ಕೈಕಟ್ಟಿ ಕೂಡದ ಕೊಡಕ್ಕಲ್ ಶಿವಪ್ರಸಾದ್
ಈ ನಿಟ್ಟಿನಲ್ಲಿ ಅವರು ಅನೇಕ ಸರಕಾರೇತರ ಸೇವಾಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದು ಅಗತ್ಯವಿದ್ದವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. 'ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದ ಕೆಲಸವು ಮುಂದೆ' ಹಾಡಿಗೆ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.
ಅಂಗವಿಕಲರ ಚಳವಳಿ ಹಾಗೂ ಸೇವಾಕೇಂದ್ರಗಳಲ್ಲಿ ಗುರುತಿಸಿಕೊಂಡಿರುವ ಕೊಡಕ್ಕಲ್ ಶಿವಪ್ರಸಾದರು ಅಂಗವಿಕಲರಿಗಾಗಿ ತೆರೆದಿರುವ ಕಾನೂನು ನೆರವು ಕೇಂದ್ರದ ದಕ್ಷಿಣ ವಿಭಾಗದ ಸಂಪರ್ಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ದೆಹಲಿಯಲ್ಲಿರುವ ಮಕ್ಕಳ ಕಲ್ಯಾಣ ಸಂಸ್ಥೆಯು ಹಲವು ದಶಕಳಿಂದ ಅಂಗವಿಕಲರ ಸೇವೆಯಲ್ಲಿ ತೊಡಗಿದ್ದು ಅಂತರ್ಜಾಲತಾಣದಲ್ಲಿ ವಿಶೇಷ ಪುಟವನ್ನು www.disabilityindia.org ಹೆಸರಿನಲ್ಲಿ ತೆರೆದಿದೆ. ಅಂಗವಿಕಲರು ತಮ್ಮ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಪರಿಹರಿಸಿಕೊಳ್ಳಲು ಕೊಡಕ್ಕಲ್ ರನ್ನು ಇಮೇಲ್ ಅಥವಾ ಜಾಲತಾಣದಲ್ಲಿ ಸಂಪರ್ಕಿಸಬಹುದು.
ಶಿವಪ್ರಸಾದ್ ಕಿರುಪರಿಚಯ
ಮೂಲತಃ ಮಂಗಳೂರು ಜಿಲ್ಲೆಯವರಾದ ಕೊಡಕ್ಕಲ್ ಶಿವಪ್ರಸಾದ್ ಅವರು ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಿವಮೊಗ್ಗ ಜಿಲ್ಲಾ ಅಂಗವಿಕಲ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟಿನಿಂದಲೂ ಶ್ರವಣ ತೊಂದರೆಯಿಂದ ಬಳಲುತ್ತಿರುವ ಶಿವಪ್ರಸಾದ್, ವಿಕಲಚೇತನೆ ನಾಗರತ್ನ ಎಂಬುವವರನ್ನು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ. ನಾಗರತ್ನ ಅವರ ಎರಡು ಕಾಲುಗಳೂ ಊನವಾಗಿದ್ದು, ಜೀವನವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ವತಃ ತಾವೇ ವಿಕಲಚೇತನರಾಗಿದ್ದರೂ ಇತರ ವಿಕಲಚೇತನರ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ಮಂಗಳೂರಿನಲ್ಲಿ ವಿಕಲಚೇತನರಿಗಾಗಿಯೇ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ವಿವಿಧ ಸರಕಾರೇತರ ಸಂಘಟನೆಗಳಲ್ಲಿ ಕೂಡ ವಿಕಲಚೇತನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವಲ್ಲಿ ಶಿವಪ್ರಸಾದ್ ನಿರತರಾಗಿದ್ದಾರೆ. ವಿಕಲಚೇತನರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದೊಡನೆಯೂ ಅವರು ದುಡಿಯುತ್ತಿದ್ದಾರೆ.
ಅಂಗವಿಲಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅವರು ಬರೆದಿರುವ ಅನೇಕ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮ್ಯಾಗಝೀನುಗಳಲ್ಲಿ ಪ್ರಕಟವಾಗಿವೆ. ಅಂಗವೈಕಲ್ಯತೆ ಕುರಿತಂತೆ ಪ್ರಕಟವಾಗುವ ಅತ್ಯುತ್ತಮ ಪತ್ರಿಕಾ ವರದಿಗಾಗಿ ಶಿವಪ್ರಸಾದ್ ಹೆಸರಿನಲ್ಲಿ ಪ್ರಶಸ್ತಿಯನ್ನು ಕೂಡ ನೀಡಲಾಗುತ್ತಿದೆ. ನವದೆಹಲಿಯ ಅಂತಾರಾಷ್ಟ್ರೀಯ ಪೆಂಗ್ವಿನ್ ಪಬ್ಲಿಕೇಷನ್ ಹೌಸ್ ಶಿವಪ್ರಸಾದ್ ಅವರನ್ನು 'ರೈಸಿಂಗ್ ಪರ್ಸನಾಲಿಟಿ ಆಫ್ ಇಂಡಿಯಾ' ಪ್ರಶಸ್ತಿ ನೀಡಿ ಗೌರವಿಸಿದೆ.
ಇ-ಮೇಲ್
ವಿಳಾಸ
:
[email protected]
ಸಂಚಾರವಾಣಿ
:
9243314402.
ಅಂತರ್ಜಾಲ
ತಾಣ
:
www.kodakkal.ning.com