‘ಪುಣೆ-ಫ್ರಾನ್ಸ್ ಬೇಡ, ಅನಂತಮೂರ್ತಿ ನೀವಿಲ್ಲೇ ಇರಿ’
*ದಟ್ಸ್ಕನ್ನಡ ಬ್ಯೂರೊ
‘ಪುಣೆ ಅಥವಾ ಫ್ರಾನ್ಸ್ಗೆ ಹೋಗುವ ಗೊಡವೆ ನಿಮಗೇಕೆ ? ನಿಮ್ಮ ಅಗತ್ಯ ಕರ್ನಾಟಕಕ್ಕೆ ಹೆಚ್ಚಾಗಿದೆ. ನೀವು ನಮ್ಮ ಮಾರ್ಗದರ್ಶಕರಾಗಿ ಬೆಂಗಳೂರಿನಲ್ಲಿಯೇ ಇರಬೇಕು..’
- ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಈ ಆಗ್ರಹಕ್ಕೆ ಅನಂತಮೂರ್ತಿ ತಮ್ಮ ಎಂದಿನ ನಗು ಬೀರಿದರು.
ಅದು,
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಯು.ಆರ್.ಅನಂತಮೂರ್ತಿ ಅವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ , ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಡಿ.27 ರ ಶುಕ್ರವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ. ಅಲ್ಲಿ ಅನಂತಮೂರ್ತಿ ಗೆಳೆಯರಿದ್ದರು, ಅಭಿಮಾನಿಗಳಿದ್ದರು, ಕುತೂಹಲಿಗಳಿದ್ದರು, ಒಟ್ಟಿನಲ್ಲಿ ಭರ್ತಿ ಜನ.
ಸಮಾರಂಭದಲ್ಲಿ ಮಾತನಾಡಿದ ಟಿ.ಎನ್.ಸೀತಾರಾಂ, ಕನ್ನಡ ಸಂಸ್ಕೃತಿ ಅಳಿವಿನ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ಕನ್ನಡದ ಮಹತ್ವದ ಚಿಂತಕರಾದ ಅನಂತಮೂರ್ತಿ ರಾಜ್ಯದಲ್ಲಿಯೇ ಇರಬೇಕು ಎಂದರು.
ಸಂಸ್ಕಾರದ ನಾರಾಣಪ್ಪನ ರೀತಿ ಬೇರೆಯವರಿಗೆ ಅನಗತ್ಯವಾಗಿ ನೋವುಂಟು ಮಾಡುತ್ತಿದ್ದ ಅನಂತಮೂರ್ತಿ, ಈಗ ಎಲ್ಲವನ್ನೂ ಒಪ್ಪಿಕೊಳ್ಳುವ ಮೂಲಕ ಪ್ರಾಣೇಶಾಚಾರ್ಯರಂತೆ ಮೃದುವಾಗಿದ್ದಾರೆ ಎಂದು ಸೀತಾರಾಂ ಕಿಚಾಯಿಸಿದರು.
ದಿಟ್ಟತನ ಕಳಕೊಂಡ ಅನಂತಮೂರ್ತಿ
ಸೀತಾರಾಂ ಅವರದು ಅನಂತಮೂರ್ತಿ ಪುಣೆಗೆ ಹೋಗುತ್ತಿರುವ ಚಿಂತೆಯಾದರೆ, ನಾಟಕಕಾರ ಕೆ.ಮರುಳ ಸಿದ್ಧಪ್ಪನವರಿಗೆ ಅನಂತಮೂರ್ತಿ ತಮ್ಮ ದಿಟ್ಟತನವನ್ನು ಬಿಟ್ಟುಕೊಡುತ್ತಿರುವ ಬಗ್ಗೆ ಆತಂಕ. ಜನಪ್ರಿಯತೆ ಲೆಕ್ಕಿಸದೆ ನಿಲುವುಗಳನ್ನು ಬಹಿರಂಗಗೊಳಿಸುವ ದಿಟ್ಟತನವನ್ನು ಅನಂತಮೂರ್ತಿ ಕಳಕೊಂಡಿದ್ದಾರೆ ಎಂದು ಮರುಳ ಸಿದ್ಧಪ್ಪ ಆತಂಕ-ಅಸಮಾಧಾನ ವ್ಯಕ್ತಪಡಿಸಿದರು.
