'ಕಾರುಗಳಲ್ಲಿ ಇದ್ದದ್ದು ಸಚಿವರ ಮಗ, ಇದು ಯೋಜಿತ ಪಿತೂರಿ' ಎಂದ ಗಾಯಾಳು ರೈತ
ಲಕ್ನೋ, ಅಕ್ಟೋಬರ್ 06: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ ಕೊಂಚ ಚೇತರಿಸಿಕೊಂಡಿರುವ ಗಂಭೀರ ಗಾಯಗೊಂಡಿದ್ದ ಓರ್ವ ಪ್ರತಿಭಟನಾಕಾರ, "ರೈತರ ಮೇಲೆ ಹರಿದು ಹೋದ ಕಾರನ್ನು ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕಾರಲ್ಲಿ ಇದ್ದ," ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ತೇಜೆಂದರ್ ವಿರ್ಕ, "72 ಗಂಟೆಗಳು ಕಳೆದರೂ ಕೂಡಾ ಆ ವ್ಯಕ್ತಿಯನ್ನು ಬಂಧನ ಮಾಡದೆ ಇರುವುದು ದುರದೃಷ್ಟಕರ," ಎಂದು ಹೇಳಿದ್ದಾರೆ. ಭಾನುವಾರ ಕೇಂದ್ರ ಸಚಿವರುಗಳ ಭೇಟಿಯ ವಿರುದ್ದ ತೇಜೆಂದರ್ ರೈತರ ಪ್ರತಿಭಟನೆಯನ್ನು ಸಂಘಟಿಸಿದ್ದರು ಎನ್ನಲಾಗಿದೆ.
"ಪಿತೂರಿ ಮಾಡಿ ನಮ್ಮ ಹತ್ಯೆ ಮಾಡಲಾಗಿದೆ. ಲಖಿಂಪುರ ಹೊರತುಪಡಿಸಿ ಉತ್ತರ ಪ್ರದೇಶದಕ್ಕೆ ರೈತರು ಬರಲು ನಾವು ಅವಕಾಶ ನೀಡಲಾರೆವು ಎಂದು ಅಜಯ್ ಮಿಶ್ರಾ ಹೇಳಿದ್ದರು. ನಾವು ಈ ಹೇಳಿಕೆಯ ವಿರುದ್ದವಾಗಿಯೂ ಪ್ರತಿಭಟನೆ ನಡೆಸುತ್ತಿದ್ದೆವು. ನಾವು ಪೊಲೀಸರು ಹಾಗೂ ಆಡಳಿತದ ಜೊತೆ ಪ್ರತಿಭಟನೆಗೂ ಮುನ್ನ ಮಾತುಕತೆಯನ್ನು ನಡೆಸಿದ್ದೆವು. ನಾವು ಕಪ್ಪು ಧ್ವಜವನ್ನು ತೋರಿಸಲು ನಿಂತಿದ್ದೆವು," ಎಂದು ಹೇಳಿದ್ದಾರೆ.

