KPSC Recruitment; 2 ಸಾವಿರ ಹುದ್ದೆ, ಇಲಾಖಾವಾರು ವಿವರಗಳು
ಬೆಂಗಳೂರು, ನವೆಂಬರ್ 10; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಗೆ ಪ್ರಸ್ತಾವನೆ ಸಲ್ಲಿಸಿರುತ್ತವೆ. ಬಾಕಿ ಇರುವ ನೇಮಕಾತಿಯ ಇಲಾಖಾವಾರು ಹುದ್ದೆಗಳ ಮಾಹಿತಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ.
ಸರ್ಕಾರದಿಂದ ಅನುಮತಿ ಸಿಗದ ಕಾರಣ, ಮುಂದಿನ ವರ್ಷದ ನೇಮಕಾತಿ ಸೇರಿದಂತೆ ಒಟ್ಟು 2000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಾಕಿ ಇದೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಮುಂದಿನ ವರ್ಷ ಈ ನೇಮಕಾತಿ ನಿರೀಕ್ಷೆ ಮಾಡಬಹುದು.

ವಿವಿಧ ಇಲಾಖೆಗಳಿಂದ ಬಂದಿರುವ ಪ್ರಸ್ತಾವನೆ/ ಬಾಕಿ ಇರುವುದು ಸೇರಿ ಒಟ್ಟು ಪ್ರಸ್ತಾವನೆಗಳ ವಿವರಗಳನ್ನು ಕೆಪಿಎಸ್ಸಿ ಪ್ರಕಟಿಸಿದೆ. ಇಲಾಖೆಗಳು ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡುವುದನ್ನು ಸಹ ಈಗ ಆಲ್ನೈಲ್ ಮಾಡಲಾಗಿದೆ. ಯಾವ ಇಲಾಖೆಯ ಎಷ್ಟು ಹುದ್ದೆಗಳು? ಎಂಬ ವಿವರ ಇಲ್ಲಿದೆ.
ಕೆಪಿಎಸ್ಸಿ ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ಬಾಕಿ ಇರುವ, ಮುಂದಿನ ವರ್ಷ ಕೈಗೊಳ್ಳಬೇಕಾದ ನೇಮಕಾತಿಗಳ ಅಂದಾಜು ಪಟ್ಟಿಯನ್ನು ತಯಾರು ಮಾಡುತ್ತದೆ. ಈಗ ಇದೇ ಮಾದರಿ ಪಟ್ಟಿಯನ್ನು ತಯಾರು ಮಾಡಿ, ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಈ ನೇಮಕಾತಿಯನ್ನು ಆರಂಭಿಸಲಾಗುತ್ತದೆ.
ಇಲಾಖೆ, ಹುದ್ದೆಗಳ ವಿವರ; ಕರ್ನಾಟಕ ಲೋಕಸೇವಾ ಆಯೋಗದ ಮಾಹಿತಿ ಪ್ರಕಾರ ಪಶುವೈದ್ಯಾಧಿಕಾರಿ 400, ಕೃಷಿ ಸಹಾಯಕ ಅಧಿಕಾರಿ 300, ಮುಖ್ಯೋಪಾಧ್ಯಾಯರು 140, ಸಹಾಯಕ ಇಂಜಿನಿಯರ್ (ಜಲಸಂಪನ್ಮೂಲ) 100, ಕಿರಿಯ ಇಂಜಿನಿಯರ್ (ಜಲಸಂಪನ್ಮೂಲ) 300, ಸಹಾಯಕ ಇಂಜಿನಿಯರ್ (ಬಿಬಿಎಂಪಿ) 100, ಮೋಟಾರು ವಾಹನ ನಿರೀಕ್ಷಕ 76, ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿ 43 ಹುದ್ದೆಗಳು ಭರ್ತಿಯಾಗಬೇಕಿದೆ.
ವಿವಿಧ ಇಲಾಖೆಗಳು ಈಗ ಆನ್ಲೈನ್ ಮೂಲಕವೇ ತಮ್ಮಲ್ಲಿ ಯಾವ-ಯಾವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಬೇಕು. ಹಿಂದಿನಂತೆ ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಬೇಕಿಲ್ಲ, ಇದಕ್ಕಾಗಿಯೇ ಲಾಗಿನ್ ಐಡಿ ಸಿದ್ಧಪಡಿಸಲಾಗಿದೆ. ಈ ಕುರಿತು ಕೆಪಿಎಸ್ಸಿ ಎಲ್ಲಾ ಇಲಾಖೆಗಳಿಗೆ ಪತ್ರವನ್ನು ಬರೆದು ಮಾಹಿತಿ ನೀಡಿದೆ.
ಇವುಗಳಲ್ಲಿ ಕೆಲವು ನೇಮಕಾತಿಗಳ ಕುರಿತು ಕೋರ್ಟ್ಗಳಲ್ಲಿ ವಿಚಾರಣೆಗಳು ಸಹ ನಡೆಯುತ್ತಿವೆ. ಆದ್ದರಿಂದ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ್ದರೂ ಸಹ ಕೋರ್ಟ್ ಆದೇಶದ ಕಾರಣ ಮುಂದಿನ ಪ್ರಕ್ರಿಯೆ ಬಾಕಿ ಇದೆ. ಅಂತಿಮ ಆದೇಶ ಪ್ರಕಟವಾದರೆ ನೇಮಕಾತಿಗೆ ಚಾಲನೆ ನೀಡಲಾಗುತ್ತದೆ.
ಕೆಪಿಎಸ್ಸಿ ವಿವಿಧ ಇಲಾಖೆಗಳಿಂದ ಬರುವ ನೇಮಕಾತಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಯಾವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ತುರ್ತಾಗಿ ನೇಮಕಾತಿ ಅಗತ್ಯ ಇರುವ ಇಲಾಖೆಗಳು, ನೇಮಕಾತಿ ವಿಧಾನ, ಹೊಸ ನೇಮಕಾತಿಯಿಂದ ಆಗುವ ವೆಚ್ಚ ಮುಂತಾದ ಮಾಹಿತಿಗಳ ಅಂದಾಜು ಪಟ್ಟಿ ತಯಾರು ಮಾಡಿ ಸರ್ಕಾರಕ್ಕೆ ಕಳಿಸುತ್ತದೆ.
ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟಿಸುತ್ತದೆ. ಒಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ, ಲಿಖಿತ ಪರೀಕ್ಷೆ, ಆಯ್ಕೆ ಪಟ್ಟಿ ತಯಾರು, ಅಂತಿಮ ಅಧಿಸೂಚನೆ ಹೀಗೆ ವಿವಿಧ ಪ್ರಕ್ರಿಯೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಿದೆ.
2023ರ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಪಕ್ಷ ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು. ಆಡಳಿತ ಯಂತ್ರವನ್ನು ಚುರುಕುಗೊಳಿಸಲು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಕಾರ್ಯದಲ್ಲಿ ಬ್ಯುಸಿಯಾಗಿರುವ ಸರ್ಕಾರ ಈ ವರ್ಷ ಹೊಸ ನೇಮಕಾತಿಗಳಿಗೆ ಅವಕಾಶ ನೀಡುವ ನಿರೀಕ್ಷೆ ಕಡಿಮೆ ಇದೆ. 2024ರಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಹಣಕಾಸು ಇಲಾಖೆ ಕೆಪಿಎಸ್ಸಿಗೆ ಹಸಿರು ನಿಶಾನೆ ತೋರಿಸುವ ನಿರೀಕ್ಷೆ ಇದೆ.












Click it and Unblock the Notifications