PSI ನೇಮಕಾತಿ ಅಕ್ರಮ: 545 ಅಭ್ಯರ್ಥಿಗಳಿಗೆ OMR ಶೀಟ್ ಸಮೇತ ಹಾಜರಾಗಲು ನೋಟಿಸ್
ಬೆಂಗಳೂರು, ಏ. 20: ಪೊಲೀಸ್ ಸಬ್ಇನ್ಸ್ಪೆಕ್ಟರ್ (ಸಿವಿಲ್) 545 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಹೊಸ ರೀತಿಯ ಅಕ್ರಮ ಜಾಲಾಡಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಎಲ್ಲರಿಗೂ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರತಿ ದಿನ 50 ಅಭ್ಯರ್ಥಿಗಳನ್ನು ಸಿಐಡಿ ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಪ್ರತ್ಯೇಕ ತನಿಖಾ ತಂಡ ರಚನೆ:
ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಎಸಗಿ ಸಿಕ್ಕಿಬಿದ್ದಿದ್ದರು. ಈ ಅಕ್ರಮದ ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ನೇಮಕಾತಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಉಮೇಶ್ ಈ ಕುರಿತು ಸಮಗ್ರ ತನಿಖೆಗೆ ಸೂಚಿಸಿದ್ದಾರೆ. ಪಿಎಸ್ಐ ನೇಮಕಾತಿ ಸಂಬಂಧ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿದ್ದು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.
ದಿನಕ್ಕೆ 50 ಅಭ್ಯರ್ಥಿಗಳಿಗೆ ನೋಟಿಸ್:
ಪಿಎಸ್ಐ ನೇಮಕಾತಿ ಸಂಬಂಧ ನಡೆದಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ದಿನಕ್ಕೆ 50 ಅಭ್ಯರ್ಥಿಗಳಂತೆ ಆಯ್ಕೆಯಾಗಿರುವ 545 ಮಂದಿಗೂ ನಿಗದಿತ ದಿನಾಂಕ ದಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಓಎಂಆರ್ ಪ್ರತಿ ಹಾಗೂ ಪ್ರವೇಶ ಪತ್ರ ಎರಡನ್ನೂ ಕಡ್ಡಾಯವಾಗಿ ತೆಗೆದುಕೊಂಡು ಸಿಐಡಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಉತ್ತರ ಪತ್ರಿಕೆಯಲ್ಲಿನ ಉತ್ತರಗಳಿಗೂ ಹಾಗೂ ಓಎಂಆರ್ ಪ್ರತಿಯಲ್ಲಿನ ಉತ್ತರಗಳಿಗೆ ತಾಳೆಯಾಗದಿದ್ದಲ್ಲಿ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳನ್ನು ತನಿಖೆಗೆ ಗುರಿಪಡಿಸಲಾಗುತ್ತಿದೆ. ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳು ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಅಂತವರನ್ನು ಬಂಧಿಸುವ ಸಾಧ್ಯತೆಯಿದೆ.

ಪಿಎಸ್ಐ ನೇಮಕಾತಿ ಅಕ್ರಮದ ಹೊಸ ಹಾದಿ:
''ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳು ಅಕ್ರಮ ಎಸಗಿದ್ದರು. ಪರೀಕ್ಷಾ ಕೇಂದ್ರದ ಸಿಬ್ಬಂದಿ ಶಾಮೀಲಾಗಿ, ಹಣಕೊಟ್ಟ ಅಭ್ಯರ್ಥಿಗಳ ಉತ್ತರ ಹಾಳೆಯನ್ನು ಪಡೆದು ಪ್ರತ್ಯೇಕವಾಗಿ ಬರೆದು ಇಲಾಖೆಗೆ ರವಾನಿಸಲಾಗಿತ್ತು. ಈ ಕೇಂದ್ರದಲ್ಲಿ ಪರೀಕ್ಷೆ ಬರೆದ ವೀರೇಶ್ ಎಂಬಾತ ಕೇವಲ 21 ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆದಿದ್ದು ಉಳಿದ ಪ್ರಶ್ನೆಗಳನ್ನು ಖಾಲಿ ಬಿಟ್ಟಿದ್ದ. ಆದರೆ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ಬರೆದಿದ್ದು, ಪಿಎಸ್ಐ ಆಗಿ ನೇಮಕವಾಗಿದ್ದ. ಈ ಅಕ್ರಮದ ಜಾಡು ಹಿಡಿದು ತನಿಖೆ ನಡೆಸಿದಾಗ ಇದೇ ಮಾದರಿಯ ಅಕ್ರಮ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಪಿಎಸ್ಐ ಆಗಿ ನೇಮಕವಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ,'' ಎಂದು ತನಿಖಾ ತಂಡದಲ್ಲಿರುವ ಅಧಿಕಾರಿಯೊಬ್ಬರು 'ಒನ್ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳೇ ಅಕ್ರಮದ ತಾಣಗಳು:
ಈ ಮೊದಲು ಪಿಎಸ್ಐ ಸೇರಿದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯ ಪ್ರಶ್ನೆ ಪತ್ರಿಕೆಯನ್ನು ಪಡೆದು ಹಣ ಕೊಟ್ಟ ಅಭ್ಯರ್ಥಿಗಳಿಗೆ ಪರೀಕ್ಷೆ ಮುನ್ನ ನೀಡಿ ವಾಮ ಮಾರ್ಗದ ಮೂಲಕ ನೇಮಕವಾಗುತ್ತಿದ್ದರು. ಇದಕ್ಕೂ ಮೊದಲು ಸಂದರ್ಶನಕ್ಕೆ ಅವಕಾಶವಿದ್ದಾಗ, ಕೆಲವು ರಾಜಕಾರಣಿಗಳ ಚೇಲಾಗಳೇ ಅಕ್ರಮಕ್ಕೆ ನಾಂದಿ ಹಾಡುತ್ತಿದ್ದರು. ಇವಕ್ಕೆ ಕಡಿವಾಣ ಬಿದ್ದ ಬಳಿಕ ಇದೀಗ ಪರೀಕ್ಷಾ ಕೇಂದ್ರಗಳೇ ಅಕ್ರಮದ ತಾಣವಾಗಿ ರೂಪಾಂತರಗೊಂಡಿವೆ.

