KKRTC Recruitment 2022 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ, ವಿವರಗಳು
ಕಲಬುರಗಿ, ಸೆಪ್ಟೆಂಬರ್ 12; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 30/9/2022 ಕೊನೆಯ ದಿನವಾಗಿದೆ.
ನಿಗಮದಲ್ಲಿ ಖಾಲಿ ಇರುವ ದರ್ಜೆ-3 ಮೇಲ್ವಿಚಾರಕೇತರ ಮಿಕ್ಕುಳಿದ ವೃಂದದ ಕ. ರಾ. ಸಾ. ಪೇದೆ ಹಿಂಬಾಕಿ ಹುದ್ದೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಪದವೃಂದ ಮತ್ತು ನೇಮಕಾತಿ) ನಿಯಮಾವಳಿಗಳು-1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳು ಸಲ್ಲಿಸುವ ಎಲ್ಲಾ ದಾಖಲೆಗಳು/ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದುಕೊಂಡಿರತಕ್ಕದ್ದು ಮತ್ತು ಚಾಲ್ತಿಯಲ್ಲಿರತಕ್ಕದ್ದು. ಸದರಿ ದಾಖಲೆಗಳನ್ನು ದಾಖಲಾತಿ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
ಅರ್ಜಿಗಳನ್ನು ಭರ್ತಿ ಮಾಡುವ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ನೀಡಲಾದ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಂಡು ನಂತರವೇ ಭರ್ತಿ ಮಾಡಬೇಕು. ವಿದ್ಯಾಭ್ಯಾಸಕ್ಕಾಗಿ/ ಶಿಕ್ಷಣಕ್ಕಾಗಿ/ ಸರ್ಕಾರಿ ಸೌಲಭ್ಯಕ್ಕಾಗಿ ಅಥವ ಸಾಲಕ್ಕಾಗಿ ಎಂದು ಪಡೆದಿರುವ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.

ಹುದ್ದೆಗಳ ಸಂಖ್ಯೆ, ವಯೋಮಿತಿ
ಕ. ಕ. ರ. ಸಾ. ನಿಗಮದ (ಹಿಂದಿನ ಈ. ಕ. ರ. ಸಾ. ಸಂಸ್ಥೆಯ) ಜಾಹೀರಾತು ಸಂಖ್ಯೆ 03/2014 ದಿನಾಂಕ 3/9/2014ರ ಆಯ್ಕೆ ಸಮಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿಗಳ ಕೊರತೆಯಿಂದಾಗಿ ಉದ್ಭವವಾದ ಹಾಗೂ ಆಯ್ಕೆಗೊಂಡ ಹುದ್ದೆಯಲ್ಲಿ ಹಾಜರಾಗದ ಕಾರಣ ಬಾಕಿ ಉಳಿದಿರುವ ಮಿಕ್ಕುಳಿದ ವೃಂದದ ಒಟ್ಟು 2 ಹಿಂಬಾಕಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವರ್ಗೀಕರಣ ಎಸ್ಸಿ 1, ಎಸ್ಟಿ 1, ಒಟ್ಟು 2 ಹುದ್ದೆಗಳು
ನೇಮಕಗೊಂಡ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ 9,100 ತರಬೇತಿ ಭತ್ಯೆ ಮತ್ತು ಪರೀಕ್ಷಾರ್ಥ ಸೇವಾವಧಿಯಲ್ಲಿ 11,640-140-11920-170-12600-250-14100-320-15700 ವೇತನ ಶ್ರೇಣಿ ನಿಗದಿ ಮಾಡಲಾಗಿದೆ.

ವಿದ್ಯಾರ್ಹತೆಯ ವಿವರಗಳು
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು, 2ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ/ ವಾಯುದಳದಲ್ಲಿ ತತ್ಸಮಾನ ದರ್ಜೆಯ ಸರ್ಟಿಫಿಕೇಟ್ ಹೊಂದಿರಬೇಕು.
ವಿಶೇಷ ಸೂಚನೆ: ಆಯ್ಕೆಗೊಳ್ಳುವ ಅಭ್ಯರ್ಥಿಗಳು ನಿಯಮಾನುಸಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು ಉತ್ತೀರ್ಣರಾಗತಕ್ಕದ್ದು.
ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ವಯೋಮಿತಿಯ ಮಾಹಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡಂತೆ ವಯೋಮಿತಿ ಹೊಂದಿರತಕ್ಕದು. ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.
ಇಲಾಖಾ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷ ಮೀರದಂತೆ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ನೇಮಕಾತಿ ಹೊಂದಿ ಪರೀಕ್ಷಾರ್ಥ ಸೇವೆಯ ಮೇಲೆ ನಿಯೋಜಿಸಲ್ಪಟ್ಟ ದಿನಾಂಕದಿಂದ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ 1 ವರ್ಷ ವಯೋಮಿತಿಯಲ್ಲಿ ರಿಯಾಯಿತಿಯನ್ನು ನೀಡಲಾಗುವುದು. ಆದರೆ ಅವರ ವಯಸ್ಸು 45 ವರ್ಷಗಳಿಗೆ ಮೀರಿರಬಾರದು.
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಇಲಾಖಾ ಅಭ್ಯರ್ಥಿಗಳು ವಯೋಮಿತಿ ವಿನಾಯಿತಿಯನ್ನು ಹೊರತುಪಡಿಸಿ ಜಾಹೀರಾತಿನಲ್ಲಿ ತಿಳಿಸಿರುವ ಉಳಿದೆಲ್ಲಾ ಷರತ್ತು ಮತ್ತು ಮಾನದಂಡಗಳ ವಿಷಯದಲ್ಲಿ ಇತರೆ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಬೇಕಿರುತ್ತದೆ.

ಅರ್ಜಿ ಶುಲ್ಕದ ಮಾಹಿತಿ
ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅದನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಆನ್ಲೈನ್ ಅರ್ಜಿಯೊಂದಿಗೆ ಪಾವತಿಸತಕ್ಕದ್ದು. ಆನ್ಲೈನ್ ಪಾವತಿ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಶುಲ್ಕ ಪಾವತಿಗೆ ಅವಕಾಶ ಇರುವುದಿಲ್ಲ. ಅಲ್ಲದೇ, ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ/ ಯಾವುದೇ ಸಂದರ್ಭದಲ್ಲಿಯೂ ವಾಪಸ್ ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗತಕ್ಕದ್ದು. ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ದಿನಾಂಕ, ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಟ 30 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಬೇಕು. ಕನಿಷ್ಟ 30 ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ 1:5ರ ಅನುಪಾತದಲ್ಲಿ ಮೆರಿಟ್ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುವುದು.












Click it and Unblock the Notifications