್ದಾನೆ'.
ಇದನ್ನು ಕೇಳಿದ ವ್ಯಕ್ತಿ, ತನ್ನ ಮಗನನ್ನು ಕೆಳಕ್ಕಿಳಿಯುವಂತೆ ಸೂಚಿಸಿ ತಾನು ಕತ್ತೆಯ ಮೇಲೆ ಕುಳಿತ. ಹೆಚ್ಚು ದೂರವೇನೂ ಹೋಗಿರಲಲ್ಲ. ಎದುರಿಗೆ ಇಬ್ಬರು ಮಹಿಳೆಯರು ಸಿಕ್ಕರು. 'ಆ ಮನುಷ್ಯನ ಕ್ರೌರ್ಯ ನೋಡಿ. ಪಾಪದ ಸಣ್ಣ ಮಗ ನಡೆಯುವಂತೆ ಮಾಡಿ, ಈತ ಕತ್ತೆಯ ಮೇಲೆ ಆರಾಮಾಗಿ ಕುಳಿತಿದ್ದಾನೆ' ಎಂದಳು ಒಬ್ಬಳು.

ಇದನ್ನು ಕೇಳಿದ ಬಳಿಕ ಆ ವ್ಯಕ್ತಿಗೆ ಏನು ಮಾಡುವುದೆಂದು ತೋಚಲಿಲ್ಲ. ಕೊನೆಗೆ ಮಗನನ್ನೂ ತನ್ನ ಜತೆ ಕತ್ತೆಯ ಮೇಲೆ ಕೂರಿಸಿಕೊಂಡ. ಕೊನೆಗೆ ಅವರ ಪ್ರಯಾಣ ಪಟ್ಟಣ ತಲುಪಿತು. ಅಲ್ಲಿ ಅವರನ್ನು ನೋಡಿದ ಜನರೆಲ್ಲ 'ಹೇ' ಎಂದು ಕೈತೋರಿಸಿ ಬೈಯತೊಡಗಿದರು. ವ್ಯಕ್ತಿಗೆ ಇದೇನೆಂದು ಅರ್ಥವಾಗಲಿಲ್ಲ. ಕೊನೆಗೆ ಜನರನ್ನೇ ಕೇಳಿದ.
'ನಿನಗೆ ನಾಚಿಕೆಯಾಗುವುದಿಲ್ಲವೇ? ನೀನು ಮತ್ತು ನಿನ್ನ ಮಗ ಇಬ್ಬರ ತೂಕವನ್ನು ಆ ಬಡ ಕತ್ತೆಯ ಮೇಲೆ ಹೊರಿಸಿದ್ದೀರಲ್ಲ? ಅದು ಹೇಗೆ ತಡೆದುಕೊಳ್ಳುತ್ತದೆ?' ಎಂದರು.
ಅಪ್ಪ ಮತ್ತು ಮಗನಿಗೆ ದಿಕ್ಕೇ ತೋಚದಂತಾಯಿತು. ತುಂಬಾ ಹೊತ್ತು ಯೋಚಿಸಿದರು. ಕೊನೆಗೆ ಒಂದು ಉಪಾಯ ಹೊಳೆಯಿತು. ದಪ್ಪನೆಯ ಮರದ ಬಡಿಗೆಯೊಂದನ್ನು ತೆಗೆದುಕೊಂಡು ಅದಕ್ಕೆ ಕತ್ತೆಯ ನಾಲ್ಕೂ ಕಾಲುಗಳನ್ನು ಕಟ್ಟಿದರು. ಬಳಿಕ ಅದನ್ನು ಎತ್ತಿಕೊಂಡು ಭುಜದ ಮೇಲಿಟ್ಟು ನಡೆಯತೊಡಗಿದರು. ಅದನ್ನು ಕಂಡ ಜನ ಬಿದ್ದೂ ಬಿದ್ದೂ ನಗತೊಡಗಿದರು. ಹಾಗೆಯೇ ಸೇತುವೆಯೊಂದರ ಬಳಿ ಬಂದಾಗ ಕತ್ತೆಗೆ ಕಟ್ಟಿದ್ದ ಕಾಲುಗಳಲ್ಲಿ ಒಂದು ಕಾಲಿನ ಹಗ್ಗ ಕಳಚಿ ಹೋಯಿತು. ಬಡಿಗೆಯ ಒಂದು ತುದಿಯಲ್ಲಿ ತನ್ನನ್ನು ಹೊತ್ತುಕೊಂಡಿದ್ದ ಹುಡುಗನಿಗೆ ಜಾಡಿಸಿ ಒದೆಯಿತು. ಇದರಿಂದ ಆತ ಬಡಿಗೆಯನ್ನು ಥಟ್ಟನೆ ಕೈಬಿಟ್ಟ. ಒಂದಷ್ಟು ಕಾಲ ಒದ್ದಾಡಿದ ಕತ್ತೆ ಸೇತುವೆಯಿಂದ ಕೆಳಕ್ಕೆ ಬಿತ್ತು. ಬಡಿಗೆಗೆ ಕಟ್ಟಿದ್ದ ಉಳಿದ ಕಾಲುಗಳು ಹಾಗೆಯೇ ಉಳಿದಿದ್ದವು. ಹೀಗಾಗಿ ಕತ್ತೆ ಈಜಲೂ ಆಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು.
ನೀವು ಯಾವ ನಿರ್ಧಾರ ತೆಗೆದುಕೊಂಡರೂ ಅದರಲ್ಲಿನ ಲೋಪವನ್ನು ಹೇಳಿ ನಿಮ್ಮ ದಿಕ್ಕು ಬದಲಿಸುವ ಜನರು ಸುತ್ತಲೂ ಇರುತ್ತಾರೆ. ಎಂದಿಗೂ ಬೇರೆಯವರ ಮನಸ್ಸನ್ನು ತಣಿಸುವ ಅವರಿಗೆ ಸಮಾಧಾನಪಡಿಸುವ ಕೆಲಸ ಮಾಡಲು ಸಾಧ್ಯವಿಲ್ಲ. ನಮಗೆ ಅನುಕೂಲವಾದ ಯೋಗ್ಯ ಮಾರ್ಗವನ್ನೇ ಅನುಸರಿಸಬೇಕು ಎನ್ನುವುದು ಈ ಕಥೆಯ ಸಾರ.
(ಸಂಗ್ರಹ)












Click it and Unblock the Notifications