ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನ ಹೌಸ್‌ಫುಲ್‌: ಕಾರಣವೇನು ?

By Super
|
Google Oneindia Kannada News

ಸಾಹಿತ್ಯ ಸಮ್ಮೇಳನದ ಎಲ್ಲಾ ಗೋಷ್ಠಿಗಳಲ್ಲಿ ಕಿಕ್ಕಿರಿದ ಜನಸಂದಣಿಯನ್ನು ನಿರೀಕ್ಷಿಸುವುದು ಕಷ್ಟವೇ. ತಮಗೆ ಇಷ್ಟವಾದ, ಆಯ್ದ ಗೋಷ್ಠಿಗಳಲ್ಲಿ ಪ್ರತಿನಿಧಿಗಳು ಭಾಗವಹಿಸುವುದು ಈ ಹಿಂದಿನ ಸಮ್ಮೇಳನಗಳಲ್ಲಿ ಕಂಡುಬಂದ ದೃಶ್ಯ. ಆದರೆ ಬಾಗಲಕೋಟೆ ಸಮ್ಮೇಳನದಲ್ಲಿ ದೃಶ್ಯ ಅದಲುಬದಲು. ಎಲ್ಲಾ ಗೋಷ್ಠಿಗಳಲ್ಲೂ ಜನರೇ ಜನರು. ಕಾದಂಬರಿ ಗೋಷ್ಠಿಯ ಅಧ್ಯಕ್ಷ ಮ.ಗು. ಬಿರಾದಾರ ಇಂಥಾ ಸಂದಣಿಯನ್ನು ಯಾವ ಸಮ್ಮೇಳನದಲ್ಲೂ ಕಂಡಿರಲಿಲ್ಲ ಎನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಹೆಚ್ಚು ಜನ ಬರುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿರುವುದೇ ಬೇರೆ. ಇದನ್ನು ಕಂಡ ಅನೇಕ ಹಿರಿಯ ಸಾಹಿತಿಗಳಿಗೆ ಮುಳುಗುವ ಊರನ್ನು ನೋಡಲು ಜನ ಬಂದರೋ ಅಥವಾ ಸಮ್ಮೇಳನಕ್ಕೆ ಬಂದರೋ ಎನ್ನುವ ಗೊಂದಲ ಕೃಷ್ಣೆಪೂರದಂತೆ ಉಕ್ಕಿತಂತೆ.

ರವೆ ಉಂಡೆಗೆ ತವರಿನಲ್ಲಿ ಕೊಕ್‌ : ಲಾಡುಗೆ ಮಣೆ

ಸಾಹಿತ್ಯ- ಸಂವಾದಗಳು ಮನಸ್ಸಿನ ಹಸಿವನ್ನಷ್ಟೆ ತುಂಬಿಸಬಲ್ಲವು. ಹೊಟ್ಟೆಗೇನಿದ್ದರೂ ಅನ್ನವೇ ಬೇಕು. ಬಾಗಲಕೋಟೆಯಲ್ಲಂತೂ ಅತಿಥಿ ಸತ್ಕಾರ ಸಖತ್ತಾಗಿದೆ. ಉತ್ತರಕರ್ನಾಟಕದ ಸ್ಪೆಷಲ್‌ ರೊಟ್ಟಿ ಊಟ, ಲಾಡುಗಳನ್ನು ಪ್ರತಿನಿಧಿಗಳು ಚಪ್ಪರಿಸುತ್ತಿದ್ದಾರೆ. ಮೊದಲ ದಿನ ಊಟದ ಟಿಕೇಟ್‌ಗಳು ಸರಿಯಾದ ಸಮಯಕ್ಕೆ ದೊರಕದೆ ಗೊಂದಲ ಉಂಟಾಗಿದ್ದನ್ನು ಬಿಟ್ಟರೆ, ಉಳಿದಂತೆ ಊಟದ ವ್ಯವಸ್ಥೆ ಭರ್ಜರಿಯಾಗಿದೆ ಎನ್ನುತ್ತಾರೆ ಪ್ರತಿನಿಧಿಗಳು. ಕಳೆದ ಬಾರಿಯ ಕನಕಪುರ ಸಮ್ಮೇಳನದಲ್ಲಿ ಮೈಸೂರು ಭಾಗದ ವಿಶೇಷ ಮೈಸೂರ್‌ ಪಾಕ್‌ ಸಿಹಿ ತಿನಿಸನ್ನು ತಯಾರಿಸಲಾಗಿತ್ತು . ಇದಕ್ಕನುಗುಣವಾಗಿ ಬಾಗಲಕೋಟೆ ಸಮ್ಮೇಳನದಲ್ಲಿ ಆ ಭಾಗದ ವಿಶೇಷಗಳಾದ ರವೆಉಂಡೆ, ಕರದಂಟು, ಕುಂದಾ ಸಿಹಿಗಳಿರಬೇಕಿತ್ತು. ಈವರೆಗಿನ ವರದಿಗಳ ಪ್ರಕಾರ ಇವುಗಳೆಲ್ಲಾ ಬಾಗಲಕೋಟೆಯಿಂದ ತಲೆ ಮರೆಸಿಕೊಂಡಿದ್ದವು. ಸ್ಥಳೀಯ ಸಿಹಿತಿಂಡಿಗಳ ಬಗೆಗೆ ಸಂಘಟಕರು ಉತ್ಸಾಹ ತೋರದಿರುವುದನ್ನು ನೋಡಿದರೆ, ಅಖಂಡ ಕರ್ನಾಟಕದ ಸಿಹಿತಿಂಡಿಗಳ ಲಾಂಛನವನ್ನಾಗಿ ಅವರು ಲಾಡುವನ್ನು ಒಪ್ಪಿಕೊಂಡಿದ್ದಾರೇನೋ ಎನ್ನುವ ಅನುಮಾನ ಊಟ ಬಲ್ಲವರಿಗೆ ಕಾಡಿದ್ದು ಗುಟ್ಟಾಗಿಯೇನೂ ಉಳಿದಿಲ್ಲ .

