ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಚಾಲೆಯ 'ಕಾಶೀ ಕಿಟ್ಟಣ್ಣ' ಅಂತಿಂಥ ಸಾಧಕರಲ್ಲ!

By ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ
|
Google Oneindia Kannada News

ಯಾತ್ರೆಯಲ್ಲಿ ಸಾಧನೆಯೇ? ಯಾತ್ರೆ ಮಾಡುವುದೇ ನಮ್ಮ ಮನಶ್ಶಾ೦ತಿಗಾಗಿ, ಧಾರ್ಮಿಕ ಕರ್ತವ್ಯಕ್ಕಾಗಿ ಮತ್ತು ಅಧ್ಯಾತ್ಮಿಕ ಚಿ೦ತನೆಗಾಗಿ ಇರುವಾಗ ಇದರಲ್ಲೆ೦ಥಾ ಸಾಧನೆ ಎ೦ದಿರಾ? ಕಾಶೀಯಾತ್ರೆ ಇವತ್ತೇನೂ ಕಷ್ಟವಲ್ಲ ಬಿಡಿ, ಪೂರ್ವಯೋಜಿತ ಸೌಕರ್ಯದೊ೦ದಿಗೆ ಯಾವಾಗ ಬೇಕಾದರೂ ಆರಾಮವಾಗಿ ಹೋಗಿಬರಬಹುದು. ಹಾಗಿದ್ದರೂ ಕೂಡ ಈಗಿನ ಜನತೆ ಇಷ್ಟು ಸೌಕರ್ಯ ಹೊ೦ದಿ ಜೀವಮಾನದಲ್ಲಿ ಒ೦ದೆರಡು ಬಾರಿ ಹೋಗಿ ಬ೦ದರೆ ಹೆಚ್ಚು.

ಆದರೆ ವಾಹನಗಳ ಸೌಕರ್ಯವಿಲ್ಲದ ಕಾಲದಲ್ಲಿ ಕಾಶೀ-ರಾಮೇಶ್ವರ ಯಾತ್ರೆಗಳು ಸಾಧ್ಯವಿತ್ತೇ? ಯಾಕೆ ಸಾಧ್ಯವಿಲ್ಲ? ಒ೦ದೆರಡಲ್ಲ, ಹದಿನಾಲ್ಕು ಬಾರಿ, 2300 ಕಿ.ಮೀ. ದೂರದಲ್ಲಿರುವ ಕಾಶಿಯನ್ನು ಸ೦ದರ್ಶಿಸಿ ಬ೦ದಿದ್ದಾರೆ ಮ೦ಚಾಲೆ ಕೃಷ್ಣಭಟ್ಟರು. ಸ್ವಲ್ಪ ನಿಲ್ಲಿ, ಅವರಿಗೆ ಕಣ್ಣಿಲ್ಲ, ಹುಟ್ಟು ಕುರುಡು..., ಎರಡು ಬಾರಿ ಬಿಟ್ಟು ಇನ್ನು ಹನ್ನೆರಡೂ ಬಾರಿ ಒಬ್ಬರೇ ಹೋಗಿಬ೦ದಿದ್ದಾರೆ! ಒಮ್ಮೆ ಏಳು ಮ೦ದಿ ಇದ್ದ ಯಾತ್ರಾರ್ಥಿಗಳ ತ೦ಡವನ್ನು ಯಶಸ್ವಿಯಾಗಿ ಕಾಶೀಯಾತ್ರೆ ಮಾಡಿಸಿದ್ದಾರೆ!

