ಅಗೋಚರ ಶಕ್ತಿ : ಅಮ್ಮನಿಗೆ ಅಮ್ಮನೇ ಸಾಟಿ
(ಮುಂದುವರಿದಿದೆ...) ವೈದ್ಯರು ಯಾರಾದರೂ ಮೂತ್ರಪಿಂಡ ದಾನ ಮಾಡುವವರು ಸಿಕ್ಕರೆ ಆದೀತು ಎಂದು ಹೇಳಿದ್ದರು. ಅದಕ್ಕಾಗಿ, ತಾಯಿ ಶ್ಯಾಮಲರವರು, "ನನ್ನ ಮಗನಿಗೆ ನಾನೇ ರಕ್ತ ಕೊಟ್ಟಿದ್ದೇನೆ, ಮೂತ್ರ ಪಿಂಡವೇಕೆ ಕೊಡಬಾರದು?" ಎಂದು ಪತಿ ಸುಂದರ್ ಬಳಿ ನುಡಿದರು. ಆಗ ಅವರು ಸ್ವಲ್ಪ ಸಮಾಲೋಚಿಸಿ, "ನೋಡು, ಅವನಿಗಾವ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಅಂದಮೇಲೆ, ಬೇರೆ ಯಾರಾದರೂ ದಾನಿಗಳು ಬರುವವರೆಗೆ ಕಾಯೋಣ" ಎಂದರು. ಶ್ಯಾಮಲ ಒಪ್ಪಲು ಸಿದ್ಧರಿರಲಿಲ್ಲ. ಮತ್ತೆ, ಅವರೇ ಹೀಗೆ ನುಡಿದರು, "ಬೇರೆಯವರು ಬರುವವರೆಗೆ ನನ್ನ ಮಗನ ಸ್ಥಿತಿ ಹೇಗೆ ನೋಡಲಿ. ಒಂದು ವೇಳೆ, ಯಾರೂ ಬರದಿದ್ದರೆ..." ಈ ಮಾತನ್ನು ಕೇಳಿ, ಸುಂದರ್ ತಮ್ಮ ಕೆಲಸವಿಲ್ಲದಿದ್ದಲ್ಲಿ ತಾವೇ ಕೊಡಬಹುದಾಗಿತ್ತು ಎಂದು ಮನದಲ್ಲೇ ಗೊಣಗಿಕೊಂಡರು.
ಕೊನೆಗೂ ಶ್ಯಾಮಲರವರ ತಾರ್ಕಿಕ ಹಟ ಈಡೇರುವ ಸಮಯ ಬಂದಾಯಿತು. ಅದಕ್ಕೂ ಮುನ್ನ, ಒಂದು ದಿನ ಅವರು ಶರಣ್ ನಿಗೆ, "ಕಂದಾ, ನಿನ್ನನ್ನು ಮೊದಲಿನಂತೆ ನಾ ನೋಡುತ್ತೇನೆ" ಎಂದು ಹೇಳಿ, ಅವನ ಹಣೆಗೊಂದು ಸಿಹಿ ಮುತ್ತಿಟ್ಟರು. ಆಗ ಮತ್ತದೇ, ಅಗೋಚರ ಶಕ್ತಿ ಈಗ ಬೇರೆ ರೂಪ ತಳೆದು ನಿಂತಿದೆ. ಇಬ್ಬರೂ ಕೈ ಜೋಡಿಸಲೇಬೇಕಾಯಿತು. ಆ ದೇವತೆಯೇ ಮತ್ತೆ ನುಡಿದಳು, "ತಾಯಿ, ಅಂದು ನೀನು ಮಗನಿಗೆ ಜೀವ ಕೊಟ್ಟೆ; ಆದರಿಂದು ಜೀವನ ಕೊಡುತ್ತಿದ್ದೀಯ, ನೀನು ನಿಜಕ್ಕೂ ಧನ್ಯಳು". ಮತ್ತೆ ಶರಣ್ ಏನೋ ಕೇಳಬೇಕೆನಿಸುವಷ್ಟರಲ್ಲಿ ಅಪ್ರತ್ಯಕ್ಷ.
ವೈದ್ಯರು ಮೂತ್ರಪಿಂಡ ಜೋಡಣೆಗೆ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಖರ್ಚು ಆಗಬಹುದೆಂದು ತಿಳಿಸಿದ್ದರು. ದಾನಿ ಸಿಕ್ಕಿದರೇನೋ ನಿಜ, ಆದರೆ ಧನ ದಾನ ಮಾಡುವವರಾರು? ಸುಂದರ್ ತಮ್ಮ ಕೆಲಸದಿಂದ ವಿ.ಆರ್.ಎಸ್. ತೆಗೆದುಕೊಂಡರು. ಅದರಿಂದ ಬಂದ ಹಣವನ್ನು, ಮೊದಲು ಕೂಡಿಟ್ಟಿದ್ದನ್ನು ಸೇರಿಸಿದರು. ಇನ್ನೂ ಎರಡು-ಮೂರು ಲಕ್ಷ ಕೊನೆಗೆ ಬಡ್ಡಿ ಸಾಲಕ್ಕೆ ಕೊಂಡರು. ಅದಕ್ಕೂ ಮುನ್ನ, ಒಮ್ಮೆ ಈಗ ಏನು ಮಾಡುವುದೋ ಎಂದು ಯೋಚಿಸುತ್ತ ತಂದೆ ಮಗನನ್ನು ಬಿಗಿದಪ್ಪಿಕೊಂಡರು. ಮತ್ತೊಮ್ಮೆ, ದೇವತೆಯ ಇನ್ನೊಂದು ರೂಪ ದರ್ಶನ! ದುಃಖಿಸುತ್ತಿದ್ದ ತಂದೆಯ ಕುರಿತು, "ಜನ್ಮದಾತ! ಮಗನಿಗಾಗಿ, ಹುಟ್ಟಿನಿಂದ ಕೇಳಿದುದನೆಲ್ಲಾ ಕೊಡಿಸಿರುವೆ. ಈಗ ಮತ್ತೆ ತನ್ನ ಜೀವನ ಹಿಂಪಡೆಯಲು ಬಯಸುತ್ತಿದ್ದಾನೆ. ಅದನ್ನು ಕೊಡಿಸುವ ಶಕ್ತಿ ನಿನ್ನಲ್ಲಿದೆ" ಎಂದು ನುಡಿದು ಅಪ್ರತ್ಯಕ್ಷ. ಶರಣ್ ಗೆ ಪ್ರಶ್ನೆಗಳು ಒಳಗೇ ಉಳಿದವು.