ಒಂದಾನೊಂದು ಕಾಲದ ಸಂಗತಿಗಳನ್ನು ಸ್ಮರಿಸಿಕೊಂಡ ಲೇಖಕ ಶೂದ್ರ ಶ್ರೀನಿವಾಸ- ಅನಂತಮೂರ್ತಿ ಹಾಗೂ ಪಿ.ಲಂಕೇಶ್ ಸಂಸ್ಕೃತಿ-ಸಾಹಿತ್ಯ ಹಾಗೂ ರಾಜಕೀಯದ ಕುರಿತು ಆರೋಗ್ಯಪೂರ್ಣವಾಗಿ ಚಿಂತಿಸುವ ಪರಿಸರವನ್ನು ಸೃಷ್ಟಿಸಿದ್ದರು ಎಂದರು.
ಯಾರ ಬಗೆಗೂ ಮೃದು ಧೋರಣೆ ತಳೆದಿಲ್ಲ
ತಮ್ಮತ್ತ ತೂರಿಬಂದ ಟೀಕಾಂಬುಗಳಿಗೆ ಜಾಣತನದಿಂದ ಉತ್ತರಿಸಿದ ಅನಂತಮೂರ್ತಿ ತಾವು ಯಾರ ಬಗೆಗೂ ಮೃದು ಧೋರಣೆ ತಳೆದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಮೊದಲಿನ ಶಕ್ತಿ ಈಗ ಉಳಿದಿಲ್ಲ . ಆ ಕಾರಣಕ್ಕಾಗಿ ಕೆಲವೇ ವಿಷಯಗಳಿಗೆ ಗಮನ ಕೊಡುತ್ತಿದ್ದೇನೆ ಎಂದು ಅವರು ಹೇಳಿದರು.
ಆಡಿದ ಮಾತು ಉಳಿಸಿಕೊಳ್ಳಬೇಕು ಅನ್ನೋದು ಭಾರತೀಯ ಸಂಸ್ಕೃತಿ. ಆದರೆ, ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಸೀದಿಯನ್ನು ಕೆಡವಲು ಬಿಡುವ ಮೂಲಕ ವಚನಭ್ರಷ್ಟರಾದರು, ಸಂಸ್ಕೃತಿಗೆ ಕೇಡು ಬಗೆದರು ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.
ಸತ್ಯ ಗೊತ್ತಿದೆ, ಆದರೆ ಹೇಳೊಲ್ಲ ಅನ್ನುವ ವರ್ತಮಾನದಲ್ಲಿ ನಾವು ಬದುಕುತ್ತಿದ್ದೇವೆ. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರಂಥ ಸಜ್ಜನರು ವೀರಪ್ಪನ್ ಬಗೆಗೆ ತಮಗೆ ಗೊತ್ತಿರುವ ಸತ್ಯ ಹೇಳಿದರೆ ಒಳ್ಳೆಯದು. ನರಹಂತಕ ವೀರಪ್ಪನ್ನ ರಕ್ಷಿಸಿರೋದು ಕಾಡು ಮಾತ್ರವಲ್ಲ, ಊರು ಕೂಡ. ನಮ್ಮ ನಡುವಿನ ಗಣ್ಯರು ಕೂಡ ವೀರಪ್ಪನ್ನ ರಕ್ಷಿಸಿದ್ದಾರೆ ಎಂದು ಅನಂತಮೂರ್ತಿ ಬಣ್ಣಿಸಿದರು.
ವಿಮರ್ಶಕ ಮನು ಚಕ್ರವರ್ತಿ, ಕಥೆಗಾರ ಜಯಂತ ಕಾಯ್ಕಿಣಿ, ಮಾಜಿ ಸಂಸದ ವಿ.ಎಸ್.ಕೃಷ್ಣಯ್ಯರ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications