Get Updates
Get notified of breaking news, exclusive insights, and must-see stories!

ಶತಮಾನದ ಹಿಂದೆಯೇ ಸಮಾನತೆ ಸಾರಿದ ದಾಸ ಶ್ರೇಷ್ಠ ಕನಕರು

ಸಂಗ್ರಹ :ನರಹರಿಸುಮಧ್ವ

ಕನಕದಾಸರು

ಕಾಲ:1508-1606
ಜನ್ಮನಾಮ :ತಿಮ್ಮಪ್ಪ ನಾಯಕ
ಜಾತಿ :ಕುರುಬ ಜನಾಂಗ
ಜನ್ಮ ಸ್ಠಳ :ಬಾಡ
ಸ್ಥಳ :ಕಾಗಿನೆಲೆ (ಹಾವೇರಿ ಜಿಲ್ಲೆ)

ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು. ಕುರುಬರು ಮೂಲತಃ ಶ್ರೀವೈಷ್ಣವ ಪಂಥವನ್ನು ಅವಲಂಬಿಸಿದ್ದರೂ, ಕನಕದಾಸರು ವ್ಯಾಸರಾಜರ ಶಿಷ್ಯವೃತ್ತಿಯನ್ನು ಪಡೆದು, ವೈಷ್ಣವ ಪಂಥವನ್ನು ಅವಲಂಬಿಸಿದ್ದರು. ಇವರ ಆರಾಧ್ಯದೇವ ಆದಿಕೇಶವ (ಬಾಡದಾದಿ)ಅಂಕಿತ - ಆದಿಕೇಶವ (ಬಾಡದಾದಿ)

Saint Kanakadasa

ಮುಖ್ಯ ಗ್ರಂಥಗಳು

1. ನಳಚರಿತ್ರೆ 481ಪದ್ಯಗಳುಳ್ಳ ನಳದಮಯಂತಿಯರ ಪ್ರೇಮ ಕಥೆ
2. ಹರಿಭಕ್ತಿಸಾರ 110 ಪದ್ಯಗಳ ಭಾಮಿನಿ ಷಟ್ಪದಿಯ ಪದ್ಯ ರೂಪ
3. ನೃಸಿಂಹಾವತಾರ - ನರಸಿಂಹಾವತಾರದ ಬಗ್ಯೆ ಒಂದು ಗ್ರಂಥ
4. ರಾಮಧ್ಯಾನಚರಿತ್ರೆ ರಾಗಿ -ಮತ್ತು ಅಕ್ಕಿಯ ಕುರಿತು ಗ್ರಂಥದಲ್ಲಿ ಪರಮಾತ್ಮನ ಶ್ಲಾಘನೆ
5. ಮೋಹನತರಂಗಿಣಿ ಒಂದು ಕಾವ್ಯ
6. ಹಲವಾರು ದೇವರನಾಮಗಳು
7. ತತ್ತ್ವಪದಗಳು

ಕನಕನಿಗಾಗಿ ತಿರುಗಿದ ಕೃಷ್ಣ ಒಮ್ಮೆ ಕನಕದಾಸರು ಉಡುಪಿಗೆ ಬಂದು ಶ್ರೀಕೃಷ್ಣನ ದರ್ಶನಕ್ಕೆ ಹೋಗಿದ್ದರು. ಉಡುಪಿಯಲ್ಲಿ ಶ್ರೀಕೃಷ್ಣ ಪಶ್ಚಿಮದಿಕ್ಕಿಗೆ ಮುಖ ಮಾಡಿದ್ದಾನೆ.ಸಾಮಾನ್ಯವಾಗಿ ದೇವರು ಪೂರ್ವ ದಿಕ್ಕಿಗೆ ಇರುವುದು ವಾಡಿಕೆ. ಒಮ್ಮೆ ಕನಕದಾಸರು ಉಡುಪಿಯ ಕೃಷ್ಣನನ್ನು ಒಂದು ಸಣ್ಣ ಕಿಡಕಿಯಲ್ಲಿ ವೀಕ್ಷಿಸಿದರು. ಕನಕದಾಸರು ಆ ಸಣ್ಣ ಕಿಡಕಿಯಲ್ಲೇ ಪರಮಾತ್ಮನನ್ನು ಕಂಡು ಹಿಗ್ಗಿ, ಕುಣಿದಾಡಿ, ದೇವರನಾಮಗಳನ್ನು ರಚಿಸಿ ಕೊಂಡಾಡಿದರು. ಆ ನೆನಪಿನಲ್ಲೇ ಕನಕದಾಸರ ಗೌರವಾರ್ಥ ನಾವು ಈಗಲೂ ಆ ಒಂದು ಸಣ್ಣ ಕಿಡಕಿಯಲ್ಲೇ ಶ್ರೀಕೃಷ್ಣನನ್ನು ನೋಡುವ ಒಂದು ವಾಡಿಕೆ.

ಕನಕ ಸಾಹಿತ್ಯಶೈಲಿ - ಕನಕದಾಸರ ಹಲವಾರು ಸಾಹಿತ್ಯಗಳು ಬಲು ವಿಶೇಷವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಗುರುಗಳ ಕರುಣೆಯಿಲ್ಲದೆ ಅಸಾಧ್ಯ. ಅವರ ರಚನಾ ಶೈಲಿಯೇ ಹಾಗೆ. ಇಲ್ಲಿ ಕೆಲವು ಉದಾಹರಣೆಗಳನ್ನು ನೋಡೋಣ.

ಕನಕದಾಸರ ಮುಂಡಿಗೆ : ಏನೇ ಮನವಿತ್ತೆ ಲಲಿತಾಂಗಿ

ಅಸಮಾನಗೋವಳ ಕುಲವಿಲ್ಲದವನೊಳು |
ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ |

ಮಗಳ ಮಗಗೆ ಮೈದುನನಾಗಿ, ಮಾವನ
ಜಗವರಿಯನು ಕೊಂದ ಕುಲಗೇಡಿ ಗೋವಳ |
ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನಾದಿಕೇಶವನೊಳು |

ಅಸಮಾನ ಗೋವಳ, ಕುಲವಿಲ್ಲದವನೊಳು - ಇಲ್ಲಿ ಯಾವುದೇ ಕುಲವಿಲ್ಲದ ಗೋವುಗಳನ್ನು ಕಾಯುವ ನಾರಾಯಣನನ್ನು ಮೆಚ್ಚಿ ನೀನು ಹೇಗೆ ಮನವನಿತ್ತೆ ಎಂದು ಲಲಿತಾಂಗಿ ಲಕ್ಷ್ಮೀದೇವಿಯನ್ನು ಉದ್ದೇಶಿಸಿ ಕನಕದಾಸರು ಹೇಳಿದ್ದಾರೆ. ಕೃಷ್ಣ ಪರಮಾತ್ಮನು ಸಾಮಾನ್ಯ ಗೋಪಾಲಕರಂತೆ ಕಂಡುಬಂದರೂ ಅಸಮಾನ ಅಪ್ರಾಕೃತನಾಗಿರುವನು, ಜ್ಞಾನಾನಂದಾತ್ಮಕ ರೂಪವುಳ್ಳವನು.

ಮಗಗೆ ಮೈದುನನಾದ -1. ಇಂದ್ರದೇವರು ಪರಮಾತ್ಮನ ಮುಖದಿಂದ ಸೃಷ್ಠಿರಾದವರು. ಅಂದರೆ ಪರಮಾತ್ಮನ ಮಗ. ಆ ಇಂದ್ರದೇವರ ಅವತಾರಿಯಾದ ಅರ್ಜುನನಿಗೆ ಕೃಷ್ಣನಾಗಿ ಅವತಾರ ಮಾಡಿದಾಗ ತನ್ನ ತಂಗಿಯಾಗಿದ್ದ ಸುಭದ್ರೆಯನ್ನು ವಿವಾಹ ಮಾಡಿ ಮೈದುನನಾಗಿದ್ದನು. 2. ನರಕಾಸುರನು ಭೂದೇವಿಯಪುತ್ರ. ಪರಮಾತ್ಮನ ವರಾಹಾವತಾರ ಕಾಲದಲ್ಲಿ ಅವನ ಬೆವರಿನಿಂದ ಭೂತಾಯಿಯಲ್ಲಿ ಜನಿಸಿದವನು. ಆದ್ದರಿಂದ ನರಕಾಸುರ ಪರಮಾತ್ಮನ ಮಗ. ಅವನ ತಂಗಿಯಾದ ಸೀತೆಯನ್ನು ವಿವಾಹವಾದ್ದರಿಂದ ಪರಮಾತ್ಮನು ನರಕಾಸುರನಿಗೆ ಭಾವಮೈದುನ.