ಹಬ್ಬಲವ್ವ ನಿನ್ನ ಸಾಹಿತ್ಯದ ಬಳ್ಳಿ : ಉಡಿ ತುಂಬಿ ಹರಕೆ

ಪ್ರತಿನಿಧಿಗಳಿಗೆ ಉಡುಗೊರೆ ನೀಡುವ ಸಂಪ್ರದಾಯವನ್ನು ಹುಟ್ಟುಹಾಕಿದ ಕನಕಪುರ ಸಮ್ಮೇಳನದ ಸಂಪ್ರದಾಯ ಬಾಗಲಕೋಟೆಯಲ್ಲೂ ಮುಂದುವರಿದಿದೆ. ಸಮ್ಮೇಳನದ ಮುದ್ರೆಯನ್ನು ಹೊತ್ತ ಬ್ಯಾಗ್‌ಗಳು ಪ್ರತಿನಿಧಿಗಳ ಕೈಗಳಲ್ಲಿ . ಬ್ಯಾಗ್‌ ನೀಡಿಕೆಯಲ್ಲಿ ಸರ್ವರೂ ಸಮ ಎನ್ನುವ ನೀತಿಯನ್ನು ಅನುಸರಿಸುತ್ತಿರುವುದು ನಿಜವಾದರೂ, ಮಹಿಳಾ ಸಾಹಿತಿಗಳಿಗೆ ಇಲ್ಲಿ ರಾಜೋಪಚಾರವೇ ನಡೆಯುತ್ತಿದೆ. ಸುಮಾರು 600 ಮಹಿಳಾ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕುಂಕುಮ, ಬಳೆ, ಹೂವಿನ ಜೊತೆಗೆ ಇಳಕಲ್‌ ಕಣಗಳೂ ಮಹಿಳಾ ಸಾಹಿತಿಗಳ ಉಡಿ ತುಂಬುತ್ತಿವೆ. ಎಲ್ಲಾ ಶಾಂತಾದೇವಿ ಅಧ್ಯಕ್ಷರಾದ ಪ್ರಭಾವ ಎಂದು ಪುರುಷ ಸಾಹಿತಿಗಳು ಅಣಕವಾಡುತ್ತಿದ್ದರೆ, ಮುಂದಿನ ಸಲ ಮತ್ತೊಬ್ಬ ಮಹಿಳಾ ಸಾಹಿತಿ ಸಮ್ಮೇಳನಾಧ್ಯಕ್ಷರಾಗಲಿ ಎಂದು ಸ್ತ್ರೀ ಸಾಹಿತಿಗಳು ಹಾರೈಸುತ್ತಿದ್ದಾರೆ. ಇವರ ಹಾರೈಕೆಗೆ ದನಿಗೂಡಿಸಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಸಾಹಿತಿ ವೀರಪ್ಪ ಮೊಯಿಲಿ, ಸಮ್ಮೇಳನಾಧ್ಯಕ್ಷರಾಗುವ ಅವಕಾಶ ಮಹಿಳಾ ಸಾಹಿತಿಗಳಿಗೆ ಹೆಚ್ಚು ಸಲ ಒದಗಿ ಬರಲಿ ಎಂದಿದ್ದಾರೆ. ಆ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಮಾಲತಿ ಮೊಯಿಲಿ ಇದ್ದದ್ದನ್ನು ಯಾರೂ ಕಂಡಿರುವ ವರದಿಯಾಗಿಲ್ಲ.

English summary
Kannada Sahitya Sammelana packed as never
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X