ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಗಮನಕ್ಕೆ, ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 07: ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶದ ಅನ್ವಯ 11,494 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯ ಅಂತಿಮಗೊಳಿಸಿ, ಸ್ಥಳ ನಿಯೋಜನೆ ಮಾಡಿದೆ. ಆದರೆ ಈ ಕುರಿತು ಈಗ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಈ ಕುರಿತು ಬಿ. ಬಿ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರ ರಾಜ್ಯ ಉಚ್ಛ ನ್ಯಾಯಾಲಯದ ರಿಟ್ ಅಫೀಲು ಸಂಖ್ಯೆ 305/2023(GM-CC) ದಿನಾಂಕ 12/10/2023ರಂದು ನೀಡಿರುವ ತೀರ್ಪಿನ ವಿರುದ್ಧ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ ಅರ್ಜಿ ಸಂಖ್ಯೆ (ಸಿ) 27984-27988/2023 ಪ್ರಕರಣದಲ್ಲಿ ದಿನಾಂಕ 22/01/2024ರ ಮಧ್ಯಂತರ ಆದೇಶವನ್ನು ಪಾಲಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.

ವಿಷಯಕ್ಕೆ ಸಂಬಂಧಿಸಿದಂತೆ, 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ನೇಮಕಾತಿಗೆ ಸಂಬಂಧಪಟ್ಟಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ SLP(C)No(s). 27984-27988/2023 ಲೀಲಾವತಿ.ಎನ್ & ಇತರರು VS ರಾಜ್ಯ ಸರ್ಕಾರ & ಇತರರು ಈ ಪ್ರಕರಣಗಳ ವಿಚಾರಣೆಯನ್ನು ದಿನಾಂಕ 22/01/2024 ರಂದು ನೀಡಿರುವ ಆದೇಶವನ್ನು ವಿವರಿಸಲಾಗಿದೆ.
ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶಾನುಸಾರ ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ಹಾಜರಾಗಿರುವ ಅಭ್ಯರ್ಥಿಗಳಿಗೆ ಅವರ ನೇಮಕಾತಿಯು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಅದರಂತೆ ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11,494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿನ ಮೇಲಿನ ಪ್ರಕರಣಗಳ ಅಂತಿಮ ತೀರ್ಪಿನ ಷರತ್ತಿಗೊಳಪಟ್ಟಿರುತ್ತದೆ ಎಂಬುದನ್ನು ಗಮನಕ್ಕೆ ತರಲು ನೇಮಕಾತಿ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪನಿರ್ದೆಶಕರು (ಆಡಳಿತ) ಲಿಖಿತವಾಗಿ ಪ್ರತಿ ಶಿಕ್ಷಕರುಗಳಿಗೆ ಜಾರಿ ಮಾಡಿ ಸ್ವೀಕೃತಿಯನ್ನು ಪಡೆದು, ಆದೇಶ ನೀಡಲಾದ ಕಡತದಲ್ಲಿ ಕಾಯ್ದಿರಿಸಲು ಎಲ್ಲಾ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.
ಅಲ್ಲದೇ ಕೇಂದ್ರೀಕೃತ ಕ್ರೂಢೀಕೃತ ಜಿಲ್ಲಾವಾರು ದಾಖಲಾತಿ ಘಟಕದ ವಿಶೇಷಾಧಿಕಾರಿಗಳು, ಕೆ.ಜಿ.ರಸ್ತೆ, ಬೆಂಗಳೂರು ಇವರಿಗೆ ಈ ಪ್ರಕ್ರಿಯೆಯಲ್ಲಿ ಯಾವುದೇ ಹಂತದಲ್ಲಿನ ವಿಳಂಬಕ್ಕೆ ಅವಕಾಶ ನೀಡದೆ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಲು ಸೂಚಿಸಲಾಗಿದೆ.
ಸ್ಪಷ್ಟನೆ ಏಕೆ?; ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಗಂಡನ ಅಥವ ತಂದೆಯ ಆದಾಯ ಪಮಾಣ ಪತ್ರವನ್ನು ಪರಿಗಣಸಬೇಕೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ವಿಚಾರಣೆ ಇನ್ನೂ ಬಾಕಿ ಇದೆ. ಕರ್ನಾಟಕ ಹೈಕೋರ್ಟ್ನಲ್ಲಿ ಈ ಕುರಿತು ಗೊಂದಲದ ಅರ್ಜಿ ಸಲ್ಲಿಕೆಯಾಗಿತ್ತು. ಕೋರ್ಟ್ ತಂದೆಯ ಆದಾಯದ ಪ್ರಮಾಣ ಪತ್ರವನ್ನು ಮಾತ್ರ ಪರಿಗಣಿಸಿ ಎಂದು ಆದೇಶ ನೀಡಿತ್ತು.
ಇದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಆದ್ದರಿಂದ ಇಲಾಖೆ ಈಗ ಸ್ಪಷ್ಟನೆ ನೀಡಿ, ನೇಮಕಾತಿ ಆದೇಶ ಸುಪ್ರೀಂಕೋರ್ಟ್ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.












Click it and Unblock the Notifications