Breadfruit: ದೀವಿ ಹಲಸು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು?
ದೀವಿ ಹಲಸು ಎಂದಾಕ್ಷಣ ಇದ್ಯಾವ ಹಲಸು ಎಂಬ ಅಚ್ಚರಿ ಮೂಡುವುದು ಸಹಜವೇ. ಆದರೆ ಮಲೆನಾಡಿಗರಿಗೆ ಇದು ಪರಿಚಿತವೇ. ಕನ್ನಡದಲ್ಲಿ ದೀವಿ ಹಲಸು ಎಂದು ಕರೆದರೆ, ಆಂಗ್ಲ ಭಾಷೆಯಲ್ಲಿ ಬ್ರೆಡ್ ಪ್ರೂಟ್, ತಮಿಳಿನಲ್ಲಿ ಕರಿಪಾಲ, ತುಳುವಿನಲ್ಲಿ ಜೀಗುಜ್ಜೆ ಎಂದು ಕರೆಯುತ್ತಾರೆ. ಹೆಚ್ಚಿನವರು ಜೀಗುಜ್ಜೆ ಎಂದೇ ಹೇಳುತ್ತಾರೆ.
ಮನೆಯ ಹಿತ್ತಲಿನ ಖಾಲಿ ಜಾಗದಲ್ಲಿ ದೀವಿ ಹಲಸಿನ ಮರವನ್ನು ಬೆಳೆದಿದ್ದೇ ಆದರೆ ಒಂದಷ್ಟು ಮಟ್ಟಿಗೆ ತರಕಾರಿ ಸಮಸ್ಯೆಯನ್ನೂ ನೀಗಿಸಬಹುದಲ್ಲದೆ, ಆದಾಯವನ್ನೂ ಪಡೆಯಬಹುದು ಎಂಬುವುದು ಇದನ್ನು ಬೆಳೆದ ಬೆಳೆಗಾರರ ಅನುಭವದ ಮಾತು. ಜೊತೆಗೆ ಒಮ್ಮೆ ದೀವಿ ಹಲಸಿನ ರುಚಿಯನ್ನು ಸವಿದವರು ಎಂದಿಗೂ ಮರೆಯಲಾರರು. ಅಷ್ಟೆ ಅಲ್ಲ ಮಾರುಕಟ್ಟೆಯಲ್ಲಿ ಕಣ್ಣಿಗೆ ಬಿದ್ದರೆ ಎಷ್ಟೇ ಹಣ ನೀಡಿಯಾದರೂ ಮನೆಗೆ ಕೊಂಡೊಯ್ಯದಿರಲಾರರು. ಹೀಗಾಗಿಯೇ ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ.

ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ತಮ್ಮ ತೆಂಗು, ಅಡಿಕೆ ಅಥವಾ ಕಾಫಿ ತೊಟಗಳ ನಡುವೆ ಇದನ್ನು ಬೆಳೆಸುತ್ತಾರೆ. ಮೇಲ್ಮೋಟಕ್ಕೆ ಇದು ಅಲಂಕಾರಿಕ ಸಸ್ಯದಂತೆ ಕಾಣುವ ಇದೊಂದು ಜನಪ್ರಿಯ ತರಕಾರಿ ಎಂದರೆ ತಪ್ಪಾಗಲಾರದು. ಹಲಸು ವಂಶಕ್ಕೆ ಸೇರಿದ ದೀವಿ ಹಲಸು ಎಲೆ ಹಾಗೂ ಕಾಯಿಯಲ್ಲಿ ಹಲಸಿಗಿಂತ ಭಿನ್ನವಾಗಿದೆ. ಕನ್ನಡದಲ್ಲಿ ಬೇರು ಹಲಸು (ಬೇರಿನಿಂದಲೇ ಸಸ್ಯಾಭಿವೃದ್ಧಿ ಮಾಡುವ ಕಾರಣ ಈ ಹೆಸರು ಅನ್ವಯಿಸಬಹದು) ಹಾಗೂ ದೀವಿ ಹಲಸು ಎಂದು ಕರೆದರೆ, ಆಂಗ್ಲ ಭಾಷೆಯಲ್ಲಿ ಬ್ರೆಡ್ ಪ್ರೂಟ್, ತಮಿಳಿನಲ್ಲಿ ಕರಿಪಾಲ, ತುಳುವಿನಲ್ಲಿ ಜೀಗುಜ್ಜೆ ಎಂದು ಕರೆಯುತ್ತಾರೆ.
