ಕಲಬುರಗಿ; ಮಾ. 15ರಂದು, ಮೈಸೂರಿನಲ್ಲಿ ಮಾ.19ರಂದು ಉದ್ಯೋಗ ಮೇಳ
ಕಲಬುರಗಿ, ಮಾರ್ಚ್ 13; ಕಲಬುರಗಿಯಲ್ಲಿ ಮಾರ್ಚ್ 15 ಮತ್ತು 19ರಂದು ಮೈಸೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿ ಯುವಕ/ ಯುವತಿಯರು ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.
ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯ ಮಾದರಿ ವೃತ್ತಿ ಕೇಂದ್ರದ ಅಡಿಯಲ್ಲಿ ಕಲಬುರಗಿಯ ಎಂ. ಎಸ್. ಕೆ. ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 15 ರಂದು ಉದ್ಯೋಗ ಮೇಳ ನಡೆಯಲಿದೆ.
ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಹೇಳಿದ್ದಾರೆ. ಉದ್ಯೋಗ ಮೇಳದಲ್ಲಿ ಕಲಬುರಗಿಯ ಶ್ರೀರಾಮ ಫೈನಾನ್ಸ್ ಕಂಪನಿಯು ಭಾಗವಹಿಸುತ್ತಿದ್ದು, ಅಸಿಸ್ಟಂಟ್ ಮ್ಯಾನೇಜರ್, ಬ್ರ್ಯಾಂಚ್ ಮಾನೇಜರ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.

ಯಾವುದೇ ಪದವೀಧರರು, ಅನುಭವವುಳ್ಳ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳ ವಯೋಮಿತಿ 35 ವರ್ಷದೊಳಗಿರಬೇಕು. ಅನುಭವ ಇಲ್ಲದ ಅಭ್ಯರ್ಥಿಗಳ ವಯೋಮಿತಿ 30 ವರ್ಷದೊಳಗಿರಬೇಕು.
ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡುವುದಿಲ್ಲ ಮತ್ತು ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08472-274846.
ಮಾರ್ಚ್ 19ರಂದು ಉದ್ಯೋಗ ಮೇಳ; ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಮೈಸೂರಿನ ಜೆ. ಎಸ್. ಎಸ್. ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಮಾರ್ಚ್ 19 ರಂದು ಬೆಳಗ್ಗೆ 9 ಗಂಟೆಗೆ ವಿಕಲಚೇತನರಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಸಂಸ್ಥೆಯು 1997 ರಿಂದ ಭಾರತದಲ್ಲಿನ ದೃಷ್ಟಿಹೀನರ, ವಿಕಲಚೇತನರು ಮತ್ತು ಅವಕಾಶವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ವೀರಭದ್ರ ಪಾಟೀಲ್ ಮೊಬೈಲ್ ಸಂಖ್ಯೆ 6364867795 ([email protected]) ಹಾಗೂ ಸುಭಾಷ್ ಮೊಬೈಲ್ ಸಂಖ್ಯೆ 9449864693 ([email protected]) ಸಂಪರ್ಕಿಸಬಹುದಾಗಿದೆ.
80 ಜನರಿಗೆ ಉದ್ಯೋಗ; ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ 'ಅಜಾದಿ ಕಾ ಅಮೃತ ಮಹೋತ್ಸವ' ಅಂಗವಾಗಿ ನಗರದ ತಾಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗಮೇಳ ಆಯೋಜನೆ ಮಾಡಲಾಗಿತ್ತು.
ಈ ಮೇಳದಲ್ಲಿ ಸುಮಾರು 6 ಕಂಪನಿಗಳು ಪಾಲ್ಗೊಂಡು ತಮ್ಮಲ್ಲಿರುವ ಖಾಲಿ ಹುದ್ದೆಗಳನ್ನು ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಂಡವು. ಒಟ್ಟು 387 ಅಭ್ಯರ್ಥಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದರು. 80 ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿದೆ.
17 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. ಎಸ್. ಎಸ್. ಎಲ್. ಸಿ. ಗಿಂತ ಕಡಿಮೆ, ಪಿಯುಸಿ, ಐಟಿಐ, ಡಿಪ್ಲೊಮಾ, ಎಎನ್ಎಂ, ಡಿಜಿಎನ್ಎಂ, ಬಿಎಸ್ಸಿ ನರ್ಸಿಂಗ್, ಬಿಇ (ಮೆಕ್ಯಾನಿಕಲ್), ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ಸ್ವಯಂ ವಿವರಗಳೊಂದಿಗೆ ಈ ಮೇಳದಲ್ಲಿ ಭಾಗವಹಿಸಿದ್ದರು.
ಮಾರ್ಚ್ 21ರಂದು ಉದ್ಯೋಗ ಮೇಳ; ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಸಂಜೀವಿನಿ ಎನ್ಆರ್ಎಲ್ಎಂ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ (ಖಾಗ್ರಾ) ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 21ರಂದು ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಉದ್ಯೋಗ ಮೇಳದಲ್ಲಿ ಕೈಗಾರಿಕೆ, ಕೃಷಿ, ಸಾರಿಗೆ, ಫಾರ್ಮಾ, ಬ್ಯಾಂಕಿಂಗ್, ಫೈನಾನ್ಸಿಯಲ್ಸ್ಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳನ್ನೊಳಗೊಂಡ 50 ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿದ್ದು, ಅಂದಾಜು 1100 ಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.
ಎಸ್. ಎಸ್. ಎಲ್. ಸಿ ವಿದ್ಯಾರ್ಹತೆಯಿಂದ ಪದವಿ ವಿದ್ಯಾರ್ಹತೆವರೆಗಿನ ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲಾತಿಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದಾಗಿದೆ. ನೋಂದಣಿಗಾಗಿ ಇಲಾಖೆಯಿಂದ ಸೃಜಿಸಲಾಗಿರುವ ಗೂಗಲ್ ಫಾರಂ https://forms.gle/m11qzC9PZ6JsDPfs5 ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 7618731311, 9972778248, 9743839859.












Click it and Unblock the Notifications