ಇನ್ನೊಂದಿಷ್ಟು ವಿಚಿತ್ರಾನ್ನ! ಮತ್ತೊಂದಿಷ್ಟು ವಿಚಿತ್ರಾನ್ನ!!
ಪುಸ್ತಕ ಪ್ರೇಮಿಗಳು ಇನ್ನಷ್ಟು ಬಾಯಿ ಚಪ್ಪರಿಸಲು ಪೂರಕವಾಗುವಂತೆ, ಈ ಭಾನುವಾರ(ಆಗಸ್ಟ್ 12) ಶ್ರೀವತ್ಸ ಜೋಶಿ ಅವರ ಅವಳಿ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. ಅವರಇನ್ನೊಂದಿಷ್ಟು ವಿಚಿತ್ರಾನ್ನ ಮತ್ತು ಮತ್ತೊಂದಿಷ್ಟು ವಿಚಿತ್ರಾನ್ನಕೃತಿಗಳ ಲೋಕಾರ್ಪಣೆ ಸಮಾರಂಭ, ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು.
ಅಕ್ಷರಗಳ ಮುಖಾಂತರ ಕಚಗುಳಿಯಿಡುವ ಹನಿಗವನಗಳ ಮಂಡಿ ಎಚ್.ಡುಂಡಿರಾಜ್ ಪುಸ್ತಕಗಳ ಬಿಡುಗಡೆ ಮಾಡುವರು. ನಂತರ ಜೋಶಿ ಬಗ್ಗೆ ಮತ್ತು ವಿಚಿತ್ರಾನ್ನದ ರುಚಿ ಹೇಗಿದೆ ಎಂಬ ಬಗ್ಗೆ ಮಾತನಾಡಲಿದ್ದಾರೆ.
ಪತ್ರಿಕೋದ್ಯಮದಲ್ಲಿ ಕಳೆದುಹೋಗದೇ, ಅಂಕಣದ ಮೇಲೆ ಅಂಕಣ ಬರೆಯುತ್ತಿರುವ ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಅಮೆರಿಕನ್ನಡಿಗ ವಲ್ಲೀಶ ಶಾಸ್ತ್ರಿ ಇನ್ನೊಬ್ಬ ಮುಖ್ಯ ಅತಿಥಿ.
ಮೈಸೂರಿನ ಗೀತಾ ಬುಕ್ ಹೌಸ್, ವಿಚಿತ್ರಾನ್ನ ರುಚಿ ಹೆಚ್ಚುವಂತೆ ಅಂದವಾಗಿ ಮುದ್ರಿಸಿದೆ. ಅ.ರಾ.ಮಿತ್ರ,2005ರಲ್ಲಿ ಶ್ರೀವತ್ಸ ಜೋಶಿ ಅವರ ವಿಚಿತ್ರಾನ್ನ ಪುಸ್ತಕವನ್ನು ಬಿಡುಗಡೆ ಮಾಡಿ, ಇನ್ನಷ್ಟು ವಿಚಿತ್ರಾನ್ನ ಬೇಕೆಂದು ಅಪ್ಪಣೆ ಮಾಡಿದ್ದರು. ಬಡಿಸುವುದರಲ್ಲಿ ಜೋಶಿ ಉದಾರತೆ ತೋರಿಸಿದ್ದಾರೆ. ಹೀಗಾಗಿ ಏಕಕಾಲದಲ್ಲಿ ಎರಡು ಪುಸ್ತಕಗಳು ಸಿದ್ಧಗೊಂಡಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದು, ಅಂಕಣ ಬರಹಗಳಿಗೆ ಒಂದು ಘನತೆ ತಂದುಕೊಟ್ಟವರು ಹಾ.ಮ.ನಾಯಕ್. ಈಗಂತೂ ಪತ್ರಿಕೆಗಳ ತುಂಬ ಅಂಕಣಗಳದೇ, ದರ್ಬಾರು. ಅಂತರ್ಜಾಲದಲ್ಲಿ ಅಂಕಣ ಬರಹಗಳ ಸುಗ್ಗಿ ವಿರಳವಾಗಿದ್ದ ಕಾಲದಲ್ಲೇ, ಇಂತಹ ಪ್ರಯೋಗಕ್ಕೆ ಮುಂದಾಗಿದ್ದು ದಟ್ಸ್ ಕನ್ನಡ. ನಿರಂತರವಾಗಿ ವಿಚಿತ್ರಾನ್ನಪ್ರಕಟವಾಗಿದೆ. 250ವಾರಗಳನ್ನು ದಾಟಿ ಮುನ್ನುಗ್ಗುತ್ತಿರುವುದೇ, ಅಂಕಣದ ಜನಪ್ರಿಯತೆಗೆ ನಿದರ್ಶನ.
ಕರ್ನಾಟಕದಲ್ಲಿ ಮುಂಗಾರು ಮಳೆ ಸುರಿಯುತ್ತಿದೆ.. ಚಳಿಗಾಲಕ್ಕೆ ಮೊದಲೇ ಹಾಳು ಚಳಿ ಮೈಕೊರೆಯುತ್ತಿದೆ. ಈ ಹೊತ್ತಿನಲ್ಲಿ ಬಿಸಿಬಿಸಿ ವಿಚಿತ್ರಾನ್ನ ಸಿದ್ಧಗೊಂಡಿದೆ.ಗುಡ್! ಬನ್ನಿ ಸಮಾರಂಭಕ್ಕೆ.. ಅಕ್ಷರ ಮೋಹಿತರಿಗೆ, ಸಮಾರಂಭಕ್ಕೆ ವಿಶೇಷ ಆಹ್ವಾನ .(ದಟ್ಸ್ ಕನ್ನಡ ವಾರ್ತೆ)