Railway Jobs: ನೈಋತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡ ಕಡೆಗಣನೆ, ಕನ್ನಡಿಗರ ಅರ್ಜಿ ತಿರಸ್ಕಾರ!
ಬೆಂಗಳೂರು, ಅಕ್ಟೋಬರ್ 27: ರೈಲ್ವೆ ನೇಮಕಾತಿಯಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇದ್ದರೂ, ಸ್ವತಃ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಎಲ್ಲ ನೇಮಕಾತಿ ಕನ್ನಡದಲ್ಲಿಯೇ ನಡೆಸುವುದಾಗಿ ಘೋಷಿಸಿದ್ದರು. ಹೀಗಿದ್ದರೂ ಸಹಿತ ಹುಬ್ಬಳ್ಳಿ ನೈಋತ್ಯ ರೈಲ್ವೆ ವಿವಿಧ ಹುದ್ದೆಗಳ ನೇಮಕದಲ್ಲಿ ಕನ್ನಡ ಭಾಷೆ ಕಡೆಗಣಿಸಲಾಗಿದೆ. ಕನ್ನಡಿಗರ ಅರ್ಜಿ ತಿರಸ್ಕೃತಗೊಳ್ಳುತ್ತಿವೆ.
ಹೌದು, ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ವಿವಿಧ 46 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಕೇಂದ್ರ ಸರ್ಕಾರ ಹುದ್ದೆ ಪಡೆಯುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

ಈ ಸಂಬಂಧ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು, ಇಲಾಖೆಯ ಕೆಲಸ ಗಿಟ್ಟಿಸಿಕೊಳ್ಳಲು ಮುಂದಾದ ಕನ್ನಡಿಗರು ಕನ್ನಡದಲ್ಲಿಯೇ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಕನ್ನಡ ಭಾಷೆಯಲ್ಲಿ ಬಂದ ಅರ್ಜಿಗಳನ್ನು ನೈಋತ್ಯ ರೈಲ್ವೆ ವಲಯವು ತಿರಸ್ಕರಿಸಿದೆ.
ಒಂದು ಕಡೆ ರೈಲ್ವೆ ಇಲಾಖೆಯು ಎಲ್ಲ ನೇಮಕಾತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ತಿಳಿಸಿದೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಅದರ ಅಂಗವಾದ ನೈಋತ್ಯ ರೈಲ್ವೆಯು ಕನ್ನಡ ಭಾಷೆಯಲ್ಲಿ ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಅಭ್ಯರ್ಥಿಗಳು, ಕನ್ನಡಪರ ಹೋರಾಟಗಾರರ ಪ್ರಶ್ನೆಯಾಗಿದೆ.
ಈ ಹಿಂದೆ ಸಚಿವ ವಿ.ಸೋಮಣ್ಣ ಅವರು, ಬಡ್ತಿ ಹಾಗೂ ಇನ್ನಿತರ ಉದ್ದೇಶಗಳ ಪರೀಕ್ಷೆಯನ್ನು, ನೇಮಕಾತಿಯನ್ನು ಕನ್ನಡದಲ್ಲಿಯೇ ನಡೆಸುವಂತೆ ನಿರ್ದೇಶನ ನೀಡಿದ್ದರು. ಹೀಗಿದ್ದರೂ ಸಹ ಕರ್ನಾಟಕ ವಲಯದಲ್ಲಿ ವಿವಿಧ ಕ್ರೀಡಾಪಟುಗಳಿಗಾಗಿ ಗ್ರೂಪ್ ಸಿ ಮತ್ತು ಡಿ.ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲಾಗುತ್ತಿದೆ.
ನೈಋತ್ಯ ವಲಯ ಹೇಳೋದೇನು?
ಆಹ್ವಾನಿಸಲಾದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಕೈ ಬರಹದಲ್ಲಿ ಬರೆದು ಅರ್ಜಿಗಳನ್ನು ಸೂಕ್ತ ವಿಳಾಸಕ್ಕೆ ಕಳುಹಿಸಬೇಕು. ಈ ಭಾಷೆ ಬಿಟ್ಟು ಬೇರೆ ಭಾಷೆಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ, ಅವುಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಹೇಳಿದೆ. ರೈಲ್ವೆಯ ಈ ನಡೆ ಕನ್ನಡಿಗರ, ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೈಋತ್ಯ ವಲಯವು ಇಂಗ್ಲಿಷ್ನಲ್ಲಿ ಅರ್ಜಿ ನಮೂನೆ ನೀಡಿದೆ. ಆದರೆ ಹಿಂದಿ ಭಾಷೆಯಲ್ಲಿ ಅರ್ಜಿ ನೀಡಲಾಗಿಲ್ಲ. ಹೀಗಿದ್ದರೂ ಇಂಗ್ಲಿಷ್ ಅರ್ಜಿಯಲ್ಲಿ ಹಿಂದಿ ಭಾಷೆಯಲ್ಲಿ ಮಾಡಿದರೆ ತಕರಾರು ತೆಗೆಯದ ರೈಲ್ವೆ ಅಧಿಕಾರಿಗಳು ಕನ್ನಡದಲ್ಲಿ ಭರ್ತಿ ಮಾಡಿ ಕಳುಹಿಸಿದರೇ ಏಕೆ ತಿರಸ್ಕೃರಿಸುತ್ತಿದೆ. ಪರೋಕ್ಷವಾಗಿ ಹಿಂದಿ ಹೇರಿಕೆಗೆ ಮುಂದಾಯಿತೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.
ನೇಮಕಾತಿ ವಿವರ
ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ವ್ಯಾಪ್ತಿಯಲ್ಲಿ ಒಟ್ಟು 46 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕ್ರೀಡಾಪಟುಗಳ ಆಯ್ಕೆಗಾಗಿ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಆಯ್ಕೆಯ ಟ್ರಯಲ್ ಮಾಡಲಾಗುವುದು. ಈ ನೇಮಕಾತಿ ವಲಯಮಟ್ಟಕ್ಕೆ ಸಿಮೀತವಾಗಿ ನೇಮಕಗೊಳ್ಳುವ ಹುದ್ದೆಗಳಾಗಿವೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.












Click it and Unblock the Notifications