ಅಕ್ರಮದ ಕಣ್ಣು ತೆರೆಸಿದ ಮೊಬೈಲ್ ಸ್ಕ್ರೀನ್ ಶಾಟ್:
ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಪಿಎಸ್ಐ ಅಭ್ಯರ್ಥಿ ವೀರೇಶ್ ಪರೀಕ್ಷೆ ಬರೆದಿದ್ದ ಉತ್ತರ ಪತ್ರಿಕೆಯ ಓಎಂಆರ್ ಶೀಟ್ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ. ಉಳಿದಿದ್ದ ಪ್ರಶ್ನೆಗಳಿಗೆ ಖಾಲಿ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಪಿಎಸ್ಐ ಅಭ್ಯರ್ಥಿ ಅದನ್ನು ಮೊಬೈಲ್ ನಲ್ಲಿ ಪೋಟೋ ತೆಗೆದುಕೊಂಡಿದ್ದ. ವಿಪರ್ಯಾಸವೆಂದರೆ ಈ 21 ಪ್ರಶ್ನೆಗಳಿಗಷ್ಟೇ ಉತ್ತರ ಬರೆದಿದ್ದ ವೀರೇಶ್ ಪಿಎಸ್ಐ ನೇಮಕವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿತ್ತು. ಇದರಿಂದ ವಿಚಲಿತನಾದ ಅಭ್ಯರ್ಥಿ, ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ತನಿಖೆ ಮಾಡಿದಾಗ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ನಡೆದಿದ್ದ ಪರೀಕ್ಷಾ ಕೇಂದ್ರದ ಅಕ್ರಮ ಟಿಸಿಲೊಡೆದಿತ್ತು.
80 ಲಕ್ಷಕ್ಕೆ ಡೀಲ್ ಮಾಡಿದ್ದ ಬಿಜೆಪಿ ನಾಯಕಿ:
ಇನ್ನು ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯ ಮಾಲೀಕರು ಹಾಗೂ ಕಲಬುರಗಿ ಬಿಜೆಪಿ ಪಕ್ಷದ ನಾಯಕಿ ದಿವ್ಯಾ ಹಾಗರಗಿ ಒಬ್ಬ ಅಭ್ಯರ್ಥಿಯಿಂದ ತಲಾ 80 ಲಕ್ಷ ರೂ. ಪಡೆದು ಪರೀಕ್ಷೆ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ತಮ್ಮ ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಕೆಲವು ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಪಡೆದು ಪ್ರತ್ಯೇಕವಾಗಿ ಉತ್ತರಿಸಿ ಉತ್ತರ ಪತ್ರಿಕೆಗಳನ್ನು ನೇಮಕಾತಿ ವಿಭಾಗಕ್ಕೆ ರವಾನಿಸಲಾಗಿತ್ತು. ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ ವೀರೇಶ್ ಪಿಎಸ್ಐ ಆಗಿ ನೇಮಕವಾದ ಜಾಡು ಹಿಡಿದು ತನಿಖೆ ನಡಸಿದಾಗ ಇತರೆ ಮೂವರು ಅಭ್ಯರ್ಥಿಗಳು ಇದೇ ಮಾದರಿ ಅಕ್ರಮ ಎಸಗಿ ಬಂಧನಕ್ಕೆ ಒಳಗಾಗಿದ್ದಾರೆ.