ಮಗಳಿಗೆ ಪತಿಯಾದ 1. ಸಮುದ್ರದಲ್ಲಿ ಮುಳುಗಿದ್ದ ಭೂಮಿಯನ್ನು ತನ್ನ ವರಾಹಾವತಾರದಿಂದ ಮೇಲೆತ್ತಿ ಉದ್ಧಾರ ಮಾಡಿದ್ದರಿಂದ ಭೂತಾಯಿಯು ಪರಮಾತ್ಮನ ಮಗಳು. ಅಂತಹ ಭೂದೇವಿಯನ್ನು ತನ್ನ ಪತ್ನಿಯಂತೆ ಧರಿಸಿ ಭೂವರಾಹನಾಗಿ, ತನ್ನ ಮಗಳಿಗೇ ಪತಿಯಾದ ಪರಮಾತ್ಮ. 2. ಸೀತೆ ಭೂದೇವಿಯ ಪುತ್ರಿ. ಭೂದೇವಿಯ ಪುತ್ರಿಯಾದ್ದರಿಂದ ಪರಮಾತ್ಮನಿಗೂ ಪುತ್ರಿಯೇ. ಅಂತಹ ಮಗಳನ್ನು ವಿವಾಹವಾದ ಶ್ರೀರಾಮಚಂದ್ರ.

ಮಗಳಿಗೆ ಅಳಿಯನಾದ - ಮೇಲೆ ಹೇಳಿದಂತೆ ಭೂದೇವಿ ಪರಮಾತ್ಮನ ಮಗಳು. ಅವಳ ಮಗಳೇ ಸೀತೆ (ಭೂಮಿಯಲ್ಲಿ ದೊರಕಿದವಳು).
ಅವಳನ್ನು ರಾಮಚಂದ್ರನಾಗಿ ಭೂದೇವಿಗೇ ಅಳಿಯನಾದ ಮಗಳಿಗೇ ಅಳಿಯನಾದ. ಅಳಿಯಗಳಿಯನಾದ - ಪರಮಾತ್ಮನ ಪಾದೋದಕವಾದ (ಪರಮಾತ್ಮನ ಪಾದದಿಂದ ಸೃಷ್ಟಿಯಾದ) ಗಂಗೆಯು ಪರಮಾತ್ಮನ ಮಗಳು. ಗಂಗೆಯ ಪತಿ ವರುಣ. ಆದ್ದರಿಂದ ವರುಣ ಅಳಿಯ. ಹೀಗೆ ಅಳಿಯನಾದ ಸಮುದ್ರರಾಜ ವರುಣನ ಪುತ್ರಿಯೆನಿಸಿದ (ಸಮುದ್ರಮಥನದಲ್ಲಿ ಉದ್ಭವಿಸಿದ)ಲಕ್ಷ್ಮೀದೇವಿಯನ್ನು ಪರಮಾತ್ಮನಿಗೆ ಸಮರ್ಪಿಸಿದರಿಂದ ಅಳಿಯಗಳಿಯನಾದ.

