RBKMUL Recruitment; 24 ಹುದ್ದೆಗೆ ಅರ್ಜಿ ಕರೆದ ರಾಬಕೊವಿ
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ 24 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ.
ಬೆಂಗಳೂರು, ಜನವರಿ 29; ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು 15/2/2023 ಕೊನೆಯ ದಿನ.
ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 24 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಖುದ್ದಾಗಿ, ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ. ಜನವರಿ 26 ರಿಂದ ಫೆಬ್ರವರಿ 15ರ ತನಕ ಅರ್ಜಿ ಸಲ್ಲಿಸಬಹುದು.
ಅನುಕಂಪ ಆಧಾರದ ನೇಮಕಾತಿ; ಕರ್ನಾಟಕ ಸರ್ಕಾರದ ಸ್ಪಷ್ಟನೆಗಳು
ಕರ್ನಾಟಕ ಸರ್ಕಾರದ ಆದೇಶ 1/7/2017ರ ಅನ್ವಯ ನೇರ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ ಮೀಸಲಾತಿ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮುಂತಾದ ಮಾಹಿತಿಗಳನ್ನು ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ನೇಮಕಾತಿ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಲಬುರಗಿಯಲ್ಲಿ ಉದ್ಯೋಗ ಮೇಳ, ಹೆಸರು ನೋಂದಾಯಿಸಿ
ಒಕ್ಕೂಟದಲ್ಲಿ ಖಾಲಿ ಇರುವ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯ ಪೂರ್ಣ ವಿವರಗಳನ್ನು ರಾಯಚೂರು, ಬಳ್ಳಾರಿ ಕೊಪ್ಪಳ ಮತ್ತು ವಿಜಯ ನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ rbkmul.in ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಕರ್ನಾಟಕದ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ಹೊಂದಲು ವಿವೇಕಾನಂದರ ಯೋಜನೆ ಜಾರಿ: ಬೊಮ್ಮಾಯಿ
ಯಾವ-ಯಾವ ಹುದ್ದೆಗಳು
ಡೇರಿ ಮೇಲ್ವಿಚಾರಕರು ಗ್ರೇಡ್-1 ಒಟ್ಟು 6 ಹುದ್ದೆಗಳು. ಆಡಳಿತ ಸಹಾಯಕ ಗ್ರೇಡ್-3 6 ಹುದ್ದೆಗಳು. ಲೆಕ್ಕ ಸಹಾಯಕ ಗ್ರೇಡ್ -3 2 ಹುದ್ದೆಗಳು. ಕಿರಿಯ ತಾಂತ್ರಿಕ (ಬಾಯ್ಲರ್) 5 ಹುದ್ದೆಗಳು. ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ಸ್ ಮೆಕಾನಿಕಲ್) 2 ಹುದ್ದೆಗಳು. ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್) 2 ಹುದ್ದೆಗಳು. ಕಿರಿಯ ತಾಂತ್ರಿಕ (ರೆಫ್ರಿಜರೇಶನ್ ಮತ್ತು ಎಸಿ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಗಳಿಗೆ ಸೂಚನೆಗಳು
ಮೇಲಿನ ಹುದ್ದೆಗಳಲ್ಲಿ ಕಿರಿಯ ತಾಂತ್ರಿಕ, ಹುದ್ದೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು ಅಥವ ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ನಲ್ಲಿ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ತರಬೇತಿ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುವುದು.
ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ವೃಂದ, ಸ್ಥಳಿಯೇತರ ವೃಂದ ಅನ್ವಯ ಮೀಸಲಾತಿ ಇದೆ. ಮಹಿಳೆ/ ಗ್ರಾಮೀಣ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿರಿಸಿದ ರಿಕ್ತ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಆಯಾ ವರ್ಗಕ್ಕೆ ಸೇರಿದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ.
ಹುದ್ದೆಗಳ ಬದಲಾವಣೆಯ ಹಕ್ಕು
ಈ ಪ್ರಕಟಣೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ (ಹೆಚ್ಚು/ ಕಡಿಮೆ) ಮಾಡುವ ಹಕ್ಕನ್ನು ಒಕ್ಕೂಟದ ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಮೊದಲು ಸಲ್ಲಿಸಿದ ಅರ್ಜಿಯನ್ನು ಮಾತ್ರ ಮಾನ್ಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆ ಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು. ನೇಮಕಾತಿ ಅರ್ಜಿಗಳನ್ನು ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ದಾಖಲೆಗಳನ್ನು ಅಥವಾ ಮಾಹಿತಿಗಳನ್ನು ನೀಡಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿ ಶುಲ್ಕದ ವಿವರಗಳು
ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಪಾವತಿ ಮಾಡಬೇಕಾದ ಶುಲ್ಕ 500 ರೂ. ಬ್ಯಾಂಕ್ ಶುಲ್ಕ ಪ್ರತ್ಯೇಕ. ಇತರೆ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕ ಪಾವತಿಸಬೇಕು (ಬ್ಯಾಂಕ್ ಶುಲ್ಕ ಪ್ರತ್ಯೇಕ). ಅರ್ಜಿ ಶುಲ್ಕವನ್ನು 15/2/2023ರ ನಂತರ ಪಾವತಿ ಮಾಡಿದಲ್ಲಿ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ. ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಬಯಸಿದರೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿ ಮಾಡದ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ.
ಸಾಮಾನ್ಯ ಸೂಚನೆಗಳು
ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನೇಮಕಾತಿ ಪ್ರಕಟಣೆಯಲ್ಲಿ ಆಯಾ ಹುದ್ದೆಗಳಿಗೆ ನಿಗದಿ ಮಾಡಿದ ಕನಿಷ್ಠ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಲೇಬೇಕು.
ಒಕ್ಕೂಟದ ಅನುಮೋದಿತ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಲಾಗಿರುವ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಮಾನಾಂತರ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ. ಕನ್ನಡ ಭಾಷಾ ಜ್ಞಾನ (ಓದುವುದು, ಬರೆಯುವುದು ಮತ್ತು ಮಾತನಾಡುವುದು) ಕಡ್ಡಾಯವಾಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಪರೀಕ್ಷಾವಧಿ, ಒಕ್ಕೂಟವು ನಿಗದಿಪಡಿಸಿದಂತೆ ಇರುತ್ತದೆ. ಅವಶ್ಯವಿದ್ದಲ್ಲಿ ಪರೀಕ್ಷಾವಧಿ ವಿಸ್ತರಿಸಲಾಗುವುದು. ಪರೀಕ್ಷಾವಧಿಯಲ್ಲಿ ಅಭ್ಯರ್ಥಿಗಳ ಸೇವೆ ತೃಪ್ತಿಕರವಾಗಿದ್ದಲ್ಲಿ ಮಾತ್ರ ಅಂತಹವರ ಸೇವೆಯನ್ನು ಖಾಯಂಗೊಳಿಸಲಾಗುವುದು.
ಸಹಾಯವಾಣಿ ಸಂಖ್ಯೆಗಳು; 9108538218. ದಿನಾಂಕ 26/01/2023 ರಿಂದ 15/02/2023 ರವರೆಗೆ. ಸಮಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ.