Transport Recruitment: ನೇಮಕಾತಿ ಮುಂಬಡ್ತಿ ಅಕ್ರಮದ ವರದಿ ನೀಡಿ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಏಪ್ರಿಲ್ 02: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಆಡಳಿತ ವಿಭಾಗದ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಅಡಿ ನೇಮಕವಾಗಲು ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ ಹುದ್ದಗೆ ಆಡಳಿತ ವಿಭಾಗದ ಹುದ್ದೆಗಳ ಪ್ರವೇಶ ಮತ್ತು ಮುಂಬಡ್ತಿ ಪಡೆಯುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹುದ್ದೆಗಳಲ್ಲಿರುವವರು ಮುಂಬಡ್ತಿ ಪಡೆಯಲು ಅಸ್ತಿತ್ವದಲ್ಲೇ ಇಲ್ಲದ ಕಾಲೇಜುಗಳ ಹೆಸರಿನಲ್ಲಿ 10 ರಿಂದ 15 ಸಾವಿರ ರೂಪಾಯಿಗಳಿಗೆ ನಕಲಿ ಅಂಕಪಟ್ಟಿ ಪಡೆದು ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಲಾಗಿದೆ. ಹಲವಾರು ಹುದ್ದೆ ಗಿಟ್ಟಿಸಿಕೊಂಡಿದ್ದು ಬಡ್ತಿಯಲ್ಲಿ ಭ್ರಷ್ಟಾಚಾರವಾಗಿದ್ದರ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು.

ಇದರ ಬೆನ್ನಲ್ಲೆ ಸರ್ಕಾರ ಈ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021, ದಿನಾಂಕ 12-10-2022 ರ ಕರ್ನಾಟಕ ರಾಜ್ಯಪತ್ರ No.SARIE 40 SAESE 2021( P-1) ಅನ್ವಯ ಶೇಕಡ 95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಡೆಸಲಾಗಿದೆ.
ಇದರಲ್ಲಿಯೇ ಶೇಕಡ 5 ರಷ್ಟು ಹುದ್ದೆಗಳನ್ನು ಮಾತ್ರ ಬಡ್ತಿ ಮೂಲಕ ತುಂಬಲು ತಿಳಿಸಲಾಗಿದೆ. ಶೇಕಡ 5ಕ್ಕೆ ಮೀರದಂತೆ ಬಡ್ತಿ ನೀಡಲಾಗಿದೆಯೇ? 2022 ರಿಂದ ಎಷ್ಟು ಮಂದಿಗೆ ಬಡ್ತಿ ನೀಡಲಾಗಿದೆ. ಮತ್ತು ಈ ರೀತಿ ಬಡ್ತಿ ಪಡೆದ ಸಿಬ್ಬಂದಿಗಳ ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆ/ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಕಳುಹಿಸಿ ನೈಜತೆಯನ್ನು ಪರಿಶೀಲಿಸಲಾಗಿದೆಯೇ ಎಂಬುದರ ಬಗ್ಗೆ ವರದಿ ನೀಡುವಂತೆ ಅವರು ನಿರ್ದೇಶಿಸಿದರು.
ಈ ರೀತಿ ಬಡ್ತಿ ನೀಡಿರುವಂತಹ ಪ್ರಕರಣಗಳಲ್ಲಿ ಯಾವುದಾದರೂ ಲೋಪ- ದೋಷವಾಗಿದ್ದರೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತಿನ ಕ್ರಮ ಜರುಗಿಸುವ ಸಂಬಂಧ ಸಮಗ್ರ ವರದಿಯನ್ನು 15 ದಿನಗಳೊಳಗಾಗಿ ಸಲ್ಲಿಸಲು ಸೂಚಿಸಿದ್ದನ್ನು ಅವರು ಖಚಿತಪಡಿಸಿದರು.












Click it and Unblock the Notifications