ಮಗಳ ಮಗಗೆ ಮೈದುನನಾಗಿ ಮಾವನ ಜಗವರಿಯನು ಕೊಂದ - ಭಗವಂತನ ಮಗಳು ಭೂದೇವಿ. ಅವಳ ಮಗ ನರಕಾಸುರ. ನರಕಾಸುರ ಭೂಮಿಯಲ್ಲೇ ಅವತರಿಸಿದ್ದನು. ಸೀತಾದೇವಿಯೂ ಭೂಮಿಯಲ್ಲೇ ಜನಿಸಿದ್ದರಿಂದ ನರಕಾಸುರನ ಸಹೋದರಿ. ಆದ್ದರಿಂದ ಶ್ರೀರಾಮನು ನರಕಾಸುರನಿಗೆ ಭಾವಮೈದುನ. ಮತ್ತು ನರಕಾಸುರನು ಹದಿನಾರು ಸಾವಿರ ಸ್ತ್ರೀಯರನ್ನೂ ಬಂಧಿಸಿಟ್ಟು ಸಾಕಿದ್ದರಿಂದ ಅವರಿಗೆ ತಂದೆಯಾಗಿದ್ದನು. ಮತ್ತು ಆ ಸ್ತ್ರೀಯರನ್ನೆಲ್ಲ ವಿವಾಹವಾಗಿದ್ದರಿಂದಲೂ ನರಕಾಸುರನು ಮಾವನಾಗಿರುವನು ಕೃಷ್ಣನಿಗೆ. ಅಂತಹ ಮಾವನನ್ನೇ ಕೊಂದವನು. ಮತ್ತು ಇನ್ನೊಂದು ಅರ್ಥ ಮಾವಾನ ಕೊಂದವನೆಂದರೆ ಕಂಸನನ್ನು ಕೊಂದವನೆಂತಲೂ ಹೇಳಬಹುದು. ಮಗಳು ಎಂದರೆ ಗಂಗೆ. ಅವಳ ಮಗನೆಂದರೆ ಸಮುದ್ರದಲ್ಲಿ ಹುಟ್ಟಿದ ಚಂದ್ರ. ಇವನು ಸಾಗರನ ಮಗನೂ ಆಗಿದ್ದಾನೆ. ಅವನ ಜೊತೆಗೇ ಹುಟ್ಟಿದ ಲಕ್ಷ್ಮೀದೇವಿಯು ಚಂದ್ರನಿಗೆ ಅಕ್ಕಳಾಗುತ್ತಾಳೆ. ಇವಳನ್ನು ವಿವಾಹವಾದ್ದರಿಂದ ಚಂದ್ರನಿಗೆ ಮೈದುನನಾದನು.

ಅತ್ತೆಗೆ ವಲ್ಲಭನಾದ - ಸೀತೆಯ ತಾಯಿಯು ರಾಮನಿಗೆ ಅತ್ತೆ (ಭೂದೇವಿ). ಆ ಅತ್ತೆಯಾದ ಭೂದೇವಿಯನ್ನು ವರಾಹರೂಪದಿಂದ ಪತ್ನಿಯಾಗಿ ಸ್ವೀಕರಿಸಿದ್ದರಿಂದ ಅತ್ತೆಗೆ ವಲ್ಲಭನಾದ ಪರಮಾತ್ಮ. ಇದೊಂದು ಕನಕದಾಸರ ಮುಂಡಿಗೆಯ ಒಂದು ನೋಟ.

ದಾಸ ಮುಂಡಿಗೆ

ಪುಟ್ಟದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |
ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |
ಸುಡಗಾಡುದಾಸ ನಾನಲ್ಲ |ಕಷ್ಠದಾಸ ನಾನಲ್ಲ |
ಕೊಟ್ಟದಾಸ ನಾನಲ್ಲ |ಹೊಟ್ಟೆದಾಸ ನಾನಲ್ಲ |
ಇಟ್ಟಿಗೆ ದಾಸ ನಾನಲ್ಲ |ಶಿಷ್ಟದಾಸ ನಾನಲ್ಲ |
ನಿಷ್ಠದಾಸ ನಾನಲ್ಲ |ಭ್ರಷ್ಠದಾಸ ನಾನಲ್ಲ |
ಶ್ರೇಷ್ಠದಾಸ ನಾನಲ್ಲ |ವಿತ್ತದಾಸ ನಾನಲ್ಲ |
ಹುತ್ತದಾಸ ನಾನಲ್ಲ |

ನಾನು ಈ ಷೋಡಶ ದಾಸರುಗಳ ದಾಸಾನು ದಾಸರ ದಾಸಿಯರ ಮನೆಯ ಮಂಕುದಾಸರ ಮನೆಯ ಶಂಕುದಾಸ ಬಾಡದಾದಿ ಕೇಶವ ||

[ಕೃಪೆ : [email protected]]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+