ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 3)
* ಪ್ರೇಮಶೇಖರ, ಪಾಂಡಿಚೆರಿ
(ಕಥೆಯ ಮುಂದುವರಿದಿದೆ...)
ಗಾಬರಿಯಲ್ಲಿ "ಇದೇನ್ರೀ ಇದೂ? ಇದೇನು ಮಾಡ್ತಿದೀರಿ ನೀವು?" ಎಂದರಚಿದೆ. ಕುಳ್ಳ ನನ್ನ ಪಕ್ಕೆಗೆ ತಿವಿದ. "ತೆಪ್ಪಗೆ ಕೂರು ಮುದಿಯ." ನನ್ನ ಕಣ್ಣ ಮುಂದೆ ಚಾಕು ಆಡಿಸಿದ. ಅವನ ಕೈಯಲ್ಲೂ ಚಾಕು ಕಂಡು ನನಗೆ ಉಸಿರು ಸಿಕ್ಕಿಕೊಂಡಿತು. ಮುಂದೆ ಹೆಂಗಸು ಕುಸುಕಿದಳು. "ಯಾಕ್ರಣ್ಣಾ ಹೀಗೆ ಮಾಡ್ತಿದಿರೀ? ಒಳ್ಳೇವ್ರು ಅಂತ ಜತೆಲಿ ಬಂದ್ರೆ ನೀವು..." ಕುಳ್ಳ ಅವಳ ಮಾತನ್ನು ಅಲ್ಲಿಗೇ ಕತ್ತರಿಸಿದ: "ನಾವು ಒಳ್ಳೇವ್ರೇ ಕಣಮ್ಮ. ನಮಗಿಲ್ಲಿ ಒಂದೆರಡು ನಿಮಿಷದ ಕೆಲಸ ಇದೆ ಅಷ್ಟೇ. ಅದಾದ ಕೂಡ್ಲೇ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ."
ಕರಿಯ ಡ್ರೈವರ್ನ ಕುತ್ತಿಗೆಯ ಮೇಲೆ ಚಾಕು ಒತ್ತಿದ. "ನಡಿ ಮುಂದಕ್ಕೆ. ಹ್ಞೂ." ಅಬ್ಬರಿಸಿದ. ಮೋಡಗಳ ಮರೆಯಿಂದ ಹೊರಬರುತ್ತಿದ್ದ ಚಂದ್ರನ ಮಾಸಲು ಬೆಳಕಿನಲ್ಲಿ ಚಾಕು ಹಿಡಿದ ಬೆರಳುಗಳು ಬೆಳ್ಳಗೆ ಬಿಳಿಚಿಕೊಂಡಿದ್ದವು. ಡ್ರೈವರ್ ಸಣ್ಣಗೆ ನರಳಿದ. ಮತ್ತೊಮ್ಮೆ "ಹ್ಞೂಂ" ಎಂಬ ಅಬ್ಬರದ ಆಣತಿ ಕಿವಿಗೆ ಬೀಳುತ್ತಿದ್ದಂತೇ ಕಾರು ನಿಧಾನವಾಗಿ ಮುಂದೆ ಸರಿಯಿತು. ನಾನು ದಿಗ್ಭ್ರಮೆಯಲ್ಲಿ ಕುಸಿಯುತ್ತಿದ್ದಂತೇ ಮತ್ತೊಂದು ಆಜ್ಞೆ: "ಇಲ್ಲಿ ಎಡಕ್ಕೆ ತಿರುಗಿಸು. ಹೆಡ್ಲೈಟ್ ಆಫ್ ಮಾಡು."
ವಾಹನ ಮುಖ್ಯರಸ್ತೆ ಬಿಟ್ಟು ಎಡಕ್ಕೆ ಹೊರಳಿತು. ಭಾರಿಭಾರಿ ಹೆಬ್ಬಂಡೆಗಳು ಗಿಡಿದು ಕೂತಿದ್ದ ಕಲ್ಲುಬೆಟ್ಟಗಳೆರಡರ ನಡುವಿನ ಇರುಕಿನಂತಹ ಏರುಹಾದಿಯಲ್ಲಿ ಚಲಿಸಿತು. "ನಿಮಗೆ ಹಣ ಬೇಕಿದ್ರೆ ತಗೊಳ್ಳಿ. ಅದಕ್ಕಾಗಿ ನೀವು ನಮಗ್ಯಾರಿಗೂ ತೊಂದರೆ ಕೊಡೋದು ಬೇಡ." ಸಾವರಿಸಿಕೊಂಡು ಮತ್ತೆ ಬಾಯಿ ತೆರೆದೆ. ಮರುಕ್ಷಣ ಕುಳ್ಳನ ಎಡಗೈ ನನ್ನ ಹಣೆಗೆ ಛಟ್ಟನೆ ಬಾರಿಸಿತು. "ಬಾಯಿ ಮುಚ್ಚೋ ಮುದುಕಾ. ಹೇಳಿದ್ದು ಅರ್ಥ ಆಗ್ಲಿಲ್ವಾ? ಬೀಜ ಚಚ್ಹಾಕಿಬಿಡ್ತೀನಿ ನೋಡು." ಅರಚಿದ. "ಅವರನ್ಯಾಕ್ರಣ್ಣಾ ಹೊಡಿತಿದ್ದೀರಾ? ಅಯ್ಯೋ ದೇವ್ರೇ ಎಂಥಾ ಕಷ್ಟಕ್ಕೆ ಸಿಕ್ಕೊಂಡ್ವಪ್ಪಾ." ಹೆಂಗಸು ದನಿಯೆತ್ತಿ ಅಳತೊಡಗಿದಳು.
ಕುಳ್ಳನ ದನಿ ತಕ್ಷಣ ಮೃದುವಾಯಿತು: "ನಿಮಗೇನೋ ಆಗೋದಿಲ್ಲ ಸುಮ್ನಿರಮ್ಮ. ಈ ತರಲೆ ಮೇಷ್ಟ್ರು ಮತ್ತೆ ಮತ್ತೆ ಬಾಲ ಬಿಚ್ತಾ ಇದಾನೆ. ಅದಕ್ಕೇ ಒಂದು ಬಾರಿಸಬೇಕಾಯ್ತು." ಮತ್ತೆ ಉಸಿರೆತ್ತಿದರೆ ಅದು ಅರ್ಥಹೀನ ಹುಚ್ಚುಸಾಹಸವಾಗುತ್ತದೆ ಎಂದರಿವಾಯಿತು. ಇವರ ಉದ್ದೇಶವೇನೆಂದು ಸ್ಪಷ್ಟವಾಗದೇ ಆತಂಕ ನೆರೆಯ ನೀರಿನಂತೆ ಏರತೊಡಗಿತು. ಹೆದ್ದಾರಿಯಲ್ಲಿ ಸುಳಿದಾಡುವ ವಾಹನಗಳಿಗೆ ಹೆದರಿ ಅಲ್ಲಿ ನಮ್ಮನ್ನು ದರೋಡೆ ಮಾಡದೇ ಗುಡ್ಡಗಳಿಂದ ಮರೆಯಾದ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಿರಬಹುದೆಂಬ ಊಹೆಯೊಂದನ್ನು ಬಿಟ್ಟರೆ ಮತ್ತೇನೂ ಹೊಳೆಯಲಿಲ್ಲ. ಯಾವುದನ್ನೂ ಕಾದು ನೋಡುವಾ ಎಂದುಕೊಂಡು ಸುಮ್ಮನೆ ಕುಳಿತೆ. ನಾನು ಮತ್ತೆ ಬಾಯಿ ತೆರೆಯದಂತೆ ಕುಳ್ಳನ ಚಾಕು ನನ್ನ ಭುಜದ ಮೇಲಿತ್ತು. ಕರಿಯ ಡ್ರೈವರ್ನ ಕುತ್ತಿಗೆಗೆ ಚಾಕು ಹಿಡಿದೇ ಇದ್ದ. ಹೆಂಗಸಿನ ಅಳು ನಿಂತಿತ್ತು. ಸಾಫ್ಟ್ವೇರ್ ಹುಡುಗನ ಒಂದು ಮಾತೂ ಇದುವರೆಗೆ ನನ್ನ ಕಿವಿಗೆ ಬಿದ್ದಿರಲಿಲ್ಲ.
ಎಡಬಲಕ್ಕೆ ಕುಲುಕುತ್ತಾ ಹಿಂದುಮುಂದಕ್ಕೆ ಮುಗ್ಗರಿಸುತ್ತಾ ಐದಾರು ನಿಮಿಷ ಸಾಗಿದ ನಂತರ ದಾರಿ ಇಳಿಜಾರಾಗಿ ಎಡಕ್ಕೆ ಹೊರಳಿದಂತೆ ಕಂಡಿತು. ವಾಹನದ ಕುಲುಕಾಟ ಮತ್ತೂ ಹೆಚ್ಚಿತು. ತಲೆಯನ್ನು ಅಲುಗಿಸದೇ ಕಣ್ಣುಗಳನ್ನು ಓರೆಯಾಗಿಸಿ ಎಡಕ್ಕೆ ಕಿಟಕಿಯಾಚೆ ನೋಡಿದೆ. ಕಿಟಕಿಗೆ ಅಂಟಿದಂತೇ ಇದ್ದ ಬೆಟ್ಟದ ಕಪ್ಪು ಗೋಡೆಯ ಹೊರತಾಗಿ ಬೇರೇನೂ ಕಾಣಲಿಲ್ಲ. ವಾಹನ ಒಮ್ಮೆ ಧಡ್ಡನೆ ಎಗರಿ ಬಲಕ್ಕೆ ವಾಲಿಕೊಂಡಿತು. ನಾನು ಕುಳ್ಳನ ಮೈಮೇಲೆ ಬಿದ್ದೆ. ಅವನ ಕೈಯಲ್ಲಿದ್ದ ಚಾಕು ನನ್ನ ಕತ್ತಿನಲ್ಲಿ ಸರಕ್ಕನೆ ಇಳಿಯಿತು. "ಹ್ಞಾ" ಎಂಬ ಚೀತ್ಕಾರ ನನ್ನ ನಿಯಂತ್ರಣವನ್ನೂ ಮೀರಿ ಹೊರಬಂತು. ಹೆಂಗಸು ಛಕ್ಕನೆ ಹಿಂದೆ ತಿರುಗಿದಳು. ಕುಳ್ಳ ನನ್ನನ್ನು ಅಸಡ್ಡೆಯಿಂದ ನೂಕಿ ಕಾರ್ ನಿಲ್ಲಿಸಲು ಡ್ರೈವರ್ಗೆ ಹೇಳಿದ. ಕಾರು ಗಕ್ಕನೆ ನಿಲುಗಡೆಗೆ ಬಂತು.
ಎಡಗೈಯನ್ನು ಬಲ ಕತ್ತಿನ ಮೇಲೆ ಆಡಿಸಿದೆ. ರಕ್ತ ಬೆರಳುಗಳಿಗೆ ಅಂಟಿಕೊಂಡಿತು. ಗಾಯವೇನೂ ಆಳವಾಗಿದ್ದಂತೆ ಕಾಣಲಿಲ್ಲ. ಆದರೆ ಉರಿಯುತ್ತಿತ್ತು. ಕುಳ್ಳ ನನ್ನ ಭುಜ ಒತ್ತಿ ಬಾಗಿಲು ತೆರೆಯುವಂತೆ ಸೂಚಿಸಿದ. ಕರಿಯ ಛಟ್ಟನೆ ತನ್ನ ಕಡೆಯ ಬಾಗಿಲು ತೆರೆದು ಹೊರಗೆ ಹಾರಿ ಡ್ರೈವರ್ ಕಡೆಯ ಬಾಗಿಲನ್ನು ತೆರೆದ. ಎಡಗೈಯನ್ನು ಕುತ್ತಿಗೆಯ ಗಾಯದ ಮೇಲೆ ಒತ್ತಿಕೊಂಡೇ ಬಲಗೈಯಿಂದ ಬಾಗಿಲ ಹಿಡಿಕೆಗಾಗಿ ತಡಕಾಡಿದೆ. ಮುಂದಿನ ಸೀಟಿನಲ್ಲಿ ಆತುರದ ಚಲನೆಗಳು ಕಂಡುಬಂದವು. ಸಾಫ್ಟ್ವೇರ್ ಹುಡುಗ ಛಕ್ಕನೆ ಬಾಗಿಲು ತೆರೆದು ಮಿಂಚಿನಂತೆ ಹೊರಗೆ ಹಾರಿದ. "ರಾಜಪ್ಪಾ, ಹಿಡೀ ಅವನನ್ನ" ಎಂದು ಕುಳ್ಳ ಚೀರುತ್ತಿದ್ದಂತೆ ಹುಡುಗ ಕಲ್ಲುಬಂಡೆಗಳ ನಡುವೆ ಜಿಗಿಜಿಗಿದು ಓಡಿಬಿಟ್ಟ. ನಾನು ಕೆಳಗಿಳಿದು ನಿಲ್ಲುವ ಹೊತ್ತಿಗೆ ಅವನು ತನ್ನ ಜಾಡಿನ ಗುರುತೂ ಇಲ್ಲದಂತೆ ಅದೆಲ್ಲೋ ಮಾಯವಾಗಿಹೋಗಿದ್ದ. ಒಂದು ಕೈಯಲ್ಲಿ ಚಾಕು, ಮತ್ತೊಂದರಲ್ಲಿ ಡ್ರೈವರ್ನ ಕೊರಳಪಟ್ಟಿ ಹಿಡಿದಂತೇ ಹುಡುಗ ಓಡಿದ ದಿಕ್ಕಿಗೆ ನಾಕು ಹೆಜ್ಜೆ ಹಾಕಿದ ಕರಿಯ ಅಸಹನೆಯಲ್ಲಿ ಗೊಣಗುತ್ತಾ ನಿಂತ. ಡ್ರೈವರ್ನ ಕೊರಳಪಟ್ಟಿಯಿಂದ ಕೈ ತೆಗೆದು ತನ್ನ ಹಣೆಯ ಮೇಲಿಟ್ಟುಕೊಂಡ. ಆ ಗಳಿಗೆಗೆ ಸರಿಯಾಗಿ "ಅಲ್ಲಿದ್ದಾನೆ ಕಣ್ರೀ. ನಿಮಗೆ ಕಾಣ್ತಾ ಇಲ್ವಾ? ಇರಿ ನಾ ಹಿಡಕಂಡು ಬರ್ತೀನಿ ಬೋಳಿಮಗನ್ನ" ಎಂದರಚಿದ ಡ್ರೈವರ್ ಹುಡುಗ ಓಡಿದ ದಿಕ್ಕಿನಲ್ಲಿ ಬೀಳುವುದನ್ನೂ ಲೆಕ್ಕಿಸದೇ ಎಗರಿ ಎಗರಿ ಓಡಿದ.
"ಅರೆ ಮಾದರಚೋತ್! ಚಾಲಾಕಿ ಸೂಳೆಮಗ." ಇದುವರೆಗೂ ಡ್ರೈವರ್ನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕೇಡಿ ಬೈದುಕೊಂಡ. ನನ್ನನ್ನು ಒಂದು ಪಕ್ಕಕ್ಕೆ ನೂಕಿ ಅವನತ್ತ ನಡೆದ ಕುಳ್ಳ ಏನೋ ಗೊಣಗಿ "ಹೋದ್ರೆ ಹೋಗ್ಲಿ ನಾಯಿಕುನ್ನಿಗಳು. ಒಳ್ಳೇದೇ ಆಯ್ತು ಬಿಡು. ನಮ್ಮ ಕೆಲಸ ಬೇಗ ಮುಗಿಸಿ ಜಾಗ ಖಾಲಿಮಾಡೋಣ" ಎನ್ನುತ್ತಾ ಕಾರಿನ ಮುಂದಿನ ಸೀಟಿನತ್ತ ತಿರುಗಿದ.