ಶರಣ್ ತನ್ನ ಹಿಂದಿನ ತಪ್ಪಿಗಾಗಿ ತಂದೆ-ತಾಯಿಯಲ್ಲಿ ಕ್ಷಮೆಯಾಚಿಸಿದ. ಅವರು ಮುಂಚೆಯೇ ಕ್ಷಮಿಸಿಬಿಟ್ಟಿದ್ದರು! ಮುಖ್ಯವಾಗಿ, ತನ್ನ ತಪ್ಪಿನ ಅರಿವಾಗಿತ್ತು. ಕಳೆದು ಹೋದ ಜೀವನ ಮತ್ತೆ ಹೊಸದಾಗಿ ಲಭಿಸಿತ್ತು. ಈ ಅದೃಷ್ಟ ನಮ್ಮಲ್ಲಿ ಕೆಲವರಿಗೆ ಮಾತ್ರವೇ ಇರಬಹುದು. ಆದರೆ, ಮುಂದೇನು ಮಾಡುವುದು ತಿಳಿಯಲಿಲ್ಲ, ಹೊಳೆಯಲಿಲ್ಲ. ತಾನು ಹೆಚ್ಚೇನೂ ಓದಿಲ್ಲ, ವ್ಯಾಪಾರ-ವ್ಯವಹಾರದ ಗೋಜಿಗೂ ಹೋಗಿಲ್ಲ. ಇನ್ನು ಮಾಡುವುದಾದರೂ ಏನು?
ಮತ್ತೆ ಚಿಗುರಿದ ವಸಂತದ ಬೇವಂತೆ-ಮಾವಂತೆ ರಸ್ತೆಯಲ್ಲಿ ಕುಣಿದು-ಕುಪ್ಪಳಿಸುತ್ತ ಹೋಗುತ್ತಿದ್ದ. ತಾನು ಹಿಂದೆ ಕಾಲೇಜಿನಲಿ ಆಕರ್ಷಿತನಾಗಿದ್ದ ಹುಡುಗಿಯನ್ನು ಕಂಡ. ಅವಳೂ, ಒಮ್ಮೆ ನೋಡಬಾರದು ಎಂದೇ ನೋಡಿದಳು! ಅವಳ ಬಳಿ ಶರಣ್ ತನ್ನೆಲ್ಲಾ ಕಥೆಯನ್ನು ಹೇಳಿದ. ಗೋಗರೆಯಲಿಲ್ಲ, ಕಾಡಲಿಲ್ಲ, ಬೇಡಲಿಲ್ಲ ಮದುವೆಯಾಗು ಎಂದ! ಅವಳು ಯೋಚಿಸುತ್ತೇನೆ ಎಂದು ಹೊರಟಳು. ಒಬ್ಬ ಹುಡುಗ ಪ್ರಾಮಾಣಿಕವಾಗಿ ಬದಲಾದುದು, ಹತ್ತಿರದಿಂದಲೇ ಅವನನ್ನು ಕಂಡ ಹುಡುಗಿಗೆ ಪ್ರಸನ್ನವಾಗಿಸದೇ ಇರಲಾರದು. ಮತ್ತೆ, ಇಬ್ಬರು ಭೇಟಿಯಾದರು. ಹೆಚ್ಚು ಮಾತಾಡಲಿಲ್ಲ, ಹೇಗೋ "ನಮ್ಮ ಭಾವ ಬೆರೆತವು" ಎಂದಳು. ಪರಸ್ಪರ ಒಪ್ಪಿಕೊಂಡರು; ಅಪ್ಪಿಕೊಂಡರು. ಮತ್ತೆ ಅಗೋಚರ ಶಕ್ತಿ ಮೊಗದೊಂದು ರೂಪದಲ್ಲಿ ಪ್ರತ್ಯಕ್ಷವಾಗಿ, "ಕಲ್ಯಾಣಮಸ್ತು" ಎಂದು ಅಪ್ರತ್ಯಕ್ಷ! ಈ ಬಾರಿ ಶರಣ್ ಹೆಚ್ಚು ಯೋಚಿಸಲಿಲ್ಲ.












Click it and Unblock the Notifications