ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೇಮಕಾತಿ; ಸ್ಪಷ್ಟನೆಗಳು
ಶಿವಮೊಗ್ಗ, ನವೆಂಬರ್ 27; ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಶನಿವಾರ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯ ವೀಕ್ಷಣೆಯನ್ನು ಬಿ. ಎಸ್. ಯಡಿಯೂರಪ್ಪ ವೀಕ್ಷಿಸಿದರು. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕರು, "ಇದೇ ಡಿಸೆಂಬರ್ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣವಾಗುತ್ತಿದ್ದು, ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು" ಎಂದು ಮಾಹಿತಿ ನೀಡಿದರು.
ಬಿಎಸ್ವೈ ಕನಸು ನನಸು; ಶಿವಮೊಗ್ಗ ಏರ್ ಪೋರ್ಟ್ ಕೆಲಸ ಆರಂಭ
ನೇಮಕಾತಿ ಆರಂಭಗೊಂಡಿಲ್ಲ; ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ನಡೆಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಪತ್ರಕರ್ತರು ಸಂಸದರ ಗಮನ ಸೆಳೆದರು.
ಉಡಾನ್ ಯೋಜನೆಯಡಿ ಬೆಂಗಳೂರು-ಜಾಮ್ ನಗರ ನೇರ ವಿಮಾನ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಬಿ. ವೈ. ರಾಘವೇಂದ್ರ, "ಶಿವಮೊಗ್ಗ ವಿಮಾನ ನಿಲ್ದಾಣದ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಯಾರೂ ಸಹ ಇಂತಹ ಪ್ರಕಟಣೆಗಳನ್ನು ನೋಡಿ ಮೋಸ ಹೋಗಬೇಡಿ" ಎಂದು ಸ್ಪಷ್ಟಪಡಿಸಿದರು.
ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ಮಾತನಾಡಿದ ಸಂಸದರು, "ವಿಮಾನ ನಿಲ್ದಾಣದ ಭದ್ರತೆ ಉಸ್ತುವಾರಿಯನ್ನು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಗೆ ವಹಿಸುವ ಸಾಧ್ಯತೆ ಇದೆ" ಎಂದರು.
ಯಡಿಯೂರಪ್ಪ ಕನಸು; ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಬಿ. ಎಸ್. ಯಡಿಯೂರಪ್ಪ ಕನಸಾಗಿದೆ. ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೇ ಯೋಜನೆ ಸಿದ್ಧವಾಗಿತ್ತು. ಆದರೆ ಹಲವಾರು ಅಡೆ-ತಡೆಗಳ ಕಾರಣ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ.
2019ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದ್ದ ಅಡೆ-ತಡೆಗಳನ್ನು ನಿವಾರಣೆ ಮಾಡಿದರು. ಅಂತಿಮವಾಗಿ ಶಂಕುಸ್ಥಾಪನೆ ಆಗುವ ಮೂಲಕ ಯೋಜನೆಗೆ ಚಾಲನೆ ಸಿಕ್ಕಿತ್ತು.
ಮೊದಲ ಪ್ರಸ್ತಾವಿತ ಯೋಜನೆಯಂತೆ ವಿಮಾನ ನಿಲ್ದಾಣದ ರನ್ ವೇ 1,200 ಮೀಟರ್ ಉದ್ದ ಇರಲಿದೆ ಎಂದು ಹೇಳಲಾಗಿತ್ತು. ಬಳಿಕ ನಡೆದ ವಿವಿಧ ಹಂತದ ಸಭೆಯಲ್ಲಿ ರನ್ ವೇಯನ್ನು 1,900 ಮೀಟರ್ಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿತು. ಬಳಿಕ ಅದಕ್ಕೆ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಲಾಗಿದೆ.
ಶಿವಮೊಗ್ಗ ನಗರದ ಹೊರವಲಯದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. 662.38 ಎಕರೆಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯ ವೆಚ್ಚ 220 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಒಟ್ಟು ಎರಡು ಹಂತದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.