ಹಿಂದೂಸ್ತಾನಿ ಸಂಗೀತದ ಮೇರು ಶಿಖರ ಗಂಗೂಬಾಯಿ

*ರಘುಪತಿ ಯಾಜಿ, ಹುಬ್ಬಳ್ಳಿ
ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ...' ಇದು ಕೇವಲ 11 ವರ್ಷದ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು 1924 ರ ಬೆಳಗಾವಿ ಕಾಂಗ್ರೆಸ್ ಅಧಿ ವೇಶನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮುಂದೆ ಹಾಡಿ ಭೇಷ್ ಎನಿಸಿಕೊಂಡ ಹಾಡು. ಅಂದಿನಿಂದ ಹರಿಯ ಲಾರಂಭಿಸಿದ ಗಾನಗಂಗೆ (ಡಾ. ಗಂಗೂಬಾಯಿ ಹಾನಗಲ್) 97ರ ವೃದ್ಧಾಪ್ಯದಲ್ಲೂ ಜುಳು ಜುಳು ಹರಿಯುತ್ತಲೇ ಇದೆ. 86 ವರ್ಷಗಳಿಂದ ಇದು ನಾದವಾಗಿ-ನಿನಾದವಾಗಿ ತಂಬೂರಿಯೊಟ್ಟಿಗೆ ಸೇರಿ ಸ್ವರವಾಗಿ-ಶೃತಿಯಾಗಿ,ರಾಗವಾಗಿ, ತೃಗಳಿಗೆ ಬಹುಶ್ರುತವಾಗಿ ಸಂಗೀತದ ಪಥದಲ್ಲಿಕ್ರಮಿಸುತ್ತಲೇ ಇದೆ.
ಗಾನಗಂಗೆ ಎಂದೇ ಕರೆಯಲ್ಪಟ್ಟ ಡಾ.ಗಂಗೂಬಾಯಿ ಹಾನಗಲ್ ಇಂದು 97 ವಸಂತಗಳನ್ನು ಪೂರೈಸಿದ್ದಾರೆ. ಇದು ಸಾಮಾನ್ಯ ಬದುಕಲ್ಲ, ಸಂಗೀತದ ಬದುಕು, ನಾದೋಪಾಸನೆಯ ಅನುಭದ ಬುತ್ತಿ. ಈಗಲೂ ಅವರು ವರ್ಷಕ್ಕೆ ಸುಮಾರು 150 ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಂಗೀತದ ಬಗ್ಗೆ ಮಾತ ನಾಡಿದರೆ ಪುಳಕಗೊಳ್ಳುತ್ತಾರೆ, ಹಿಂದಿನ ಮೆಲುಕುಗಳನ್ನು ಹಾಕುತ್ತಾರೆ. 1913 ರಲ್ಲಿ ಧಾರವಾಡದಲ್ಲಿ ಜನನ. ಜನಿಸುವಾಗಲೇ ಅವರು ಕೇಳಿದ್ದು ಸಂಗೀತವನ್ನೇ. ಯಾಕೆಂದರೆ ತಾಯಿ ಅಂಬಾಬಾಯಿ ಅವರು ಕರ್ನಾಟಕ ಸಂಗೀತಗಾರರಾಗಿದ್ದರು. ಹೀಗಾಗಿ ಗಂಗೂಬಾಯಿಗೂ ಸಂಗೀತದತ್ತ ಸೆಳೆತ. ಆರಂಭದಲ್ಲಿ
ಕೃಷ್ಣಾಮಾಚಾರ್ಯ, ದತ್ತೋಪಂತ ದೇಸಾಯಿ ನಂತರದ ದಿನಗಳಲ್ಲಿ ಕುಂದಗೋಳದ ಸವಾಯಿ ಗಂಧರ್ವ (ರಾಮಬಾವು ಕುಂದಗೋಳಕರ) ಅವರಲ್ಲಿ ತರಬೇತಿ. ಸವಾಯಿ ಗಂಧರ್ವ ಅವರು ಕುಂದಗೋಳದಲ್ಲಿಯೇ ವಾಸಿಸುತ್ತಿದ್ದರು. ಹೀಗಾಗಿ ಹುಬ್ಬಳ್ಳಿಯ ಅವರ ಮನೆಯಿಂದ ಅಂಕಲ್ ರಾಮಣ್ಣ ಅವರೊಂದಿಗೆ ಪ್ರತಿ ದಿನ ಸಂಜೆ ಕುಂದಗೋಳಕ್ಕೆ ಪ್ರಯಾಣ.
ಹೀಗೆ ಸಂಗೀತ ಬದುಕು ಆರಂಭ. ಕಟ್ಟುನಿಟ್ಟಾದ ಗುರು-ಶಿಷ್ಯ ಪರಂಪರೆಯಡಿ ಸಂಗೀತದ ತಾಲೀಮು. ಅವರಿಗೆ ಎಲ್ಲರ ಕುತೂಹಲದ ಕೇಂದ್ರವಾಗಿದ್ದ, ಎಲ್ಲರಿಂದಲೂ ಗಾನೆವಾಲಿ' ಎಂದು ಎನಿಸಿಕೊಳ್ಳುತ್ತಿದ್ದ ಪುಟ್ಟ ಬಾಲಕಿಯೇ ಸಂಗೀತ ಸಾಮ್ರಾಜ್ಞಿಯಾಗಿ ಬೆಳೆದದ್ದು ಈಗ ಇತಿಹಾಸ. ಡಾ.ಗಂಗೂಬಾಯಿ ಹಾನಗಲ್ ಕ್ರಮಿಸಿದ ನಾದ ಪಥ ನಿಜಕ್ಕೂ ಅಪೂರ್ವ.ಇದು ಸಂಗೀತ, ಸೌಹಾರ್ದ ಹಾಗೂ ರಾಷ್ಟ್ರಪ್ರಜ್ಞೆಯ ಅಪರೂಪದ ಸಮ್ಮಿಲನ. ಅವರು ಜನಪ್ರಿಯತೆ ಗಾಗಿ ಸಂಗೀತ ಸಂಪ್ರದಾಯದೊಂದಿಗೆ ರಾಜಿ ಮಾಡಿ ಕೊಂಡವರಲ್ಲ. ಶುದ್ಧ ಕಿರಾಣಾ ಘರಾಣಾ ಶೈಲಿಯ ಖ್ಯಾಲ್ ಗಾಯನ ಬಿಟ್ಟು ಅವರು ಸುಗಮ ಸಂಗೀತ ಭಜನೆಗಳು, ಭಾವಗೀತೆಗಳನ್ನು ಹಾಡಿಯೇ ಇಲ್ಲ. 1932 ರಲ್ಲಿ ಒಮ್ಮೆ ಒಂದೆರಡು ಠುಮ್ರಿ ಹಾಡಿದ್ದು ಬಿಟ್ಟರೆ ಮುಂದೆ ಅವರು ಖ್ಯಾಲ್ ಗಾಯನವನ್ನೇ ಜೀವನ ಪೂರ್ತಿ ಹಾಡಿದ್ದು. ಒಮ್ಮೆ ಕಛೇರಿ ನೀಡುತ್ತಿರುವಾಗ ಶ್ರೋತೃ ಒಬ್ಬರು ಲೈಟ್ ಮ್ಯೂಸಿಕ್ ಹಾಡಿ ಎಂದು ವಿನಂತಿಸಿದಾಗ ಎದುರಿಗಿರುವ ಲೈಟ್ (ಬೆಳಕು) ತೋರಿಸಿ ತನಗೆ ಈ ಲೈಟ್ ಬಿಟ್ಟು ಬೇರೆ ಯಾವು ಲೈಟು ಗೊತ್ತಿಲ್ಲ ಎಂದು ಹೇಳಿದರು.ಇವರ ಮೇಲೆ ಹೆಚ್ಚು ಪ್ರಭಾವ ಬೀರಿದ ಗಾಯಕಿ ಎಂದರೆ ಉತ್ತರ ಪ್ರದೇಶದ ಝೋಹ್ರಾಬಾಯಿ. ಈಗಲೂ ಅವರು ಆ ಗಾಯನವನ್ನು ಮೆಲುಕು ಹಾಕುತ್ತಾರೆ. ಹೋರಾಟದಲ್ಲಿಯೂ ಸಕ್ರಿಯ; ಗಂಗೂಬಾಯಿ ಹಾನಗಲ್ ಜನಪರ ಹೋರಾಟಗಾರರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನಾಡು-ನುಡಿಗೆ ಧಕ್ಕೆ ಬಂದಾಗ ಅವರು ಎಂದೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡವರಲ್ಲ. ಇದಕ್ಕೆ ಗೋಕಾಕ ಚಳವಳಿ ಒಂದು ಉತ್ತಮ ಉದಾಹರಣೆ. ಗೋಕಾಕ ಚಳವಳಿ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರದ ನೀತಿ ಪ್ರತಿಭಟಿಸಿದವರಲ್ಲಿ ಮೊದಲಿಗರೆನಿಸಿಕೊಂಡವರು ಇವರು.
ಇಂಥದ್ದೇ ಮತ್ತೊಂದು ಪ್ರಸಂಗ 1960ರಲ್ಲಿ ನಡೆಯಿತು. ಆಗ ಆಕಾಶವಾಣಿಯಲ್ಲಿ ತಂಬೂರಿಮೀಟುವ , ಸಾಥ್ ನೀಡುವ ಕಲಾವಿದರಿಗೆ ದಿನಗೂಲಿ ನೀಡಲಾಗುತ್ತಿತ್ತು. ಅವರನ್ನು ಕಾಯಂಗೊಳಿಸಬೇಕೆಂಬ ಬೇಡಿಕೆಯನ್ನು ಸರಕಾರ ಮನ್ನಿಸಿರಲಿಲ್ಲ. ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಡಾ.ಗಂಗೂಬಾಯಿ ಹಾನಗಲ್ ನೇತೃತ್ವದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಇಂದಿರಾ ಗಾಂಧಿ ವಿರುದ್ಧ ಪಿಕೆಟಿಂಗ್ ಮಾಡಲಾಯಿತು. ಇದರಿಂದ ಕೇಂದ್ರ ಸರಕಾರ ವಿರುದ್ಧ ಗರಂ' ಆಯಿತು. ಗಂಗೂಬಾಯಿಗೆ ಆಕಾಶವಾಣಿಯಲ್ಲಿ ಯಾವುದೇ ಕಾರ್ಯಕ್ರಮ ನೀಡದಂತೆ ತಾಕೀತು ಮಾಡಿತು. ಗಂಗೂಬಾಯಿ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಕೊನೆಗೂ ಸರಕಾರವೇ ಮಣಿದು ತಂಬೂರಿ ಹಾಕುವವರನ್ನು ಹಾಗೂ ಸಾಥ್ ನೀಡುವವರನ್ನು ಕಾಯಂಗೊಳಿಸಿತು . ಅಲ್ಲದೇ ಈದ್ಗಾ ವಿವಾದದ ಶಾಂತಿಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ, ಹೈಕೋರ್ಟ್ ಪೀಠ, ನೈರುತ್ವ ರೈಲ್ವೆಹೋರಾಟದ ಸಂದರ್ಭ ದಲ್ಲಿ ತಮ್ಮ ಇಳಿವಯಸ್ಸಿನಲ್ಲಿಯೂ ಪಾಲ್ಗೊಂಡಿದ್ದಾರೆ. ಭಾರತೀಯ ಭಾಷೆಯಲ್ಲಿ ಭಾರತೀಯ ಮ್ಯೂಸಿಕ್ ಕಂಪನಿಯೊಂದರ ಧ್ವನಿ ಮುದ್ರಣದಲ್ಲಿ ಯುಗಳ ಗೀತೆ ಹಾಡಿದ ಕೀರ್ತಿಯೂ ಇವರದ್ದೇ. ಎಚ್ಎಂವಿ ಕಂಪನಿ 1933ರಲ್ಲಿ ಇವರು ಹಾಗೂ ಜಿ.ಎನ್.ಜೋಶಿ ಅವರ ಯುಗಳ ಗೀತೆಯನ್ನು ಧ್ವನಿ ಮುದ್ರಿಸಿ ಕೊಂಡಿತು. 1933 ರಲ್ಲಿ ಮುಂಬಯಿ ಆಕಾಶವಾಣಿಯಲ್ಲಿ ಇದು ಪ್ರಸಾರಗೊಂಡಿತು. ಆಗ ಇವರಿಗೆ ಕೇವಲ 20 ವರ್ಷ. 12 ನೇ ವಯಸ್ಸಿನಲ್ಲಿಯೇ ಅವರು ಕಿರಾಣಾ ಘರಾನಾದ ದಂತಕತೆ ಉಸ್ತಾದ್ ಅಬ್ದುಲ್ ಕರೀಂಖಾನ್ ಅವರ ಮುಂದೆ ಹಾಡಿ ಭೇಷ್ ಎನಿಸಿಕೊಂಡಿದ್ದು ಅಪ್ರತಿಮ ಪ್ರತಿಭೆಗೆ ಸಾಕ್ಷಿ.
ಗಂಗೂಬಾಯಿ ಅವರ ವೈಶಿಷ್ಟಎಂದರೆ ಮತ್ತೊಬ್ಬ ಕಲಾವಿದರಿಗೆ ಅವರು ಪ್ರೋತ್ಸಾಹ ನೀಡುವ ಗುಣ. ಪಂ.ಭೀಮಸೇನ್ ಜೋಶಿ ಅವರಿಗೆ ಜೀವನದ ಪ್ರಥಮ ಕಾರ್ಯ ಕ್ರಮ ಏರ್ಪಾಟು ಮಾಡಿದ್ದೇ ಗಂಗೂಬಾಯಿ. ಅದೂ ಹುಬ್ಬಳ್ಳಿಯಲ್ಲಿ. ನಂತರ ಕೋಲ್ಕತಾದಲ್ಲಿಯೂ ಅವರಿಗೆ ಪ್ರಥಮ ಗಾಯನಕ್ಕೆ ವೇದಿಕೆ ಒದಗಿಸಿದರು. ಮಾಲಿನಿ ರಾಜುಲ್ಕರ್ ಅವರಂಥ ಜನಪ್ರಿಯ ಕಲಾವಿದೆಯೂ ಇದೇ ಮಾತನ್ನು ಒಮ್ಮೆ ಹೇಳಿದ್ದರು. ಪಂಡಿತ್ ಜಸ್ರಾಜ್ ಸಹ ಇವರ ಈ ಗುಣವನ್ನು ನೆನಪಿಸಿಕೊಳ್ಳುತ್ತಾರೆ.
ಗಂಗೂಬಾಯಿ ಜೀವನವೇ ಅಪೂರ್ವ ದಾಖಲೆಗಳ ಸಂಗಮ.ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಆರಂಭಿಸಿ ಒಂಬತ್ತು ಪ್ರಧಾನಿಗಳಿಂದ ಹಾಗೂ ಐದು ರಾಷ್ಟ್ರಪತಿಗಳಿಂದ ಸನ್ಮಾನಿಸಲ್ಪಟ್ಟ ಕೀರ್ತಿ ಇವರದ್ದು. ಅಲ್ಲದೇ 7 ಗೌರವ ಡಾಕ್ಟರೇಟ್ಗಳೂ, 48 ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕರಿಸಲ್ಪಟ್ಟಿದ್ದಾರೆ. ತಮ್ಮ 40 ನೇ ವಯಸ್ಸಿನಲ್ಲಿ ಗಂಟಲು ಕೈಕೊಟ್ಟರೂ ಅವರು ಎದೆಗುಂದಲಿಲ್ಲ, ಸ್ತ್ರೀ ಮಾಧುರ್ಯದ ಧ್ವನಿ ಹೋಗಿ
ಗಂಡಸಿನ ಗಡಸು ಧ್ವನಿಯಾಗಿ ಮಾರ್ಪಟ್ಟಿತು. ಆದರೆ ಗಂಗೂಬಾಯಿ ಅವರ ತಾಕತ್ತಿನ ಮುಂದೆ ಧ್ವನಿ ಸೋತಿತು. ಅವರ ಶಾಸ್ತ್ರೀಯ ಗಾಯನದ ಪಕ್ವತೆಗೆ ಗಡಸು ಧ್ವನಿಯೇ ಶ್ರೋತೃಗಳಿಗೆ ಇಂಪಾಯಿತು. ಹೀಗಿದೆ ಅವರ ಗಾಯನದ ಶ್ರೀಮಂತಿಕೆ. ಗಂಗೂಬಾಯಿ ಸಂಗೀತ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾರೆ. ಮೊದಲೆಲ್ಲ ದೊಡ್ಡ ದೊಡ್ಡ ಸಂಗೀತಗಾರರು ಸಹ ಮತ್ತೊಬ್ಬರ ಅಷ್ಟೇ ಏಕೆ ಕಿರಿಯ ಸಂಗೀತಗಾರರ ಗಾಯನ ಕೇಳುತ್ತಿದ್ದರು. ಇದು ಸಂಗೀತದ ಬೆಳವಣಿಗೆಗೆ ಪೂರಕವಾಗಿತ್ತು. ಒಂದು ಘರಾಣೆಯವರು ಮತ್ತೊಂದು ಘರಾಣೆಯ ಗಾಯನ ಸವಿಯುತ್ತಿದ್ದರು. ಈಗ ಹಾಗಿಲ್ಲ, ಮತ್ತೊಬ್ಬರ ಗಾಯನ ಕೇಳುವ ಮನೋಭಾವ ಕಡಿಮೆಯಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎನ್ನುವ ಅವರ ಹೇಳಿಕೆಯೇ ಇದಕ್ಕೆ ಸಾಕ್ಷಿ.
ಗಂಗೂಬಾಯಿ ಅವರಿಗೆ ಗಾಯನ ಅದು ನಿರಂತರ ನಾದೋಪಾಸನೆ.ಇದರ ತುಡಿತ ಎಷ್ಟಿದೆ ಎಂದರೆ ಅವರು 94ರ ನಂತರವೂ ಅನೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಈಗಲೂ ಸಂಗೀತದೊಂದಿಗೆ ಬೆಸೆದು ಕೊಂಡಿದ್ದಾರೆ. ಗಾಯನ ಗಂಗೆಗೇ ಸ್ವರ ಸಮುದ್ರದಲ್ಲಿ ಮೀಯುವ ಆಸೆ. ಇದು ಚಿರಕಾಲ ಇರಲಿ ಎನ್ನುವುದೇ ಎಲ್ಲರ ಆಸೆ. ನಿರೀಕ್ಷೆ.












Click it and Unblock the Notifications