ಮೂವರು ಹೆಣ್ಮಕ್ಕಳಿಗೆ ಯಮ ನೀಡಿದ ಘೋರ ಶಿಕ್ಷೆ
ಮೂವತ್ತು ದಾಟಿದರೂ ಸುಂದರ ಗಂಡಸಿನೊಂದಿಗೆ ಮದುವೆಯಾಗಲಿಲ್ಲವೆಂದು ನಿರಾಶರಾಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಮೂವರು ಯುವತಿಯರು, ಐ ಮೀನ್ ಮಹಿಳೆಯರು ನರಕದ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಅಲ್ಲಿ ಅವರ ಮೆಡಿಕಲ್ ತಪಾಸಣೆಯಾದನಂತರ ನರಕದ ನಾಯಕ ಯಮನ ಮುಂದೆ ಯಮಕಿಂಕರರು ತಂದು ನಿಲ್ಲಿಸುತ್ತಾರೆ.
ಸ್ವರ್ಗಕ್ಕೆ ಹೋಗಬೇಕಾದರೆ ನನ್ನದೊಂಡು ಕಂಡಿಷನ್ ಇದೆ. ಅದನ್ನು ಪಾಲಿಸಿದರೆ ಮಾತ್ರ ನೀವು ಸ್ವರ್ಗಕ್ಕೆ ಹೋಗಲು ಟಿಕೆಟ್ ಪಡೆಯುತ್ತೀರಿ. ಇಲ್ಲದಿದ್ದರೆ ಸ್ವರ್ಗವೂ ಇಲ್ಲ ನರಕವೂ ಇಲ್ಲ, ಮತ್ತೆ ಭೂಲೋಕಕ್ಕೆ ಕಳಿಸುವುದಾಗಿ ಯಮ ಷರತ್ತು ವಿಧಿಸುತ್ತಾನೆ. ಷರತ್ತಿಗೆ ವಿಧಿಯಿಲ್ಲದೆ ಮೂವರು ಮಹಿಳೆಯರು ಒಪ್ಪಿಕೊಳ್ಳುತ್ತಾರೆ. ಕಂಡಿಷನ್ ಏನೆಂದರೆ, ನರಕದಲ್ಲಿ ಕಿಂಚಿತ್ ಜಾಗವೂ ಇಲ್ಲದಂತೆ ಇರುವೆಗಳು ಹರಿದಾಡುತ್ತಿರುತ್ತವೆ, ಅವುಗಳನ್ನು ಒಂದಿಡೀ ರಾತ್ರಿ ತುಳಿಯಬಾರದು ಎಂಬುದು.
ಏನೇ ಹರಸಾಹಸ ಮಾಡಿದರೂ ಇರುವೆ ಮೆಟ್ಟುವುದನ್ನು ತಪ್ಪಿಸಲು ಒಬ್ಬಾಕೆಗೆ ಸಾಧ್ಯವಾಗುವುದಿಲ್ಲ. ಆಕ್ಷಣ ಪ್ರತ್ಯಕ್ಷನಾದ ಯಮರಾಜ, ವಿಪರೀತ ಕುರೂಪಿ ಗಂಡಸನೊಂದಿಗೆ ಇಡೀ ಜನ್ಮ ಬಾಳುವೆ ಮಾಡೆಂದು, ಅವರಿಬ್ಬರಿಗೆ ಅಲ್ಲೇ ಮದುವೆ ಮಾಡಿಸಿ, ಶಿಕ್ಷೆ ಅನುಭವಿಸಿ ಎಂದು ಭೂಲೋಕಕ್ಕೆ ದಬ್ಬಿಬಿಡುತ್ತಾನೆ. ಸ್ವರ್ಗದ ಸವಿಯನ್ನು ಸವಿಯದೆ, ಒಬ್ಬಳು ಭೂಲೋಕಕ್ಕೆ ಮರಳುತ್ತಾಳೆ.
