Get Updates
Get notified of breaking news, exclusive insights, and must-see stories!

ನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)

Mysore Dasara doll exhibition
ಮೈಸೂರು ದಸರಾ...ಎಷ್ಟೊಂದು ಸುಂದರಾ...

ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ ಹಬ್ಬ.

ಗೊಂಬೆ ಇಟ್ಟಿದೀರಾ....ನವರಾತ್ರಿಯಲಿ ಜರಿಲಂಗ ತೊಟ್ಟು, ದಂಡು ಹುಡುಗರ ಹಿಂಡು ಬೀದಿ ಬೀದಿಗಳಲಿ ಮೈಸೂರಿಗರ ಮನೆಗೆ ನುಗ್ಗುತ್ತಿತ್ತು. ದೂರ ನಿಲ್ಲಿ, ಮುಟ್ಟಬೇಡಿ ಎನ್ನುತ್ತಾ ಕೋಡುಬಳೆ, ಸೌತೆಕಾಯಿ, ಕಡಲೆಪುರಿ ನೀಡುತ್ತಿದ್ದರು ಮನೆಯ ಹಿರಿಯರು. ಅಲ್ನೋಡೇ ಆ ಬೊಂಬೆ ಅಷ್ಟು ಚೆನ್ನಾಗಿದೆ, ಹ್ಯಾಟು-ಬೂಟು ತೊಟ್ಟ ಸೈನಿಕ, ಮದುವೆ ದಿಬ್ಬಣ, ಅಂಬಾರಿ ಆನೆ, ಶೆಟ್ಟರ ಅಂಗಡಿ ಬೊಂಬೆಗಳನು ನೋಡಿ ದಣಿಯದೆ, ನವರಾತ್ರಿಯಲಿ ದಿನವೂ ಸಂಜೆ ದಂಡ-ಪಿಂಡ ಯಾತ್ರೆಗೆ ಸಾಗುತ್ತಿತ್ತು. ದಿನವೂ ಒಬ್ಬೊಬ್ಬರ ಮನೆಯಲ್ಲೂ ಜೋಡಿಸಿಡುತ್ತಿದ್ದ ಗೊಂಬೆಗಳು ನಮಗೆ ರಾಮಾಯಣ, ಕೃಷ್ಣಲೀಲಾ, ಅಂಗಡಿಗಳು, ರಾಜ ಪರಂಪರೆಗಳ ಕಥೆಗಳ ಸಾರುತ್ತಿದ್ದವು. ಕನಸುಗಳಲಿ ಕಾಡುತ್ತಿದ್ದವು. ಅವು ನೀತಿಪಾಠವಾಗಿತ್ತು. ಅದು ಖಂಡಿತ ದಂಡಯಾತ್ರೆಯಾಗಿರಲಿಲ್ಲ. ಹೊಸ ವರುಷಕೆ ಹೊಸ ಹರುಷವ, ಭಾವ, ಪರಿಚಯ, ಹೊಸತನಗಳ ಯಾತ್ರೆ ಅದಾಗುತ್ತಿತ್ತು. ಅಣ್ಣ(ಅಪ್ಪ) ಪ್ರತಿ ದಿನ ಹೇಳುತ್ತಿದ್ದ ಕಥೆಗಳಿಗಿಂತಾ ಈ ಬೊಂಬೆ ತೋರಿಸಿ ಹೇಳುತ್ತಿದ್ದ ಕಥೆಗಳು ಆ ಪಾತ್ರಗಳನು ಜೀವಂತವಾಗಿಸುತ್ತಿದ್ದವು.

ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ದಸರಾದಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿದ್ದ, ಅಂಗಡಿಗಳ ಶೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಜೀವ ತಳೆದು ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ. ಇಂದಿನ ಪೀಳಿಗೆಗೆ ಕೆಲಸ, ಮನೆ ಚಿಕ್ಕದು, ವೇಳೆ ಇಲ್ಲ ಎಂದು ನೂರು ಕಾರಣಗಳು ವಕ್ಕರಿಸಿದರೂ ಇನ್ನೂ ಮನೆಗಳಲ್ಲಿ ಪಟ್ಟದ ಗೊಂಬೆ (ಮರಪಾಚಿಗೊಂಬೆ) ಕೂರಿಸುವ ಪದ್ದತಿ ಬಹುತೇಕ ಮನೆಗಳಲ್ಲಿ ಇದೆ. ಗೊಂಬೆ ಇಡದೇ ಹೋದರೂ ನಮ್ಮ ಜನರ ಗೊಂಬೆ ಪ್ರೀತಿ ಕಮ್ಮಿ ಆಗಿಲ್ಲ. ಮನೆಯ ಶೋಕೇಸ್‌ಗಳಲ್ಲಿ ಹೊಸ ಹೊಸ ಗೊಂಬೆಗಳನು, ಆಂಟಿಕ್ ಕಲೆಕ್ಷನ್ ಎಂದು ಅಲಂಕರಿಸಿಡುವ ಹವ್ಯಾಸ ಬೆಳೆಯುತ್ತಿದೆ.

ಗೊಂಬೆಗಳ ಇತಿಹಾಸ ದೊಡ್ಡದ್ದು. ಐದು ಸಾವಿರ ವರುಷಗಳ ಪುರಾತನ ಗೊಂಬೆಗಳು ಹರಪ್ಪ ಹಾಗೂ ಮೊಹೆಂಜೋದಾರೋದಲ್ಲಿ ದೊರೆತ ಎತ್ತಿನಗಾಡಿ, ಹಸು, ಪಕ್ಷಿಗಳ ಮಣ್ಣಿನ ಗೊಂಬೆಗಳು. ಈಜಿಪ್ತಿನ ಸಮಾಧಿಗಳಲ್ಲಿ ನಾಲ್ಕು ಸಾವಿರ ವರುಷಗಳ ಹಿಂದಿನ ಮರದ ಗೊಂಬೆಗಳು ದೊರೆತಿವೆ. ಬ್ಯಾಬಿಲೋನಿನಲ್ಲಿ ದೊರೆತ ಮಣ್ಣಿನ ಬೊಂಬೆ ಕೈ-ಕಾಲು ಆಡಿಸುವಂತೆ ಮಾಡಿದ್ದರಂತೆ.