"ಕಾರಲ್ಲಿ ಅಜಯ್ ಮಿಶ್ರಾರ ಪುತ್ರ, ಆತನ ಜೊತೆಗಾರರು ಇದ್ದರು"
"ಸುಮಾರು ಮೂರು ಗಂಟೆ ಹೊತ್ತಿಗೆ ಸಚಿವರು ದಾರಿ ಬದಲಾಯಿಸಿದ್ದಾರೆ ಎಂದು ನಮಗೆ ತಿಳಿಯಿತು. ಆದ್ದರಿಂದ ನಾವು ಹಿಂದಕ್ಕೆ ತೆರಳುತ್ತಿದ್ದೆವು. ಆದರೆ ದಿಢೀರನ್ನೇ ವೇಗವಾಗಿ ಹಿಂಬದಿಯಿಂದ ಬಂದ ಕಾರು ನಮ್ಮ ಮೇಲೆ ಹರಿದು ಕೊಂಡು ಹೋಯಿತು. ಕಾರು ಬಹುಶಃ ಗಂಟೆಗೆ ನೂರು ಕಿಲೋ ಮೀಟರ್ ವೇಗದಲ್ಲಿ ಇದ್ದಂತೆ ಇತ್ತು. ಸಂಚು ಮಾಡಿಯೇ ನಮ್ಮ ಮೇಲೆ ಕಾರು ಹರಿಸಲಾಗಿದೆ. ಅಜಯ್ ಮಿಶ್ರಾರ ಪುತ್ರ ಹಾಗೂ ಆತನ ಜೊತೆಗಾರರು ಆ ಕಾರಿನಲ್ಲಿ ಇದ್ದರು. ಬಳಿಕ ನನಗೆ ಪ್ರಜ್ಞೆ ತಪ್ಪಿತು," ಎಂದು ಘಟನೆಯ ಪ್ರತ್ಯಕ್ಷ ಸಾಕ್ಷಿಯಾದ ಗಂಭೀರವಾಗಿ ಗಾಯಗೊಂಡಿರುವ ರೈತ ವಿವರಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ತಳಮಳಗೊಂಡ ಜನರು ಬೆಂಗಾವಲು ವಾಹನದಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ ಎಂದ ತೇಜೆಂದರ್ ವಿರ್ಕ, "ಈ ವೇಳೆ ನಮ್ಮ ಜನರು ಆ ಪೈಕಿ ಕೆಲವರನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ," ಎಂದು ತಿಳಿಸಿದ್ದಾರೆ. ಈ ಪ್ರಕರಣದಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ವಜಾ ಮಾಡಬೇಕು ಎಂದು ಕೂಡಾ ಗಾಯಾಳು ರೈತ ಆಗ್ರಹಿಸಿದ್ದಾರೆ.

ನಾನು ಸಾಕ್ಷಿ ಹೇಳಲು ಸಿದ್ಧ ಎಂದ ಗಾಯಾಳು ರೈತ
"ನಾನು ಸಾಕ್ಷಿ ಹೇಳಲು ಸಿದ್ಧನಾಗಿದ್ದೇನೆ. ಆದರೆ ಯೋಗಿ ಆದಿತ್ಯನಾಥ್ ಸರ್ಕಾರ ಈ ದಾಳಿ ನಡೆಸಿದವರಿಗೆ ಸಹಾಯ ಮಾಡುತ್ತಿದೆ," ಎಂದು ತೇಜೆಂದರ್ ವಿರ್ಕ ಆರೋಪ ಮಾಡಿದ್ದಾರೆ. ಇನ್ನು "ಬೆಂಗಾವಲು ಕಾರಿನಿಂದ ಇಳಿದು ಗುಂಡು ಹಾರಿಸಿಕೊಂಡು ಓಡಿಹೋದದ್ದನ್ನು ನಾನು ನೋಡಿದ್ದೇನೆ," ಎಂದು ರೈತ ಸಿಮ್ರಾಂಜಿತ್ ಸಿಂಗ್ ಹೇಳಿದ್ದಾರೆ.

