ಇದು ನಮ್ಮ ಮಲೆನಾಡ ಕೊಡೆ, ಹೊದ್ದು ನಡೆ....
ನಮ್ಮೂರು 'ಮಲೆನಾಡು, ನಾವು ಮಲೆನಾಡಿಗರು' ಎಂದು ಹೇಳೋದಕ್ಕೆ ಏನೋ ಒಂಥರಾ ಖುಷಿ. ಕಣ್ಣಿಗೆ, ಮನಸ್ಸಿಗೆ ಸದಾ ಸಂತಸ ನೀಡುವ ಮಲೆನಾಡ ಸೊಬಗೋ, ಸೌಂದರ್ಯವೋ ಅಬ್ಬಬ್ಬಾ ಎಷ್ಟು ಚಂದಾ ಅಂತೀರಾ?...ಅದರಲ್ಲೂ ಮಳೆಗಾಲದ ಸಮಯದಲ್ಲಿ ನಿರಂತರ ಸುರಿಯುವ ಮಳೆಯಲ್ಲಿ ಒಂದು ಸುತ್ತು ಹೋಗಿ ಬಂದರಂತೂ ಬಿಡಿ ಸ್ವರ್ಗಕ್ಕೆ ನಾಲ್ಕೇ ಗೇಣು.
ಮಳೆಯಲ್ಲಿ ನೆನೆವ ವೇಳೆಯಲ್ಲೇ 'ನಮ್ಮನೆ ಇಲ್ಲೇ ಇರ್ಬೇಕು, ಬೆಟ್ಟಕ್ಕೆ ಚಾಚಿಕೊಂಡಿರ್ಬೇಕು, ಪಕ್ಕದಲ್ಲಿ ಸಣ್ಣದಾಗಿ ಝರಿ, ತೊರೆ, ನದಿ ಹರಿತಿರ್ಬೇಕು ಎಂದೆಲ್ಲಾ ಹಸಿರ ನಾಡಲ್ಲಿ ಹಸಿ ಹಸಿ ಕನಸು ಕಾಣ್ತೀವಿ. ಆಮೇಲೆ ಶೀತ ಹಿಡಿಸಿಕೊಂಡು ಮನೆಯ ಪಡಸಾಲೆ ಮೇಲೆ ಕೂತು ಕಷಾಯ ಕುಡಿತಾ 'ಮಳೇಲೆ ನೆನಿಬೇಡ, ಛತ್ರಿ ಹಿಡ್ಕೊಂಡು ಹೋಗು ಅಂಥಾ ಎಷ್ಟು ಹೇಳ್ದೇ...ಕೇಳ್ಲೇ ಇಲ್ಲಾ' ಅಂತಾ ಅಮ್ಮನ ಹತ್ತಿರ ಬೈಸಿಕೊಳ್ತಾ ಇದ್ರು ನಮ್ಮ ಕನಸು ನಮ್ಮನ್ನು ಬಿಟ್ಟು ಹೋಗಿಯೇ ಇರೋದಿಲ್ಲ.[ಮುದ್ದಿನ ಮಳೆಮಾಸ ಜೂನಿನಲ್ಲೊಂದು ಲಹರಿ]

ಮಲೆನಾಡಿನ ಮಳೆ 'ಒಂದೇ ಭಾವದ ಬೆಚ್ಚನೆಯ ಗೂಡಲ್ಲ. ಕೇವಲ ಕಪ್ಪು ಬಿಳುಪಿನ ಒಡನಾಡಿಯಲ್ಲ. ಅದೊಂದು ಕಾಡುವ ವರ್ಣಗಳ ಪದವಾಗಿಸುವ, ನುಡಿವ ಪದಗಳ ಪದ್ಯವಾಗಿಸುವ, ಪದ್ಯಕ್ಕೊಂದು ಖಗ-ಮಿಗಗಳ ಹೆಜ್ಜೆ ಮೂಡಿಸುವ ಕವಿತ್ವ ಭಾವ'. ಒಟ್ಟಿನಲ್ಲಿ 'ರವಿ ಕಾಣದ್ದನ್ನು ಕವಿ ಕಂಡ' ಎಂಬ ಮಾತನ್ನು ನೈಜವಾಗಿಸುವ ಸ್ವಚ್ಛಂದ ತಾಣವಾದ ಇದು ಇಹಲೋಕದ ಭಾವ ತೊರೆದು, ಮಾಯಾಲೋಕದಲ್ಲಿ ವಿಹರಿಸುವಂತೆ ಮಾಡುವ ನಿನಾದದ ಕಾಲವೇ ಮಲೆನಾಡ ಮಳೆಗಾಲ.
ಮಲೆನಾಡಿನ ಮಳೆ ಕೇವಲ ಜರಡಿ ರೀತಿಯ ಮಳೆಯಲ್ಲ. ಚಿಟಿಪಿಟಿ ಸುರಿವ ಸಣ್ಣ ಸೋನೆಯೂ ಅಲ್ಲ. ಕ್ಷಣ ಕ್ಷಣಕ್ಕೂ, ದಿನ ದಿನಕ್ಕೂ ನಾನಾ ರೂಪ ತಳೆಯುವ ಇದರಲ್ಲಿ ಕೊಡೆ ಹಿಡಿದು ನಡೆದರೆ, ಕೊಡೆ ಒಂದು ಕಡೆ, ನಾವೊಂದು ಕಡೆಯಾಗಿ, ಉಧೋ ಎಂದು ಸುರಿವ ಮಳೆಗೆ, ಹೊಡೆಯುವ ಭಾರೀ ಚಳಿಗೆ ಬೆದರಿ ವಾಡೇ(ಮನೆ) ಸೇರಿರ್ತೇವೆ. ಅಷ್ಟು ಜೋರುರಿತ್ತೆ ಇಲ್ಲಿ ಮಳೆಗಾಲ.[ಜೋಗ ಮೈದುಂಬಿದೆ, ಹೋಗೋಣ ಬರ್ತೀರಾ ಆಕಡೆಗೆ]

ಅದಕ್ಕೆ ಮಲೆನಾಡಿನಲ್ಲಿ, ನಗರದ ಬಣ್ಣ ಬಣ್ಣದ ಕೊಡೆ ಹಿಡಿದು ನಡೆಯದೆ, ತಲೆ ಮೇಲೆ ಒಂದು ಕಂಬಳಿ ಗುಪ್ಪೆ ಹಾಕ್ಕೊಂಡು, ಇಡೀ ಊರು, ಗದ್ದೆ, ತೋಟ, ಗುಡ್ಡ-ಬೆಟ್ಟವನ್ನೆಲ್ಲಾ ಸರಾಗವಾಗಿ ಸುತ್ಕೊಂಡು ಬರ್ತಾರೆ ನಮ್ಮ ಮಲೆನಾಡಿಗರು. ಬಳಿಕ ಅದು ಒದ್ದೆಯಾಗಿದ್ದಲ್ಲಿ ಕೆಂಡದ ಒಲೆಯ ಮೇಲಿಂದ ಸುಮಾರು ಒಂದು ಅಥವಾ ಎರಡು ಅಡಿ ಎತ್ತರದಲ್ಲಿ ತೂಗುವ ಬಿದಿರಿನ ಬೊಂಬುಗಳ ಮೇಲೆ ಹಾಕಿ ಒಣಗಿಸಿಕೊಂಡು ರಾತ್ರಿ ಹೊದ್ದು ಮಲಗಲು ಅಣಿಯಾಗುವ ಇದು, ಮರುದಿನದ ಮಳೆಗೂ ತಯಾರಾಗುತ್ತದೆ ನಮ್ಮ ಈ ಕೊಡೆ.
ಮಲೆನಾಡಿನ ಈ ವಿಭಿನ್ನ ಕಂಬಳಿ ಹೊದಿಕೆ ಎದುರು, ನಗರದ ಬಣ್ಣದ ಕೊಡೆಗಳು, ತ್ರೀ ಫೋಲ್ಡಿಂಗ್, ಟು ಫೋಲ್ಡಿಂಗ್ ಛತ್ರಿಗಳು ತಲೆತಗ್ಗಿಸುತ್ತದೆ. ಅಷ್ಟು ಚಂದ ಈ ಕಪ್ಪನೆಯ, ಗುಪ್ಪನೆಯ ಹೊದಿಕೆ. ನಮ್ಮ ನಗರದ ಕೊಡೆಗಳೋ ತಲೆ ಒದ್ದೆಯಾಗಬಾರದೆಂದು ಹಿಡಿದುಕೊಂಡರೆ, ಮೈಯೆಲ್ಲಾ ತೊಯ್ಯುತ್ತದೆ, ಮೈ ಒದ್ದೆಯಾಗಬಾರದೆಂದು ಹಿಡಿದುಕೊಂಡರೆ ಎಲ್ಲವೂ ಹಸಿಯಾಗಿ ಯಾವುದಕ್ಕೂ ಆಗದೇ ಒಂದು ರೀತಿಯ ಹಿಂಸೆ ಆಗುವಂತೆ ಮಾಡುತ್ತದೆ.[ಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ']

ಈ ಮಲೆನಾಡಿನ ಕಂಬಳಿ ಹೊದಿಕೆಯು ಕೇವಲ ಮಳೆಯಿಂದ ರಕ್ಷಣೆ ನೀಡುವುದರ ಜೊತೆಯಲ್ಲಿ ಚಳಿಯಿಂದ ನಡುಗುವುದನ್ನು ಕಡಿಮೆ ಮಾಡುವುದಲ್ಲದೇ ಬೆಚ್ಚನೆಯ ಭಾವವನ್ನು ಮೂಡಿಸುತ್ತದೆ. ಅಷ್ಟೇ ಅಲ್ಲಾರೀ...ಇದು ಒಂದು ಪರಿಸರ ಸ್ನೇಹಿಯೂ ಹೌದು. ಮಲೆನಾಡಿಗರು ಪರಿಸರ ಸ್ನೇಹಿಗಳು, ಪ್ರಕೃತಿಯ ಕಂದಮ್ಮಗಳು ಎನ್ನುವುದಕ್ಕೂ ಇದು ಸಾಕ್ಷಿ.
ನಗರದಲ್ಲಿ ವರ್ಷಕ್ಕೆ ಒಂದರಂತೆ ಅಥವಾ ಎರಡು ಮೂರು ಛತ್ರಿಗಳನ್ನು ಕೊಂಡು ಅದು ಹಾಳಾದರೆ, ಮತ್ತೊಂದು ಖರೀದಿಸಿ ಮನೆಯಲ್ಲಿ ತುಕ್ಕು ಹಿಡಿಯುವಂತೆ ಮಾಡಿ, ಮನೆಯ ಹೊರಗೆ ಮೂಲೆಯಲ್ಲಿ ಎಸೆದು ಪರಿಸರ ನಾಶದಲ್ಲಿ ಸಣ್ಣ ಪಾತ್ರ ವಹಿಸುತ್ತದೆ ಈ ನಗರದ ಕೊಡೆಗಳು. ಆದರೆ ಮಲೆನಾಡ ಕಂಬಳಿಯು ಮಳೆಗಾಲದಲ್ಲಿ ಕೊಡೆಯಾದರೆ, ಬೇರೆಲ್ಲಾ ಕಾಲದಲ್ಲಿ ಹೊದಿಕೆಯಾಗಿ, ಛತ್ರಿಯಾಗಿ, ಹಾಸಿಗೆಯಾಗಿ, ಚಾಪೆಯಾಗಿ ಹೀಗೆ ನಾನಾ ರೀತಿಯಲ್ಲಿ ಬಳಕೆಯಾಗುತ್ತದೆ ಈ ಮಲೆನಾಡ ಕೊಡೆ.[ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನ!]

ಹಲವಾರು ವರ್ಷಗಳ ಕಾಲ ಜೀವಿತಾವಧಿ ಇರುವ ಇದನ್ನು ನಾವೆಲ್ಲಾ ಮಳೆಗಾಲದಲ್ಲಿ ಹೊದ್ದು 'ಮಲೆನಾಡ ಕೊಡೆ, ಹೊದ್ದು ನಡೆ, ಬೆಚ್ಚನೆ ಭಾವ ಪಡೆ, ಇರಲಿ ಪರಿಸರ ಸ್ನೇಹಿ ನಡೆ ಎಂದು ಹಾಡುತ್ತಾ, ಮಲೆನಾಡಿಗರಾಗೋಣ, ಪರಿಸರ ಸ್ನೇಹಿಗಳಾಗೋಣ ಏನಂತೀರಾ?












Click it and Unblock the Notifications