ಅದನ್ನು ನೋಡಿ ಹೌಹಾರಿದ ಮತ್ತೊಬ್ಬಾಕೆ ಕೂಡ ಧಾವಂತದಲ್ಲಿ ಇರುವೆಯನ್ನು ತುಳಿದುಬಿಡುತ್ತಾಳೆ. ಅವಳನ್ನು ತಕ್ಷಣ ತನ್ನ ಬಳಿಗೆ ಕರೆಸಿಕೊಂಡ ಯಮ, ಚಿತ್ರಗುಪ್ತನಿಗೆ ಹೇಳಿ ಮತ್ತೊಬ್ಬ ವಿಕಾರ ಪುರುಷನನ್ನು ಕರೆಸಿ, ಅಲ್ಲಿಯೇ ಮಹಿಳೆ ಮತ್ತು ವಿಕಾರ ಪುರುಷನಿಗೆ ಗಂಟುಹಾಕಿಸಿ, ಇದೇ ನಿನಗೆ ನಾನು ನೀಡಿದ ಶಿಕ್ಷೆ, ಅನುಭವಿಸು. ಆಲ್ ದಿ ಬೆಸ್ಟ್ ಎಂದು ಹೇಳಿ ಭೂಲೋಕಕ್ಕೆ ಮತ್ತೆ ಕಳುಹಿಸಿಬಿಡುತ್ತಾನೆ.
ಇವರಿಬ್ಬರಿಗಾದ ಗತಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದ ಮತ್ತೊಬ್ಬಾಕೆ ಜಾಣತನದಿಂದ ಒಂದಿಡೀರಾತ್ರಿ ಇರುವೆಗಳನ್ನು ತುಳಿಯದೆ ಪಾರಾಗಿಬಿಡುತ್ತಾಳೆ. ಯಪ್ಪೋ ಅಂತೂ ಗೆದ್ದುಬಿಟ್ಟೆ ಅಂತ ಸ್ವರ್ಗದ ಕನಸು ಕಾಣುತ್ತ ನಿಂತಿರುತ್ತಾಳೆ. ಆಕೆಯನ್ನು ಕರೆಸಿಕೊಂಡ ಯಮ, ಚಿಟಿಕೆ ಹೊಡೆದು ಅತಿ ಸುರಸುಂದರಾಂಗನ ಜೊತೆ ಆಕೆಯ ಮದುವೆ ಮಾಡಿಬಿಡುತ್ತಾನೆ. ಆದರೆ, ಅವರಿಬ್ಬರನ್ನು ಸ್ವರ್ಗಕ್ಕೆ ಕಳುಹಿಸದೆ ಮತ್ತು ಭೂಲೋಕಕ್ಕೇ ಅಟ್ಟಿಬಿಡುತ್ತಾನೆ.
ಸುರಸುಂದರಾಂಗ ಸಿಕ್ಕರೂ ಸ್ವರ್ಗಕ್ಕೆ ಜಿಗಿಯದೆ, ಭೂಲೋಕಕ್ಕೆ ಬಂದ ಮಹಿಳೆ, ಇದೇಕೆಂದು ಸುಂದರನನ್ನು ತೀವ್ರ ನಿರಾಶೆಯಿಂದ ಪ್ರಶ್ನಿಸುತ್ತಾಳೆ. ಅದಕ್ಕೆ ಸುರಸುಂದರಾಂಗ, "ಅಯ್ಯೋ ಏನು ಹೇಳಲಿ, ನನಗೂ ಇದೇ ಕಂಡಿಷನ್ ಇಟ್ಟಿದ್ದ ಯಮಣ್ಣ. ನಾನು ಕೂಡ ಇರುವೆ ತುಳಿದಿದ್ದರಿಂದ ನನಗೀಗತಿ ಬಂದಿದೆ" ಎಂದು ಪೆಚ್ಚುಮೋರೆ ಹಾಕಿ ಹೇಳುತ್ತಾನೆ.