700 ಹುದ್ದೆಗೆ 10.58 ಲಕ್ಷ ಅರ್ಜಿ; ಅರ್ಹತೆ ಏನು, ಅಭ್ಯರ್ಥಿಗಳು ಯಾರು!
ಹೈದರಾಬಾದ್, ಸೆಪ್ಟೆಂಬರ್ 18: ತೆಲಂಗಾಣ ರಾಜ್ಯದಲ್ಲಿ 700 ಹುದ್ದೆಗಳಿಗೆ ಹತ್ತು ಲಕ್ಷದಷ್ಟು ಜನ ಅರ್ಜಿ ಗುಜರಾಯಿಸಿದ್ದಾರೆ ಅಂದರೆ ನಂಬ್ತೀರಾ? ಖಂಡಿತಾ ನಂಬಲೇಬೇಕು. ಏಕೆಂದರೆ ಅದು ಸತ್ಯ. ಆ ಪೈಕಿ ಪಿಎಚ್.ಡಿ., ಎಂ.ಫಿಲ್., ಮಾಡಿರುವ ನೂರಾರು ಮಂದಿ ಇದ್ದಾರೆ. ಇನ್ನು ಸ್ನಾತಕೋತ್ತರ ಪದವೀಧರರು ಅಥವಾ ಪದವೀಧರ ಎಂಜಿನಿಯರ್ ಗಳ ಸಂಖ್ಯೆಯೇ ಲಕ್ಷಗಳಲ್ಲಿದೆ.
ಅಂದಹಾಗೆ, ಈ ಹುದ್ದೆಗೆ ಹನ್ನೆರಡನೇ ತರಗತಿ ಪಾಸ್ ಆಗಿದ್ದರೆ ಸಾಕು. ಅಂದರೆ ನಮ್ಮಲ್ಲಿ ಸೆಕೆಂಡ್ ಪಿಯುಸಿ ಅಂತೀವಲ್ಲ ಅದು. 2014ರಲ್ಲಿ ಆರಂಭವಾದ ತೆಲಂಗಾಣ ರಾಜ್ಯ ಲೋಕ ಸೇವಾ ಆಯೋಗದಿಂದ ಈ ಹುದ್ದೆಗೆ ಆಯ್ಕೆ ನಡೆಯುತ್ತಿದೆ. "ಇಂಥ ಜೂನಿಯರ್ ಹುದ್ದೆಗೆ ಬಹುಶಃ ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರ್ಹ ಯುವ ಸಮುದಾಯ ಅರ್ಜಿ ಹಾಕಿಕೊಂಡ ಉದಾಹರಣೆ ಇಲ್ಲ" ಎನ್ನುತ್ತಾರೆ ಅಧಿಕಾರಿಗಳು.
10.58 ಲಕ್ಷ ಮಂದಿ ಅರ್ಜಿ ಹಾಕಿಕೊಂಡಿದ್ದು, ಅದರಲ್ಲಿ ಶೇ 80ರಷ್ಟು ಮಂದಿ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರಾಮ ಕಂದಾಯ ಅಧಿಕಾರಿ ಹುದ್ದೆಗಾಗಿ ಅರ್ಜಿ ಕರೆಯಲಾಗಿದ್ದು, ಈ ಹಿಂದೆ 2011ರಲ್ಲಿ ಇದೇ ಹುದ್ದೆಗಾಗಿ ಅರ್ಜಿ ಕರೆದಾಗ ಅವಿಭಜಿತ ಆಂಧ್ರಪ್ರದೇಶದಲ್ಲಿ 6 ಲಕ್ಷ ಮಂದಿ ಅರ್ಜಿ ಹಾಕಿಕೊಂಡಿದ್ದರು.

ಹತ್ತು ಗಂಟೆ ದುಡಿದರೆ ಹದಿನೈದು ಸಾವಿರದವರೆಗೆ ಮಾತ್ರ ಸಂಬಳ
ನಾನೇನು ಮಾಡಲಿ? ನಾನೊಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಇತ್ತೀಚಿನ ದಿನಗಳಲ್ಲಿ ಬಿಪಿಒಗಳಲ್ಲಿ ಮಾತ್ರ ನಮಗೆ ಕೆಲಸ ಸಿಗ್ತಿದೆ. ಅಲ್ಲೂ ಕೂಡ ಹದಿನೈದು ಸಾವಿರದವರೆಗೆ ಮಾತ್ರ ಸಂಬಳ ಕೊಡ್ತಾರೆ. ಅದೇ ಸರಕಾರಿ ಕೆಲಸ ಆದರೆ ಒಂದು ಭದ್ರತೆ ಮತ್ತು ಖಾಸಗಿ ಕೆಲಸದಲ್ಲಿ ಸಿಗುವುದಕ್ಕಿಂತ ಎರಡರಷ್ಟು ಸಂಬಳ ಸಿಗುತ್ತದೆ. ಬಿಪಿಒಗಳಲ್ಲಿ ಹತ್ತು ಗಂಟೆ ದುಡಿಯುವ ಬದಲು ಇದು ಉತ್ತಮ ಎಂದು ಪರೀಕ್ಷೆ ಬರೆಯುತ್ತಿರುವವರೊಬ್ಬರು ಹೇಳಿದ್ದಾರೆ.

372 ಮಂದಿ ಪಿಎಚ್.ಡಿ ಮಾಡಿದವರು
ಈಗ ಗ್ರಾಮ ಕಂದಾಯ ಅಧಿಕಾರಿ ಎಂದು 700 ಹುದ್ದೆ ಇದ್ದರೂ 372 ಮಂದಿ ಪಿಎಚ್.ಡಿ ಮಾಡಿದವರು, 539 ಮಂದಿ ಎಂ.ಫಿಲ್., ಪೂರ್ಣಗೊಳಿಸಿದವರು, 1.5 ಲಕ್ಷ ಸ್ನಾತಕೋತ್ತರ ಪದವೀಧರರು, ಒಟ್ಟು 4 ಲಕ್ಷ ಪದವೀಧರರಲ್ಲಿ 2 ಲಕ್ಷ ಮಂದಿ ಎಂಜಿನಿಯರಿಂಗ್ ಪದವಿ ಮುಗಿಸಿದವರಿದ್ದಾರೆ.

ತಿಂಗಳಿಗೆ ಸಂಬಳ ಬಿಟ್ಟು 2 ಲಕ್ಷ ರುಪಾಯಿ ಮೇಲ್ಕಾಸು
ಇನ್ನು ಗ್ರಾಮ ಕಂದಾಯ ಅಧಿಕಾರಿ ಅಂದರೆ ಹಳ್ಳಿಯ ಕಲೆಕ್ಟರ್ ಇದ್ದಂತೆ. ಅದು ಆರಂಭ ಮಟ್ಟದ ಹುದ್ದೆಯೇ ಆದರೂ ತಿಂಗಳಿಗೆ ಸಂಬಳ ಬಿಟ್ಟು 2 ಲಕ್ಷ ರುಪಾಯಿ ಮೇಲ್ಕಾಸು ಮಾಡಿಕೊಳ್ಳಬಹುದು. ಇಂಥ ಕೆಲಸವನ್ನು ಯಾರು ಬೇಡವೆಂದಾರು ಎಂದು ರಾಜಕೀಯ ಹಾಗೂ ಸಾಮಾಜಿಕ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ವರ್ಷಕ್ಕೆ ಒಂದೂವರೆ ಲಕ್ಷದಷ್ಟು ಎಂಜಿನಿಯರ್ ಗಳು
ಸರಕಾರವು ಶುಲ್ಕ ಮರುಪಾವತಿ ಯೋಜನೆ ಪರಿಚಯಿಸಿದೆ. ಕಳೆದ ಹದಿನೈದು ವರ್ಷಗಳಲ್ಲಿ ರಾಜ್ಯದಲ್ಲಿ ವರ್ಷಕ್ಕೆ ಒಂದೂವರೆ ಲಕ್ಷದಷ್ಟು ಎಂಜಿನಿಯರ್ ಗಳು ಬರುತ್ತಿದ್ದಾರೆ. ಅವರಿಗೆ ಖಾಸಗಿ ವಲಯದಲ್ಲಿ ಕೆಲಸ ಗಿಟ್ಟಿಸಲು ಆಗುತ್ತಿಲ್ಲ. ಆದ್ದರಿಂದಲೇ ಸರಕಾರಿ ಕೆಲಸದ ಕಡೆಗೆ ಬರುತ್ತಿದ್ದಾರೆ.












Click it and Unblock the Notifications