JOB Fair: ಜುಲೈ 20ರಂದು ಚಿತ್ರದುರ್ಗದಲ್ಲಿ ಉದ್ಯೋಗ ಮೇಳ-ಮಾಹಿತಿ, ವಿವರ
ಚಿತ್ರದುರ್ಗ, ಜುಲೈ, 17: ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಇಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶ್ವ ಕೌಶಲ್ಯ ದಿನದ ಪ್ರಯುಕ್ತ ಇದೇ ಜುಲೈ 20ರಂದು ಮಿನಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ 8ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಭಾಗವಹಿಸಲಿವೆ.

ಎಸ್ಎಸ್ಎಸ್ಸಿ, ಪಿಯುಸಿ, ಡಿಪ್ಲೊಮೊ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ ಹಾಗೂ 18ರಿಂದ 30 ವರ್ಷದೊಳಗಿನ ಅರ್ಹ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರದ ಹಳೇ ವೈಶಾಲಿ ಗೇಟ್ ಹತ್ತಿರ, ಸ್ಟೇಡಿಯಂ ತಿರುವು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 7022459064, 8105619020, 9945587060ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿ: ಚಿತ್ರದುರ್ಗ ಜಿಲ್ಲೆಯ ಗಣಿ ಸಂಪತ್ತು ಬಳಸಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವುದರ ಜೊತೆಗೆ ಸ್ಥಳೀಯ ಪ್ರದೇಶಾಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಜುಲೈ 10) ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಮುಖವಾಗಿ 8 ಖಾಸಗಿ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ 5 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಗಣಿ ಸಂಪತ್ತು ಬಳಿಸಿ ಲಾಭ ಗಳಿಸುತ್ತಿರುವ ಕಂಪನಿಗಳು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುವುದು ಅಗತ್ಯವಾಗಿದೆ. ಗಣಿ ಮತ್ತು ಅದಿರು ನಿಯಂತ್ರಣ ಅಭಿವೃದ್ಧಿ ನಿಯಮಗಳ ಕಾಯ್ದೆ ಅನುಸಾರ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿಯೇ ಸ್ಥಳೀಯ ಪ್ರದೇಶ ಹಾಗೂ ಜನರ ಅಭಿವೃದ್ಧಿ ಕಾರ್ಯನಿರ್ವಹಿಸುವ ನಿಬಂಧನೆ ವಿಧಿಸಲಾಗಿರುತ್ತದೆ.
ಸ್ಥಳೀಯ ಭೂಮಿ, ವಿದ್ಯುತ್, ರಸ್ತೆ, ಸಂಪತ್ತು, ಮೂಲಭೂತ ಸೌಕರ್ಯಗಳನ್ನು ಬಳಸಿ ಗಣಿಗಾರಿಕೆ ನಡೆಸುವ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ನೀಡದೇ ಹೋದರೆ ಹೇಗೆ? ಸಾವಿರಾರು ಜನರು ಅದರಲ್ಲೂ ಯುವಜನರು ಉದ್ಯೋಗ ಅರಸಿಕೊಂಡು ಜಿಲ್ಲೆಯಿಂದ ಬೆಂಗಳೂರು, ಮಂಗಳೂರು, ಗೋವಾಗೆ ಗುಳೆ ಹೋಗುತ್ತಾರೆ. ಜಿಲ್ಲೆಯ ಸಂಪತ್ತು ಜನರಿಗೆ ಉಪಯೋಗವಾಗದಿದ್ದರೆ ಹೇಗೆ? ಗಣಿ ಕಂಪನಿಗಳು ಕೇವಲ ರಾಜ್ಯದ ಬೊಕ್ಕಸಕ್ಕೆ ತೆರಿಗೆ ನೀಡಿದರೆ ಸಾಲದು. ಸ್ಥಳೀಯ ಜನರ ಅಭಿವೃದ್ಧಿಗೂ ಕೊಡುಗೆ ನೀಡಬೇಕೆಂದು ಹೇಳಿದರು.












Click it and Unblock the Notifications