ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ, ಸಂಗೀತ

By Staff
|
Google Oneindia Kannada News

ಯಾವತ್ತಿನವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ, ಯಾವತ್ತಿನವರೆಗೆ ಕನ್ನಡ ಚಲನಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ, ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.

* ಅರ್ಚನಾ ಹೆಬ್ಬಾರ್, ಬೆಂಗಳೂರು

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ಯಾತನೆಯನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ. ಕೆಲವು ದಿನಗಳ ಹಿಂದಿನ ಮಾತು. ಆಫೀಸಿನಿಂದ ಮನೆಗೆ ಬರುತ್ತಿರುವಾಗ "ಮಾನಸ ಸರೋವರ" ಎಂಬ ಹಳೆಯ ಹಾಡು ಪ್ರಸಾರವಾಯಿತು. ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ. ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್.ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ. ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ, ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.

ಐತ್ತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ)...ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.

ಐತ್ತಲಕಡಿ ಬಾರೆ... ಲಕ್ಕ ಆಗುಮ, ಪಾಠ ಓದ್ಕುಮ, ಊಟ ಹಾಕುಮ, ಕಟ್ಟಿಕೊ... ಯಮ ಯಮ ಮುದ ಚುಮ... ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ. ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು. ಅಂತೂ ಸುಮಾರು ಐದು ನಿಮಿಷಗಳ ತನಕ ಈ ಹಾಡನ್ನು ಸಹಿಸಿಕೊಂಡೆ. ಯಾಕೆ ಹೊಗಳ್ತೀಯ, ಹೈಟು ಜಾಸ್ತಿ ಮಾಡ್ತೀಯ.... ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು. ನಾನು ಚಿಂತಿಸತೊಡಗಿದೆ. ವರ್ಷದಲ್ಲಿ ಬರುವ ಸುಮಾರು 500ರಿಂದ 600 ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ? ಯಾಕೆ? ಇದೀಗ ಮುಂದಿನ ಹಾಡಿನ ಸರದಿ.

ಕಮ್ ಓನ್ ಐ ಸೇ ...ಕಮ್ ಓನ್ ಐ ಸೇ... ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು. ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು. ಸೇಜ ಸೇಜ ಬಾರೆ, ಮವ್ವೆ ಮವ್ವೆ ಬಾರೆ, ಅಲೆ ಕೆಂಚಿ ತಾರೆ ಅರದೋ.... ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು. ಎಫ್.ಎಮ್. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ. ಆರ್.ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ 'ಸುಸಂಸ್ಕೃತ' ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ.

ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು. ಅದರ ಸಾಲುಗಳು ಹೀಗಿದ್ದವು. ಲೇಟಾಗಿ ಬರುವುದಿಲ್ಲ.. ಸೋರಿ ಕೇಳುವುದಿಲ್ಲ.. ಆಸಿಡ್ ಹಾಕುವುದಿಲ್ಲ.

ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು. ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.

ಹೊಡಿಮಗ, ಹಳೆ ಪಾತ್ರೆ, ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ. ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತಿವೆ.

1) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ : ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ. ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ. ಉದಾಹರಣೆ : "ನಮ್ದೇ ಈ ಲೋಕ" ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.

2) ಕಾಡುವ ಕನ್ನಡ ಶಬ್ದಗಳ ಕೊರತೆ : ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ. ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ : ಸ್ಟ್ರಾಬೆರಿ ಕೆನ್ನೆಯವಳೇ... ಕ್ಯಾಡ್ಬರೀ ಹುಡುಗನೇ...

ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ.."ಅಸು ನೀಗಿತು" ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. "ಅಸು ನೀಗಿತು" ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳಿವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.

3) ಕಥಾವಸ್ತುವಿನ ಕೊರತೆ : ಇತ್ತೀಚೆಗೆ ಹೊರಬರುತ್ತಿರುವ ಶೇ.99ರಷ್ಟು ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ. ಕಾರಣಗಳು ಹಲವಾರು.
ಅ) ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ, ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು.
ಬ) ಮುಜುಗರವಾಗುವ ದೃಶ್ಯಗಳ ಭರಾಟೆ.
ಕ) ಅಸಹಜತೆ : ಸನ್ನಿವೇಶಗಳ ಅಸಹಜತೆ, ಪಾತ್ರಗಳ ಅಸಹಜತೆ, ಕಥಾ ಹಂದರದ ಅಸಹಜತೆ, ನಟನೆಯ ಅಸಹಜತೆ.

ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜ್ರಂಭಿಸುತ್ತಿವೆ.
ಅ) ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ.
ಬ) ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.

ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ, ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಃ ಮಾನಸ ಸರೋವರ, "ಸಾಗಲಿ ತೇಲು ತರಂಗದೊಳು.." ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ, ಸಾಹಿತ್ಯದ ಬುನಾದಿ.

4) ಬದಲಾದ ಮಾರುಕಟ್ಟೆ : ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ. ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ. ಇತ್ತೀಚೆಗಿನ ಯುವ ಲೇಖಕರೂ, ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.

ಯಾವತ್ತಿನವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ, ಯಾವತ್ತಿನವರೆಗೆ ಕನ್ನಡ ಚಲನಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ, ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು. ಜೈ ಕನ್ನಡಾಂಬೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X