ದಕ್ಷಿಣ ಕನ್ನಡದ ಹವಾಗುಣ ಸೂಕ್ತ
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ದೀವಿ ಹಲಸು ಉತ್ತಮವಾಗಿ ಮಳೆ ಬೀಳುವ ಮಲೆನಾಡಿನ ಗುಡ್ಡಗಳ ಓರೆಯಲ್ಲಿ, ಕರಾವಳಿ ಪ್ರದೇಶಗಳಲ್ಲಿ ಬೆಳೆಯುತ್ತದೆ. ಒಂದೆಡೆ ಕರಾವಳಿ ಪ್ರದೇಶ, ಮತ್ತೊಂದೆಡೆ ಮಲೆನಾಡು ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಹವಾಗುಣವು ದೀವಿ ಹಲಸಿಗೆ ಹೇಳಿ ಮಾಡಿಸಿದಂತಿದ್ದು, ಈ ಜಿಲ್ಲೆ ದೀವಿ ಹಲಸು ಬೆಳೆಗೆ ಹೆಸರುವಾಸಿಯಾಗಿದೆ.
ದೀವಿ ಹಲಸಿನ ಸಸ್ಯಾಭಿವೃದ್ಧಿಯನ್ನು ಸಾಮಾನ್ಯವಾಗಿ ಬೇರುಗಳಿಂದ ಮಾಡುವುದು ಕಂಡು ಬರುತ್ತದೆ. ನೆಲದ ಆಳದಲ್ಲಿ ಹರಡಿ ಬೆಳೆಯುವ ಗಿಡದ ಬೇರನ್ನು ಸ್ವಲ್ಪ ಗಾಯಗೊಳಿಸಿ ಆ ನಂತರ ಅದನ್ನು ಮಣ್ಣಿನಿಂದ ಮುಚ್ಚಿದ್ದೇ ಆದರೆ(ತೇವಾಂಶ ನೋಡಿಕೊಂಡು ನೀರು ಹಾಯಿಸಬೇಕಾಗುತ್ತದೆ) ಗಾಯಗೊಳಿಸಿದ ಜಾಗದಿಂದ ಚಿಗುರು ಬಂದು ಗಿಡವಾಗುತ್ತದೆ.
ಗಿಡದ ಬೇರಿನಿಂದ ಸಸ್ಯಾಭಿವೃದ್ಧಿ
ಗಿಡದ ಬೇರನ್ನು ಉಳಿಯುವಂತೆ ಮಾಡಿ ಬೇರು ನೀಡಿ ಚಿಗುರೊಡೆದ ಸಸ್ಯವನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ಬೆಳೆಸಿ ಆ ನಂತರ ಸೂಕ್ತ ಸ್ಥಳದಲ್ಲಿ ನೆಡುವ ಮೂಲಕ ಬೆಳೆಸಬಹುದು. ದೀವಿ ಹಲಸು ಗಿಡವು ಸುಮಾರು ಹದಿನೆಂಟು ಮೀಟರ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಅಲ್ಲದೆ, ಗಿಡನೆಟ್ಟು ನಾಲ್ಕೈದು ವರ್ಷಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. ಬೇಗ ಫಸಲು ಪಡೆಯುವ ದೃಷ್ಟಿಯಿಂದ ಗೂಟಿ ಕಸಿ ವಿಧಾನದ ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಇದೀಗ ಸಾಮಾನ್ಯವಾಗಿದೆ.
ಹದಿನೈದರಿಂದ ಇಪ್ಪತ್ತು ವರ್ಷಗಳವರೆಗೂ ಫಲ ನೀಡುತ್ತಾ ಸಾಗುವ ದೀವಿ ಹಲಸು ಮರವೊಂದರಲ್ಲಿ ಸಾವಿರಕ್ಕೂ ಹೆಚ್ಚಿನ ಕಾಯಿಗಳನ್ನು ಪಡೆಯಬಹುದು ಎನ್ನಲಾಗುತ್ತದೆಯಾದರೂ ಸರಾಸರಿ ನೂರಕ್ಕೆ ಕಡಿಮೆಯಾಗದು. ವಾರ್ಷಿಕ ಬೆಳೆಯಾದ ಇದು ಜನವರಿ ಹಾಗೂ ಸೆಪ್ಟಂಬರ್ ಈ ಎರಡು ತಿಂಗಳುಗಳಲ್ಲಿ ಕಾಯಿಬಿಟ್ಟು ಬೆಳೆಯುತ್ತದೆ. ಕಾಯಿಯೊಂದು ಮುಕ್ಕಾಲು ಕೆಜಿಯಿಂದ ಒಂದು ಕೆಜಿಗೂ ಅಧಿಕ ತೂಗುತ್ತದೆ.

