ಕ್ರೈಸ್ತರಿಗಾಗಿಯೇ ದೊಡ್ಡವೀರರಾಜೇಂದ್ರ ನಿರ್ಮಿಸಿದ ಅನ್ನಮ್ಮ ಚರ್ಚ್
ಸುಮಾರು ಇನ್ನೂರ ಇಪ್ಪತ್ತನಾಲ್ಕು ವರ್ಷಗಳ ಹಿಂದೆ ರಾಜ ದೊಡ್ಡವೀರರಾಜೇಂದ್ರ ಕ್ರೈಸ್ತರಿಗಾಗಿ ನಿರ್ಮಿಸಿದ ಇಗರ್ಜಿಯೊಂದು ಕೊಡಗಿನಲ್ಲಿದೆ ಎಂದರೆ ಅಚ್ಚರಿಯಾಗಬಹುದು. ಅಷ್ಟೇ ಅಲ್ಲ ಯಾವುದಪ್ಪಾ ಆ ಇಗರ್ಜಿ ಎಂಬ ಕುತೂಹಲವೂ ಮೂಡಬಹುದು. ಅದು ಬೇರಾವುದೂ ಅಲ್ಲ ವೀರಾಜಪೇಟೆಯಲ್ಲಿ ಗಗನಚುಂಬಿಯಾಗಿ ಕಣ್ಮನಸೆಳೆಯುವ ಸಂತ ಅನ್ನಮ್ಮ ಚರ್ಚ್.
1791-92ರಲ್ಲಿ ಮೂರನೇ ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನಿಂದ ಬಂಧಿತರಾಗಿದ್ದ ಸುಮಾರು 700 ಕ್ರೈಸ್ತರು ಅಲ್ಲಿಂದ ತಪ್ಪಿಸಿಕೊಂಡು ಕೊಡಗಿಗೆ ಬರುತ್ತಾರೆ. ಹಾಗೆ ಬಂದವರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿ, ಹೊಸದಾಗಿ ಸ್ಥಾಪಿಸಲ್ಪಟ್ಟಂತಹ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡುತ್ತಾನೆ. ಅಲ್ಲದೆ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರ ನವೆಂಬರ್ 10ರಂದು ಕ್ರೈಸ್ತರಿಗಾಗಿಯೇ ಒಂದು ಇಗರ್ಜಿ ಕಟ್ಟಿಸುತ್ತಾನೆ. ಅದುವೇ ಸಂತಅನ್ನಮ್ಮ ಚರ್ಚ್ ಇದ್ದು ವಾಸ್ತುಶಿಲ್ಪದಲ್ಲಿ ಗಾಥಿಕ್ ಶೈಲಿಯಲ್ಲಿದ್ದು, 150 ಅಡಿ ಎತ್ತರದ ಗೋಪುರವನ್ನು ಹೊಂದಿದೆ.[ಕುಸ್ವಾರ್ ಇಲ್ಲದೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಹೆಚ್ಚದು]
ಇಲ್ಲಿ ನಾವು ಕಲಾವೈಭವ ಸೇರಿದಂತೆ ಹಲವು ಮಹತ್ವ ಸಾರುವ ಸನ್ನಿವೇಶಗಳನ್ನು ಕೂಡ ನಾವು ಕಾಣಬಹುದಾಗಿದೆ. ಚರ್ಚ್ ನ ಸಮೀಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್ ನ "ಲೂರ್ದ್" ಮಾದರಿಯ ಸುಂದರ ಕೃತ್ರಿಮ ಗವಿಯಿದೆ.
ಇಲ್ಲಿಯ ಮತ್ತೊಂದು ವಿಶೇಷತೆ ಏನೆಂದರೆ ಸಾಲ್ವದೋರ್ ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳಿವೆ. ಅವುಗಳನ್ನು ಗೋಪುರದಲ್ಲಿ ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ.
ಚರ್ಚ್ ನ ಒಳಭಾಗದ ಪಶ್ಚಿಮ ಭಿತ್ತಿ(ಗೋಡೆ)ಯ ಬಳಿ ಬಲಿಪೀಠದ ಸುಂದರ ವಿನ್ಯಾಸವಿದೆ ಇಲ್ಲಿ ಚರ್ಚ್ ನಿರ್ಮಾಣಕ್ಕೆ ಕಾರಣನಾದ ದೊಡ್ಡವೀರರಾಜೇಂದ್ರ ನೀಡಿರುವ 'ವಿ' ಸಂಕೇತ ಹೊಂದಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ) ಇವೆ.[ಸಂತಾಕ್ಲಾಸ್ ವೇಷ ಧರಿಸಿ ಕ್ರಿಸ್ಮಸ್ ಶುಭಾಶಯ ಹೇಳುವ ಮಂಗಳೂರಿನ ಸಂತ]
ಚರ್ಚ್ ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ 'ಪಿಯಾತ್' ಶಿಲ್ಪದ ಮಾದರಿಯ 'ಪಿಯಾತ್' ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು. ಮೇರಿ ತಾಯಿಯ ನಾಭಿ, ಏಸುವಿನ ನಾಭಿಗೆ ಸನಿಹವಿರುವಂತಹ ಭಾವ, ತಾಯಿಯ ಹೊಕ್ಕಳ ಬಳ್ಳಿಯ ಅಜನ್ಮ ಸಂಬಂಧದ ಸಂಕೇತದಂತೆ ತೋರುವ ಕರುಣಾರಸದ ಚಿತ್ರ ಇದಾಗಿದೆ. 'ಪಿಯಾತ್' ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿಯ ಮುಖ ತೋರುವ ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ ಸಂತ ಸಭಾಸ್ಟಿಯನ್ನನ ಸ್ಮಾರಕ ಶಿಲ್ಪ ಕಂಡು ಬರುತ್ತದೆ.[ಕ್ರಿಸ್ಮಸ್ ಹಬ್ಬದ ಸಡಗರ ಹೆಚ್ಚಿಸಲು ಆಂಡ್ರಾಯ್ಡ್ ಆಪ್]
ಏಸುವಿನ ಶಿಲುಬೆಗೆ ಏರಿಸುವ ಹಾದಿಯನ್ನು ತೋರಿಸುವ 14 ಕಾಷ್ಠ ಶಿಲ್ಪಗಳು ಸಭಾಂಗಣದ ಗೋಡೆ ಮತ್ತು ಕಂಬಗಳ ನಡುವೆ ಇದ್ದು ಮನೋಜ್ಞವಾಗಿವೆ. ಪ್ರತಿ ಕಾಷ್ಠ ಶಿಲ್ಪಗಳು ಏಸುವಿನ ಹಾದಿಯನ್ನು ಲೋಕಕ್ಕೆ ವಿವರಿಸುತ್ತದೆ.
ಒಟ್ಟಾರೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಸಂತ ಅನ್ನಮ್ಮ ಚರ್ಚ್ ನಿಜಕ್ಕೂ ಕೊಡಗಿಗೊಂದು ಮುಕುಟಮಣಿ ಎಂದರೆ ತಪ್ಪಾಗಲಾರದು.