ಹೊಸ ಹಾದಿ ಕಂಡುಕೊಂಡ ಪೊಲೀಸರು:
ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರಬಹುದಾದ ಅಕ್ರಮವನ್ನು ಎಳೆ ಎಳೆಯಾಗಿ ತನಿಖೆ ನಡೆಸಲು ತಯಾರಿ ನಡೆಸಿರುವ ಸಿಐಡಿ ಅಧಿಕಾರಿಗಳು ಇದೀಗ ಪಿಎಸ್ಐ ಆಗಿ ಆಯ್ಕೆಯಾಗಿರುವ ಅಷ್ಟೂ ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆದಿದ್ದಾರೆ. ಅವರ ಓಎಂಆರ್ ಕಾರ್ಬ್ ನ್ ಶೀಟ್ ಗೂ ಮತ್ತು ಉತ್ತರ ಪತ್ರಿಕೆ ಎರಡಕ್ಕೂ ತಾಳೆಯಾದರೆ ಮಾತ್ರ ಬಚಾವ್. ಇಲ್ಲದಿದ್ದರೆ ಜೀವನ ಪರ್ಯಂತ ಸರ್ಕಾರಿ ಹುದ್ದೆಗೆ ಅರ್ಜಿ ಹಾಕಲು ಅನರ್ಹವಾಗುವ ಜತೆಗೆ ಜೈಲು ಸೇರಲಿದ್ದಾರೆ. ಓಎಂಆರ್ ಶೀಟ್ ಮತ್ತು ಉತ್ತರ ಪತ್ರಿಕೆಯನ್ನು ತಾಳೆ ಮಾಡುವ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮದ ಹೂರಣ ಹೊರ ತೆಗೆಯುವ ಕಾರ್ಯದಲ್ಲಿ ಸಿಐಡಿ ಪೊಲೀಸರು ನಿರತರಾಗಿದ್ದಾರೆ.

ಅಫ್ಜಲ್ಪುರದಲ್ಲಿ 50 ಮಂದಿ ನೇಮಕ ಅಕ್ರಮದ ವಾಸನೆ:
ಇನ್ನು ಪಿಎಸ್ಐ ನೇಮಕಾತಿ ಸಂಬಂಧ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ಕೂಡಲೇ ಕಲಬುರಗಿಯ ಅಫ್ಜಲ್ ಪುರ ತಾಲೂಕಿನಿಂದಲೇ 50 ಮಂದಿ ಪಿಎಸ್ಐ ಆಗಿ ನೇಮಕಗೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಕುರಿತು ಸಂಶಯ ವ್ಯಕ್ತಪಡಿಸಿದ್ದ ಅಭ್ಯರ್ಥಿಗಳು ಸಾಮಾಜಿಕ ಜಾಲ ತಾಣದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿದ್ದರು. ಅಲ್ಲದೇ ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗಿತ್ತು. ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವ ಪ್ರಕರಣ ಹೊರ ಬಿದ್ದ ಬಳಕ ಇದೀಗ ಪ್ರತಿ ಅಭ್ಯರ್ಥಿಯ ಆಯ್ಕೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮರು ಪರೀಕ್ಷೆಗೆ ಆಗ್ರಹ:
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದ ಬೆನ್ನಲ್ಲೇ ಮರು ಪರೀಕ್ಷೆ ಮಾಡುವಂತೆ ಆಗ್ರಹಿಸಿ ಪಿಎಸ್ಐ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಪಿಎಸ್ಐ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ. ಹೀಗಾಗಿ ಆಯ್ಕೆಯಾಗಿರುವ ಪಟ್ಟಿ ರದ್ದು ಮಾಡಿ ಮರು ಪರೀಕ್ಷೆ ಮಾಡುವಂತೆ ಆಗ್ರಹಿಸಿದ್ದಾರೆ. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಮರು ಪರೀಕ್ಷೆ ಮಾಡಿದ್ರೆ ವರ್ಷಗಳಿಂದ ಓದಿ ಆಯ್ಕೆಯಾಗಿರುವ ಪ್ರಾಮಾಣಿಕರಿಗೆ ಅನ್ಯಾಯವಾಗಲಿದೆ. ಅಕ್ರಮ ಮಾಡಿದವರನ್ನು ಸಿಐಡಿ ಪೊಲೀಸರು ಬಂಧಿಸಲಿ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಮರು ಪರೀಕ್ಷೆ ಸಿಐಡಿ ತನಿಖೆಯನ್ನು ಅವಲಂಭಿಸಿದೆ.












Click it and Unblock the Notifications