ಕರ್ನಾಟಕದಲ್ಲಿ ಚನ್ನಪಟ್ಟಣ, ಶಿರಸಿ, ಹುಬ್ಬಳ್ಳಿ, ಕಿನ್ಹಾಳಗಳು ಗೊಂಬೆಗಳಿಗೆ ಪ್ರಸಿದ್ಧಿ. ಚನ್ನಪಟ್ಟಣದ ಗೊಂಬೆಗಳು ಹಾಲೇ ಮರದ ಅರಗಿನಗೊಂಬೆಗಳು. ಹಿಂದೆ ಚನ್ನಪಟ್ಟಣದಲ್ಲಿ "ಚಿತ್ರಗಾರರು" ಎಂದು ಕರೆಯಲ್ಪಡುತ್ತಿದ್ದ ಕಲಾವಿದರು ಮರದ ಮುಖವಾಡಗಳು, ದೇವತೆಗಳ, ಪ್ರಾಣಿಗಳ ಚಿತ್ರಗಳನ್ನು ಮರದಲ್ಲಿ ತಯಾರಿಸುತ್ತಿದ್ದರಂತೆ. ಬಾಬಾ ಸಾಹೇಬ್ ಮಿಯಾ ಎಂಬುವರು ಈ ಚಿತ್ರಗಾರರಿಗೆ ಸೂಕ್ತ ತರಬೇತಿ ನೀಡಿ ಚನ್ನಪಟ್ಟಣದ ಗೊಂಬೆಗಳನು ತಯಾರಿಸುವಲ್ಲಿ ಪರಿಣಿತಿ ನೀಡಿದ ರೂವಾರಿ.

ಭಾರತದಾದ್ಯಂತ ವಿವಿಧ ರಾಜ್ಯಗಳಲಿ ಗೊಂಬೆ ತಯಾರಿಕೆಗೆ ಬೆಲೆ ಇದೆ. ವಾರಣಾಸಿ, ಲಕ್ನೋ, ಮಥುರಾ. ರಾಜಸ್ಥಾನದಲ್ಲಿ ಕೆಸರು ಮಣ್ಣಿನಿಂದ, ಸಿಕ್ಕಿ ಎಂಬ ಹಸಿ ಹುಲ್ಲಿನಿಂದ ಮಾಡುತ್ತಾರೆ. ಇನ್ನೂ ಹಲವೆಡೆಗಳಲ್ಲಿ ಸಗಣಿ, ಮರದಹುಡಿ ಕಲೆಸಿ ಬೊಂಬೆ ಮಾಡಿ ನಂತರ ಬಣ್ಣ ಹಾಕುತ್ತಾರೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲಿ ಪಿತ್ ಎಂಬ ನೀರಿನಲ್ಲಿ ಬೆಳೆಯುವ ನಾರಿನಿಂದ ಗೊಂಬೆಗಳ ತಯಾರಿಸುತ್ತಾರೆ.

ಮರದ ಕೆತ್ತನೆ ಕೆಲಸಕ್ಕೆ ಒಡಿಸ್ಸಾ ಹೆಸರು ವಾಸಿ. ಆಂಧ್ರದ ಕೊಂಡಪಲ್ಲಿಯಲ್ಲಿ ಮಾಡುವ ಗೊಂಬೆಗಳು ಹೆಸರುವಾಸಿ. ಇಲ್ಲಿ ಮರದ ಹಲಗೆಗಳನ್ನು ಮೆಲ್ಲನೆ ಉರಿಯಲಿ ಕಾಯಿಸುತ್ತಾರೆ. ಅವುಗಳಲ್ಲಿನ ನೀರಿನಾಂಶ ಒಣಗಿದ ನಂತರ ಬಿಡಿ ಭಾಗಗಳನ್ನು ಕೆತ್ತಿ ಅವುಗಳನ್ನು ನಿಂಬೆಯ ಅಂಟಿನಿಂದ ಜೋಡಿಸುತ್ತಾರೆ. ನಂತರ ಮೇಕೆಯ ಬಾಲದ ಕೂದಲಿನಿಂದ ಮಾಡಿದ ಬ್ರಷ್‌ಗಳನ್ನು ಬಳಸಿ ಬಣ್ಣ ತುಂಬುತ್ತಾರೆ. ಆಂಧ್ರದ ನಿರ್ಮಲ್ ಎಂಬಲ್ಲಿ ಮರದ ತೊಗಟೆಗಳನು ಕಮ್ಮಿ ಉರಿಯಲಿ ಕಾಯಿಸಿ ಅವು ಒಣಗಿದ ನಂತರ ಚಿನ್ನದ ಬಣ್ಣದ ಮೆರುಗು ಹಾಕುತ್ತಾರೆ. ಈ ಮೆರುಗು ಎರಡು ಗಿಡಗಳ ರಸವನ್ನು ಹಿಂಡಿ ಎಣ್ಣೆ ಬೆರೆಸಿ ಮಾಡುತ್ತಾರೆ. ಬಹಳ ಹಿಂದೆ ಚಿನ್ನದ ಮೆರಗನ್ನು ಹಾಕಿ ಬೊಂಬೆಗಳು ತಯಾರಿಸುತ್ತಿದ್ದರಂತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+