ದೀವಿಹಲಸಲ್ಲಿ ಇರುವ ವಿಟಮಿನ್ಗಳು
ಕೊಡಗಿನಲ್ಲಿ ದೀವಿ ಹಲಸು ಬೆಳೆಯುತ್ತದೆಯಾದರೂ ತಂಪು ಹವೆ ಅಧಿಕ ಮಳೆಯ ಕಾರಣ ಕಾಯಿಗಳು ಉಳಿಯುವುದು ಕಷ್ಟ ಸಾಧ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ತೆಂಗು ತೋಟದ ನಡುವೆ ಬೆಳೆಸಿದಂತೆ ಕಾಫಿ ತೋಟದ ಮಧ್ಯೆ ಬೆಳೆಸುವುದು ಸಾಧ್ಯವಿಲ್ಲ. ಕಾರಣ ಈ ಮರವು ಹರಡಿ ಬೆಳೆಯುವುದರಿಂದ ಅಧಿಕ ನೆರಳಿನಿಂದ ಕೂಡಿ ಕಾಫಿ ಗಿಡಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಇತರೆ ತೋಟಗಳಲ್ಲಿ ಅಥವಾ ಖಾಲಿ ಸ್ಥಳಗಳಲ್ಲಿ ಬೆಳೆಸಬಹುದಾಗಿದೆ.
ದೀವಿ ಹಲಸಿನಲ್ಲಿ ವಿಟಮಿನ್ ಸಿ, ಸೇರಿದಂತೆ ಅಯೋಡಿನ್, ಪ್ಲೋರಿನ್, ಕಾರ್ಬನ್, ಹೈಡ್ರೇಟ್, ಶರ್ಕರ ಪಿಷ್ಟ ಅಲ್ಲದೆ, ಕ್ಯಾಲ್ಸಿಯಂ, ರಂಜಕ, ಕ್ಯಾರೊಟಿನ್ ಮೊದಲಾದವುಗಳು ಅಧಿಕ ಪ್ರಮಾಣದಲ್ಲಿದೆ. ಅಲ್ಲದೆ ಇದರ ಬೇರಿನಲ್ಲಿಯೂ ಔಷಧೀಯ ಗುಣಗಳಿವೆ ಎನ್ನಲಾಗಿದೆ. ಬಲಿತ ಕಾಯಿಗಳನ್ನು ವಿವಿಧ ತಿನಿಸುಗಳಾಗಿ. ಉಪ್ಪಿನಕಾಯಿಯಾಗಿಯೂ ಬಳಸಬಹುದು. ಕಾಯಿಯ ಹೊರ ಸಿಪ್ಪೆಯನ್ನು ತೆಗೆದು ತಿರುಳನ್ನು ತುಂಡು ಮಾಡಿ ಒಣಗಿಸಿ ಶೇಖರಿಸಿಡಬಹುದು.
ಏನೆಲ್ಲಾ ಖಾದ್ಯಗಳನ್ನು ತಯಾರಿಸಬಹುದು?
ಅಗಲವಾದ, ದಪ್ಪವಾದ ತುಂಡುಗಳನ್ನು ಉಪ್ಪು, ಖಾರ(ರುಚಿಗೆ ತಕ್ಕಂತೆ) ಸವರಿ ಎಣ್ಣೆ ಅಥವಾ ತುಪ್ಪ ಹಚ್ಚಿ ಹೆಂಚಿನ ಮೇಲಿಟ್ಟು ಬೇಯಿಸಿದರೆ ಇದು ಬ್ರೆಡ್ನಂತೆ ರುಚಿಯಾಗಿರುತ್ತದೆ. ಪಲ್ಯ, ಚಿಪ್ಸ್, ಸಂಡಿಗೆ, ಬೋಂಡಾ, ಹಪ್ಪಳ ಹಿಗೆ ವಿವಿಧ ತಿನಿಸಾಗಿಯೂ ಉಪಯೋಗಿಸಬಹುದು. ದೀವಿಗೆ ಮರದ ಕಾಂಡದಲ್ಲಿ ಚಿಗುರೊಡೆಯುವ ಅನುಪಯುಕ್ತ ಚಿಗುರನ್ನು ದನಗಳಿಗೆ ಮೇವಾಗಿಯೂ ನೀಡಬಹುದು.
ತಮ್ಮ ಮನೆಯ ಸುತ್ತಮುತ್ತ ಖಾಲಿ ಜಾಗ ಇದ್ದದ್ದೇ ಆದರೆ ಅಲ್ಲೊಂದು ಗಿಡವನ್ನು ನೆಟ್ಟು ಬೆಳೆಸಿದ್ದೇ ಆದರೆ ತರಕಾರಿ ಸಮಸ್ಯೆಯನ್ನು ನೀಗಿಸುವುದರೊಂದಿಗೆ ಆದಾಯವನ್ನು ಕೂಡ ನಿರೀಕ್ಷಿಸಬಹುದಾಗಿದೆ.












Click it and Unblock the Notifications