ಸಣ್ಣಕಥೆ : ವಾಸ್ತವ (ಭಾಗ 2)
(ಕಥೆ ಮುಂದುವರಿದಿದೆ)
ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ. ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ ಸರಿಯಾದ ಕ್ರಮ ಎಂದು ಪರಿಚಯದವರೊಬ್ಬರು ಸಲಹೆ ಇತ್ತರು. ತಾನು ಮನೋರೋಗಿ ಅಂತ ಸಮಾಜ ಪರಿಗಣಿಸಿಬಿಡಬಹುದೆಂಬ ಭಯ ಇದ್ದರೂ ಸಲಹೆ ತಿರಸ್ಕರಿಸಲು ಆಗದೆ ಒಪ್ಪಿಕೊಂಡ.
ಮರುಕ್ಷಣ ಆತನಿಗೆ ಅನಿಸಿತು. ನನ್ನ ವರ್ತನೆಯಲ್ಲಿ ತಪ್ಪೇನಿದೆ? ನಾನಾಡಿದ ಮಾತುಗಳು ಪಥ್ಯವಾಗದಿರಬಹುದು ಆದರೆ ಸತ್ಯವಂತೂ ಹೌದು. ಎಷ್ಟೊಂದು ದಿವಸಗಳಿಂದ ನಿಜವಾದ ಪ್ರಪಂಚದ ಕುರಿತು ಮನದೊಳಗೆ ಹೀಗೆಯೇ ಯೋಚಿಸುತ್ತಿರಲಿಲ್ಲವೇ? ಡಂಬಾಚಾರದ ಬಗ್ಗೆ ಚಿಂತಿಸಿರಲಿಲ್ಲವೆ? ಈಗ ಅದನ್ನು ಹೇಳಿಯಾಗಿದೆ ಅಷ್ಟೆ....... ಹೌದು ತಪ್ಪಿದ್ದೇ ಅಲ್ಲಿ. "ನ ಬ್ರೂಯಾತ್ ಸತ್ಯಮಪ್ರಿಯಂ" ಹೈ ಸ್ಕೂಲಿನಲ್ಲಿ ಸಂಸ್ಕೃತ ಮೇಷ್ಟು ಹೇಳಿಕೊಟ್ಟ ಶ್ಲೋಕದ ಸಾಲುಗಳು ನೆನಪಾದವು. ಹಾಗಂದಮೇಲೆ ನನ್ನಲ್ಲೇನೋ ದೋಷವಿದೆ ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಮನೋವೈದ್ಯರಬಳಿ ತೆರಳಿದ.
ಈಗ ಬೆಳಿಗ್ಗೆ ಮೂರು ಮಾತ್ರೆಗಳೊಂದಿಗೆ ಅವನ ದಿನಚರಿ ಆರಂಭವಾಗುತ್ತಿತ್ತು ರಾತ್ರಿ ಮೂರು ಮಾತ್ರೆಗಳೊಂದಿಗೆ ಮುಗಿಯುತ್ತಿತ್ತು. ದಿನದ ಹೆಚ್ಚಿನ ಭಾಗ ನಿದ್ರೆಯಲ್ಲಿ ಕಳೆಯುತ್ತಿತ್ತು. ಯೋಚನೆಗಳೆ ಬರುತ್ತಿರಲಿಲ್ಲ ಇನ್ನು ಹೇಳುವುದೆಲ್ಲಿ. ಆದರೆ ಅದೂ ಕೂಡ ಹೆಚ್ಚು ದಿನಗಳ ಕಾಲ ತಡೆಯಲಿಲ್ಲ. ಮೂರು ತಿಂಗಳ ನಂತರ ಅವನ ತಂದೆಯ ಶ್ರಾಧ್ದದ ದಿನ ಮತ್ತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಈಗ ಮಾತಿನಲ್ಲಿ ಮೊದಲಿನಷ್ಟು ಗಡಸುತನವಿರಲಿಲ್ಲ. ನಿಧಾನವಾದರೂ ಓತಪ್ರೋತವಾಗಿ ಮಾತುಗಳು ಹೊರಬರುತ್ತಿತ್ತು. ಈ ಬಾರಿ ಶ್ರಾದ್ಧ ಮಾಡಿಸಲು ಬಂದ ಪುರೋಹಿತರು ಅವನ ಧಾಳಿಗೆ ತುತ್ತಾಗಿದ್ದರು.
"ನೀವು ಪುರೋಹಿತರುಗಳೆಂದರೆ ದೇವರ ಏಜೆಂಟರಾ? ಮಾತೃ ದೇವೋಭವ ಪಿತೃ ದೇವೋ ಭವ ಎಂದು ಆಶೀರ್ವದಿಸುವ ನೀವು ನಿಮ್ಮ ತಂದೆತಾಯಿಂದರನ್ನು ಕಾಲಿನ ಕಸಕ್ಕಿಂತ ಕಡೆಗಾಣಿಸುವುದೇಕೆ? ನೀವೇನೂ ವೇದ ಓದಿಲ್ಲವಾ, ಅಥವಾ ವೇದದಲ್ಲಿಯೂ ಹಾಗೆ ಇದೆಯಾ, ನಿಮ್ಮ ಹತ್ತಿರ ಆಚರಣೆ ಮಾಡಲಾಗದ್ದನ್ನು ಅದೇಕೆ ಬೇರೆಯವರಿಗೆ ಹೇಳುತ್ತೀರಿ? ನಾನು ದುಡ್ದು ಕೊಟ್ಟರೆ ನಿಮ್ಮ ಶಾಸ್ತ್ರ ಬೇಕಾದ ಹಾಗೆ ಬದಲಾಗುತ್ತದೆಯಲ್ಲವೆ. ನಿಮ್ಮ ಶಿಷ್ಯ ಸಮೂಹಕ್ಕೆ ಖಾಯಿಲೆ ಬಂದಾಗ ಮೃತ್ಯುಂಜಯ ಹವನ ಮಾಡಿಸಿ ಎನ್ನುವ ನೀವು ನಿಮಗೆ ಖಾಯಿಲೆ ಬಂದಾಗ ಡಾಕ್ಟರ ಬಳಿ ಓಡುವುದೇಕೆ? ಇವೆಲ್ಲಾ ಅಮಾಯಕರನ್ನು ನಂಬಿಸಿ ಮಾಡುವ ಸುಲಿಗೆಯಲ್ಲವೆ? ಅದು ಕಲ್ಲೆಂದು ನಿಮಗೆ ಗೊತ್ತಿದ್ದೂ ಜನರ ಬಳಿ ಸುಳ್ಳು ಹೇಳುವುದೇಕೆ? ನೀವು ನಂಬದೆ ಪರರನ್ನು ನಂಬಿಸಿ ಹಣ ಕೀಳುವುದಕ್ಕಿಂತ ದರೋಡೆ ಮಾಡಿ."
ಆವತ್ತು ಶ್ರಾದ್ಧ ನಡೆಯಲಿಲ್ಲ. ಪುರೋಹಿತರು ಸಿಟಗೊಂಡು ಹೋದಮೇಲೆ ಶ್ರಾಧ್ದ ಮಾಡಿಸಲು ಮತ್ಯಾರೂ ಸಿಗಲಿಲ್ಲ. ಮನೆಯವರೆಲ್ಲಾ ಖಂಡಿತಾ ಏನೋ ಅನಾಹುತ ಆಗುತ್ತದೆ ಎಂದು ಕಾದರು ಆದರೆ ಏನೂ ಆಗಲಿಲ್ಲ. ಕಡುಬು ಕಜ್ಜಾಯಗಳನ್ನು ಕಾಗೆಗೆ ಹಾಕಿದರು, ಗೋಗ್ರಾಸ ನೀಡಿದರು ಮತ್ತು ಎಲ್ಲರೂ ರಾತ್ರಿ ಊಟ ಮಾಡಿದರು. ಪ್ರತಿನಿತ್ಯದಂತೆ ಸೂರ್ಯಮುಳುಗಿದ ಹಾಗು ಕತ್ತಲಾಯಿತು.
ಆದರೆ ಅವನಿಗೆ ತನ್ನ ಪರಿಸ್ಥಿತಿ ಕಂಡು ಮರುಗುವಂತಾಯಿತು. ತನಗೆ ಶ್ರಾದ್ಧ ಮಾಡು ಅಂತೇನು ಪುರೋಹಿತರು ಹೇಳಿರಲಿಲ್ಲ. ತಾನಾಗಿಯೇ ಅವರನ್ನು ಮನೆಗೆ ಕರೆದು ಅವಮಾನ ಮಾಡಿದೆನಲ್ಲಾ ಎಂಬ ಕೊರಗು ಕಾಡಲು ಶುರುವಾಯಿತು. ಜನರು ಅವರಾಗಿಯೇ ಇಷ್ಟಪಡುವುದರಿಂದ, ಹಾಗು ಅದರಿಂದ ಮಾನಸಿಕ ನೆಮ್ಮದಿ ಹೊಂದುವುದರಿಂದ ತಾನೆ ಪುರೋಹಿತರು ಕಾರ್ಯಕ್ರಮ ಮಾಡಿಸುವುದು. ಜನರು ಕರೆಯದಿದ್ದರೆ ಅವರೇಕೆ ಬರುತ್ತಾರೆ? ಇದರಲ್ಲಿ ಪುರೋಹಿತರ ತಪ್ಪೇನಿದೆ? ನಿಜ ಅವೆಲ್ಲಾ ತಾನು ಹೇಳಬಾರದಿತ್ತು. ಇಷ್ಟು ವರ್ಷಗಳ ಕಾಲ ಇವೆಲ್ಲಾ ಗೊತ್ತಿದ್ದೂ ಹೇಳಿರಲಿಲ್ಲ. ಈಗ ಇದು ತನ್ನ ಕೈಮೀರಿದ ನಡವಳಿಕೆ ಆದರೆ ತನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲವಲ್ಲ? ರಾತ್ರಿಯೆಲ್ಲಾ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಆದರೆ ಕಾಲಮಿಂಚಿತ್ತು, ಹೇಳಬಾರದ ಅಂತರಂಗದ ಸಂಗತಿ ಎಲ್ಲಾ ಹೇಳಿಯಾಗಿತ್ತು.
ಅವನು ಈ ಬಾರಿ ಪುರೋಹಿತರನ್ನು ಕರೆದು ಅವಮಾನ ಮಾಡಿದ್ದರಿಂದ ಬಹಳಷ್ಟು ಜನರ ವಿರೋಧ ಎದುರಿಸಬೇಕಾಯಿತು. ಕೆಲವರಂತೂ ಅವನಿಗೆ ಹೊಡೆದರೆ ಸರಿಯಾಗುತ್ತದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಧರ್ಮ ವಿರೋಧಿ, ಊರಿಗೆ ಮಾರಿ ಎಂಬ ತೀರ್ಮಾನದ ಠರಾವು ಹೊರಟಿತು. ಅವನು ಕಟ್ಟಿ ಬೆಳಸಿದ ಸಂಘ ಸಂಸ್ಥೆಗಳು ಯಾವುದೂ ಅವನ ಸಹಾಯಕ್ಕೆ ಬರಲಿಲ್ಲ. ಅವನು ಸಂಘದ ಅಧ್ಯಕ್ಷನಾಗಿದ್ದಾಗ ಕೆಲವರ ಅವ್ಯವಹಾರವನ್ನು ಹೊರಹಾಕಿದ್ದ ಅವರೆಲ್ಲಾ ಈಗ ಒಂದಾದರು. ಹಾಗೆಯೇ ಅವನು ಬಹಳಷ್ಟು ಜನರ ಬಾಳಿಗೆ ಬೆಳಕಾಗಿದ್ದ ಅವರೆಲ್ಲಾ ಸುಮ್ಮನುಳಿದರು.
ಊರಿನಲ್ಲಿ ಒಂದು ಸಭೆ ಕರೆಯಲಾಯಿತು ಅದರ ನೇತೃತ್ವವನ್ನು ಅವನಿಂದ ಸೋಲುಂಡವರು ವಹಿಸಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಚರ್ಚೆಗಳಾಗಿ ಅವನಿಲ್ಲದಾಗ ಅವನ ಮೇಲಿನ ಸೇಡನ್ನು ನಾಲಿಗೆಯ ತೀಟೆಯನ್ನು ಎಲ್ಲರೂ ತೀರಿಸಿಕೊಂಡರು. ಮಠದ ಗುರುಗಳಿಗೆ ಬಿಡುವಿನ ದಿನ ಊರಿಗೆ ಕರೆಯಿಸಿ ಪಾದಪೂಜೆ ಮಾಡಿ ನಂತರ ಧರ್ಮಭ್ರಷ್ಟನಾದ ಅವನನ್ನು ಜಾತಿಯಿಂದ ಬಹಿಷ್ಕಾರ ಹಾಕಿಸುವುದು ಮತ್ತು ಅವನ ಕುಟುಂಬದ ಜತೆ ಸಮಾಜ ಬಾಂಧವರೆಲ್ಲಾ ಸಂಪರ್ಕ ಕಡಿದುಕೊಳ್ಳುವುದು ಎಂಬ ಅಂತಿಮ ತೀರ್ಪು ಹೊರಬಿತ್ತು. ಗುರುಪೀಠದ ಆಗಮನಕ್ಕೆ ದಿನಾಂಕ ಗೊತ್ತುಪಡಿಸಲು ನಿಯೋಗವೊಂದನ್ನು ಕಳುಹಿಸುವ ತೀರ್ಮಾನವನ್ನು ತೆಗೆದುಕೊಂಡು ಸಭೆ ವಿಸರ್ಜನೆಯಾಯಿತು.












Click it and Unblock the Notifications