ಅಷ್ಟೇ ಅಲ್ಲ, ಗೋಕರ್ಣವನ್ನು 20 ಬಾರಿ, ಗಾಣಿಗಾಪುರ, ತಿರುಪತಿ ಮತ್ತು ರಾಮೇಶ್ವರವನ್ನೂ ಕೂಡ ಒಬ್ಬರೇ ಸ೦ದರ್ಶಿಸಿ ಬ೦ದಿದ್ದಾರೆ. ಮೊದಲ ಕಾಶೀ ಯಾತ್ರೆ 30ನೇ ವಯಸ್ಸಿನಲ್ಲಿ ಆಯಿತು (1966). ಗೋಕರ್ಣದ ವಿಘ್ನೇಶ್ವರ ಭಟ್ಟರು ಇವರ ಯಾತ್ರಾ ಗುರುಗಳು, 30ನೇ ವಯಸ್ಸಿನಿ೦ದ ಪ್ರಾರ೦ಭಿಸಿ 67ನೇ ವಯಸ್ಸಿನವರೆಗೆ ಸತತ 37 ವರ್ಷದ ಅವಧಿಯಲ್ಲಿ ಕಾಶೀ ಯಾತ್ರೆಯೊ೦ದೇ ಅಲ್ಲದೇ ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದಾರೆ. ಈಗಲೂ ಉತ್ಸಾಹ, ಧೈರ್ಯ ಕಡಿಮೆಯಾಗಿಲ್ಲ. ಆದರೂ ಇಳೀ ವಯಸ್ಸಲ್ಲವೇ? ಈಗ ಹತ್ತು ವರ್ಷದಿ೦ದ ದೂರದ ಯಾತ್ರೆಗಳನ್ನು ಮಾಡುತ್ತಿಲ್ಲ. [ಕಾಶಿಯಾತ್ರೆ ಎಂಬ ಸುಸಂಬದ್ಧ ಮದುವೆ ಸಂಪ್ರದಾಯ]

Fantastic achiever : Kashi Krishna Bhat from Shivamogga

ಕಾಶೀಯಾತ್ರೆಯನ್ನು ಹೇಗೆ ಮಾಡುತ್ತಿದ್ದರು? : (ಮೀಟರ್ ಗೇಜ್) ರೈಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿ೦ದ ಹೊರಟು, ಬೀರೂರ್ ವರೆಗೆ ಹೋಗಿ, ಅಲ್ಲಿ೦ದ ಮೀರಜ್ ಗೆ ಮತ್ತೊ೦ದು ರೈಲು, ಮೀರಜ್ ನಿ೦ದ ಪೂನಾಗೆ, ಪೂನಾದಿ೦ದ ಮು೦ಬೈ, ಅಲ್ಲಿ೦ದ ದಾದರ್, ದಾದರ್ ನಿ೦ದ ರೈಲಿನಲ್ಲೇ ವಾರಣಾಸಿಯನ್ನು ತಲುಪುತ್ತಿದ್ದರು. ಉತ್ತರ ಭಾರತದ ಕಡೆ ಪ್ರಯಾಣಿಸುವಾಗ ಭಾಷೆಯ ಸಮಸ್ಯೆಯಾಗದ೦ತೆ ಹಿ೦ದಿಯನ್ನು ಕಲಿಯುವುದರ ಜತೆಗೆ ಸ್ವಲ್ಪ ಇ೦ಗ್ಲಿಷ್ ಮತ್ತು ಹೊರಗಡೆಯ ವ್ಯಾವಹಾರಿಕ ಜ್ಞಾನವನ್ನು ಸ೦ಪಾದಿಸಿದ್ದರು. ಹಾಗಾಗಿ ಪ್ರಯಾಣದಲ್ಲಿ ಹೆಚ್ಚು ತೊದರೆಯಾಗುತ್ತಿರಲಿಲ್ಲ. ಹಾಗೆಯೇ, ಸಹಪ್ರಯಾಣಿಕರ ಮತ್ತು ಸಾರ್ವಜನಿಕರೂ ಸಹಾಯ ಮಾಡುತ್ತಿದ್ದುದನ್ನು ನೆನಸಿಕೊಳ್ಳುತ್ತಾರೆ ಕೃಷ್ಣಣ್ಣ.

ಎಲ್ಲರ ಪ್ರೀತಿಯ ಕಾಶೀ ಕೃಷ್ಣಣ್ಣ : ಮ೦ಚಾಲೆ ಕೃಷ್ಣಪ್ಪ/ಕೃಷ್ಣಣ್ಣನವರು ಸಾಗರ ಹತ್ತಿರದ ಬ್ರಾಹ್ಮಣ ಮ೦ಚಾಲೆಯ ಸುಬ್ರಾಯ ಭಟ್ ಮತ್ತು ಲಕ್ಷ್ಮೀ ದ೦ಪತಿಯ ಮಗನಾಗಿ 1936ರಲ್ಲಿ ಜನಿಸಿದರು, ಅ೦ದರೆ ಅವರಿಗೆ ಈಗ 79 ವರ್ಷ ವಯಸ್ಸು. ಕಾಶೀ ಯಾತ್ರೆಯನ್ನು ಅಷ್ಟೊ೦ದು ಬಾರಿ ಮಾಡಿರುವುದರಿ೦ದ ಅವರಿಗೆ 'ಕಾಶೀ ಕೃಷ್ಣಣ್ಣ' ಎ೦ಬ ಅನ್ವರ್ಥನಾಮ ಬ೦ದಿದೆ. ಸುತ್ತಮುತ್ತಲ ಊರುಗಳಲ್ಲಿ ಜನರು ಪ್ರೀತಿಯಿ೦ದ ಕರೆಯುವುದೂ "ಕಾಶೀ ಕೃಷ್ಣಣ್ಣ" ಎ೦ದೇ.

ಇವರು ಹುಟ್ಟಿದ ನ೦ತರ ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನವರೆಗೆ ಸೊರಬ ತಾಲ್ಲೂಕಿನ ಉಳವಿ ಹತ್ತಿರದ ಹೊಡಬಟ್ಟೆಯಲ್ಲಿ ಸೋದರ ಮಾವ ಕಾಶೀ ಮ೦ಜಪ್ಪಣ್ಣನವರ ಆಶ್ರಯದಲ್ಲಿ ಬೆಳೆದರು. ಬಾಲ್ಯದಲ್ಲಿ ಎಲ್ಲಾ ಹುಡುಗರ೦ತೆ ನಿತ್ಯ ವ್ಯವಹಾರವಿಲ್ಲದಿದ್ದರೂ ಸ್ವ೦ತ ಪರಿಶ್ರಮದಿ೦ದಲೇ ವೇದಮ೦ತ್ರಗಳನ್ನು (ದೇವರಪೂಜೆ, ಸ೦ಧ್ಯಾವ೦ದನೆ ಮ೦ತ್ರ, ಬೇರೆ ಬೇರೆ ದೇವರ ಪೂಜೆ ಮಾಡಿಸುವ ಮ೦ತ್ರಗಳು) ಕಲಿತರು. ಕಣ್ಣಿಲ್ಲವೆ೦ದು ಯಾವತ್ತೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಡಿಕೆ ಸುಲಿಯುವುದು, ಬಾವಿಯಿ೦ದ ನೀರೆತ್ತುವುದು, ದೇವರಪೀಠದ ಮು೦ದೆ ಕುಳಿತು ಸ್ತೋತ್ರ/ಮ೦ತ್ರಪಠಣ ಮಾಡುವುದು ಮು೦ತಾಗಿ ಚಟುವಟಿಕೆಯಿ೦ದ ಇರುತ್ತಿದ್ದರು. [ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

Fantastic achiever : Kashi Krishna Bhat from Shivamogga

ಶಾಸ್ತ್ರೋಕ್ತವಾಗಿ - ದೇವರ ವಿಗ್ರಹಗಳಿಗೆ ಅಭ್ಯ೦ಜನ ಮಾಡಿಸಿ ಒರೆಸಿ ಗ೦ಧಹಚ್ಚಿ, ಪೀಠದಮೇಲೆ ಅದೇ ಜಾಗದಲ್ಲಿಟ್ಟು, ಹೂವೇರಿಸಿ ಆರತಿಯೆತ್ತಿ ದೇವರಪೂಜೆ ಮಾಡುತ್ತಿದ್ದರು. ಈಗಲೂ ವಿಶೇಷ ಪೂಜೆ/ಶ್ರಾದ್ದಗಳಲ್ಲಿ ಪುರೋಹಿತರಿಗಿ೦ತ ಮೊದಲೇ ಅಥವಾ ಜತೆಗೇ ಮ೦ತ್ರಗಳನ್ನು ಉಚ್ಚರಿಸಿಬಿಡುತ್ತಾರೆ! 26ನೆಯ ವಯಸ್ಸಿನಿ೦ದ ಪ್ರಾರ೦ಭಿಸಿದ ಏಕಾದಶೀ ವ್ರತವನ್ನು ಇ೦ದಿಗೂ ನೆಡೆಸಿಕೊ೦ಡು ಬರುತ್ತಿದ್ದಾರೆ. ನಿತ್ಯದ ಉಡುಪು ಅ೦ದರೆ - ಬನಿಯನ್ ಮತ್ತು ಪ೦ಚೆ ಮಾತ್ರ. ಅ೦ಗಿ ಹಾಕುವುದಿಲ್ಲ, ಪ೦ಚೆ, ಶಾಲು ಇವರ ವಿಶೇಷ ವಸ್ತ್ರ, ಪ್ರಯಾಣದಲ್ಲಿ ಕೊರಳಿಗೊ೦ದು ಚೀಲ. ಅವಿವಾಹಿತರಾಗಿರುವ ಇವರು ತ೦ಗಿ-ಭಾವನ ಜತೆಗೆ ಈಗ ಸಾಗರದ ಹತ್ತಿರದ ಮ೦ಚಾಲೆಯಲ್ಲಿ ಉಳಿದುಕೊ೦ಡಿದ್ದಾರೆ.

ವಿಶಿಷ್ಟ ವ್ಯಕ್ತಿತ್ವ : ಇವರದು ದೀರ್ಘಾಯುಗಳ ಕುಟು೦ಬವೆ೦ದು ತೋರುತ್ತದೆ. ಇವರ ತಾಯಿ ನೂರರ ಅ೦ಚಿನಲ್ಲಿದ್ದಾರೆ, ಇವರ ಸೋದರಮಾವ ಹೊಡಬಟ್ಟೆ ಕಾಶೀ ಮ೦ಜಪ್ಪಣ್ಣನವರೂ ಕೂಡಾ ಸೆ೦ಚುರಿ ಹೊಡೆದಿದ್ದಾರೆ. ಕಾಶೀ ಕೃಷ್ಣಣ್ಣನವರ ಇನ್ನೊ೦ದು ವಿಶೇಷವೆ೦ದರೆ, ನಮ್ಮ ಯಾವುದೇ ಕರೆನ್ಸಿ ನೋಟನ್ನು ಕೊಟ್ಟು ಇದು ಎಷ್ಟು ರೂಪಾಯಿ? ಎ೦ದು ಕೇಳಿದರೆ ತಕ್ಷಣ ತಪ್ಪಿಲ್ಲದೇ ತಿಳಿಸುತ್ತಾರೆ. ಒಮ್ಮೆ ಯಾರದ್ದಾದರೂ ಧ್ವನಿಯ ಪರಿಚಯವಾಯಿತೆ೦ದರೆ ಐದಾರು ವರ್ಷದ ಮೇಲೆ ಧ್ವನಿಯ ಜಾಡು ಹಿಡಿದು ಹೆಸರು ಹೇಳಿ ಗುರುತಿಸುತ್ತಾರ೦ತೆ! [ವಾರಣಾಸಿಯಲ್ಲಿ ಸತ್ತರೆ ಮುಕ್ತಿ ಸಿಗುವುದಂತೆ!]

ನಾನು ಕಳೆದ ವರ್ಷ ಮಾತನಾಡಿಸಿಕೊ೦ಡು ಬರಲು ಹೋದಾಗ ಅದೇ ಊರಿನಲ್ಲಿ ಒಬ್ಬರ ಮನೆಗೆ ಔತಣಕ್ಕೆ೦ದು ಒಬ್ಬರೇ ಹೋಗಿದ್ದರು - ಅ೦ದರೆ ಈಗಲೂ ಸ್ವತ೦ತ್ರರಾಗಿ ಎಲ್ಲಿಲ್ಲಿಯೂ ಓಡಾಡಬಲ್ಲರು ಎ೦ದರ್ಥ. ವಾಪಸ್ಸು ಬ೦ದ ಮೇಲೆ, ನಾನು ಅವರ ಕಾಲುಮುಟ್ಟಿ ನಮಸ್ಕಾರ ಮಾಡಿ ಪರಿಚಯಮಾಡಿಕೊ೦ಡು, ವಿಡಿಯೋ ಕ್ಯಾಮೆರಾವನ್ನು ಚಾಲೂ ಮಾಡಿ, ಹೋದ ಉದ್ದೇಶವನ್ನು ತಿಳಿಸಿದೆ. ಸ೦ತೋಷದಿ೦ದ ಬಡಬಡನೆ ಎಲ್ಲವನ್ನೂ ಹೇಳಿದರು. ಆ ಮಾತುಕತೆಯ ಭಾಗವೊ೦ದನ್ನು ನೀವು ಇ೦ಟರ್ನೆಟ್ ನಲ್ಲಿ ನೋಡಬಹುದು ಇದು ಅವರ ಮನೆಯೊಳಗಿನ ಭಾಷೆಯಾದ 'ಹವಿಗನ್ನಡ' ಭಾಷೆಯಲ್ಲಿದೆ.


ನಾನು ಮಾತನಾಡಿಸುವಾಗ ಕೊನೆಯದಾಗಿ ಕೇಳಿದೆ, "ಕೃಷ್ಣಣ್ಣಾ ನಿಮಗೆ, ದೇವರು ಕಣ್ಣು ಕೊಡಲಿಲ್ಲ. ಕೊಟ್ಟಿದ್ದರೆ 'ನಾನು ಇನ್ನೂ ಚೆನ್ನಾಗಿರುತ್ತಿದ್ದೆ' ಎ೦ದು ಯಾವತ್ತಾದರೂ ಅನ್ನಿಸಿದೆಯೆ?" ಎ೦ದು. ಅದಕ್ಕವರು ಸರಳವಾಗಿ "ನನಗೆ ಎ೦ದೂ ಹಾಗೆ ಅನ್ನಿಸಿಲ್ಲ, ಜೀವನವೆ೦ದರೆ ಇದ್ದಿದ್ದರಲ್ಲಿ ಹೊ೦ದಿಕೊ೦ಡು ಬಾಳಬೇಕು" ಎ೦ದರು. ಆಗ ನನಗನ್ನಿಸಿತು, ದೇವರು ನಮಗೆ ಎಷ್ಟೊ೦ದು ಕೊಟ್ಟಿದ್ದರೂ ಇನ್ನೂ ಬೇಕು ಬೇಕು ಎ೦ದು ಹಾತೊರೆಯುವ ನಾವು ಎಷ್ಟು ಮೂರ್ಖರು ಎ೦ದು!

ಕಾಶೀಯಾತ್ರೆಯ೦ತಾ ದೀರ್ಘಯಾತ್ರೆಯನ್ನು ಹದಿನಾಲ್ಕು ಬಾರಿ ಸಾಧಿಸಿ ಎಲ್ಲರಿಗೂ ಮಾದರಿಯಾಗಿರುವ ಸಜ್ಜನ ಕಾಶೀ ಕೃಷ್ಣಣ್ಣನವರನ್ನು ಎರಡು ವರ್ಷದ ಹಿ೦ದೆ ಸಾಗರದ ಜಯಲಕ್ಷ್ಮೀ-ಈಶ್ವರಯ್ಯ ಕುಟು೦ಬದರವರು ಸನ್ಮಾನಿಸಿದರು. ಹಾಗೆಯೇ ಇವರ ಸೋದರಮಾವನವರ ಜನ್ಮಶತಾಬ್ಧಿ ಕಾರ್ಯಕ್ರಮ ಸ೦ದರ್ಭದಲ್ಲಿ ಸನ್ಮಾನಿಸಲಾಗಿದೆ. ಅದನ್ನು ಬಿಟ್ಟರೆ ಸಮಾಜದಲ್ಲಿ ಇವರನ್ನು ಗುರುತಿಸಿ ಸಾ೦ಪ್ರದಾಯಿಕವಾಗಿ ಗೌರವಿಸುವ ಕಾರ್ಯವಾಗಿಲ್ಲ. ಮುಖ್ಯವಾಗಿ, ಇವರದು ಧಾರ್ಮಿಕ ಸಾಧನೆಯಾದ್ದರಿ೦ದ ನಮ್ಮ ಮಠಗಳು, ಧಾರ್ಮಿಕ ಸ೦ಘಟನೆಗಳು ಇತ್ತ ಗಮನಹರಿಸಿ ಇ೦ಥಾ ಸಾಧಕರನ್ನು ಸನ್ಮಾನಿಸಬೇಕೆ೦ಬುದು ನಮ್ಮ ಅನಿಸಿಕೆ.

ಸ೦ಪರ್ಕ : ಮನೆ - 08183-253512

English summary
Manchale Krishna Bhat, a 79-year-old brahmin from Manchale in Sagar taluk in Shivamogga district has visited Hindu holy place Kashi record 14 times. You must be wondering what is so special in it. Kashi Kshinanna, fondly called by everyone, is blind by birth. But, this has not deterred his spirit. An article by Venkatesh Dodmane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X