Get Updates
Get notified of breaking news, exclusive insights, and must-see stories!

ಕಷ್ಟಗಳು ಬರಲಿ ಎದುರಿಸೋಣ ನಾವಾಗಿ ಎಳೆದುಕೊಳ್ಳಬಾರದಷ್ಟೆ..!

ಮನುಷ್ಯನಿಗೆ ಕಷ್ಟಗಳು ಬರುತ್ತಲೇ ಇರುತ್ತವೆ. ಅಂತಹ ಕಷ್ಟಗಳು ಕೂಡ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಅಂತಹ ಕಷ್ಟಗಳನ್ನು ಎದುರಿಸಿ ಬದುಕಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗಲು ಸಾಧ್ಯ. ಇಷ್ಟಕ್ಕೂ ಕಷ್ಟಗಳಲ್ಲಿಯೂ ಎರಡು ಬಗೆಯಿದೆ ಎಂದರೆ ಅಚ್ಚರಿಯಾಗಬಹುದು. ಒಂದು ಅದಾಗಿಯೇ ಬರುವುದು ಮತ್ತೊಂದು ನಾವಾಗಿಯೇ ತಂದುಕೊಳ್ಳುವುದು.

ಇವತ್ತಿನ ದಿನಗಳಲ್ಲಿ ಹೆಚ್ಚಿನ ಕಷ್ಟ, ತೊಂದರೆ, ಸಮಸ್ಯೆ ಎಲ್ಲವನ್ನು ಒಂದಲ್ಲ ಒಂದು ಕಾರಣಕ್ಕೆ ನಾವಾಗಿಯೇ ಮೈಮೇಲೆ ಎಳೆದುಕೊಂಡು ಅದರಿಂದ ಹೊರಬರಲು ಪರದಾಡುತ್ತಾ ದಿನ ಕಳೆಯುತ್ತಿರುತ್ತೇವೆ. ನಾವಾಗಿಯೇ ತಂದು ಕೊಳ್ಳುವ ಕಷ್ಟಗಳ ಪಟ್ಟಿ ದೊಡ್ಡದಾಗಿರುತ್ತದೆ. ಆದರೆ ಅದರ ಮೂಲವಿರುವುದು ಮಾತ್ರ ನಮ್ಮ ಮನಸ್ಸಿನಲ್ಲಿ ಎಂಬುದರಲ್ಲಿ ಎರಡು ಮಾತಿಲ್ಲ.

Life Tips Difficulties In Life Should Be Faced

ಮನಸ್ಸನ್ನು ಗಟ್ಟಿಯಾಗಿಡದೆ ಹೋದರೆ ಅದು ಎಲ್ಲೆಂದರಲ್ಲಿ ಹರಿದಾಡಿ ಬಯಕೆಯ ಬೆಟ್ಟವೇರಿ ಕಾಮ, ಕ್ರೋಧ, ಪ್ರಲೋಭನೆ, ಲೋಭ ಮುಂತಾದವುದಗಳಲ್ಲಿ ಯಾವುದಾದರೊಂದಕ್ಕೆ ನಮ್ಮನ್ನು ಸಿಲುಕಿಸಿ ಅವುಗಳ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವಂತೆ ಮಾಡಿಬಿಡುತ್ತದೆ. ನಾವೀಗ ಆಧುನಿಕ. ತಂತ್ರಜ್ಞಾನಗಳ ಯುಗದಲ್ಲಿದ್ದೇವೆ. ಇಲ್ಲಿ ಇವತ್ತಿನದು ನಾಳೆಯ ವೇಳೆಗೆ ಹಳತಾಗುವುದೇ ಜಾಸ್ತಿ ಹೀಗಿರುವಾಗ ಮನಸ್ಸು ಕೂಡ ಹೊಸದರತ್ತ ವಾಲುವುದು ಸಾಮಾನ್ಯ.

ಸಮಸ್ಯೆಯನ್ನು ತಲೆಮೇಲೆ ಹೊತ್ತುಕೊಳ್ಳಬೇಡಿ

ಹೀಗಾಗಿ ನಾವು ನಮಗೆ ಅರಿವಿದ್ದೋ ಇಲ್ಲದೆಯೋ ಬಯಕೆ, ಆಕರ್ಷಣೆ ಮತ್ತು ಪ್ರತಿಷ್ಠೆಗೆ ಒಳಗಾಗಿ ಎಲ್ಲವನ್ನು ಕಳೆದುಕೊಂಡು ಸಮಸ್ಯೆಯನ್ನು ತಲೆಮೇಲೆ ಹೊತ್ತುಕೊಂಡು ನಾಶವಾಗುವ ಮುನ್ನ ಅವುಗಳಿಂದ ಪಾರಾಗುವುದು ಹೇಗೆ ಎಂಬುವುದನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ನಾವೇ ತಂದು ಕೊಳ್ಳುವ ಹಲವಾರು ಸಮಸ್ಯೆಗಳಿಗೆ ನೂರಾರು ವರ್ಷಗಳ ಹಿಂದಿಯೇ ಆಧ್ಯಾತ್ಮಿಕ ಚಿಂತಕರು ಹಲವು ಮಾರ್ಗೋಪಾಯಗಳನ್ನು ಹೇಳಿ ಹೋಗಿದ್ದಾರೆ.

ನಾವು ಮಾತ್ರ ಆಧ್ಯಾತ್ಮ ಎನ್ನುವುದು ಅರುವತ್ತರ ನಂತರ ಎಂಬ ಮನೋಭಾವವನ್ನು ಬೆಳೆಸಿಕೊಂಡು ಸಮಸ್ಯೆಗೆ ಉತ್ತರ ಸಿಗದೆ ಪರದಾಡುತ್ತೇವೆ. ನಮ್ಮ ಮನಸ್ಸು ಹುಚ್ಚು ಕುದುರೆಯಂತೆ ಎಲ್ಲೆಂದರಲ್ಲಿ ಓಡಾಡುತ್ತಿರುತ್ತದೆ. ಅದು ಹಾದಿ ತಪ್ಪಿ ಹಿಡಿತ ಮೀರಿದ ಪ್ರಲೋಭನೆಗೆ ಒಳಗಾಯಿತು ಎಂದುಕೊಳ್ಳೋಣ ಆಗ ಏನು ಮಾಡಬಹುದು? ಈ ಪ್ರಶ್ನೆಗೆ ಚಿಂತನಾಶೀಲರು ಅಚ್ಚರಿಯಾದ ಉತ್ತರಗಳನ್ನು ನಮ್ಮ ಮುಂದೆ ಇಟ್ಟುಹೋಗಿದ್ದಾರೆ.

Life Tips Difficulties In Life Should Be Faced

ಪ್ರಲೋಭನೆ, ದುರಾಲೋಚನೆಯನ್ನು ಬಿಡಿ

ಮಕ್ಕಳು ವಿಚಿತ್ರವಾದ ವಸ್ತುಗಳನ್ನು ಅಥವಾ ಇತರೆ ಭಯ ಹುಟ್ಟಿಸುವ ಪ್ರಾಣಿಗಳನ್ನು ಕಂಡಾಗ ಹೇಗೆ ಹೆದರಿ ಓಡಿ ತಾಯಂದಿರ ತೆಕ್ಕೆಗೆ ಬೀಳುತ್ತವೆಯೋ ಹಾಗೆ ನಾವು ದೇವರ ಕಡೆಗೆ ಧಾವಿಸಬೇಕು. ಆತನ ಕರುಣೆಗಾಗಿ, ಆಶ್ರಯಕ್ಕಾಗಿ ಬೇಡಿಕೊಳ್ಳಬೇಕು. ಸದಾ ಪ್ರಲೋಭನೆಗಳನ್ನು ನಿರಾಕರಿಸುವ ಮೂಲಕ ಅವುಗಳನ್ನು ಎದುರಿಸಲು ಅಗತ್ಯವಾದ ಧೈರ್ಯವನ್ನು ನೀಡಲು ದೇವರ ನೆರವನ್ನು ಯಾಚಿಸಬೇಕು.

ಪ್ರಲೋಭನೆಯ ವಿರುದ್ಧ ಪ್ರತಿಭಟನೆಗೆ ಹಾಗೂ ನಿರಾಕರಣೆಗಳನ್ನು ಮುಂದುವರೆಸುವಾಗ ಸದಾ ನಾವು ದೇವರ ಕಡೆಗೆಯೇ ಮುಖವನ್ನಿಟ್ಟಿರಬೇಕು. ನಮ್ಮ ಮನಸ್ಸನ್ನು ಒಂದಷ್ಟು ಒಳ್ಳೆಯ ಹಾಗೂ ಪ್ರಶಂಶನೀಯವಾದ ಸಂಗತಿಗಳ ಕಡೆಗೆ ತಿರುಗಿಸಬೇಕು. ಮನಸ್ಸಿನೊಳಗೆ ಪ್ರವೇಶಿಸುವ ಸದ್ಭಾವನೆಗಳು ಹೃದಯದಲ್ಲಿ ತುಂಬಿಕೊಂಡಿದ್ದೇ ಆದರೆ, ಅವುಗಳು ಎಲ್ಲ ಪ್ರಲೋಭನೆಗಳನ್ನು ಹಾಗೂ ದುರಾಲೋಚನೆಗಳನ್ನು ದೂರ ಅಟ್ಟುತ್ತವೆ.

ದುಷ್ಪ್ರವೃತ್ತಿ ಉರುಬನ್ನು ಶಮನಗೊಳಿಸಿ

ಪ್ರಲೋಭನೆಗಳನ್ನು ತಡೆಯುವ ಸಿದ್ಧೌಷಧಿಯೆಂದರೆ ಎಷ್ಟೇ ಸಣ್ಣದಿರಲಿ ಅಥವಾ ದೊಡ್ಡದಿರಲಿ ಮನಸ್ಸಿನೊಳಗಿನ ಸೂಕ್ಷ್ಮಾತಿಸೂಕ್ಷ್ಮ ಸೂಚನೆಗಳನ್ನು, ಭಾವನೆಗಳನ್ನು ನಮ್ಮ ಗುರುವಿನ ಎದುರು ತೆರೆದಿಡಬೇಕು. ಇಷ್ಟಾಗಿಯೂ ಆಸೆ, ಆಮಿಷಗಳು ನಮ್ಮನ್ನು ಪೀಡನೆ ಹಾಗೂ ಕೋಟಲೆಗೆ ಒಳಪಡಿಸುವುದು ಮುಂದುವರೆದರೆ ನಾವೆಂದು ಮಣಿಯುವುದಿಲ್ಲವೆಂಬ ದೃಢ ನಿರ್ಧಾರದ ಪ್ರತಿಭಟನೆ ಮುಂದುವರೆಸಬೇಕು.

ನಮ್ಮ ಮೇಲೆ ದಾಳಿ ಮಾಡುವ ದುಷ್ಪ್ರವೃತ್ತಿಗಳ ಉರುಬನ್ನು ಶಮನಗೊಳಿಸಬೇಕಾದರೆ ಭಗವಂತನನ್ನು ಕುರಿತು ನಿರಂತರವಾಗಿ ಪ್ರಾರ್ಥಿಸುವುದರ ಮೂಲಕ ಯಾವುದೇ ದುಷ್ಟ ಪ್ರವೃತ್ತಿಗಳು ಮನಸ್ಸಿನೊಳಗೆ ನುಸುಳಿ, ನೆಲೆಸಿ ಕ್ರಿಯಾಶೀಲವಾಗುವುದನ್ನು ತಡೆಯಬಹುದು. ಇದು ದುಷ್ಪ್ರವೃತ್ತಿಗಳ ಪ್ರಬಲವಾದ ಅಸ್ಪೋಟನೆಗೆ ಎದುರಾದ ಮತ್ತೊಂದು ಅಸ್ಪೋಟನೆಯನ್ನು ಪ್ರತಿಕ್ರಮವಾಗಿ ಒಡ್ಡುವ ಒಂದು ತಂತ್ರ ಎಂದು ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಪಡುತ್ತಾರೆ.

ಚಿತ್ತದಸ್ವಾಸ್ಥ್ಯಕೆಡಿಸುವ ದುರಾಲೋಚನೆ

ಇನ್ನು ಅತ್ಯಂತ ಕಷ್ಟದಿಂದ ಅತ್ಯಂತ ಶ್ರೇಷ್ಠವಾದುದನ್ನು ಅಥವಾ ಭಗವಂತನನ್ನು ಕುರಿತು ಮಂತ್ರೋಚ್ಛಾರಣೆಯ ದ್ವಾರಕೆಯನ್ನು ಸಲ್ಲಿಸುವುದರ ಮೂಲಕ ನಮ್ಮೊಳಗೆ ಜಾಗೃತವಾಗುವ ಉದಾತ್ತ ಭಾವವು ನಮ್ಮನ್ನು ನಮ್ಮನ್ನು ಸಂದಿಗ್ಧತೆಗಳಿಂದ ಪಾರು ಮಾಡಬಲ್ಲದು ಎಂಬ ಜ್ಞಾನಿಗಳ ಮಾತ(ಉಪದೇಶ)ನ್ನು ತಳ್ಳಿಹಾಕುವಂತಿಲ್ಲ. ನಾವು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡಿರುತ್ತೇವೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಅದರ ಪರಿಹಾರಕ್ಕೆ ಮುಂದಾಗಬೇಕು.

ಬಹಳಷ್ಟು ಸಾರಿ ನಮ್ಮಲ್ಲಿ ನಮ್ಮೊಳಗಿನಿಂದಲೇ ಉದ್ಭವಿಸುವ ಕೆಟ್ಟ ಆಲೋಚನೆಗಳು, ಚಿತ್ತದಸ್ವಾಸ್ಥ್ಯವನ್ನೇ ಕೆಡಿಸುತ್ತವೆ. ಆದರೆ ಅವುಗಳಿಗೆ ವಶವಾಗದಂತೆ ನಮ್ಮನ್ನು ಕಾಯ್ದುಕೊಳ್ಳುವುದು ಬಹುಮುಖ್ಯವಾದ ಸಂಗತಿಯಾಗಿದೆ. ಕೆಲವೊಮ್ಮೆ ಕೆಟ್ಟ ಆಲೋಚನೆಗಳು ನಮ್ಮಲ್ಲಿ ಮೂಡುವುದು ಸಹಜ. ಅದು ಪಾಪವೂ ಅಲ್ಲ. ಆದರೆ ಅದಕ್ಕೆ ತಲೆಬಾಗಿ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು ಮಾತ್ರ ಪಾಪವೇ..

ಶ್ರೀ ರಾಮಕೃಷ್ಣರು ಹೇಳಿದ ಉಪದೇಶವೇನು?

ಶ್ರೀ ರಾಮಕೃಷ್ಣರು ತಮ್ಮ ಉಪದೇಶವೊಂದರಲ್ಲಿ ಹೀಗೆಯೇ ಹೇಳಿದ್ದಾರೆ. ಭಗವಂತನ ಭಜನೆ ಹಾಗೂ ನಾಮಜಪ ಮಾಡಿದರೆ ಸಾಕು. ಎಲ್ಲ ಪಾಪಗಳೂ ಪರಿಹಾರವಾಗುತ್ತವೆ. ಈ ದೇಹವೆಂಬ ಮರದಲ್ಲಿ ಪಾಪವೆಂಬ ಹಕ್ಕಿಗಳು ಗೂಡು ಕಟ್ಟಿಕೊಂಡಿವೆ. ಭಜನೆ ಮಾಡುವುದು ಚಪ್ಪಾಳೆ ತಟ್ಟಿದಂತೆ. ಚಪ್ಪಾಳೆ ತಟ್ಟಿದಾಗ ಮರದ ಮೇಲಿನ ಹಕ್ಕಿಗಳು ಹಾರಿ ಹೋಗುವಂತೆ ಭಗವನ್ನಾಮಸ್ಮರಣೆಯಿಂದ ಪಾಪಗಳೆಲ್ಲವೂ ಹಾರಿಹೋಗುತ್ತವೆ.

ಎಲ್ಲರಿಗೂ ಅರ್ಥವಾಗುವಂತಿರುವ ಈ ಉಪದೇಶ ಮನಸ್ಸಿನ ಅಸ್ವಸ್ಥತೆಗಳಿಗೆ ಸುಲಭವಾದ ಪರಿಹಾರ ಎಂದರೆ ತಪ್ಪಾಗಲಾರದು. ಜಪ, ತಪ, ಇವು ದೈನಂದಿನ ಚಟುವಟಿಕೆಗಳ ನಡುವೆ ಚಕ್ರವಾಗಿ ತಿರುಗುತ್ತಲೇ ಇರಬೇಕು. ಆಗ ನಮ್ಮ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ನಾಮಜಪದಲ್ಲಿ ಆಶ್ರಯ ಪಡೆದು ಎಷ್ಟೋ ಪಾಪಿಗಳೂ ಪಾಪ ಮುಕ್ತರೂ ಆಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ದೇವರ ಮೊರೆಯಿಂದ ವೇದನೆಗೆ ಮುಕ್ತಿ

ಮನಸ್ಸಿನೊಳಗೆ ಅನಪೇಕ್ಷಣೀಯವಾದ ವಿಚಾರಗಳೂ ಹಾಗೂ ಚಾಂಚಲ್ಯಗಳೂ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಯಾವಾಗ ಇವು ನಮ್ಮ ಮನಸ್ಸಿನೊಳಕ್ಕೆ ನುಗ್ಗಲು ಪ್ರಯತ್ನಿಸುತ್ತವೆಯೋ ಆಗ ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮನ್ನು ಮುತ್ತಿಕೊಳ್ಳುವ ವಿನಾಶಕಾರಿ ಶಕ್ತಿಗಳಿಂದ ಬಿಡಿಸಿಕೊಳ್ಳಬಹುದು ಎಂಬುವುದಾಗಿ ಶ್ರೀ ಸ್ವಾಮಿ ಬ್ರಹ್ಮಾನಂದರು ತಿಳಿಸಿದ್ದಾರೆ.

ದೇವರಲ್ಲಿ ಶರಣು ಹೋಗುವುದರಿಂದ ಬಹಳಷ್ಟು ಸಾರಿ ದೈಹಿಕ ಮತ್ತು ಮಾನಸಿಕ ವೇದನೆಗಳಿಂದ ಮುಕ್ತಿಹೊಂದಬಹುದು ಎಂಬುದಕ್ಕೆ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿರುವ ನನ್ನ ಮೇಲೆ ನಂಬಿಕೆಯಿಡು ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡಿಸುತ್ತೇನೆ. ನನ್ನ ಭಕ್ತನಾದವನು ಎಂದೂ ನಾಶ ಹೊಂದುವುದಿಲ್ಲ' ಎಂಬ ಮಾತು ಅರ್ಥಪೂರ್ಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+