ಸಾಫ್ಟ್ವೇರ್ ಹುಡುಗನ ಲ್ಯಾಪ್ಟಾಪ್ ಸೀಟಿನ ಮೇಲೇ ಬಿದ್ದುಕೊಂಡಿತ್ತು. ಹುಡುಗ ಅದನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ಅವನ ಚೀಲವೂ ಅಲ್ಲೇ ಇರಬೇಕು. ಓಡುವ ಆತುರದಲ್ಲಿ ಅವನು ಏನನ್ನಾದರೂ ತೆಗೆದುಕೊಂಡು ಹೋದಂತೆ ಕಂಡಿರಲಿಲ್ಲ. ನಾನು ಗಮನಿಸಿದ ಹಾಗೆ ಡ್ರೈವರ್ ಸಹಾ ಬರಿಗೈಯಲ್ಲೇ ಓಟ ಕಿತ್ತಿದ್ದ. ಅವರಿಬ್ಬರ ಸಾಮಾನುಗಳೆಲ್ಲವೂ ಈಗ ಈ ಕೇಡಿಗಳ ವಶ. ನನ್ನ ಹಾಗೂ ಆ ಹೆಂಗಸಿನ ಸಾಮಾನುಗಳೂ ಈ ಗಳಿಗೆಯಲ್ಲಿ ಅವರವೇ ಆಗಿದ್ದವು. ಕೈಯಲ್ಲಿದ್ದ ವಾಚು, ಉಂಗುರಗಳನ್ನು ತೆಗೆದು ನನ್ನನ್ನು ಸಮೀಪಿಸಿದ ಕರಿಯನತ್ತ ಹಿಡಿದೆ. ಅವನು ಪಕಪಕನೆ ನಕ್ಕುಬಿಟ್ಟ. "ಇಲ್ನೋಡೋ ಕುಪ್ಪಣ್ಣಾ, ಈವಯ್ಯ ಹೆದರ್ಕೊಂಡು ವಾಚು ಉಂಗ್ರ ಬಿಚ್ಚಿ ಕೊಡ್ತಿದಾನೆ." ಕುಳ್ಳನತ್ತ ತಿರುಗಿ ಹೇಳಿ ಮತ್ತೊಮ್ಮೆ ನಕ್ಕ. "ಅದನ್ನೆಲ್ಲ ಅವನ ಮೂತಿಗೇ ಎಸೆದು ಕಾರ್ನೊಳಕ್ಕೆ ದಬ್ಬು. ಅವನಿಗೇನ್ ಕೆಲ್ಸ ಇದೆ ಇಲ್ಲಿ?" ಕುಳ್ಳನ ಉತ್ತರ ಬಂತು. ತಿಳಿಯಾಗುತ್ತಿದ್ದ ಗೊಂದಲ ಒಮ್ಮೆಲೆ ಅಧಿಕವಾಯಿತು. ನಕ್ಕು ಅಪಹಾಸ್ಯ ಮಾಡುತ್ತಿದ್ದ ಕರಿಯನನ್ನೇ ಮಿಕಿಮಿಕಿ ನೋಡಿದೆ. "ನಿನಗೇನೂ ಕೆಲಸ ಇಲ್ಲ. ಒಳಗೆ ತೆಪ್ಪಗೆ ಕೂರು" ಎನ್ನುತ್ತಾ ತೆರೆದಿದ್ದ ಬಾಗಿಲತ್ತ ನನ್ನನ್ನು ನೂಕಿದ ಅವನು. ನೂಕಿದ ರಭಸಕ್ಕೆ ಸೀಟಿನಲ್ಲಿ ಕುಸಿದೆ. "ಕಾಲು ಒಳಗೆ ತಗೋ." ಹೇಳುತ್ತಾ ನನ್ನ ಮಂಡಿಯ ಮೇಲೆ ಬಲವಾಗಿ ಒದ್ದ.
ಕಾಲು ಒಳಗೆಳೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ನನ್ನ ಪ್ರಯತ್ನವನ್ನೂ ಮೀರಿ ನರಳಿಕೆ ಗಂಟಲಿನಿಂದ ಹೊರಬಂತು. ಹಿಂದೆಯೇ ಅವನು ಧಡ್ಡನೆ ಬಾಗಿಲು ಮುಚ್ಚಿದ. ಅರೆತೆರೆದಿದ್ದ ಕಿಟಕಿಯ ಮೂಲಕ ಎಚ್ಚರಿಸಿದ: "ತಿಕ ಬಾಯಿ ಎರಡನ್ನೂ ಮುಚ್ಕೊಂಡು ಕೂರು. ಬಾಲ ಬಿಚ್ಚಿದ್ರೆ ಹೆಣ ಆಗ್ತಿಯ." ಇವರಿಗೆ ಬೇಕಾಗಿರುವುದೇನು? "ಅದೇನೋ ಅವರು ಹೇಳಿದ ಹಾಗೇ ಕೇಳಿಬಿಡಿ ಸಾರ್. ಸುಮ್ನೆ ಯಾಕೆ ನೋವು ಅನುಭವಿಸ್ತೀರಾ." ಹೆಂಗಸು ಹಿಂದೆ ತಿರುಗಿ ಮರುಕದ ದನಿಯಲ್ಲಿ ಹೇಳಿದಳು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications