ಕುವೆಂಪು ನಂತರ ತೇಜಸ್ವಿ ತಂತ್ರಾಂಶ ಸಿಗಲಿ

ಯಾರು ಬಂದಿದ್ದರು?: ಕುವೆಂಪು ತಂತ್ರಾಂಶದ ಸುಧಾರಿತ ಆವೃತ್ತಿ 2.0 ಬಿಡುಗಡೆ ಸಮಾರಂಭಕ್ಕೆ ಕನ್ನಡ ವಿವಿ ಕುಲಪತಿ ಡಾ. ಎ. ಮುರಿಗೆಪ್ಪ, ವಿಶ್ರಾಂತ ಕುಲಪತಿಗಳಾದ ಚಿದಾನಂದ ಗೌಡ, ಚಂದ್ರಶೇಖರ ಕಂಬಾರ, ಮೈಸೂರು ಜೆಸಿಇಸಿ ಕಾಲೇಜಿನ ಪ್ರಾಧ್ಯಾಪಕರಾದ ಟಿಎನ್ ನಾಗಭೂಷಣ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಾಹಿತಿ ಎಂಎಚ್ ಕೃಷ್ಣಯ್ಯ ಉಪಸ್ಥಿತರಿದ್ದರು.
ಬಿಡುಗಡೆಗೊಂಡ ತಂತ್ರಾಂಶಗಳು: ಕುವೆಂಪು ತಂತ್ರಾಂಶ ಆವೃತ್ತಿ 2.0, Win NT 1.0, ಯೂನಿಕೋಡ್ 1.0
ಈ ತಂತ್ರಾಂಶ ಉಚಿತವೇ: ಈ ತಂತ್ರಾಂಶ ವಿಶ್ವವಿದ್ಯಾಲಯದ ವೆಬ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ಹಾಗೂ ಈ ತಂತ್ರಾಂಶವನ್ನು ಓಪನ್ ಸೋರ್ಸ್ ಆಗಿ ನೀಡುತ್ತಿದ್ದೇವೆ. source on demand ನೀಡುವ ಬದಲು ಓಪನ್ ಸೋರ್ಸ್ ಆಗಿ ಏಕೆ ನೀಡಬಾರದು ಎಂದು ಮಾಧ್ಯಮದವರು ಕೇಳಿದ್ದು, ನಿಜ. ನಾವು ಓಪನ್ ಸೋರ್ಸ್ ಆಗಿ ಸಂಪೂರ್ಣ ಕೋಡ್ ನೀಡಲು ಸಿದ್ಧ ಎಂದು ಪ್ರೊ. ಟಿಎನ್ ನಾಗಭೂಷಣ ಅವರು ಹೇಳಿದರು.
ಭಾಷಣಗಳ ಪ್ರಮುಖಾಂಶ:
ನಾಗಭೂಷಣ: ಮೊದಲ ಆವೃತ್ತಿ ಬಿಡುಗಡೆಯಾಗಿ ನಾಲ್ಕು ವರ್ಷ ಕಳೆದಿದೆ. ಜನ ಸಾಮಾನ್ಯರಿಗೆ ಕನ್ನಡ ತಲುಪಬೇಕು. ಇದು ಒಬ್ಬರ ಸ್ವತ್ತಲ್ಲ. ದಿನ ಬಳಕೆಯಲ್ಲಿ ಕನ್ನಡ ಬಳಸಿದರೆ ಮಾತ್ರ ಕನ್ನಡ ಉಳಿಸಬಹುದು ಎಂಬುದು ತೇಜಸ್ವಿ ಅವರ ಮಾತು ಹಾಗೂ ಆಶಯ. ಸದ್ಯಕ್ಕೆ ಈ ತಂತ್ರಾಂಶ ವಿಂಡೋಸ್ ಆವೃತ್ತಿಯ XP, ವಿಂಡೋಸ್ 7 ನಲ್ಲಿ ಲಭ್ಯವಿದೆ. ಲೈನಕ್ಸ್ ಆವೃತ್ತಿ ಮುಂದೆ ಹೊರ ತರಲಾಗುವುದು. ಮೊಬೈಲ್ ಮೂಲಕ ರೈತರಿಗೆ ಎಸ್ ಎಂಎಸ್ ಸಂದೇಶ ಕಳಿಸುವುದು. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಸಹಕಾರದಿಂದ ಮೊಬೈಲ್ ನಲ್ಲಿ ಕನ್ನಡ ಬಳಕೆ ಹೆಚ್ಚಿಸುವುದು. ಆಂಡ್ರ್ಯಾಡ್ ಸಾಧಕ ಬೆಂಬಲಿತ ತಂತ್ರಾಂಶ ರೂಪಿಸುವುದು ಮುಂದಿನ ಯೋಜನೆ ಎಂದರು.
ಚಿರಂಜೀವಿ ಸಿಂಗ್ : ಪುಣೆ, ಪಟಿಯಾಲ ಹಾಗೂ ಹೈದರಾಬಾದ್ ವಿವಿಯಲ್ಲಿ ಟೆಕ್ಸ್ಟ್ ಕನ್ವರ್ಷನ್ ಕೆಲಸ ನಡೆಯುತ್ತಿದೆ. ಏಕಕಾಲದಲ್ಲಿ ಅನೇಕ ಫೈಲ್ ಗಳನ್ನು ಅನುವಾದಿಸಲು ಹಾಗೂ ಬೇರೆ ಬೇರೆ ಭಾಷೆಗಳನ್ನು ಕನ್ನಡಕ್ಕೆ ಅನುವಾದಿಸಲು ಬಹು ಭಾಷಾ ಪರಿವರ್ತಕ ಬೇಕಿದೆ. ಮೊದಲಿಗೆ ದ್ರಾವಿಡ ಭಾಷೆಗಳಲ್ಲಿ ಈ ಪ್ರಯೋಗ ಮಾಡಬಹುದು ಈ ಬಗ್ಗೆ ಹಂಪಿ ವಿವಿ ಗಮನ ಹರಿಸಲಿ. ಈಗ ಎಸ್ ಎಂಎಸ್ ನಲ್ಲಿ ಬಳಕೆಯಾಗುವ ಭಾಷೆಗೆ ಮಾನ್ಯತೆ ಸಿಕ್ಕಿದ್ದು ಸಂಶೋಧನೆ ಕೂಡಾ ನಡೆದಿದೆ. ಮೊಬೈಲ್, ಐಪ್ಯಾಡ್, ಪಾಮ್ ಟಾಮ್ ನಲ್ಲಿ ಕನ್ನಡ ಓದುವುದರ ಜೊತೆಗೆ ಕೀ ಮಾಡುವಂತಾಗಬೇಕು ಎಂದರು.
ತಂತ್ರಾಂಶ ಕ್ಷೇತ್ರದಲ್ಲಿ ಕನ್ನಡ ಗಟ್ಟಿಯಾದರೆ ಮಾತ್ರ ಕನ್ನಡ ಬೆಳೆಯುತ್ತದೆ. ಸಮ್ಮೇಳನ, ಸಭೆ, ಸಮಾರಂಭದಿಂದ ಅಲ್ಲ ಎಂದು ಕಂಬಾರರು ಅಭಿಪ್ರಾಯಪಟ್ಟರು. ಮೊಬೈಲ್ ಕಂಪೆನಿಗಳ ಜೊತೆ ವಿವಿ ಸಂಪರ್ಕ ಸಾಧಿಸಿ ಒಪ್ಪಂದ ಮಾಡಿಕೊಂಡು ಕನ್ನಡ ಬಳಕೆ ಹೆಚ್ಚಿಸಲಿ ಎಂದರು. ಈ ಕಾರ್ಯಕ್ಕೆ ಆರ್ಥಿಕ ನೆರವು ನೀಡಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಚಂದ್ರು ಘೋಷಿಸಿದರು.
ಕುಲಪತಿ ಮುರಿಗೆಪ್ಪ ಸಾಫ್ಟ್ ವೇರ್ ರೂಪಿಸಲು ನೆರವಾದ ಹಾಸನದ ತಂತ್ರಜ್ಞರಾದ ಆನಂದ್, ಮಂಜಾಚಾರಿ, ಸುಧೀರ್ ಅವರನ್ನು ಸನ್ಮಾನಿಸಿದರು.
ಮುಂಬರುವ ಯೋಜನೆಗಳು:
* ತಂತ್ರಾಂಶದೊಂದಿಗೆ ಕನ್ನಡ ಕಾರ್ಪಸ್ ನಿರ್ಮಾಣ ಯೋಜನೆ
* ಇ-ನಿಘಂಟು(ಸುಮಾರು 1 ಕೋಟಿ ಪದ ಸಂಗ್ರಹ), ಸಮಗ್ರ ಕನ್ನಡ ವ್ಯಾಕರಣ ರಚನೆ.
* ಆನ್ಲೈನ್ ಡಿಕ್ಷ್ನರಿ, ಕನ್ನಡ ಒಸಿಆರ್ ತಂತ್ರಾಂಶ,
* ಸಂಭಾಷಣೆಯನ್ನು ಶಬ್ದರೂಪದಲ್ಲಿ ಪರಿವರ್ತಿಸುವ ತಂತ್ರಾಂಶ, ಸ್ಪೆಲ್ಲಿಂಗ್ ಚೆಕ್ ಭಾಷಾಂತರ
* ಯೂನಿಕೋಡ್ ಎಲ್ಲಾ ಕೀಲಿ ಮಣೆ ಮಾದರಿಗೆ ಹೊಂದಿಸುವುದು
* ಡಿಸೈನ್ ಫಾಂಟ್ ವಿನ್ಯಾಸ, ಮೊಬೈಲ್ ನಲ್ಲಿ, ಬ್ಲಾಗ್ ಗಳಲ್ಲಿ ಕನ್ನಡ ಬಳಕೆ ಹೆಚ್ಚಿಸುವುದು.
77ನೇ ಕನ್ನಡ ನುಡಿಜಾತ್ರೆ ಆರಂಭವಾಗುವ ಮುನ್ನ ಕುವೆಂಪು ಕನ್ನಡ ತಂತ್ರಾಂಶ ಲೋಕಾರ್ಪಣೆಗೊಂಡಿರುವುದು ಶುಭ ಸೂಚಕವಾಗಿದೆ. ಆದರೆ, ದೊಡ್ಡ ಮಟ್ಟದ ಪ್ರಚಾರ ಸಿಗದೆ ಸರಳವಾಗಿ ಸಮಾರಂಭ ನಡೆದರೂ, ಅದರ ಪ್ರಯೋಜನ ವ್ಯಾಪಕವಾಗಿ ಎಲ್ಲರಿಗೂ ಸಿಗಲಿ.












Click it and Unblock the Notifications