ಉಳಿಪೆಟ್ಟಿನ ಅವಮಾನ ಸಹಿಸಿಕೊಂಡರೆ ವಿಗ್ರಹವಾಗಬಹುದು
ಫುಟ್ಬಾಲ್ ಆಟಗಾರನಾಗಬೇಕು ಅಂತ ರೋಹನ್ ಗೆ ಇನ್ನಿಲ್ಲದಷ್ಟು ಆಸೆ. ಆದರೆ ಆತ ಪುಟ್ಬಾಲ್ ಆಡುವಾಗೆಲ್ಲ ಕೋಚ್ ಅವನನ್ನು ಹಿಯಾಳಿಸುತ್ತಿದ್ದ. ಫುಟ್ಬಾಲ್ ಆಡೋ ಸಾಮರ್ಥ್ಯ ನಿಂಗಿಲ್ಲ ಎಂದು ಪ್ರತಿಬಾರಿ ಹಿಯಾಳಿಸುತ್ತಿದ್ದರಿಂದ ರೋಹನ್ ತೀರಾ ಬೇ ಸರಕ್ಕೊಳಗಾಗಿದ್ದ.
ಒಮ್ಮೆ ಎಲ್ಲ ಆಟಗಾರರೆದುರು ತನ್ನನ್ನು ಅವಮಾನ ಮಾಡಿದ್ದರಿಂದ ಬೇಸರಗೊಂಡ ರೋಹನ್ ತನಗೆ ಫುಟ್ಬಾಲ್ ಸಹವಾಸವೇ ಬೇಡ ಎಂದು ಮೈದಾನದಿಂದ ಹೊರನಡೆದು ಗೊತ್ತು ಗುರಿಯಿಲ್ಲದ ಬೆಟ್ಟವೊಂದನ್ನು ಹತ್ತತೊಡಗಿದ.
ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಅಲ್ಲೊಂದು ಗುಡಿ ಇತ್ತು. ಗುಡಿಯ ಎದುರಲ್ಲಿದ್ದ ಕಲ್ಲಿನ ಬಳಿ ನಿಂತು, ಜೋರಾಗಿ ಅಳತೊಡಗಿದ. 'ನನ್ನ ಕನಸು ಇನ್ನೆಂದೂ ನನಸಾಗುವುದಿಲ್ಲ. ನನಗೂ ಈ ಕಲ್ಲುಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ನಾನು ಯಾರಿಗೂ ಬೇಕಾದವನಲ್ಲ' ಎಂದು ಬಿಕ್ಕುತ್ತಿದ್ದ.

ಅಷ್ಟರಲ್ಲಿ ಅವನಿಗೆ ಒಂದು ಧ್ವನಿ ಕೇಳಿಸಿತು. "ನಿನಗೆ ಎಷ್ಟು ನೋವಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿದೆ. ನಾನು ಮತ್ತು ನನ್ನ ಮತ್ತೊಬ್ಬ ಸಹೋದರ ಇಬ್ಬರೂ ಇಲ್ಲಿಯೇ ಶತಮಾನಗಳಿಂದ ಬಿದ್ದಿದ್ದೇವೆ. ಆದರೆ ಯಾರೂ ನಮ್ಮತ್ತ ನೋಡುವುದೂ ಇಲ್ಲ" ಎಂಬ ಆ ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ, ಕಲ್ಲು ಮಾತನಾಡುತ್ತಿದೆ ಎಂಬುದು ತಿಳಿದು ರೋಹನ್ ಆಶ್ಚರ್ಯ ಚಕಿತನಾಗ್ತಾನೆ.
ಹಾಗೇ ಮುಂದುವರಿದು ಕಲ್ಲು ಹೇಳುತ್ತದೆ... "ಒಬ್ಬ ಶಿಲ್ಪಿ ಬಂದು ದೊಡ್ಡ ಬಂಡೆಯಾಗಿದ್ದ ನಮ್ಮನ್ನು ಮೂರು ತುಂಡುಗಳಾಗಿ ಕತ್ತರಿಸಿದ. ಎರಡು ತುಂಡುಗಳನ್ನು ಇಲ್ಲಿಗೆ ಬರುವ ಭಕ್ತರು ತೆಂಗಿನ ಕಾಯಿ ಒಡೆಯುವುದಕ್ಕೆಂದು ಬಳಸುತ್ತಾರೆ. ಆದರೆ ಇದೇ ಕಲ್ಲಿನ ಮತ್ತೊಂದು ತುಂಡನ್ನು ಶಿಲ್ಪಿ ಹನುಮಂತನ ವಿಗ್ರಹ ಮಾಡಿದ. ಅದೇ ಜನರು ಅವನನ್ನು ಕೈಮುಗಿದು ಪೂಜಿಸಿ, ಅವನಿಗೆ ನೈವೇದ್ಯ ನೀಡುತ್ತಾರೆ" ಎನ್ನುತ್ತದೆ.
ರೋಹನ್ ಅಚ್ಚರಿಯಿಂದ ಹನುಮಂತನ ವಿಗ್ರಹದತ್ತ ನೋಡ್ತಾನೆ. ಅಷ್ಟರಲ್ಲಿ ಹನುಮಂತನೂ ಮಾತಿಗೆ ಶುರುವಿಡುತ್ತಾನೆ... "ನೋಡು ಮಗು, ಆ ಕಲ್ಲು ಹೇಳುವಂತೆ ನಾನೂ ಒಮ್ಮೆ ಏನೂ ಅಲ್ಲದ ಬಂಡೆಯಾಗಿದ್ದೆ. ನಂತರ ಶಿಲ್ಪಿ ನನ್ನನ್ನು ಶಿಲೆಯಾಗಿ ಕೆತ್ತುವುದಕ್ಕೆ ಆರಂಭಿಸಿದ. ಶಿಲ್ಪಿ ಉಳಿಪೆಟ್ಟುಕೊಡುವಾಗ ಉಳಿದೆರಡು ಕಲ್ಲುಗಳು ನನ್ನನ್ನು ನೋಡಿ ನಗುತ್ತಿದ್ದವು. ನನಗೆ ಇನ್ನಿಲ್ಲದಷ್ಟು ನೋವಾಗುತ್ತಿತ್ತು. ಆದರೆ ನಾನು ಆ ನೋವು, ಅವಮಾನ ಸಹಿಸಿಕೊಂಡಿರುವುದಕ್ಕೆ ಈಗ ಪೂಜನೀಯ ದೇವರಾಗಿದ್ದೇನೆ. ಜನರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೆ. ನೀನೂ ಅಷ್ಟೆ, ಅವಮಾನ ಸಹಿಸಿದರೆ ಗೆಲುವು ಸಾಧಿಸುತ್ತೀಯಾ"
ಹನುಮಂತನ ಮಾತು ಕೇಳಿ, ವಿಗ್ರಹಕ್ಕೆ ರೋಹನ್ ಕೈಮುಗಿಯುತ್ತಾನೆ. "ಹೌದು, ನಾನೂ ಅವಮಾನ ಸಹಿಸಿಕೊಳ್ಳುತ್ತೇನೆ. ನಂತರ ನಾನೂ ಗೆಲುವು ಸಾಧಿಸುತ್ತೇನೆ" ಎನ್ನುತ್ತಾನೆ. ಮತ್ತೆ ಫುಟ್ಬಾಲ್ ಮೈದಾನದತ್ತ ಹೊರಡುತ್ತಾನೆ.












Click it and Unblock the Notifications