"ನಮ್ಮ ಪರವಾಗಿ ಸಾಕ್ಷಿ ಹೇಳಲು ಸಾವಿರಾರು ಮಂದಿ ಇದ್ದಾರೆ"
ಇನ್ನು ತನ್ನ ಪುತ್ರನ ಮೇಲೆ ಇರುವ ಈ ಆರೋಪದ ಬಗ್ಗೆ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ, "ಆ ಕಾರು ನಮ್ಮದೇ, ಆದರೆ ಕಾರಿನಲ್ಲಿ ನನ್ನ ಮಗ ಇರಲಿಲ್ಲ," ಎಂದು ಹೇಳಿದ್ದಾರೆ. "ಮೊದಲನೇ ದಿನದಿಂದ ಆ ಕಾರು ನಮ್ಮದೇ ಎಂಬುವುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಆ ಕಾರು ನಮ್ಮ ಹೆಸರಲ್ಲಿ ರಿಜಿಸ್ಟರ್ ಆಗಿದೆ. ನಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬೇರೆ ಕಡೆಗೆ ನಮ್ಮ ಕಾರು ಹೋಗುತ್ತಿತ್ತು. ನನ್ನ ಮಗ ಬೇರೆ ಕಾರ್ಯಕ್ರಮದಲ್ಲಿ ಇದ್ದ," ಎಂದು ಹೇಳಿದ್ದಾರೆ. "ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೂ ನನ್ನ ಮಗ ಬೇರೆ ಕಾರ್ಯಕ್ರಮದಲ್ಲಿಯೇ ಇದ್ದ. ಆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಇದ್ದರು. ಅದರ ವಿಡಿಯೋ, ಫೋಟೋ ಎಲ್ಲವೂ ಇದೆ. ಹಾಗೆಯೇ ಆತನ ಲೊಕೇಶನ್ ಅನ್ನು ನೋಡಿದರೂ ನಿಮಗೆ ತಿಳಿಯುತ್ತದೆ. ಆಶೀಶ್ ಮಿಶ್ರಾ ಬೇರೆ ಕಾರ್ಯಕ್ರಮದಲ್ಲಿ ಇದ್ದರು ಎಂದು ಹೇಳಲು ಸಾವಿರಾರು ಜನರು ಸಾಕ್ಷಿ ಇದ್ದಾರೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

"ಇದು ಯೋಜಿತ ಪಿತೂರಿ, ಸಚಿವರ ಮಗ ಸಂಚು ರೂಪಿಸಿ ಈ ಕೃತ್ಯ ಮಾಡಿದ್ದಾನೆ"
"ಈ ಕೃತ್ಯವನ್ನು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಸಂಚು ರೂಪಿಸಿ ಮಾಡಿದ್ದಾನೆ. ಇದೊಂದು ಯೋಜಿತ ಪಿತೂರಿ," ಎಂದು ದೂರನ್ನು ಆಧರಿಸಿದ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಆಶೀಶ್ ಮಿಶ್ರಾರ ಮೇಲೆ ಕೊಲೆ ಹಾಗೂ ನಿರ್ಲಕ್ಷ್ಯದ ಆರೋಪವನ್ನು ಎಫ್ಐಆರ್ನಲ್ಲಿ ಮಾಡಲಾಗಿದೆ. ಆದರೆ ಈವರೆಗೂ ಬಂಧನ ಮಾಡಿಲಾಗಿಲ್ಲ. ರೈತರು ನೀಡಿದ ದೂರಿನ ಆಧಾರದಲ್ಲಿ ಈ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ. "ಆಶೀಶ್ ಮಿಶ್ರಾ ಸೇರಿ ಸುಮಾರು 15-20 ಜನರು ಕಾರುಗಳಲ್ಲಿ ಬಂದರು. ಮೂರು ವಾಹನದಲ್ಲಿ ಭವಾನಿಪುರ ಸಭೆಗೆ ಹೋಗುತ್ತಿದ್ದರು. ಆಶೀಶ್ ಮಿಶ್ರಾ ಮಹೀಂದ್ರ ಕಾರಿನಲ್ಲಿ ಕುಳಿತು ಜನರತ್ತ ಗುಂಡು ಹಾರಿಸಿದ್ದಾನೆ. ವಾಹನ ಜನರ ಮೇಲೆ ಹರಿದು ಹೋಗಿದೆ. ಗುಂಡೇಟಿಗೆ ರೈತ ಸುಖ್ವಿಂದರ್ ಸಿಂಗ್ರ 22 ವರ್ಷದ ಮಗ ಗೋವಿಂದರ್ ಸಾವನ್ನಪ್ಪಿದ್ದಾನೆ," ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications