ಬೆಳ್ಳೂರು ಕೊಕ್ಕರೆಯ ಬ್ಯುಸಿನೆಸ್ ಮೊಡೆಲ್ಲು
- ಪ್ರಕಾಶ್ ನಾಯಕ್,
Email : [email protected]

ಬಹಳ ಸಿಂಪಲ್ಲು :
ಮಡಚಿದ ರೆಕ್ಕೆ, ಅಡಗಿಸಿಟ್ಟ ಕೊಕ್ಕು,
ಏಕಾಗ್ರ ಚಿತ್ತ , win-win ಮಂತ್ರ.
ಕಣ್ಣು ಮುಚ್ಚಿ ನಿಂತ ಭಂಗಿಗೆ,
ಹೊದ್ದು ಕುಳಿತ ಬಿಳಿಯ ಅಂಗಿಗೆ,
ನಾಚಬಹುದು ಯಾವುದೂ ಋಷಿ!
ಗಾಳ-ಬಲೆಗಳ ಗೋಜಿಲ್ಲ .
ಅವನು ಇವನೆಂಬ ಮುಲಾಜಿಲ್ಲ .
ಅಂತರ್ಜಾಲದ ಮಂತ್ರ-ಮಾಟ,
ಮುಚ್ಚಿದ ಕಣ್ಣಿನ ಕುತಂತ್ರ ನೋಟ.
ದಿಢೀರ್ ಸ್ವರ್ಗದ ತೆವಲಿನ,
ಹೊಸ ಗಾಯಿತ್ರಿ ಮಂತ್ರದ ಕನಸಿನ,
ಮರಿ ಮೀನುಗಳು ಸಾಲಾಗಿ ನಿಂತಿವೆ!
ಒಂದರ ಹಿಂದೆ ಇನ್ನೊಂದು
ತಾ ಮುಂದು ನಾ ಮುಂದು.
ಇಹದ ನಿಜವ ಮರೆಸಿಬಿಡುವ,
ಪರದ ಸುಧೆಯ ಸುರಿಸಲಿರುವ
ಅಕ್ಕರೆಯ ಕೊಕ್ಕರೆ ಕಣ್ಬಿಡುವುದೆಂದು?
ರಕ್ತ-ಬೆವರು ಈ ಕೊಕ್ಕರೆಗೆ ಭಾರೀ ಅಲರ್ಜಿ,
‘ಮಾಮೇಕಂ ಶರಣಂ ವ್ರಜ’
ಅಭಯದಾನಕೆ ಈ ಕೊಕ್ಕರೆಯೇ ಪ್ರಸಿದಿ ್ಧ!
ಭಯಭೀತ ಮೀನುಗಳು ಕೊಕ್ಕರೆಗೆ ಬೇಕಿಲ್ಲ,
ಭಯೋತ್ಪಾದನೆ ಇದರ ಬಿಸಿನೆಸ್ ಮೊಡೆಲ್ಲೂ ಅಲ್ಲ !
ಹಿಂದು-ಮುಂದಿನದೆಲ್ಲ ಮರೆತು,
ಶರಣು ನಿಂತಿಹ ಮತ್ಸ್ಯಗಣಕೆ,
ಅರಿವು ಮೂಡಿ ಓಡುವದರೊಳಗೆ
ಮುಕ್ತಿ ತೋರುವ ಶುದ್ಧ ಬಯಕೆ !
ಮತ್ತದೇ win-win ಉಭಯಲಾಭದ ಮಂತ್ರ,
ಅರಿವಿದ್ದರೂ ಅನುಭವಿಸದೇ ವೇದ್ಯವಾಗದ ತಂತ್ರ!
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ











Click it and Unblock the Notifications